ಚಿರಂಜೀವಿಯನ್ನು ಭೇಟಿಯಾಗಲು 600 ಕೀ.ಮಿ ಸೈಕಲ್ ತುಳಿದು ಬಂದ ಅಭಿಮಾನಿ!
ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಿಗೆ ಹೋಲಿಸಿದರೆ ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ನಟರ ಮೇಲಿನ ಅಭಿಮಾನ ತುಸು ಹೆಚ್ಚು. ಅತಿರೇಕವೂ ಅನ್ನಬಹುದು.
ಅದರಲ್ಲಿಯೂ ಸೀನಿಯರ್ ಎನ್ಟಿಆರ್, ನಟ ಚಿರಂಜೀವಿ ತೆಲುಗು ಸಿನಿಮಾರಂಗದ ಇಬ್ಬರು ದೊಡ್ಡ ಸ್ಟಾರ್ಗಳು. ಬಾಲಕೃಷ್ಣಗೂ ಸಾಕಷ್ಟು ಅಭಿಮಾನಿಗಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೆ ನಟ ಚಿರಂಜೀವಿ ತಮ್ಮ 66ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಕೋವಿಡ್ ಕಾರಣದಿಂದ ಯಾರೂ ಹುಟ್ಟುಹಬ್ಬ ಆಚರಿಸಬೇಡಿರೆಂದು ಚಿರಂಜೀವಿ ಮನವಿ ಮಾಡಿದ್ದರೂ ಅಂದು ಚಿರು ಮನೆಯ ಮುಂದೆ ಜನ ಸಾಗರವೇ ಸೇರಿತ್ತು. ವಿಶೇಷವೆಂದರೆ ನಟ ಚಿರಂಜೀವಿ ಅವರನ್ನು ಕಾಣಲು 600 ಕಿ.ಮೀಗಿಂತಲೂ ಹೆಚ್ಚು ದೂರ ಒಬ್ಬ ವ್ಯಕ್ತಿ ಸೈಕಲ್ ತುಳಿಯುತ್ತಾ ಬಂದಿದ್ದ!
ಚಿರಂಜೀವಿ ಅಭಿಮಾನಿ ಆಗಿರುವ ಈಶ್ವರಯ್ಯ ಎಂಬ ವ್ಯಕ್ತಿ ತಿರುಪತಿಯಿಂದ ಸೈಕಲ್ನಲ್ಲಿ ಹೊರಟು ಹೈದರಾಬಾದ್ವರೆಗೆ ಸೈಕಲ್ನಲ್ಲಿ ಬಂದಿದ್ದಾರೆ. ಚಿತ್ತೂರು ಜಿಲ್ಲೆಯವರಾದ ಈಶ್ವರಯ್ಯಗೆ ಚಿರಂಜೀವಿ ಎಂದರೆ ಬಹಳ ಅಭಿಮಾನ. ಕೊನೆಗೂ ಈಶ್ವರಯ್ಯನ ಆಸೆ ಈಡೇರಿಸಿದ್ದು ಚಿರಂಜೀವಿ ಅವರನ್ನು ಭೇಟಿ ಮಾಡಿದ್ದಾರೆ. ಈಶ್ವರಯ್ಯನ ಚಿತ್ರಗಳು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಯಾರೂ ಹೀಗೆ ಸಾಹಸ ಮಾಡಬೇಡಿ ಎಂದ ಚಿರು
ಸತತ 12 ದಿನ ಸೈಕಲ್ ಯಾತ್ರೆ ಮಾಡಿ ಈಶ್ವರಯ್ಯ ಚಿರಂಜೀವಿ ಮನೆ ತಲುಪಿದ್ದಾರೆ. ಈಶ್ವರಯ್ಯ ಹೀಗೆ ಸೈಕಲ್ ತುಳಿದುಕೊಂಡು ಬಂದಿರುವ ವಿಷಯ ತಿಳಿದು ಆತನನ್ನು ಕಾಣಲು ಉತ್ಸುಕತೆಯಿಂದ ಬಂದ ಚಿರಂಜೀವಿ ಆತನಿಗೆ ಧನ್ಯವಾದ ಹೇಳಿ, ಪ್ರಯಾಣದ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ ಆತನ ಅಭಿಮಾನ ತಮಗೆ ಬಹಳ ಖುಷಿ ನೀಡಿದೆಯಾದರೂ ಯಾರೂ ಸಹ ಈ ರೀತಿಯ ಸಾಹಸ ಮಾಡಬಾರದು. ನಿಮಗೆ ನಮ್ಮ ಬಗ್ಗೆ ಕಾಳಜಿ ಇರುವಂತೆಯೇ ನಮಗೆ ನಿಮ್ಮ ಬಗ್ಗೆ ನಿಮ್ಮ ಕುಟುಂಬದ ಬಗ್ಗೆ ಕಾಳಜಿ ಇರುತ್ತದೆ ಹಾಗಾಗಿ ಯಾರೂ ಹೀಗೆ ಸಾಹಸ ಮಾಡಬೇಡಿ ಎಂಬ ಬುದ್ಧಿವಾದವನ್ನೂ ಚಿರಂಜೀವಿ ಹೇಳಿದ್ದಾರೆ.

