ದಕ್ಷಿಣ ಭಾರತದ ಈ ನಟಿಯ ಅಭಿಮಾನಿಯಂತೆ ನಟ ಅಮೀರ್ ಖಾನ್: ಯಾರದು?
ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿಂದ ದೂರ ಉಳಿಯುವ ನಟ ಅಮೀರ್ ಖಾನ್ ಇದೀಗ ತೆಲುಗು ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.
ಹೈದರಾಬಾದ್ನಲ್ಲಿ ನಿನ್ನೆ ನಡೆದ 'ಲವ್ ಸ್ಟೋರಿ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮೀರ್ ಖಾನ್, ನಟ ನಾಗ ಚೈತನ್ಯ ಬಗ್ಗೆ ನಟಿ ಸಾಯಿ ಪಲ್ಲವಿ ಹಾಗೂ ಇಡೀಯ ಚಿತ್ರತಂಡದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಟಿ ಸಾಯಿ ಪಲ್ಲವಿಗೆ ಕ್ಷಮಾಪಣೆ ಕೇಳಿದ ಅಮೀರ್ ಖಾನ್ ಜೊತೆಗೆ ತಾನು ಸಾಯಿ ಪಲ್ಲವಿಯ ಅಭಿಮಾನಿ ಆಗಿರುವುದಾಗಿಯೂ ಹೇಳಿದ್ದಾರೆ.
''ಕೆಲವು ದಿನಗಳ ಹಿಂದೆ 'ಲವ್ ಸ್ಟೋರಿ' ಸಿನಿಮಾದ ಟ್ರೇಲರ್ ನೋಡಿದೆ. ನಂತರ ಸಿನಿಮಾದ ಕೆಲವು ದೃಶ್ಯಗಳನ್ನು ನಿರ್ದೇಶಕರು ನನಗೆ ತೋರಿಸಿದರು. ಅದೆಲ್ಲ ನೋಡಿದ ಮೇಲೆ ನಾನು ಸಾಯಿ ಪಲ್ಲವಿಯ ಅಭಿಮಾನಿ ಆಗಿಬಿಟ್ಟೆ. ನಾನು ಈ ವರೆಗೆ ಸಾಯಿ ಪಲ್ಲವಿ ನಟನೆಯ ಯಾವ ಸಿನಿಮಾವನ್ನೂ ನೋಡಿಲ್ಲ. ನಾನು ಹೆಚ್ಚು ಸಿನಿಮಾಗಳನ್ನು ನೋಡುವುದಿಲ್ಲ, ಈ ಕಾರಣಕ್ಕೆ ದಯವಿಟ್ಟು ನನ್ನನ್ನು ಕ್ಷಮಿಸಬೇಕು'' ಎಂದು ಸಾಯಿ ಪಲ್ಲವಿ ಬಳಿ ಕ್ಷಮೆ ಕೋರಿದರು ನಟ ಅಮೀರ್ ಖಾನ್.

''ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆಂದು ನಾನೇ ಕೇಳಿದೆ''
''ನಾನು ಕೆಲವು ದಿನಗಳ ಹಿಂದಷ್ಟೆ 'ಲವ್ ಸ್ಟೋರಿ' ಸಿನಿಮಾದ ಟ್ರೇಲರ್ ನೋಡಿದೆ. ನೋಡಿದ ಕೂಡಲೇ ನಾನು ಬಹಳ ಇಂಪ್ರೆಸ್ ಆದೆ. ಕೂಡಲೇ ನಾಗ ಚೈತನ್ಯಗೆ ಮೆಸೇಜ್ ಮಾಡಿ ಸಿನಿಮಾದ ಟ್ರೆಲರ್ ಬಹಳ ಚೆನ್ನಾಗಿದೆ ಎಂದು ಹೇಳಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಭಾನುವಾರ ಇರುವುದಾಗಿ ಅವರು ಹೇಳಿದರು. ಆಗ ನಾನೇ ಕೇಳಿದೆ, ನಾನು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾ? ಎಂದು. ಕೂಡಲೇ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರು ಮುಂಬೈಗೆ ಬಂದು ನನಗೆ ಆಹ್ವಾನವಿತ್ತರು. ಹಾಗಾಗಿ ನಾನು ಕಾರ್ಯಕ್ರಮಕ್ಕೆ ಬಂದೆ. ಈ ಕಾರ್ಯಕ್ರಮಕ್ಕೆ ಬರಲು ಸಿನಿಮಾದ ಜೊತೆಗೆ ಇನ್ನೊಂದು ಪ್ರಮುಖ ಕಾರಣವೂ ಇದೆ'' ಎಂದಿದ್ದಾರೆ ಅಮೀರ್ ಖಾನ್.

