Don't Miss!
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- News ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರ: ಡಿ ಕೆ ಸುರೇಶ್ ಹೇಳಿದ್ದೇನು?
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮನ್ನು ಪಡೆದ ನಾವೇ ಪುಣ್ಯವಂತರು: 'ಬಾಸ್' ಅನ್ನು ಭೇಟಿಯಾದ ಪ್ರಕಾಶ್ ರೈ
ನಟ ಪ್ರಕಾಶ್ ರೈ ಕೆಲವು ದಿನಗಳ ಹಿಂದಷ್ಟೆ ಸಿನಿಮಾ ಚಿತ್ರೀಕರಣದಲ್ಲಿ ಅಪಘಾತಕ್ಕೆ ಈಡಾಗಿ ಕೈ ಮುರಿದುಕೊಂಡು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಸಾಮಾನ್ಯ ಬದುಕಿಗೆ ಮರಳಿದ್ದಾರೆ.
ನಟ ಧನುಷ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ರೈ ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಉಂಟಾದ ಅಪಘಾತದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೈದರಾಬಾದ್ಗೆ ಸ್ಥಳಾಂತರ ಮಾಡಿದ್ದರು. ಅಲ್ಲಿ ಆಗಸ್ಟ್ 11 ರಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಪ್ರಕಾಶ್ ರೈ ಕೈಗೆ ಪಟ್ಟಿ ಸುತ್ತಿಕೊಂಡು ಸಾಮಾನ್ಯ ಬದುಕಿಗೆ ಮರಳಿದ್ದಾರೆ.
ಆಗಸ್ಟ್ 15 ರಂದು ಸಿನಿಮಾ ಚಿತ್ರೀಕರಣ ಸೆಟ್ನಲ್ಲಿ ಧ್ವಜ ಹಾರಿಸಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿರುವ ನಟ ಪ್ರಕಾಶ್ ರೈ ಇಂದು ಬೆಳ್ಳಂಬೆಳಿಗ್ಗೆ ಜಿಮ್ಗೆ ಹೋಗಿದ್ದು ತಮ್ಮ 'ಬಾಸ್' ಅನ್ನು ಭೇಟಿ ಮಾಡಿ, ಅವರೊಟ್ಟಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜಿಮ್ನಲ್ಲಿ ಬಾಸ್ ಅನ್ನು ಭೇಟಿಯಾದೆ: ಪ್ರಕಾಶ್ ರೈ
ನಟ ಪ್ರಕಾಶ್ ರೈ ಇಂದು ಬೆಳಿಗ್ಗೆ ನಟ ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರೈ, ''ಬೆಳ್ಳಿಗ್ಗೆ ಜಿಮ್ನಲ್ಲಿ 'ಬಾಸ್' ಅನ್ನು ಭೇಟಿಯಾದೆ. ಸಿನಿಮಾ ರಂಗದ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ಹೊತ್ತಿದ್ದಕ್ಕೆ ಅವರಿಗೆ ಧನ್ಯವಾದ ಹೇಳಿದೆ. ಸದಾ ಉತ್ಸಾಹ ತುಂಬುವ ಅಣ್ಣಯ್ಯ. ಅವರನ್ನು ಪಡೆದ ನಾವುಗಳು ಅದೃಷ್ಟವಂತರು'' ಎಂದಿದ್ದಾರೆ ನಟ ಪ್ರಕಾಶ್ ರೈ.
ಪ್ರಕಾಶ್ ರೈಗಿದೆ ಚಿರಂಜೀವಿ ಬೆಂಬಲ
ನಟ ಪ್ರಕಾಶ್ ರೈ ಇದೀಗ ತೆಲುಗು ಸಿನಿರಂಗದ ಪ್ರತಿಷ್ಠಿತ 'MAA' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪ್ರಕಾಶ್ ರೈಗೆ ಚಿರಂಜೀವಿ ಕುಟುಂಬ ಬೆಂಬಲ ನೀಡಿದೆ. ಸ್ವತಃ ಚಿರಂಜೀವಿ ಪ್ರಕಾಶ್ ರೈ ಪರವಾಗಿ ನಿಂತಿದ್ದಾರೆ. ಚಿರಂಜೀವಿ ಸಹೋದರ ನಾಗಬಾಬು ಪ್ರಕಾಶ್ ರೈ ಪರವಾಗಿ ಪ್ರಚಾರ ಸಹ ನಡೆಸಿದ್ದಾರೆ. ಮಾ ಚುನಾವಣೆ ಕುರಿತಾಗಿ ಚರ್ಚಿಸಲೆಂದು ಪ್ರಕಾಶ್ ರೈ, ಚಿರಂಜೀವಿ ಅವರನ್ನು ಭೇಟಿ ಆಗಿರುವ ಸಾಧ್ಯತೆ ಇದೆ.
