ಬಾಯ್ಕಾಟ್ 'ಲಾಲ್ ಸಿಂಗ್ ಚಡ್ಡಾ' ಬೆಂಬಲಿಸಿದ ವಿಜಯಶಾಂತಿ: ಚಿರಂಜೀವಿಗೆ ಟಾಂಗ್
ರಿಲೀಸ್ ಹೊಸ್ತಿಲಲ್ಲಿ 'ಲಾಲ್ ಸಿಂಗ್ ಚಡ್ಡಾ' ಚಿತ್ರಕ್ಕೆ ಬಾಯ್ಕಾಟ್ ಬಿಸಿ ತಟ್ಟುತ್ತಿದೆ. ಈಗಾಗಲೇ ಆಮಿರ್ ಖಾನ್ ನನ್ನ ಸಿನಿಮಾ ಬಾಯ್ಕಾಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದೇ ವಿಚಾರವಾಗಿ ಈಗ ತೆಲುಗಿನ ಹಿರಿಯ ನಟಿ, ಬಿಜೆಪಿ ನಾಯಕಿ ವಿಜಯಶಾಂತಿ ಮಾಡಿರುವ ಟ್ವೀಟ್ ಸಂಚಲ ಸೃಷ್ಟಿಸಿದೆ.
'ಲಾಲ್ ಸಿಂಗ್ ಚಡ್ಡಾ' ಚಿತ್ರಕ್ಕೆ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದು, ಆಮಿರ್ ಖಾನ್ ಪ್ರೊಡಕ್ಷನ್ಸ್, ವಯಾಕಮ್ 18 ಸ್ಟುಡಿಯೋಸ್ ಸಿನಿಮಾ ನಿರ್ಮಾಣ ಮಾಡಿದೆ. 90ರ ದಶಕದಲ್ಲಿ ಟಾಮ್ ಹ್ಯಾಂಕ್ಸ್ ನಟಿಸಿದ್ದ 'ಫಾರೆಸ್ಟ್ ಗಂಪ್' ಚಿತ್ರದ ರಿಮೇಕ್ ಇದಾಗಿದೆ. ಆಗಸ್ಟ್ 11ಕ್ಕೆ ಚಿತ್ರ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಚಿತ್ರ ತೆಲುಗಿಗೂ ಡಬ್ ಆಗಿ ರಿಲೀಸ್ ಆಗ್ತಿದ್ದು, ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ ಚಿತ್ರವನ್ನು ಬೆಂಬಲಿಸಿ ಪ್ರಚಾರ ಮಾಡುತ್ತಿದ್ದಾರೆ. ಇವರಿಬ್ಬರಿಗೂ ವಿಜಯಶಾಂತಿ ಟಾಂಗ್ ಕೊಟ್ಟಿದ್ದಾರೆ.
ಚಿತ್ರದಲ್ಲಿ 'ಲಾಲ್ ಸಿಂಗ್ ಚಡ್ಡಾ' ಆಗಿ ಆಮಿರ್ ಖಾನ್ ಕಾಣಿಸಿಕೊಂಡಿದ್ದು, ಕರೀನಾ ಕಪೂರ್ ಖಾನ್, ನಾಗ ಚೈತನ್ಯ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಬಹಿಷ್ಕರಿಸುವಂತೆ ಹಲವು ನೆಟ್ಟಿಗರು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎಂಬ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಹಿಂದೆ ಆಮಿರ್ ಖಾನ್ ಭಾರತದಲ್ಲಿ ಇರಲು ರಕ್ಷಣೆ ಇಲ್ಲ, ಇಲ್ಲಿ ವಾಸಿಸಲು ಭಯವಾಗುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದೇ ಹೇಳಿಕೆ ಮತ್ತೆ ಈಗ ಅವರಿಗೆ ಸಂಕಷ್ಟ ತಂದೊಡ್ಡಿದೆ.

ಆಮಿರ್ಗೆ ತಕ್ಕ ಶಾಸ್ತಿ ಆಗುತ್ತಿದೆ
ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಅಭಿಯಾನದ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿರುವ ವಿಜಯಶಾಂತಿ "ಜನರನ್ನು ಮುಗ್ಧರು ಎಂದು ಭಾವಿಸಿ ಬಾಯಿಗೆ ಬಂದಂತೆ ಮಾತನಾಡಿಸಿದರೆ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಬಾಲಿವುಡ್ ಹೀರೊ ಆಮಿರ್ ಖಾನ್ ಜನರಿಗೆ ಅರ್ಥವಾಗುವಂತೆ ಮಾಡುತ್ತಿದ್ದಾರೆ. 2015ರಲ್ಲಿ ಬಿಜೆಪಿ ಸರಕಾರವನ್ನು ಕುರುಡಾಗಿ ವಿರೋಧಿಸುವ ಮೂಲಕ ಭಾರತಮಾತೆಯನ್ನು ಅವಮಾನಿಸಿದ ಅಸಹಿಷ್ಣುತೆಯ ಹೇಳಿಕೆಯ ಪರಿಣಾಮದ ಫಲಿತಾಂಶವನ್ನು ಈಗ ನೋಡುತ್ತಿದ್ದಾರೆ. "ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಿದ್ದು, ಅವರ ಪತ್ನಿ ದೇಶ ತೊರೆಯಲು ಮುಂದಾಗಿದ್ದಾರೆ" ಎಂದು ಅಂದು ಪತ್ರಿಕೋದ್ಯಮ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅಮೀರ್ ಹೇಳಿದ್ದರು.

