ಕಂಗನಾ ರನೌತ್ ಬಗ್ಗೆ ಭವಿಷ್ಯ ನುಡಿದ ರಾಜಮೌಳಿ ತಂದೆ
ನಟಿ ಕಂಗನಾ ರಣೌತ್ ಸದಾ ಸುದ್ದಿಯಲ್ಲಿರುತ್ತಾರೆ. ಒಳ್ಳೆಯದಕ್ಕಿಂತಲೂ ಕೆಟ್ಟ ಅಥವಾ ವಿವಾದಾತ್ಮಕ ಕಾರಣಗಳಿಂದಾಗಿಯೇ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಒಂದೊಳ್ಳೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ ನಟಿ ಕಂಗನಾ.
ನಟಿ ಕಂಗನಾರನ್ನು ಅವರ ರಾಜಕಾರಣದ ಒಲವಿನ ಕಾರಣಕ್ಕೆ, ದ್ವೇಷಪೂರಿತ ಟ್ವೀಟ್ಗಳ ಕಾರಣಕ್ಕೆ ಇನ್ನಿತರ ಕಾರಣಗಳಿಗೆ ದ್ವೇಷಿಸುವವರೂ ಸಹ ಕಂಗನಾ ಭಾರತದ ಅತ್ಯುತ್ತಮ ಸಿನಿಮಾ ನಟಿಯರಲ್ಲಿ ಒಬ್ಬರು ಎಂಬುದನ್ನು ನಿಸ್ಸಂಶಯವಾಗಿ ಒಪ್ಪಿಕೊಳ್ಳುತ್ತಾರೆ. ಇದೀಗ ನಟಿ ಕಂಗನಾ ಸುದ್ದಿಯಲ್ಲಿರುವುದು ಸಹ ನಟನೆಯಿಂದಲೇ.
ಕಂಗನಾ ನಟಿಸಿರುವ 'ತಲೈವಿ' ಸಿನಿಮಾವು ಸೆಪ್ಟೆಂಬರ್ 10ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಯನ್ನು ಕಂಗನಾ ಇರಿಸಿಕೊಂಡಿದ್ದಾರೆ. 'ತಲೈವಿ' ಸಿನಿಮಾಕ್ಕೆ ಕತೆ, ಸಂಭಾಷಣೆ ಬರೆದಿರುವ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಂಗನಾರನ್ನು ಬಹುವಾಗಿ ಹೊಗಳಿರುವುದು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ ಪ್ರಸಾದ್, ''ಆರಂಭದಲ್ಲಿ ಕಂಗನಾ ರನೌತ್, ಜಯಲಲಿತಾ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕಿದರು. ಜಯಲಲಿತಾ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ ಹೇಗೆ ನಟಿಸಲಿ ಎಂದು ಅಳುಕು ವ್ಯಕ್ತಪಡಿಸಿದರು. ಕ್ಯಾಮೆರಾ ಮುಂದೆ ನಿನ್ನಂತೆ ನೀನಿರು ಸಾಕು ಎಂದು ಸಲಹೆ ನೀಡಿದೆ. ಆಗ ಕಂಗನಾ ಒಪ್ಪಿಕೊಂಡರು'' ಎಂದರು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್.
''ಸಿನಿಮಾದಲ್ಲಿ ಕಂಗನಾ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾವನ್ನು ನಾನು ನೋಡಿದ್ದೇನೆ. ಆಕೆಯ ನಟನೆ ಅದ್ಭುತ. ಆಕೆ ನಿಜವಾಗಿಯೂ ಭವಿಷ್ಯದಲ್ಲಿ ದೊಡ್ಡ ಕುರ್ಚಿಯ (ಸಿಎಂ ಅಥವಾ ಪಿಎಂ) ಮೇಲೆ ಕೂರುತ್ತಾರೆ'' ಎಂದು ಭವಿಷ್ಯ ನುಡಿದಿದ್ದಾರೆ ವಿಜಯೇಂದ್ರ ಪ್ರಸಾದ್.

