ಚಿರಂಜೀವಿ ನಟನೆಯ 'ಆಚಾರ್ಯ' ಡಬ್ಬಿಂಗ್ ಹಕ್ಕು ಕೋಟಿಗಳಿಗೆ ಮಾರಾಟ
ತೆಲುಗಿನ ಖ್ಯಾತ ನಟ ಚಿರಂಜೀವಿ ಸಿನಿಮಾ ಬಿಡುಗಡೆ ಆದ ದಿನ ಅಭಿಮಾನಿಗಳಿಗೆ ಹಬ್ಬ. ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಿರಂಜೀವಿ ಸಹ ಒಬ್ಬರು. ಅವರು ನಟಿಸುತ್ತಿರುವ 'ಆಚಾರ್ಯ' ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು ಸಿನಿಮಾವು ಬಿಡುಗಡೆಗೆ ತಯಾರಾಗಿದೆ.
'ಆಚಾರ್ಯ' ಸಿನಿಮಾವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರೇ ನಿರ್ಮಾಣ ಮಾಡುತ್ತಿದ್ದು, ಸಿನಿಮಾಕ್ಕೆ ದೊಡ್ಡ ಮೊತ್ತದ ಬಂಡವಾಳ ಹೂಡಿದ್ದಾರೆ. ಆದರೆ ಸಿನಿಮಾ ಚಿತ್ರೀಕರಣ ಪೂರ್ಣವಾಗುವ ಮುನ್ನವೇ ದೊಡ್ಡ ಮೊತ್ತದ ವ್ಯಾಪಾರ ಮಾಡುತ್ತಿದೆ. 'ಆಚಾರ್ಯ' ಸಿನಿಮಾದ ಡಬ್ಬಿಂಗ್ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಸ್ಯಾಟಲೈಟ್ ಹಕ್ಕು, ಡಿಜಿಟಲ್ ಹಕ್ಕುಗಳಿಗೂ ದೊಡ್ಡ ಮೊತ್ತದ ಬೇಡಿಕೆ ಇದೆ.
ಚಿರಂಜೀವಿಗೆ ತೆಲುಗು ರಾಜ್ಯಗಳಲ್ಲಿ ಮಾತ್ರವೇ ಅಲ್ಲದೆ ಹಲವು ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ ಹಾಗಾಗಿ ಚಿರಂಜೀವಿ ಸಿನಿಮಾದ ಡಬ್ಬಿಂಗ್ ಹಕ್ಕಿಗೆ ಸಹಜವಾಗಿಯೇ ಡಿಮ್ಯಾಂಡ್ ಹೆಚ್ಚಾಗಿದ್ದು, ದೊಡ್ಡ ಮೊತ್ತಕ್ಕೆ ಸಂಸ್ಥೆಯೊಂದು ಡಬ್ಬಿಂಗ್ ಹಕ್ಕನ್ನು ಖರೀದಿ ಮಾಡಿದೆ.
ಹಿಂದಿಯ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮತ್ತು ವಿತರಣೆ ಮಾಡಿರುವ ನಿರ್ಮಾಪಕ ಜಯಂತಿ ಲಾಕ್ ಗಡ್ಡಾ 'ಆಚಾರ್ಯ' ಸಿನಿಮಾದ ಡಬ್ಬಿಂಗ್ ಹಕ್ಕನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಈ ಸಿನಿಮಾಕ್ಕಾಗಿ ಅವರು 26 ಕೋಟಿ ರುಗಳನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ಮೊತ್ತಕ್ಕೆ ಇನ್ಯಾವ ಸಿನಿಮಾದ ಡಬ್ಬಿಂಗ್ ಹಕ್ಕು ಸಹ ಮಾರಾಟವಾಗಿಲ್ಲ ಎನ್ನಲಾಗುತ್ತಿದೆ. ಜಯಂತಿಲಾಲ್ ಗಡ್ಡಾ ಕೇವಲ ಹಿಂದಿ ಸಿನಿಮಾದ ಡಬ್ಬಿಂಗ್ ಹಕ್ಕುಗಳನ್ನು ಮಾತ್ರವೇ ಖರೀದಿಸಿದ್ದಾರೆ.

