'ನಿರ್ದೇಶಕರು ನಾವೇ ಸುಪ್ರೀಂ ಅಂದ್ಕೊಂಡ್ರೆ ಕಷ್ಟ': ಕೊರಟಾಲ ಶಿವಗೆ ಚಿರಂಜೀವಿ ಟಾಂಗ್!
ಮೆಗಾಸ್ಟಾರ್ಗೆ 'ಆಚಾರ್ಯ' ಸೋಲನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಈ ಸಿನಿಮಾ ಹೀನಾಯವಾಗಿ ಸೋಲುಂಡಿದ್ದು ಅವರ ವೃತ್ತಿ ಬದುಕಿಗೆ ದೊಡ್ಡ ಹಿನ್ನಡೆ ಎಂದೇ ಭಾವಿಸಲಾಗಿತ್ತು. ಮೆಗಾಸ್ಟಾರ್ ಸಿನಿಮಾ ಬಗ್ಗೆ ಕೆಲವರು ಟೀಕೆಯನ್ನೂ ಮಾಡಿದ್ದರು. ಮೆಗಾಸ್ಟಾರ್ ಕರಿಯರ್ ಮುಗಿದೇ ಹೋಯ್ತು ಅಂತ ಮಾತಾಡಿಕೊಂಡವರಿಗೇನು ಕಮ್ಮಿಯಿಲ್ಲ.
'ಆಚಾರ್ಯ' ಸೋಲಿನ ಮೆಗಾ ಫ್ಯಾಮಿಲಿ ಹಾಗೂ ನಿರ್ದೇಶಕ ಕೊರಟಾಲ ಶಿವ ನಷ್ಟವನ್ನು ಭರಿಸಲು ಮುಂದಾಗಿದ್ದರು. ಈ ವೇಳೆ ಸೋಲಿನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ನಿರ್ದೇಶಕ ಪರದಾಡಿದ ಬಗ್ಗೆನೂ ಸುದ್ದಿಯಾಗಿತ್ತು.
ಮೆಗಾಸ್ಟಾರ್ ಸಿನಿಮಾ ಹೀನಾಯಾ ಸೋಲಿನ ಬಳಿಕ ಚಿರಂಜೀವಿ ಕಣ್ಣುಗಳು ಕೆಂಪಾಗಿದ್ದವು. ನಿರ್ದೇಶಕ ಕೊರಟಾಲ ಶಿವ ವಿರುದ್ಧ ಪರೋಕ್ಷವಾಗಿ ಆರೋಪ ಮಾಡುತ್ತಿದ್ದರು. ಈಗ 'ಗಾಡ್ ಫಾದರ್' ಸಕ್ಸಸ್ ಬಳಿಕ ಸಂದರ್ಶನವೊಂದರಲ್ಲಿ 'ಆಚಾರ್ಯ' ನಿರ್ದೇಶಕನಿಗೆ ತಿರುಗೇಟು ನೀಡಿದ್ದಾರೆ.

'ಆಚಾರ್ಯ' ಸೋಲಿನಿಂದ ಖಿನ್ನತೆಗೆ ಹೋಗಿಲ್ಲ
ಬಹು ನಿರೀಕ್ಷೆಯ ಸಿನಿಮಾ 'ಆಚಾರ್ಯ' ಬಾಕ್ಸಾಫೀಸ್ನಲ್ಲಿ ದುರಂತ ಅಂತ ಸಾಬೀತಾಗಿತ್ತು. ಈ ಸಿನಿಮಾ ಸೋಲಿನ ಬಳಿಕ ಮೆಗಾಸ್ಟಾರ್ ಚಿರಂಜೀವಿ ಟೀಕೆಗಳನ್ನು ಎದುರಿಸಬೇಕಾಗಿತ್ತು. ಆ ವೇಳೆ ತಮ್ಮ ಸ್ಥಿತಿ ಹೇಗಿತ್ತು? ಅನ್ನೋದನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. " ಆಚಾರ್ಯ ಸೋಲು ನನ್ನನ್ನು ಖಿನ್ನತೆಗೆ ತಳ್ಳಲಿಲ್ಲ. ಯಾಕಂದ್ರೆ, ನಿರ್ದೇಶಕರು ನಮಗೆ ಏನು ಮಾಡುವುದಕ್ಕೆ ಹೇಳಿದ್ರೋ, ಅದನ್ನೇ ಮಾಡಿದ್ದೆವು. ಇದು ಹಲವು ಜನರಿಗೆ ಇಷ್ಟ ಆಗಿಲ್ಲ." ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದಾರೆ.