ವಿಜಯೇಂದ್ರ ಪ್ರಸಾದ್ಗೆ ಋಣಿ ಎಂದ ಕಂಗನಾ
ನಟಿ ಕಂಗನಾ ಮಾತನಾಡಿ, ''ಈ ಪಾತ್ರವನ್ನು ಮಾಡಲು ಒಪ್ಪಿಸಿದ ವಿಜಯೇಂದ್ರ ಪ್ರಸಾದ್ ಅವರಿಗೆ ಸದಾ ಋಣಿಯಾಗಿರುತ್ತೇನೆ. ಅವರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು. ಅಷ್ಟೇ ಅಲ್ಲದೆ ಸ್ಟಾರ್ ನಟನಾಗಿಯೂ ಮಹಿಳಾ ಪ್ರಧಾನವಾದ ಈ ಸಿನಿಮಾದಲ್ಲಿ ನಟಿಸಿರುವ ಅರವಿಂದ ಸ್ವಾಮಿ ಅವರಿಗೂ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಸಿನಿಮಾದ ನಿರ್ದೇಶಕ ವಿಜಯ್ ಅವರನ್ನು ವಿಶೇಷವಾಗಿ ಹೊಗಳಿದ ಕಂಗನಾ, ''ವಿಜಯ್ ಅಷ್ಟು ಪ್ರತಿಭಾವಂತ ನಿರ್ದೇಶಕನನ್ನು ನಾನು ಈವರೆಗೆ ನೋಡಿಲ್ಲ'' ಎಂದಿದ್ದಾರೆ.

ತಂದೆಯ ಸಮಾನ ಎಂದಿದ್ದ ಕಂಗನಾ
ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಕಂಗನಾ ರನೌತ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರನ್ನು ತಮ್ಮ ತಂದೆಯ ರೀತಿ ಎಂದು ಹೇಳಿದ್ದರು. ನನ್ನ ಜೀವನದಲ್ಲಿ ಬಹಳ ಮುಖ್ಯವಾದ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ನನಗೆ ಬಹಳ ಒಳ್ಳೆಯ ಮಾರ್ಗದರ್ಶಕರು ಎಂದೆಲ್ಲ ಬಹುವಾಗಿ ಹೊಗಳಿದ್ದರು. 'ತಲೈವಿ' ಸಿನಿಮಾಕ್ಕೆ ಕತೆ ಬರೆದಿರುವುದು ವಿಜಯೇಂದ್ರ ಪ್ರಸಾದ್ ಅವರೇ.

ಸೆಪ್ಟೆಂಬರ್ 10ಕ್ಕೆ ಬಿಡುಗಡೆ ಆಗಲಿದೆ
'ತಲೈವಿ' ಸಿನಿಮಾವು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸೆಪ್ಟೆಂಬರ್ 10 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಕಂಗನಾ ರನೌತ್, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅರವಿಂದ ಸ್ವಾಮಿ ಎಂಜಿಆರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಇಬ್ಬರು ಜೊತೆಗೆ, ಬಾಲಿವುಡ್ನ ಹಿರಿಯ ನಟಿ ಭಾಗ್ಯಶ್ರೀ, ಶಶಿಕಲಾ ಪಾತ್ರದಲ್ಲಿ ಪೂರ್ಣಾ, ಶಾಮನಾ ಕಾಸಿಮ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಎ.ಎಲ್.ವಿಜಯ್ ನಿರ್ದೇಶನ ಮಾಡಿದ್ದಾರೆ.

ವೃತ್ತಿ ಜೀವನದ ವಿಶೇಷ ಸಿನಿಮಾ: ಕಂಗನಾ
ನಟಿ ಕಂಗನಾ 'ತಲೈವಿ' ಸಿನಿಮಾದ ಭಾರಿ ನಿರೀಕ್ಷೆ ಇಟ್ಟಿದ್ದು, ಈ ಸಿನಿಮಾವನ್ನು ತಮ್ಮ ವೃತ್ತಿ ಜೀವನದ ಈವರೆಗಿನ ಅತ್ಯುತ್ತಮ ಸಿನಿಮಾ ಎಂದು ಹೇಳಿದ್ದಾರೆ. ಈ ಸಿನಿಮಾಕ್ಕೂ ತಮಗೆ ರಾಷ್ಟ್ರಪ್ರಶಸ್ತಿ ದೊರೆಯುವ ಭರವಸೆಯನ್ನು ಕಂಗನಾ ಇಟ್ಟುಕೊಂಡಿದ್ದಾರೆ. ಸಿನಿಮಾವನ್ನು ನೋಡಿರುವ ಕೆಲವು ನಟರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿಸಿರುವ ನಟ ಅರವಿಂದ ಸ್ವಾಮಿ, 'ತಲೈವಿ' ಸಿನಿಮಾವು ಒಂದು ಭಿನ್ನ ಅನುಭವವನ್ನು ನೀಡಲಿದೆ'' ಎಂದಿದ್ದಾರೆ.


Click it and Unblock the Notifications