ದಕ್ಷಿಣ ಭಾರತ ಸಿನಿಮಾಗಳಿಗೆ ಭಾರಿ ಬೇಡಿಕೆ: ವಿಜಯ್ ಕುಮಾರ್
ಡಬ್ಬಿಂಗ್ ಹಕ್ಕು ಮಾರಾಟದ ಡೀಲ್ ಕುದುರಿಸಿದ ಸಿನಿಮಾ ಕರ್ಮಿ ವಿಜಯ್ ಕುಮಾರ್ ಮಾತನಾಡಿ, ''ದಕ್ಷಿಣ ಭಾರತದ ಸಿನಿಮಾಗಳ ಡಬ್ಬಿಂಗ್ ಹಕ್ಕುಗಳಿಗೆ ಒಳ್ಳೆಯ ಡಿಮ್ಯಾಂಡ್ ಇದೆ. 2011ರಿಂದ ದಕ್ಷಿಣ ಭಾರತ ಸಿನಿಮಾಗಳ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ. ನಾಗಾರ್ಜುನ, ಅಲ್ಲು ಅರ್ಜುನ್ ಅಂಥಹಾ ನಟರ ಸಿನಿಮಾಗಳಿಂದ ಇದು ಪ್ರಾರಂಭವಾಯ್ತು'' ಎಂದಿದ್ದಾರೆ.

ಹಿಂದಿ ಸಿನಿಮಾಗಳಿಗೆ ದೊಡ್ಡ ಬೇಡಿಕೆ ಇದೆ
2011ರಲ್ಲಿ ಅಲ್ಲು ಅರ್ಜುನ್ ಸಿನಿಮಾದ ಡಬ್ಬಿಂಗ್ ಹಕ್ಕು ಕೇವಲ 10 ಲಕ್ಷಕ್ಕೆ ಮಾರಾಟವಾಗಿತ್ತು, ಆದರೆ ಇತ್ತೀಚೆಗೆ ಅದೇ ಅಲ್ಲು ಅರ್ಜುನ್ ಸಿನಿಮಾದ ಡಬ್ಬಿಂಗ್ ಹಕ್ಕುಗಳು ಬರೋಬ್ಬರಿ 21 ಕೋಟಿಗೆ ಮಾರಾಟವಾಗಿವೆ ಎಂದು ಮಾಹಿತಿ ನೀಡಿದ್ದಾರೆ ವಿಜಯ್ ಕುಮಾರ್. ದಕ್ಷಿಣ ಭಾರತದ ಸಿನಿಮಾಗಳಿಗೆ ಹಿಂದಿ ಟಿವಿ ಚಾನೆಲ್ಗಳಿಂದ ಭಾರಿ ಬೇಡಿಕೆ ಇದೆ'' ಎಂದಿದ್ದಾರೆ ಅವರು.

ಏಷ್ಯಾದ ಅತಿ ದೊಡ್ಡ ಸೆಟ್ ನಿರ್ಮಾಣ
'ಆಚಾರ್ಯ' ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಾಯಕಿ. ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಸಿನಿಮಾವನ್ನು ನಿರ್ಮಾಣ ಮಾಡಿದ್ದು ನಟನೆ ಸಹ ಮಾಡಿದ್ದಾರೆ. ರಾಮ್ ಚರಣ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾಕ್ಕಾಗಿ ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಸೆಟ್ ಒಂದನ್ನು ನಿರ್ಮಾಣ ಮಾಡಿ ದಾಖಲೆ ಬರೆಯಲಾಗಿದೆ. ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು ಕ್ರಿಸ್ಮಸ್ ಹಬ್ಬದ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಮಲಯಾಳಂ ಸಿನಿಮಾ ರೀಮೇಕ್ನಲ್ಲಿ ಚಿರಂಜೀವಿ
'ಆಚಾರ್ಯ' ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದ ಬಳಿಕ ಚಿರಂಜೀವಿ ಮಲಯಾಳಂ ಸಿನಿಮಾ 'ಲುಸೀಫರ್' ರೀಮೇಕ್ನಲ್ಲಿ ನಟಿಸಲಿದ್ದಾರೆ. ಅದೇ ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ವಿಜಯ್ ದೇವರಕೊಂಡ ಸಹ ನಟಿಸಲಿದ್ದಾರೆ. ಇನ್ನು 'ಆಚಾರ್ಯ' ಸಿನಿಮಾದ ನಿರ್ಮಾಪಕ, ಸಹ ನಟರಾದ ನಟ ರಾಮ್ ಚರಣ್ 'ಆರ್ಆರ್ಆರ್' ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಜೊತೆಗೆ ತಮಿಳಿನ ಶಂಕರ್ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಇದು ಅವರ ಮೊದಲ ತಮಿಳು ಸಿನಿಮಾ.


Click it and Unblock the Notifications











