ಬಾಲಕೃಷ್ಣ ಮನೆಗೆ ಕಾರು ನುಗ್ಗಿಸಲು ಯತ್ನಿಸಿದಳೇ ಯುವತಿ!?
ನಂದಮೂರಿ ಬಾಲಕೃಷ್ಣ ತೆಲುಗಿನ ಸ್ಟಾರ್ ನಟ. ಸಿನಿಮಾಗಳಲ್ಲಿ ಅವರ ಮಾಸ್ ಅವತಾರ ಕಂಡು ಮೆಚ್ಚಿಕೊಂಡವರ ಜೊತೆಗೆ ಹೌಹಾರಿದವರೂ ಇದ್ದಾರೆ.
ಶಾಸಕರೂ ಆಗಿರುವ ನಂದಮೂರಿ ಬಾಲಕೃಷ್ಣ ಸಿನಿಮಾಗಳಲ್ಲಿ ಲಾಜಿಕ್ಗಿಂತಲೂ ಮ್ಯಾಜಿಕ್ ಹೆಚ್ಚಿಗಿರುತ್ತದೆ. ಸಿನಿಮಾಗಳಲ್ಲಿ ತೊಡೆ ತಟ್ಟಿ ರೈಲನ್ನೇ ನಿಲ್ಲಿಸಿದ್ದಾರೆ ಬಾಲಕೃಷ್ಣ, ಪ್ಯಾರಚೂಟ್ನಲ್ಲಿ ಪಾಕಿಸ್ತಾನಕ್ಕೆ ಹಾರಿದ್ದೂ ಉಂಟು, ನೂರಾರು ಜನರನ್ನು ಬರಿಗೈಲಿ ಕೊಂದು ಬಿಟ್ಟಿದ್ದಾರೆ ಇಂಥಹಾ ಅಸಾಧ್ಯಗಳನ್ನೆಲ್ಲ ಸಿನಿಮಾಗಳಲ್ಲಿ ಸಾಧ್ಯವಾಗಿಸಿದ್ದಾರೆ ಬಾಲಕೃಷ್ಣ, ಈ ರೀತಿಯ ಅವಾಸ್ತವಿಕ ಸಾಹಸಗಳಿಗಾಗಿಯೇ ಬಾಲಕೃಷ್ಣ ಜನಪ್ರಿಯರು.
ಇಂತಿಪ್ಪ ಬಾಲಕೃಷ್ಣ ಮನೆಗೆ ಯುವತಿಯೊಬ್ಬಾಕೆ ಕಾರು ನುಗ್ಗಿಸುವ ಯತ್ನ ಮಾಡಿ ವಿಫಲವಾಗಿದ್ದಾಳೆ ಪಾಪ (!?) ಆಗಿದ್ದಿಷ್ಟು, ಹೈದರಾಬಾದ್ನ ಜೂಬ್ಲಿ ಹಿಲ್ಸ್ನ ರಸ್ತೆ ನಂಬರ್ 41 ರಂದು ಯುವತಿಯೊಬ್ಬಾಕೆ ಮಹೀಂದ್ರಾ ಥಾರ್ ಜೀಪು ಚಲಾಯಿಸುತ್ತಿದ್ದಳು, ಅದೇ ವೇಳೆಗೆ ಅಲ್ಲಿ ಆಂಬುಲೆನ್ಸ್ ವಾಹನ ಬಂದಿದೆ, ಆಂಬುಲೆನ್ಸ್ಗೆ ದಾರಿ ಬಿಡುವ ಯತ್ನದಲ್ಲಿ ವಾಹನವನ್ನು ಡಿವೈಡರ್ ಮೇಲೆ ಹತ್ತಿಸಿದ್ದಾಳೆ ಅಲ್ಲಿಂದ ವಾಹನ ಚಾಲಕಿಯ ನಿಯಂತ್ರಣ ತಪ್ಪಿ ಇನ್ನಷ್ಟು ರಭಸದಲ್ಲಿ ನಂದಮೂರಿ ಬಾಲಕೃಷ್ಣ ಮನೆಯ ಕಡೆಗೆ ನುಗ್ಗಿದೆ. ಬಾಲಕೃಷ್ಣ ಮನೆಯ ಗೇಟ್ ಬದಿಯ ಗ್ರಿಲ್ಗೆ ಢಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಗ್ರಿಲ್ ಮುರಿದಿದೆ ಎನ್ನಲಾಗುತ್ತಿದೆ.

