ಇದೇನಾ ಮರ್ಯಾದೆ? ಮಗಳ ತೆಲುಗು ಚಿತ್ರದ ನಟನಿಂದ ಮೋಸ; ಕಿಡಿಕಾರಿದ ಅರ್ಜುನ್ ಸರ್ಜಾ!
ಅರ್ಜುನ್ ಸರ್ಜಾ ಓರ್ವ ಪ್ರತಿಭಾವಂತ ಕಲಾವಿದ. ಕನ್ನಡದ ಸಿಂಹದ ಮರಿ ಸೈನ್ಯ ಚಿತ್ರದ ಮೂಲಕ ಹದಿ ಹರೆಯದಲ್ಲೇ ಚಿತ್ರರಂಗ ಪ್ರವೇಶಿಸಿ ನಟನಾಗಿ ಸೈ ಎನಿಸಿಕೊಂಡ ಅರ್ಜುನ್ ಸರ್ಜಾ ಕೇವಲ ನಟನಾಗಿ ಉಳಿಯದೇ ನಿರ್ದೇಶಕನಾಗಿಯೂ ಸಹ ಮಿಂಚಿದರು. ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟ ಅರ್ಜುನ್ ಸರ್ಜಾ ತಮಿಳು ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿದರು. ಅಲ್ಲಿಯೇ 1992ರಲ್ಲಿ ಸೇವಗನ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿ ನಿರ್ದೇಶಕನಾಗಿಯೂ ಬಡ್ತಿ ಪಡೆದರು.
ಹೀಗೆ ತಾನು ಅಭಿನಯಿಸಿದ್ದ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಅರ್ಜುನ್ ಸರ್ಜಾ ತಮಿಳಿನ ಫೇಮಸ್ ನಟರಾದ ಪ್ರಭುದೇವ ಹಾಗೂ ಅಬ್ಬಾಸ್ ಅವರಿಗೂ ಸಹ ನಿರ್ದೇಶನ ಮಾಡಿದ್ದಾರೆ ಮತ್ತು ಈ ಚಿತ್ರಗಳ ಪೈಕಿ ಹಲವಾರು ಖ್ಯಾತ ನಟಿಯರು ಹಾಗೂ ನಟರ ಜತೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಇರುವ ಅರ್ಜುನ್ ಸರ್ಜಾ ಶೂಟಿಂಗ್ ವಿಚಾರವಾಗಿ ಮೀಡಿಯಾ ಮುಂದೆ ಬಂದು ಒಮ್ಮೆಯೂ ಮಾತನಾಡಿ ವಿವಾದ ಮಾಡಿಕೊಂಡಿರಲಿಲ್ಲ.
ಆದರೆ ಮೊದಲ ಬಾರಿಗೆ ಅರ್ಜುನ್ ಸರ್ಜಾ ಶೂಟಿಂಗ್ ವಿಚಾರವಾಗಿ ಬೇಸರಗೊಂಡಿದ್ದಾರೆ. ತಮ್ಮ ಮಗಳನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂದು ತಯಾರಿಸಿದ್ದ ಚಿತ್ರದ ನಟ ತಮಗೆ ಮಾಡಿದ ಮೋಸವನ್ನು ಪತ್ರಿಕಾಗೋಷ್ಠಿ ಕರೆಯುವ ಮೂಲಕ ಬಿಚ್ಚಿಟ್ಟು ಬೇಸರ ವ್ಯಕ್ತಪಡಿಸಿದ್ದಾರೆ.

