ರಾಜಕೀಯ ಪಕ್ಷ ಘೋಷಿಸಿದ ನಂತರ ತಂದೆ ಜೊತೆ ಮಾತು ಬಿಟ್ಟ ನಟ ವಿಜಯ್
ತಮಿಳುನಾಡು ಚುನಾವಣೆ ಹತ್ತಿರವಾಗುತ್ತಿದ್ದಂತೆ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. 2021ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಮಲ್ ಹಾಸನ್ ಮತ್ತು ರಜನಿಕಾಂತ್ ಪಕ್ಷಗಳು ಸ್ಪರ್ಧೆ ಮಾಡಲಿದೆ.
ಸರ್ಪ್ರೈಸ್ ಎಂಬಂತೆ ತಮಿಳು ನಟ ವಿಜಯ್ ಅವರ ತಂದೆ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ನವೆಂಬರ್ 05 ರಂದು ನಟ ವಿಜಯ್ ತಂದೆ, ನಿರ್ದೇಶಕ ಎಸ್ಎ ಚಂದ್ರಶೇಖರ್ ರಾಜಕೀಯ ಪಕ್ಷವೊಂದನ್ನು ಕೇಂದ್ರ ಚುನಾವಣಾ ಆಯೋಗದಲ್ಲಿ ನೊಂದಣಿ ಮಾಡಿಸಿದ್ದಾರೆ. ಪಕ್ಷಕ್ಕೆ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಎಂದು ಹೆಸರಿಟ್ಟಿದ್ದಾರೆ.
ತಮ್ಮ ತಂದೆ ರಾಜಕೀಯ ಪಕ್ಷ ನೊಂದಣಿ ಮಾಡಿರುವ ಸಂಗತಿ ಹೊರ ಬೀಳುತ್ತಿದ್ದಂತೆ ನಟ ವಿಜಯ್ ಅಧಿಕೃತವಾಗಿ ಸ್ಪಷ್ಟನೆ ನೀಡಿ ''ನಮ್ಮ ತಂದೆ ಘೋಷಣೆ ಮಾಡಿರುವ ಪಕ್ಷಕ್ಕೂ ನನಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ'' ಎಂದು ಹೇಳಿದ್ದಾರೆ.

ವಿಜಯ್ ತಂದೆ ರಾಜಕೀಯ ಪಕ್ಷ ಸ್ಥಾಪನೆ ವಿಚಾರ ಕೌಟುಂಬಿಕವಾಗಿಯೂ ಮನಸ್ಥಾಪ ಉಂಟು ಮಾಡಿದೆ. ಎಸ್ಎ ಚಂದ್ರಶೇಖರ್ ರಾಜಕೀಯ ಪಕ್ಷ ಘೋಷಣೆ ಮಾಡಿದ ಬಳಿಕ ಅವರ ಜೊತೆ ವಿಜಯ್ ಮಾತನಾಡುತ್ತಿಲ್ಲ ಎಂದು ದಳಪತಿ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
''ತಂದೆ ಎಸ್.ಎ.ಚಂದ್ರಶೇಖರ್ ಅವರೊಂದಿಗೆ ವಿಜಯ್ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ರಾಜಕೀಯ ಪಕ್ಷ ರಚನೆಯ ಬಗ್ಗೆಯೂ ತನಗೆ ಮಾಹಿತಿ ನೀಡಿಲ್ಲ'' ಎಂದು ಅವರು ಹೇಳಿದ್ದಾರೆ.
ವಿಜಯ್ ಹೇಳಿಕೆಯಲ್ಲಿ ಏನಿತ್ತು?
'ನಮ್ಮ ತಂದೆ ಚಂದ್ರಶೇಖರನ್ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ನಾನು ನನ್ನ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕ್ಷಮೆ ಕೋರುತ್ತೇನೆ. ಅವರು ರಾಜಕೀಯ ಪಕ್ಷ ಸ್ಥಾಪಿಸಿರುವ ಹಿಂದೆ ನನ್ನ ನೇರ ಅಥವಾ ಪರೋಕ್ಷ ಭಾಗವಹಿಸುವಿಕೆ ಇಲ್ಲ. ಅವರ ರಾಜಕೀಯ ನಿರ್ಧಾರಗಳ ಹಿಂದೆ ನನ್ನ ಹಸ್ತಕ್ಷೇಪ ಇರುವುದಿಲ್ಲ. ಅಷ್ಟೇ ಅಲ್ಲದೆ, ಅವರು ಸ್ಥಾಪಿಸಿರುವುದು ನನ್ನ ಪಕ್ಷ ಅಥವಾ ವಿಜಯ್ ತಂದೆ ಸ್ಥಾಪಿಸಿದ ಪಕ್ಷ ಎಂಬ ಕಾರಣಕ್ಕೆ ಆ ಪಕ್ಷಕ್ಕೆ ನನ್ನ ಅಭಿಮಾನಿಗಳು ಸೇವೆ ಮಾಡುವುದಾಗಲಿ, ಸೇರ್ಪಡೆಗೊಳ್ಳುವುದಾಗಲಿ ಮಾಡಬೇಡಿ' ಎಂದು ಹೇಳಿದ್ದಾರೆ.


Click it and Unblock the Notifications











