ಚಿರಂಜೀವಿ ಅಭಿಮಾನಿಗಳಿಗೆ ಕಹಿ ಸುದ್ದಿ: 'ಆಚಾರ್ಯ' ಬಿಡುಗಡೆ ಮುಂದೂಡಿಕೆ ಸಾಧ್ಯತೆ
ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಕಹಿ ಸುದ್ದಿ. ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿರುವ 'ಆಚಾರ್ಯ' ಸಿನಿಮಾ ಬಿಡುಗಡೆ ಮುಂದೂಡುವ ದಟ್ಟ ಸಾಧ್ಯತೆ ಎದುರಾಗಿದೆ.
'ಆಚಾರ್ಯ' ಸಿನಿಮಾವನ್ನು ಮೇ 14 ರಂದು ತೆರೆಗೆ ತರಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ಪ್ರಕರಣ ದಿನೇ-ದಿನೇ ಹೆಚ್ಚಾಗುತ್ತಿರುವ ಕಾರಣ 'ಆಚಾರ್ಯ' ಸಿನಿಮಾದ ಬಿಡುಗಡೆಯನ್ನು ಮುಂದೂಡಲು ಚಿತ್ರತಂಡ ಯೋಚಿಸಿದೆ.
ಮುಂಬೈ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಲಾಗಿದೆ. ಕೋವಿಡ್ ಪ್ರಕರಣಗಳು ಮತ್ತೆ ಏರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಹಾಗಾಗಿ ಈ ಸಮಯದಲ್ಲಿ ಸಿನಿಮಾದ ಬಿಡುಗಡೆ ಬೇಡವೆಂಬುದು ಚಿತ್ರತಂಡದ ಆಲೋಚನೆ.

ಸಿನಿಮಾವನ್ನು ಜೂನ್ ಅಥವಾ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲು ಸಿನಿಮಾ ತಂಡದ ಯೋಜನೆ ಹಾಕಿದೆ. ತಜ್ಞರು ಪ್ರಸ್ತುತ ನೀಡುತ್ತಿರುವ ವರದಿ ಪ್ರಕಾರ ದೇಶದಾದ್ಯಂತ ಮೇ ತಿಂಗಳಲ್ಲಿ ಕೊರೊನಾ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಒಂದು ವೇಳೆ ಕೊರೊನಾ ಪ್ರಕರಣಗಳು ಹೆಚ್ಚಾಗಿ ಚಿತ್ರಮಂದಿರಗಳ ಮೇಲೆ ನಿರ್ಬಂಧ ಇನ್ನಷ್ಟು ಗಟ್ಟಿಗೊಳಿಸಿದಲ್ಲಿ ಅಥವಾ ಚಿತ್ರಮಂದಿರಗಳನ್ನು ಬಂದ್ ಮಾಡಿದಲ್ಲಿ ಸಿನಿಮಾಕ್ಕೆ ಭಾರಿ ನಷ್ಟವಾಗುತ್ತದೆ. ಹಾಗಾಗಿ 'ಆಚಾರ್ಯ' ತಂಡ ಈಗಲೇ ಮುನ್ನೆಚ್ಚರಿಕೆ ವಹಿಸಿದೆ.
'ಆಚಾರ್ಯ' ಸಿನಿಮಾವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಿರಂಜನ್ ರೆಡ್ಡಿ ಸಹ ಇದ್ದಾರೆ. ಚಿರಂಜೀವಿ ಮುಖ್ಯಪಾತ್ರದಲ್ಲಿರುವ ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ಸಹ ನಟಿಸಿದ್ದಾರೆ. ಸಿನಿಮಾದ ನಾಯಕಿ ಕಾಜಲ್ ಅಗರ್ವಾಲ್. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