ಖುಷಿಯಿಂದ ಮುಹೂರ್ತ ಮಾಡಿದ್ದ ಅರ್ಜುನ್ ಸರ್ಜಾ
ಮಗಳನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬ ಕಾರಣದಿಂದಾಗಿ ಅರ್ಜುನ್ ಸರ್ಜಾ ತಾವೇ ಕತೆಯನ್ನು ತಯಾರಿಸಿದ್ದರು ಹಾಗೂ ಈ ಕತೆಗೆ ನಟ ವಿಶ್ವಕ್ ಸೇನ್ ಸೆಟ್ ಆಗುತ್ತಾರೆ ಎಂದು ಆ ನಟನ ಕಾಲ್ ಶೀಟ್ ಕೂಡ ಪಡೆದಿದ್ದರು. ಇದೇ ವರ್ಷದ ಜೂನ್ ತಿಂಗಳ 23ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನೂ ಸಹ ನಡೆಸಲಾಗಿತ್ತು. ತೆಲುಗು ನಟ ಪವನ್ ಕಲ್ಯಾಣ್ ಚಿತ್ರಕ್ಕಾಗಿ ಕ್ಲಾಪ್ ಮಾಡಿ ಆಲ್ ದಿ ಬೆಸ್ಟ್ ಹೇಳಿದ್ದರು. ಈ ಫೋಟೊಗಳನ್ನು ಸ್ವತಃ ಅರ್ಜುನ್ ಸರ್ಜಾ ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಬೇಸರದಿಂದ ಪತ್ರಿಕಾಗೋಷ್ಠಿ ಕರೆದ ಅರ್ಜುನ್
ಹೀಗೆ ಭಾರೀ ಸಿದ್ಧತೆ ನಡೆಸಿಕೊಂಡು ಅಕ್ಟೋಬರ್ ತಿಂಗಳ ಆರಂಭದಿಂದ ಚಿತ್ರೀಕರಣ ಆರಂಭಿಸಲು ಮುಂದಾಗಿದ್ದ ಅರ್ಜುನ್ ಸರ್ಜಾಗೆ ನಟ ವಿಶ್ವಕ್ ಸೇನ್ ಕೈ ಕೊಟ್ಟಿದ್ದರು. ಆರಂಭದಲ್ಲಿ ಚಿತ್ರದ ಕತೆ ಕೇಳಿ ಸಖತ್ ಇಷ್ಟವಾಯಿತು ಎಂದಿದ್ದ ವಿಶ್ವಕ್ ಸೇನ್ ಅಕ್ಟೋಬರ್ ಆರಂಭದಲ್ಲಿ ಶುರುವಾಗಬೇಕಿದ್ದ ಚಿತ್ರೀಕರಣದಿಂದ ತಪ್ಪಿಸಿಕೊಂಡು ನಂತರ ತಿಂಗಳ ಬಳಿಕ ಜರುಗಬೇಕಿದ್ದ ಶೂಟಿಂಗ್ಗೂ ಗೈರಾಗಿದ್ದಾರೆ. ಅತ್ತ ವಿಶ್ವಕ್ ಸೇನ್ ಅರ್ಜುನ್ ಸರ್ಜಾ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಮಾತ್ರ ಹರಿದಾಡಿತ್ತು, ಆದರೆ ಹೊರ ಬಂದಿದ್ದೇಕೆ ಎಂಬುದು ಮಾತ್ರ ಬಹಿರಂಗವಾಗಿರಲಿಲ್ಲ. ಈ ಕಾರಣದಿಂದ ಅರ್ಜುನ್ ಸರ್ಜಾ ನಿನ್ನೆ ( ನವೆಂಬರ್ 5 ) ಪತ್ರಿಕಾಗೋಷ್ಠಿ ಕರೆದು ನಡೆದ ಸಂಪೂರ್ಣ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಒಂದು ತಿಂಗಳ ಶೆಡೂಲ್ ಹಾಳು
"ಇಲ್ಲಿಯವರೆಗೂ ನಾನು ಅತಿ ಹೆಚ್ಚು ಇಷ್ಟ ಪಟ್ಟ ಕತೆ ಇದು. ವಿಶ್ವಕ್ ಸೇನ್ ಕತೆ ಕೇಳಿದಾಗ ಸಿಕ್ಕಾಪಟ್ಟೆ ಚೆನ್ನಾಗಿದೆ ಎಂದು ಚಿತ್ರ ಮಾಡಲು ಉತ್ಸುಕನಾಗಿದ್ದ. ಆದರೆ ಶೂಟಿಂಗ್ ಆರಂಭದ ಸನಿಹದಲ್ಲಿ ನನ್ನ ಕರೆ ಸ್ವೀಕರಿಸುತ್ತಿರಲಿಲ್ಲ, ಈತನಿಗೆ ಮಾಡಿದಷ್ಷು ಕರೆಗಳನ್ನು ನನ್ನ ಜೀವನದಲ್ಲೇ ಯಾರಿಗೂ ಮಾಡಿಲ್ಲ" ಎಂದು ಅರ್ಜುನ್ ಬೇಸರ ಹೊರಹಾಕಿದರು. "ಅಕ್ಟೋಬರ್ ತಿಂಗಳು ಮೊದಲ ಶೆಡೂಲ್ ಇತ್ತು. ಜಗಪತಿ ಬಾಬು ಹಾಗೂ ಕೆಲ ಕೇರಳ ಕಲಾವಿದರ ಡೇಟ್ ಪಡೆದಿದ್ದೆ, ಆದರೆ ವಿಶ್ವಕ್ ಸೇನ್ ನಂತರ ಕರೆ ಮಾಡಿ ಒಂದು ತಿಂಗಳ ಶೂಟಿಂಗ್ಗೆ ತಾನು ಲಭ್ಯವಿಲ್ಲ ಎಂದು ತಿಳಿಸಿದರು. ಸ್ಕ್ರಿಪ್ಟ್ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಹಲವಾರು ಬಾರಿ ಕರೆದರೂ ಬರಲಿಲ್ಲ, ವಸ್ತ್ರ ವಿನ್ಯಾಸದವರನ್ನು ಎಷ್ಟು ಬಾರಿ ಕಳುಹಿಸಿದರೂ ಉಪಯೋಗವಾಗಲಿಲ್ಲ" ಎಂದು ಅರ್ಜುನ್ ಸರ್ಜಾ ತಿಳಿಸಿದರು.

