ತಮಿಳು ನಟ ಶ್ರೀಕಾಂತ್ ನಿಧನ: ರಜನಿಕಾಂತ್, ಕಮಲ್ ಸಂತಾಪ
ತಮಿಳು ಚಿತ್ರರಂಗದ ಹಿರಿಯ ನಟರಾದ ಶ್ರೀಕಾಂತ್ (82) ಮಂಗಳವಾರ ರಾತ್ರಿ ಚೆನ್ನೈನಲ್ಲಿ ನಿಧನರಾದರು. ವಯೋಸಹಜವಾದ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನ ಹೊಂದಿದ್ದಾರೆ.
ನಾಲ್ಕು ದಶಕಗಳ ಕಾಲ ನಾಯಕನಟನಾಗಿ, ಖಳನಾಯಕನಾಗಿ, ಪೋಷಕ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ ಅವರ ನಿಧನದ ವಾರ್ತೆಯನ್ನು ತಿಳಿದ ಅನೇಕ ಕಾಲಿವುಡ್ ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಅಗಲಿದ ಹಿರಿಯ ಕಲಾವಿದನಿಗೆ ಸಂತಾಪ ಸೂಚಿಸಿದ್ದಾರೆ.
ಶ್ರೀಕಾಂತ್ ಅವರ ಜೊತೆ 'ಭೈರವಿ' ಮತ್ತು 'ಸಾಧುರಂಗಂ' ಚಿತ್ರಗಳಲ್ಲಿ ಕೆಲಸ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್, 'ಆತ್ಮೀಯ ಸ್ನೇಹಿತನ ಸಾವು ತುಂಬಾ ದುಃಖಕರವಾಗಿದೆ' ಎಂದು ಹೇಳಿದ್ದಾರೆ. ಅವರು ಆತ್ಮಕ್ಕೆ ಶಾಂತಿಯನ್ನು ಕೋರಿ ಟ್ವೀಟ್ ಮಾಡಿದ್ದಾರೆ.

ಹಿರಿಯ ಕಲಾವಿದ ಶ್ರೀಕಾಂತ್ ಅವರ ಸಾವಿಗೆ ಖ್ಯಾತ ನಟ ಕಮಲ್ ಹಾಸನ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. 'ನಾಯಕ, ಖಳನಾಯಕ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸರ್ವತೋಮುಖ ಪ್ರತಿಭೆಯನ್ನು ತೋರಿಸಿದ ಶ್ರೀಕಾಂತ್ ಅವರ ನಿಧನದ ವಾರ್ತೆ ಕೇಳಿ ಹೃದಯ ಭಾರವಾಗಿದೆ' ಎಂದು ತಮ್ಮ ಟ್ವಿಟರ್ ನಲ್ಲಿ ನುಡಿ ನಮನ ಸಲ್ಲಿಸಿದ್ದಾರೆ.
1965 ರಲ್ಲಿ ಜಯಲಲಿತಾ ಅಭಿನಯದ 'ವೆನ್ರಿಯಾ ಅಡೈ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ರಜನಿಕಾಂತ್ ಅವರು ಪೂರ್ಣಪ್ರಮಾಣದಲ್ಲಿ ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ 'ಭೈರವಿ' ಚಿತ್ರದಲ್ಲಿ ಖಳನಾಯಕನಾಗಿ ಗಮನ ಗಮನಾರ್ಹ ಪಾತ್ರ ಮಾಡಿದ್ದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ತಮ್ಮ ಕೊನೆಯ ಸಂದರ್ಶನದಲ್ಲಿ ರಜನಿಕಾಂತ್ ಅವರನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಆದರೆ ದುರದೃಷ್ಟವಶಾತ್ ಅವರ ಆಸೆ ಈಡೇರುವ ಮೊದಲೇ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಶ್ರೀಕಾಂತ್ 'ಭಾಮಾ ವಿಜಯಂ', 'ಪೂವ ತಲಯ', 'ಎತಿರ್ ನಿಚಲ್' ಮುಂತಾದ ಶ್ರೇಷ್ಠ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಚಿರಪರಿಚಿತರು. ಶಿವಾಜಿ ಗಣೇಶನ್, ಆರ್. ಮುತ್ತುರಾಮನ್, ಶಿವಕುಮಾರ್, ಕಮಲ್ ಹಾಸನ್ ಮುಂತಾದ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದ ಶ್ರೀಕಾಂತ್ ಇನ್ನು ನೆನಪು ಮಾತ್ರ.
1940ರಲ್ಲಿ ಜನಿಸಿದ್ದ ಶ್ರೀಕಾಂತ್, ಸಿನಿಮಾ ರಂಗಕ್ಕೆ ಬರುವ ಮುನ್ನ ಅಮೆರಿಕನ್ ಕಾನ್ಸೊಲೇಟ್ನಲ್ಲಿ ವೃತ್ತಿ ಮಾಡುತ್ತಿದ್ದರು. ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸಿದ ಅವರನ್ನು ಅಭಿಮಾನಿಗಳು 'ವೆನ್ನಿರ ಅದೈ ಶ್ರೀಕಾಂತ್' ಎಂದೇ ಗುರುತಿಸುತ್ತಿದ್ದರು. 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶ್ರೀಕಾಂತ್ ನಟಿಸಿದ್ದಾರೆ, 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ರಜನೀಕಾಂತ್, ಕಮಲ್ ಹಾಸನ್ಗೆ ಬ್ರೇಕ್ ನೀಡಿದ ನಿರ್ದೇಶಕ ಬಾಲಚಂದರ್ ಅವರ ಹಲವು ಸಿನಿಮಾಗಳಲ್ಲಿ ಶ್ರೀಕಾಂತ್ ನಟಿಸಿದ್ದರು.


Click it and Unblock the Notifications