ಚಿರಂಜೀವಿ ಕುಟುಂಬದವರು ಸಹಾಯ ಮಾಡಿದ್ದರು
ನಟ ಪ್ರಕಾಶ್ ರೈ ತೆಲುಗಿನಲ್ಲಿ ಬಹಳ ಜನಪ್ರಿಯ ಪೋಷಕ ಹಾಗೂ ಖಳ ನಟ. ಚಿರಂಜೀವಿ ಅವರ ಹಲವಾರು ಸಿನಿಮಾಗಳಲ್ಲಿ ಪ್ರಕಾಶ್ ರೈ ನಟಿಸಿದ್ದರು. ಇಬ್ಬರ ನಂಟು ಬಹಳ ಹಳೆಯದ್ದು. ಚಿರಂಜೀವಿ ಕುಟುಂಬದೊಂದಿಗೆ ಬಹಳ ಆಪ್ತ ಸಂಬಂಧವನ್ನು ನಟ ಪ್ರಕಾಶ್ ರೈ ಹೊಂದಿದ್ದಾರೆ. ಈ ಹಿಂದೆ ತೆಲುಗು ಸಿನಿಮಾ ರಂಗದಲ್ಲಿ ಪ್ರಕಾಶ್ ರೈ ಸಮಸ್ಯೆ ಎದುರಿಸಿದ್ದಾರೆ ಚಿರಂಜೀವಿ ಮತ್ತು ಅವರ ಕುಟುಂಬದವರು ಸಹಾಯ ಮಾಡಿದ್ದರು.
ಪ್ರಕಾಶ್ ರೈ-ಮಂಚು ವಿಷ್ಣು ನಡುವೆ ಸ್ಪರ್ಧೆ
ಮಾ ಚುನಾವಣೆ ಬಹಳ ರಂಗೇರಿದ್ದು ನಟ ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ನಟ ಪ್ರಕಾಶ್ ರೈಗೆ ಚಿರಂಜೀವಿ ಹಾಗೂ ಇತರ ಕೆಲವು ನಾಯಕ ನಟರ ಬೆಂಬಲ ಇದ್ದರೆ ಮಂಚು ವಿಷ್ಣುಗೆ ಈ ಹಿಂದಿನ ಮಾ ಅಧ್ಯಕ್ಷ ನರೇಶ್ ಹಾಗೂ ಇನ್ನೂ ಕೆಲವರ ಬೆಂಬಲ ಇದೆ. ಪ್ರಕಾಶ್ ರೈ, ಮಂಚು ವಿಷ್ಣು ಇಬ್ಬರೇ ಕಣದಲ್ಲಿರುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಈಗ ನಟ ರಾಜಶೇಖರ್ ಪತ್ನಿ ಜೀವಿತಾ ರಾಜಶೇಖರ್ ಹಾಗೂ ಪೋಷಕ ನಟಿ ಹೇಮಾ ಸಹ ಕಣಕ್ಕೆ ಇಳಿದಿದ್ದಾರೆ. ಆದರೆ ಮುಖ್ಯ ಸ್ಪರ್ಧೆ ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ನಡುವೆಯೇ ಇದೆ. ಪ್ರಭಾಸ್ರ ದೊಡ್ಡಪ್ಪ ಕೃಷ್ಣಂ ರಾಜು ಮಾ ಸಂಸ್ಥೆಯ ಶಿಸ್ತು ಸಮಿತಿಯ ಅಧ್ಯಕ್ಷರಾಗಿದ್ದು ಅವರು ಘೊಷಿಸಿದ ಸಮಯಕ್ಕೆ ಚುನಾವಣೆ ನಡೆಯಲಿದೆ. ಕೊರೊನಾ ತುಸು ತಣ್ಣಗಾದ ಬಳಿಕ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.