ಕೊರಟಾಲ ಶಿವಗೆ ಮೆಗಾಸ್ಟಾರ್ ಟಾಂಗ್
'ಗಾಡ್ಫಾದರ್' ಸಕ್ಸಸ್ ಮೀಟ್ನಲ್ಲೂ ಮೆಗಾಸ್ಟಾರ್ ಚಿರಂಜೀವಿ 'ಆಚಾರ್ಯ' ಸೋಲಿನ ಬಗ್ಗೆ ಮಾತಾಡಿದ್ದರು. " ಸಿನಿಮಾ ಅನ್ನೋ ಎಲ್ಲರ ಶ್ರಮದ ಫಲ. ಪ್ರತಿಯೊಬ್ಬರ ಅದ್ಭುತವಾಗಿ ಎಫರ್ಟ್ ಅನ್ನು ಹಾಕಲೇಬೇಕು. ಆಗಲೇ ಸಿನಿಮಾ ಹಿಟ್ ಆಗಲು ಸಾಧ್ಯ. ಈ ವೇಳೆ ನಿರ್ದೇಶಕರು ತಾವೇ ಸುಪ್ರೀಂ ಅಂದ್ಕೊಂಡ್ರೆ, ಎಲ್ಲರಿಗಿಂತ ತನಗೆ ಹೆಚ್ಚು ಗೊತ್ತು ಅಂದ್ಕೊಂಡ್ರೆ ಅವರಿಗೆ ಇದು ಶೋಭೆ ತರುವಂತಹದ್ದಲ್ಲ. ಇದು ಕ್ರಿಯೇಟಿವ್ ಭಾಗದಲ್ಲಿ ತೊಡಗಿಸಿಕೊಳ್ಳಲು ನಿರ್ದೇಶಕರಿಗೆ ಇಷ್ಟವಿಲ್ಲ ಅನ್ನೋದನ್ನು ಸೂಚಿಸುತ್ತಿದೆ." ಎಂದು ಮೆಗಾಸ್ಟಾರ್ ಕಿಡಿಕಾರಿದ್ದರು.

ಶೇ.80ರಷ್ಟು ಸಂಭಾವನೆ ನೀಡಿದ್ದ ಮೆಗಾಸ್ಟಾರ್
'ಆಚಾರ್ಯ' ಸೋಲಿನ ಬಳಿಕ ವಿತರಕರು ನಷ್ಟವನ್ನು ಭರಿಸುವಂತೆ ದುಂಬಾಲು ಬಿದ್ದಿದ್ದರು. ಹೀಗಾಗಿ ರಾಮ್ ಚರಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ತಮ್ಮ ಸಂಭಾವನೆಯಲ್ಲಿ ಶೇ.80ರಷ್ಟು ಹಣವನ್ನು ಹಿಂದಿರುಗಿಸಿದ್ದರು. ಇನ್ನೊಂದು ಕಡೆ ಕೊರಟಾಲ ಶಿವ ವಿತರಕರಿಗೆ ಆದ ನಷ್ಟವನ್ನು ಅವರೊಬ್ಬರೇ ಭರಿಸುತ್ತಿದ್ದಾರೆ ಅನ್ನೋ ಮಾತೂ ಕೇಳಿ ಬಂದಿತ್ತು. ಈಗ 'ಗಾಡ್ ಫಾದರ್' ಸಿನಿಮಾ ಯಶಸ್ಸು ಕಂಡಿದ್ದರೂ 'ಆಚಾರ್ಯ' ಸೋಲಿನ ಕಹಿಯನ್ನು ಮರೆತಿಲ್ಲ ಅನ್ನೋದು ಈ ಮೂಲಕ ಸಾಬೀತಾಗಿದೆ.

ಗೆಲ್ಲಲೇ ಬೇಕಿದೆ 'ಎನ್ಟಿಆರ್ 30'
'ಆಚಾರ್ಯ' ಸೋಲಿನ ಬಳಿಕ ನಿರ್ದೇಶಕ ಕೊರಟಾಲ ಶಿವ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಜೂ.ಎನ್ಟಿಆರ್ ನಟಿಸುತ್ತಿರುವ 30ನೇ ಸಿನಿಮಾವನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ. ಶೀಘ್ರದಲ್ಲಿಯೇ ಈ ಸಿನಿಮಾ ಸೆಟ್ಟೇರಲಿದೆ ಅನ್ನೋ ಮಾತು ಕೇಳಿಬರುತ್ತಿದೆ. ಸದ್ಯ 'ಆಚಾರ್ಯ' ಸೋಲಿಗೆ ಕೊರಟಾಲ ಶಿವ ಕಾರಣ ಅನ್ನೋ ಹಣೆಪಟ್ಟಿ ಹೊತ್ತಿದ್ದಾರೆ. ಹೀಗಾಗಿ ಅವರ ಹೊಸ ಸಿನಿಮಾವನ್ನು ಗೆಲ್ಲಿಸಲೇಬೇಕಾದ ಒತ್ತಡದಲ್ಲಿದ್ದಾರೆ.


Click it and Unblock the Notifications