ಕುಡಿತ ಮತ್ತಿನಲ್ಲಿ ವಾಹನ ಚಾಲನೆ?
ಬಾಲಕೃಷ್ಣ ನಿವಾಸದ ಬಳಿ ಅಪಘಾತವಾಗುತ್ತಿದ್ದ ಹಲವಾರು ಮಂದಿ ಬಾಲಕೃಷ್ಣ ನಿವಾಸದ ಬಳಿ ಜಮಾಯಿಸಿದ್ದಾರೆ. ಹತ್ತಿರದಲ್ಲೇ ಇದ್ದ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ಚದುರಿಸಿ ವಾಹನವನ್ನು ಹಿಂದೆ ತೆಗೆದುಕೊಂಡಿದ್ದಾರೆ. ಜೊತೆಗೆ ಯುವತಿಯನ್ನು ಸಹ ವಶಕ್ಕೆ ತೆಗೆದುಕೊಂಡಿದ್ದಾರೆ. ಯುವತಿ ಮದ್ಯ ಸೇವನೆ ಮಾಡಿ ವಾಹನ ಚಲಾವಣೆ ಮಾಡಿರಬಹುದು ಎಂಬ ಅನುಮಾನವಿದ್ದು ಆಕೆಯನ್ನು ಪರೀಕ್ಷೆಗೆ ಸಹ ಒಳಪಡಿಸಲಾಗಿದೆ.

ಬಾಲಕೃಷ್ಣ ನಿವಾಸದ ಮೇಲೆ ದಾಳಿ ಆಗಿತ್ತು
ಕೆಲವು ತಿಂಗಳ ಹಿಂದೆ ಆಂಧ್ರದ ಆಡಳಿತ ಪಕ್ಷ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಾಲಕೃಷ್ಣರ ಅನಂತಪುರ ಜಿಲ್ಲೆಯ ಹಿಂದುಪುರದ ನಿವಾಸದ ಮೇಲೆ ದಾಳಿ ನಡೆಸಿ, ಕಲ್ಲೆಸೆದು ಗಾಜುಗಳನ್ನು, ಮನೆ ಮುಂದಿನ ಹೂಕುಂಡಗಳನ್ನು ಪುಡಿಗಟ್ಟಿದ್ದರು. ಆಗ ಬಾಲಕೃಷ್ಣ ಅಭಿಮಾನಿಗಳು ಆತಂಕಿತರಾಗಿದ್ದರು. ಈಗ ಹೈದರಾಬಾದ್ ನಿವಾಸದ ಬಳಿ ಕಾರು ಅಪಘಾತ ಆಗಿರುವುದನ್ನು ಸಹ ಬಾಲಯ್ಯ ಅಭಿಮಾನಿಗಳು ಅನುಮಾನದಿಂದಲೇ ನೋಡುತ್ತಿದ್ದಾರೆ. ಇದೂ ಸಹ ಆಡಳಿತ ಪಕ್ಷದ ತಂತ್ರವಿರಬಹುದು ಎನ್ನುತ್ತಿದ್ದಾರೆ.

ಯಾರಿಗೂ ಗಾಯಗಳಾಗಿಲ್ಲ
ಬಾಲಕೃಷ್ಣ ನಿವಾಸದ ಬಳಿ ನಡೆದಿರುವ ಅಪಘಾತದಲ್ಲಿ ಯುವತಿ ಸೇರಿದಂತೆ ಯಾರಿಗೂ ಗಾಯಗಳಾಗಿಲ್ಲ. ಯುವತಿಗೆ ಸಹ ಸಣ್ಣ-ಪುಟ್ಟ ಗಾಯಗಳಷ್ಟೆ ಆಗಿವೆ. ಅಪಘಾತ ನಡೆದ ಸಮಯದಲ್ಲಿ ಮನೆಯಲ್ಲಿ ಬಾಲಕೃಷ್ಣ ಇರಲಿಲ್ಲ ಎನ್ನಲಾಗುತ್ತಿದೆ. ಈ ಅಪಘಾತದ ಚಿತ್ರಗಳು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಪಘಾತದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಯುವತಿಯ ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕೃಷ್ಣ ಮುಂಬರುವ ಸಿನಿಮಾಗಳು
ಇನ್ನು ನಟ ಬಾಲಕೃಷ್ಣ ಕೆಲವು ತಿಂಗಳ ಹಿಂದಷ್ಟೆ ಭರ್ಜರಿ ಹಿಟ್ ಸಿನಿಮಾ ನೀಡಿದ್ದಾರೆ. ಬಾಲಕೃಷ್ಣ ನಟಿಸಿರುವ 'ಅಖಂಡ' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಇದೀಗ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದು ಚಿತ್ರೀಕರಣ ಆರಂಭಿಸಿದ್ದಾರೆ. ಇದರ ಜೊತೆಗೆ ಕನ್ನಡದ 'ಮಫ್ತಿ' ಸಿನಿಮಾದ ರೀಮೇಕ್ನಲ್ಲಿ ಸಹ ಬಾಲಕೃಷ್ಣ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಗೋಪಿಚಂದ್ ಮೇಲಿನೇನಿ ನಿರ್ದೇಶನ ಮಾಡಿದ್ದಾರೆ. ಬಾಲಕೃಷ್ಣರ 107ನೇ ಸಿನಿಮಾವನ್ನು ಮುಸಲಿ ಮಡಗು ಪ್ರತಾಪ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕನ್ನಡಿಗ ದುನಿಯಾ ವಿಜಯ್ ಸಹ ನಟಿಸಿದ್ದಾರೆ.


Click it and Unblock the Notifications











