ಚಿರಂಜೀವಿ ಮೆರೆದ ಮಾನವೀಯತೆಗೆ ಜೈ ಎಂದ ಅಭಿಮಾನಿಗಳು
ನಟ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಪಾಲಿಗೆ ದೇವರು. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಭಾರತದ ನಟರಲ್ಲೂ ಅವರೂ ಒಬ್ಬರು. ಅಭಿಮಾನಿಗಳನ್ನು ಕುಟುಂಬ ಸದಸ್ಯರಂತೆಯೇ ಕಾಣುತ್ತಾರೆ ಚಿರಂಜೀವಿ.
ಬ್ಲಡ್ ಬ್ಯಾಂಕ್, ಆಸ್ಪತ್ರೆಗಳನ್ನು ಕಟ್ಟಿಸಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿರುವ ಚಿರಂಜೀವಿ, ಪ್ರಕೃತಿ ವಿಕೋಪ, ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವುದು ಇನ್ನಿತರ ಕಾರ್ಯಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುತ್ತಾರೆ. ಇದರ ಜೊತೆಗೆ ತಮ್ಮ ಅಭಿಮಾನಿಗಳ ವೈಯಕ್ತಿಕ ಕಷ್ಟಕ್ಕೂ ಆಗಾಗ್ಗೆ ಸ್ಪಂದಿಸುತ್ತಿರುತ್ತಾರೆ.
ನಟ ಚಿರಂಜೀವಿ ಅವರ ಅಪ್ಪಟ ಅಭಿಮಾನಿಯೊಬ್ಬನ ವೈಯಕ್ತಿಕ ಕಷ್ಟಕ್ಕೆ ಸ್ಪಂದಿಸಿದ್ದಾರೆ ನಟ ಚಿರಂಜೀವಿ. ಅಭಿಮಾನಿಯೊಬ್ಬನ ಮಗಳ ಮದುವೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದಾಗ, ವಿಷಯ ತಿಳಿದ ಚಿರಂಜೀವಿ, ಅಭಿಮಾನಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.

ಬೋಂಡಾ ಅಂಗಡಿ ಇಟ್ಟುಕೊಂಡಿದ್ದ ಶೇಖರ್
ಮೆಹಬೂಬ್ ನಗರದ ಬೋನಗಿರಿ ಶೇಖರ್, 30 ವರ್ಷಗಳಿಂದಲೂ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಬಜ್ಜಿ-ಬೋಂಡಾ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿರುವ ಶೇಖರ್, ಮಗಳ ಮದುವೆ ಮಾಡಲು ಆರ್ಥಿಕ ಮುಗ್ಗಟ್ಟು ಎದುರಿಸಿದ್ದರು.

1 ಲಕ್ಷ ರೂಪಾಯಿ ಚೆಕ್ ನೀಡಿದ ನಟ
ಈ ವಿಷಯ ತಿಳಿದ ನಟ ಚಿರಂಜೀವಿ 1 ಲಕ್ಷ ರೂಪಾಯಿ ಚೆಕ್ ಅನ್ನು ಬೋನಗಿರಿ ಶೇಖರ್ ಹೆಸರಿಗೆ ನೀಡಿದ್ದಾರೆ. ಚಿರಂಜೀವಿ ನೀಡಿದ ಚೆಕ್ ಅನ್ನು ಸ್ಥಳೀಯ ಶಾಸಕ ಶಂಕರ್ ನಾಯಕ್ ಶೇಖರ್ ಗೆ ನೀಡಿದ್ದಾರೆ. ಚೆಕ್ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಮೆಗಾ ಫ್ಯಾನ್ಸ್ ಸಂಘದ ಪ್ರಮುಖ ಸ್ವಾಮಿ ನಾಯ್ಡು 'ಅಭಿಮಾನಿಗಳು ಕಷ್ಟದಲ್ಲಿದ್ದರೆ ಅದರ ಮಾಹಿತಿ ನನಗೆ ನೀಡಿ' ಎಂದು ಚಿರಂಜೀವಿ ಹೇಳಿದ್ದಾರೆ ಎಂದಿದ್ದಾರೆ.

ನಿಹಾರಿಕಾಗೆ ಎರಡು ಕೋಟಿ ಮೌಲ್ಯದ ಆಭರಣ!?
ಮೆಗಾಸ್ಟಾರ್ ಚಿರಂಜೀವಿ ಎರಡು ದಿನಗಳ ಹಿಂದಷ್ಟೆ ಸಹೋದರ ನಾಗಬಾಬು ಮಗಳು ನಿಹಾರಿಕಾ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ನಿಹಾರಿಕಾ ಗೆ ಮದುವೆ ಉಡುಗೊರೆಯಾಗಿ ಎರಡು ಕೋಟಿ ಮೌಲ್ಯದ ಆಭರಣಗಳನ್ನು ನೀಡಿದ್ದಾರೆ ಎನ್ನಲಾಗಿದೆ.
Recommended Video

ಹಲವು ಸಿನಿಮಾಗಳಲ್ಲಿ ಚಿರು ಬ್ಯುಸಿ
ಇನ್ನು ನಟ ಚಿರಂಜೀವಿ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ನಟನೆಯ ಆಚಾರ್ಯ ಸಿನಿಮಾದ ಚಿತ್ರೀಕರಣ ಪ್ರಸ್ತುತ ನಡೆಯುತ್ತಿದೆ. ಇದಾದ ನಂತರ ಮಲಯಾಳಂ ನ ಲುಸೀಫರ್ ಸಿನಿಮಾದ ರೀಮೇಕ್ ನಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಅದರ ನಂತರ ಆಟೋ ಜಾನಿ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಚಿರಂಜೀವಿ.


Click it and Unblock the Notifications