ಪವನ್ ಕಲ್ಯಾಣ್ ಭೇಟಿಗೆ ವ್ಯವಸ್ಥೆ ಮಾಡಿಕೊಟ್ಟ ಚಿರು
ಚಿರಂಜೀವಿ ಭೇಟಿ ಸಮಯದಲ್ಲಿ ಅವರ ಸಹೋದರ ಪವನ್ ಕಲ್ಯಾಣ್ ಅನ್ನೂ ಭೇಟಿ ಮಾಡುವ ಆಸೆಯಿದೆ ಎಂದು ಈಶ್ವರಯ್ಯ ಹೇಳಿದಾಗ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ಚಿರಂಜೀವಿ ಅವರೇ ಮಾಡಿಸಿದ್ದಾರೆ. ಶೂಟಿಂಗ್ ಸೆಟ್ನಲ್ಲಿದ್ದ ಪವನ್ ಕಲ್ಯಾಣ್ ಅನ್ನು ಅಲ್ಲಿಗೇ ಹೋಗಿ ಈಶ್ವರಯ್ಯ ಭೇಟಿ ಮಾಡಿದ್ದಾರೆ. ಈಶ್ವರಯ್ಯ ಅವರು ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅನ್ನು ಭೇಟಿ ಆಗಿರುವ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್.

ನಾಗಚೈತನ್ಯನನ್ನು ನೋಡಲು ನೀರಿಗೆ ಹಾರಿದ್ದ ಯುವಕ
ಕೆಲವು ದಿನಗಳ ಹಿಂದೆ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರನ್ನು ನೋಡಲು ನಾಲ್ವರು ಯುವಕರು 300 ಕಿ.ಮೀ ಸೈಕಲ್ ತುಳಿದುಕೊಂಡು ಬಂದಿದ್ದರು. ಅದಕ್ಕೂ ಮುನ್ನಾ ಸೋನು ಸೂದ್ ಅನ್ನು ಕಾಣಲು ವ್ಯಕ್ತಿಯೊಬ್ಬ ನೂರಾರು ಕಿ.ಮೀ ದೂರದಿಂದ ರಾಮೋಜಿರಾವ್ ಫಿಲಂ ಸಿಟಿಗೆ ಬಂದಿದ್ದ. ಅಲ್ಲು ಅರ್ಜುನ್ಗಾಗಿಯೂ ಅಭಿಮಾನಿಯೊಬ್ಬ ನಡೆದುಕೊಂಡೇ ಬಂದಿದ್ದ. ಅವರನ್ನು ಭೇಟಿ ಯಾಗಿದ್ದ ಅಲ್ಲು ಅರ್ಜುನ್ ಆತನಿಗೆ ಹಣ ನೀಡಿದ್ದರು. ಒಬ್ಬ ಹುಚ್ಚು ಅಭಿಮಾನಿಯಂತೂ ನಟ ನಾಗ ಚೈತನ್ಯ ಅನ್ನು ನೋಡಲು ಸೇತುವೆ ಮೇಲಿನಿಂದ ನೀರಿಗೆ ಹಾರಿಬಿಟ್ಟಿದ್ದ.

ಮೂರು ಸಿನಿಮಾಗಳು ಚಿರು ಕೈಯಲ್ಲಿವೆ
ನಟ ಚಿರಂಜೀವಿ ಆಗಸ್ಟ್ 22 ರಂದು ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ 'ಆಚಾರ್ಯ' ಸಿನಿಮಾದ ಚಿತ್ರೀಕರಣವನ್ನು ಮುಗಿಸಿರುವ ಚಿರಂಜೀವಿ ಕೆಲವೇ ದಿನಗಳಲ್ಲಿ 'ಗಾಡ್ ಫಾದರ್' ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಆ ಸಿನಿಮಾವು ಮಲಯಾಳಂನ 'ಲುಸೀಫರ್' ಸಿನಿಮಾದ ರೀಮೇಕ್ ಆಗಿದೆ. ಮಲಯಾಳಂನಲ್ಲಿ ಮೋಹನ್ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರಾಜಕೀಯ ಹಾಗೂ ಮಾಫಿಯಾ ಮಿಳಿತವಾಗಿರುವ ಕತೆಯನ್ನು 'ಗಾಡ್ ಫಾದರ್' ಹೊಂದಿರಲಿದೆ. ಇನ್ನು ಚಿರು ಹುಟ್ಟುಹಬ್ಬದಂದೆ 'ಭೋಲೆ ಶಂಖರ್' ಹೆಸರಿನ ಹೊಸ ಸಿನಿಮಾದ ಘೋಷಣೆಯನ್ನು ಮಾಡಲಾಗಿದೆ. ಈ ಸಿನಿಮಾದಲ್ಲಿ ನಟಿ ಕಿರ್ತಿ ಸುರೇಶ್ ಚಿರಂಜೀವಿಯ ಸಹೋದರಿ ಪಾತ್ರದಲ್ಲಿ ನಟಿಸಲಿದ್ದಾರೆ.


Click it and Unblock the Notifications