ಈ ದೇಶ ಎಲ್ಲಾ ಮತದವರನ್ನು ಗೌರವಿಸುತ್ತದೆ- ವಿಜಯಶಾಂತಿ
"ಭಾರತದ ಸರ್ಕಾರ ಮತ್ತು ಖಾಸಗಿ ವ್ಯವಸ್ಥೆಗಳಲ್ಲಿ ಹಿಂದೂಯೇತರರು ಎಂತಹ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ ಎಂಬುದನ್ನು ನಾವು ಇತಿಹಾಸ ಮತ್ತು ಸಮಕಾಲೀನ ಪರಿಸ್ಥಿತಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲು, ನಂತರ ಮತ್ತು ಇಂದಿಗೂ ಈ ದೇಶ ಎಲ್ಲರನ್ನು ಧಾರ್ಮಿಕ ಸಾಮರಸ್ಯದಿಂದ ಗೌರವಿಸುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಎಂದರೆ ಆಮಿರ್ ಸೇರಿದಂತೆ ಬಾಲಿವುಡ್ನಲ್ಲಿ ಖಾನ್ತ್ರಯರಿಗೆ ಗೌರವ ಸಿಕ್ಕಿರುವುದು. ವಾಸ್ತವ ತಿಳಿದಿರುವ ಜನರು ಆಮಿರ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ ಮತ್ತು ಅವರು ಬ್ರಾಂಡ್ ಅಂಬಾಸಿಡರ್ ಆಗಿರುವ ವಾಣಿಜ್ಯ ಉತ್ಪನ್ನಗಳನ್ನು ಸಹ ಬಹಿಷ್ಕರಿಸಿದ್ದಾರೆ."

'ಪಿಕೆ' ಚಿತ್ರದಲ್ಲೂ ಹಿಂದೂ ದೇವರಿಗೆ ಅವಮಾನ
"ಈ ಹಿಂದೆ ಆಮಿರ್ ಅಭಿನಯದ ಪಿಕೆ ಚಿತ್ರದಲ್ಲಿ ಕೂಡ ಹಿಂದೂ ವಿರೋಧಿ ವಿಚಾರವನ್ನೇ ಪ್ರಧಾನವಾಗಿ ತೋರಿಸಿದ್ದರು. ಜೊತೆಗೆ ಹಿಂದೂ ದೇವರನ್ನು ಅವಮಾನಿದ್ದರು. ಆ ವೇಳೆ ಹಿಂದೂ ಸಂಘಟನೆಗಳು ಕೂಡ ಚಿತ್ರವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದವು. ಹೀಗೆ ಜನರ ವಿರೋಧವನ್ನು ಮೂಟೆ ಕಟ್ಟಿಕೊಂಡಿರುವ ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಎಂಬ ಸ್ಪೂರ್ತಿದಾಯಕ ಚಿತ್ರದ ಮೂಲಕ ಬರ್ತಿದ್ದಾರೆ. ಆದರೆ, ಜನರಿಗೆ ಯಾವುದೇ ಸ್ಫೂರ್ತಿ ತುಂಬುವ ಸ್ಥಿತಿಯಲ್ಲಿ ಇಲ್ಲದ ನಟನಿಗೆ ಆತ ಹಿಂದೆ ನೀಡಿದ್ದ ಹೇಳಿಕೆಯನ್ನು ನೆನಪಿಸುತ್ತಿದ್ದಾರೆ. ಜನರು ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ 'ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ' ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಎಲ್ಲರನ್ನು ಎಚ್ಚರಿಸುತ್ತಿದ್ದಾರೆ.

ಚಿರುಗೆ ಟಾಂಗ್ ಕೊಟ್ಟ ವಿಜಯಶಾಂತಿ
ಆಮಿರ್ ಸ್ನೇಹಿತ ಅನ್ನುವ ಕಾರಣಕ್ಕೆ ಚಿರಂಜೀವಿ, ನಾಗಚೈತನ್ಯಾ ಸಿನಿಮಾ ಅನ್ನುವ ಕಾರಣಕ್ಕೆ ನಾಗಾರ್ಜುನ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ವಿಜಯಶಾಂತಿ ಟಾಂಗ್ ಕೊಟ್ಟಿದ್ದಾರೆ. "ದುರದೃಷ್ಟವಶಾತ್, ಜನರು ಇಷ್ಟೊಂದು ಉತ್ಸಾಹದಿಂದ ಆಮಿರ್ ಖಾನ್ ಸಿನಿಮಾ ವಿರುದ್ಧ ನಿಂತಿದ್ದರೂ, ನಮ್ಮ ಕೆಲವು ದಕ್ಷಿಣದ ಹೀರೊಗಳಿಗೆ ಜನರ ಭಾವನೆ ಏನೆಂದು ತಿಳಿಯದಂತೆ ಆ ಸಿನಿಮಾ ಪ್ರಚಾರಕ್ಕಾಗಿ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಜನರ ದೇಶಾಭಿಮಾನವನ್ನು ನಿರ್ಲಕ್ಷಿಸಿ ಈ ರೀತಿ ಮಾಡುವುದು ಸಮಂಜಸವಲ್ಲ ಎಂದು ಅವರು ಯೋಚಿಸಬೇಕು" ಎಂದು ವಿಜಯಶಾಂತಿ ಗಂಭೀರವಾಗಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕಿಯ ಈ ಹೇಳಿಕೆ ಇದೀಗ ಚರ್ಚೆ ಹುಟ್ಟಾಕ್ಕಿದೆ.


Click it and Unblock the Notifications