ಮೊದಲಿಗೆ ಸಂಭಾವನೆ ವಿಚಾರವಾಗಿಯೂ ಕಾಂಪ್ರಮೈಸ್!
ಇನ್ನು ಮೊದಲು ವಿಶ್ವಕ್ ಸೇನ್ ಸಂಭಾವನೆ ವಿಚಾರದಲ್ಲಿ ರಾಜಿಯಾಗಿರಲಿಲ್ಲ ಹಾಗೂ ಒಂದು ಏರಿಯಾದ ಥಿಯೇಟ್ರಿಕಲ್ ಹಕ್ಕನ್ನು ಕೇಳಿದ್ದರು ಮತ್ತು ಇದಕ್ಕೆ ತಾನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದೆ ಎಂಬ ವಿಷಯವನ್ನೂ ಸಹ ಅರ್ಜುನ್ ಸರ್ಜಾ ಬಹಿರಂಗಪಡಿಸಿದರು. ಇದರಲ್ಲಿ ತನಗೆ ಯಾವುದೇ ತೊಂದರೆಯಾಗಿರಲಿಲ್ಲ, ತನ್ನ ಜರ್ನಿಯಲ್ಲಿ ಈ ರೀತಿ ಸಂಭಾವನೆ ವಿಚಾರ ಯಾರ ಜತೆಯೂ ನಡೆದಿರಲಿಲ್ಲ ಎಂದರು.

ಇದೇನಾ ಮರ್ಯಾದೆ?
"ಹೀಗೆ ಮೊದಲ ಶೆಡೂಲ್ಗೆ ಗೈರಾಗಿದ್ದ ವಿಶ್ವಕ್ ಸೇನ್ ಅಕ್ಟೋಬರ್ ಅಂತ್ಯದಲ್ಲಿ ಮತ್ತೆ ಭೇಟಿಯಾಗಿ ಮತ್ತೊಮ್ಮೆ ಕತೆ ಕೇಳಿದ. ಈ ಬಾರಿ ಮತ್ತಷ್ಟು ಬೆಳವಣಿಗೆಯೊಂದಿಗೆ ಕತೆ ಹೇಳಿದೆ. ಈ ಬಾರಿ ಕತೆ ಮತ್ತಷ್ಟು ಅದ್ಭುತವಾಗಿದೆ, ಶೂಟಿಂಗ್ ಶುರು ಮಾಡೋಣ ಎಂದಿದ್ದ. ಅದರಂತೆ ನವೆಂಬರ್ 3ರಂದು ಶೂಟಿಂಗ್ ಇತ್ತು. ಬೆಳಗ್ಗೆ ಆರು ಗಂಟೆಗೆ ಏಳಬೇಕೆಂದು ಮಲಗಿದ್ದೆ. ಬೆಳಗ್ಗಿನ ಜಾವ ಐದು ಗಂಟೆಗೆ ಆತನ ಮ್ಯಾನೇಜರ್ ಕಾಲ್ ಮಾಡಿ ಸರ್ ಮೆಸೇಜ್ ಮಾಡಿದ್ದಾರೆ ನೋಡಿ ಎಂದ. ವಿಶ್ವಕ್ ನಾಲ್ಕು ಗಂಟೆಗೆ ಶೂಟಿಂಗ್ ನಿಲ್ಲಿಸಿ, ಒಂದಷ್ಟು ವಿಷಯಗಳನ್ನು ಚರ್ಚೆ ಮಾಡಬೇಕಿದೆ ಎಂದು ಮೆಸೇಜ್ ಮಾಡಿದ್ದ. ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಮರ್ಯಾದೆ ನೀಡದ ಇಂಥ ನಟರನ್ನು ನನ್ನ ವೃತ್ತಿ ಜೀವನದಲ್ಲೇ ನೋಡಿಲ್ಲ" ಎಂದು ಅರ್ಜುನ್ ಸರ್ಜಾ ಕಿಡಿಕಾರಿದರು ಹಾಗೂ ಇದೇ ಸಂದರ್ಭದಲ್ಲಿ ಮುಹೂರ್ತ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ಪವನ್ ಕಲ್ಯಾಣ್ಗೆ ಕ್ಷಮೆಯಾಚಿಸಿದರು.


Click it and Unblock the Notifications