ನಾಗ ಚೈತನ್ಯ ವ್ಯಕ್ತಿತ್ವ ನನ್ನನ್ನು ಬಹುವಾಗಿ ಸೆಳೆಯಿತು: ಅಮಿರ್
''ಲಾಲ್ ಸಿಂಗ್ ಚಡ್ಡಾ' ಸಿನಿಮಾದ ಸಮಯದಲ್ಲಿ ನಾನು ನಾಗಚೈತನ್ಯ ವ್ಯಕ್ತಿತ್ವವನ್ನು ಗಮನಿಸುತ್ತಿದ್ದೆ. ಆತ ಒಬ್ಬ ಅದ್ಭುತವಾದ ವ್ಯಕ್ತಿ, ಆತನ ವ್ಯಕ್ತಿತ್ವ ನನ್ನನ್ನು ಬಹಳವಾಗಿ ಸೆಳೆಯಿತು. ಅವನ ಬಗ್ಗೆ ಅವರ ಪೋಷಕರಿಗೆ ಕೆಲವು ಒಳ್ಳೆಯ ಮಾತುಗಳನ್ನು ಹೇಳಬೇಕು ಎಂದುಕೊಂಡು ನಾಗಾರ್ಜುನ ಹಾಗೂ ಲಕ್ಷ್ಮಿ ದಗ್ಗುಬಾಟಿ ಮೊಬೈಲ್ ಸಂಖ್ಯೆ ಪಡೆದುಕೊಂಡೆ. ಆದರೆ ಅವರನ್ನು ನೇರವಾಗಿ ಭೇಟಿಯಾಗಿ ಹೇಳಿದರೆ ಉತ್ತಮ ಎಂದುಕೊಂಡು ಇಲ್ಲಿಗೆ ಬಂದೆ. ನಾಗ ಚೈತನ್ಯ ಒಬ್ಬ ಅದ್ಭುತವಾದ ವ್ಯಕ್ತಿ, ಅತ್ಯುತ್ತಮ ನಟ'' ಎಂದು ಅಮೀರ್ ಖಾನ್ ಹೇಳಿದರು.

ಹಳೆಯ ಸ್ನೇಹಿತನನ್ನು ಭೇಟಿಯಾದ ಭಾವ ಮೂಡಿತು: ಅಮೀರ್ ಖಾನ್
''ಲಾಲ್ ಸಿಂಗ್ ಚಡ್ಡಾ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ನಾಗ ಚೈತನ್ಯ ಅನ್ನು ಭೇಟಿಯಾದಾಗ ಹೊಸ ವ್ಯಕ್ತಿಯನ್ನು ಭೇಟಿಯಾದ ಭಾವ ನನಗೆ ಬರಲೇ ಇಲ್ಲ. ಬಹಳ ಹಳೆಯ ಸ್ನೇಹಿತನನ್ನು ಭೇಟಿಯಾದ ಅನುಭವ ನನ್ನದಾಯಿತು. ನಾಗ ಚೈತನ್ಯ ಅದ್ಭುತವಾದ ಮನಸುಳ್ಳ ವ್ಯಕ್ತಿ. ನಾಗ ಚೈತನ್ಯ ವ್ಯಕ್ತಿತ್ವ ನನ್ನನ್ನು ಬಹುವಾಗಿ ಸೆಳೆಯಿತು. ಆತನನ್ನು ಮೊದಲ ಭಾರಿಗೆ ಭೇಟಿಯಾದಾಗಲೇ ನಾಗ ಚೈತನ್ಯಗೂ ನನಗೂ ಬಹಳ ವರ್ಷಗಳ ಪರಿಚಯ ಇರುವ ಭಾವ ಹುಟ್ಟಿತು. ಅದ್ಭುತವಾದ ವ್ಯಕ್ತಿತ್ವವುಳ್ಳ ಮಗನನ್ನು ನನಗೆ ಸ್ನೇಹಿತನಾಗಿ ನೀಡಿದ್ದಕ್ಕೆ ಅವರ ತಂದೆ ತಾಯಿಯವರಿಗೆ ಧನ್ಯವಾದ'' ಎಂದಿದ್ದಾರೆ ಅಮೀರ್ ಖಾನ್.

ಸೆಪ್ಟೆಂಬರ್ 24 ರಂದೇ ಸಿನಿಮಾ ನೋಡ್ತೀನಿ: ಅಮೀರ್ ಖಾನ್
''ಲವ್ ಸ್ಟೋರಿ' ಸಿನಿಮಾ ಸೆಪ್ಟೆಂಬರ್ 24 ಕ್ಕೆ ಬಿಡುಗಡೆ ಆಗುತ್ತಿದೆ. ಆ ದಿನವೇ ನಾನು ಸಿನಿಮಾವನ್ನು ನೋಡುತ್ತೀನಿ. ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಬಂದ್ ಆಗಿವೆ ಆದರೆ ಸ್ಪೆಷಲ್ ಸ್ಕ್ರೀನಿಂಗ್ಗೆ ಒಪ್ಪಿಗೆ ಪಡೆದು ಸೆಪ್ಟೆಂಬರ್ 24ರಂದೇ ಸಿನಿಮಾ ನೋಡುತ್ತೀನಿ. ಮುಂದಾಗಿಯೂ ಅಥವಾ ತಡವಾಗಿಯೂ ಸಿನಿಮಾ ನೋಡುವುದಿಲ್ಲ'' ಎಂದರು ಅಮೀರ್ ಖಾನ್, ಸಿನಿಮಾದ ನಿರ್ದೇಶಕ ಶೇಖರ್ ಕಮ್ಮುಲ ಬಗ್ಗೆ ಮಾತನಾಡಿದ ಅಮೀರ್ ಖಾನ್, ''ಶೇಖರ್ ಕಮ್ಮುಲ ಬಗ್ಗೆ ಎಲ್ಲರೂ ಮಾತನಾಡಿದ್ದನ್ನು ಕೇಳಿದ ಬಳಿಕ ಒಬ್ಬ ಅದ್ಭುತ ತಂತ್ರಜ್ಞನನ್ನು ಭೇಟಿಯಾದ ಖುಷಿ ನನಗೆ ಲಭ್ಯವಾಗುತ್ತಿದೆ. 'ಲವ್ ಸ್ಟೋರಿ' ಸಿನಿಮಾವು ದೊಡ್ಡ ಹಿಟ್ ಆಗಲಿ'' ಎಂದು ಇಡೀಯ ಚಿತ್ರತಂಡಕ್ಕೆ ಶುಭ ಕೋರಿದರು ಅಮೀರ್ ಖಾನ್.


Click it and Unblock the Notifications











