ಸುಳ್ಳು ಸುದ್ದಿ ಸಾಕು ನಿಲ್ಲಿಸಿ: ಚಿರಂಜೀವಿ ಆಕ್ರೋಶ
ನಿನ್ನೆಯಷ್ಟೆ ಬಹಳ ಖುಷಿಯಾಗಿ, ಉತ್ಸಾಹದಿಂದ ಇದ್ದ ತೆಲುಗು ಮೆಗಾಸ್ಟಾರ್ ಚಿರಂಜೀವಿ ಇಂದು ಸಿಟ್ಟಾಗಿದ್ದಾರೆ. ಅವರ ಸಿಟ್ಟಿಗೆ ಕಾರಣವೂ ಇದೆ. ನಟ ಚಿರಂಜೀವಿ ನಿನ್ನೆ ಆಂಧ್ರ ಪ್ರದೇಶ ಸಿಎಂ ನಿವಾಸಕ್ಕೆ ಭೋಜನಕ್ಕೆ ತೆರಳಿದ್ದರು. ಆಂಧ್ರ ಪ್ರದೇಶದಲ್ಲಿ ಚಿತ್ರಮಂದಿರಗಳ ಟಿಕೆಟ್ ಬೆಲೆಯನ್ನು ಇಳಿಸಿರುವುದು ಇದರಿಂದ ತೆಲುಗು ಚಿತ್ರರಂಗ ಸಂಷಕ್ಟಕ್ಕೆ ಸಿಲುಕಿರುವುದು, ತೆಲುಗು ಚಿತ್ರರಂಗ ಹಾಗೂ ಆಂಧ್ರ ಸರ್ಕಾರದ ನಡುವೆ ಏರ್ಪಟ್ಟಿರುವ ವೈಷಮ್ಯ ಇವುಗಳೆಲ್ಲವನ್ನೂ ಚರ್ಚೆ ಮಾಡಲೆಂದೇ ಭೋಜನದ ನೆಪದಲ್ಲಿ ಈ ಇಬ್ಬರು ನಾಯಕರು ಸೇರಿದ್ದರು.
ಸಭೆಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಚಿರಂಜೀವಿ, 'ಈ ಸಭೆ ಅತ್ಯಂತ ಯಶಸ್ವಿ ಸಭೆ. ಟಿಕೆಟ್ ದರಗಳನ್ನು ಇಳಿಸಿ ಸರ್ಕಾರ ನೀಡಿದ್ದ ಆದೇಶವನ್ನು ಹಿಂಪಡೆದು, ಎಲ್ಲರಿಗೂ ಅನುಕೂಲಕರವಾಗುವ ಹೊಸ ಆದೇಶ ಜಾರಿ ಮಾಡಲು ಸಿಎಂ ಒಪ್ಪಿದ್ದಾರೆ'' ಎಂದು ಖುಷಿಯಾಗಿ ಚಿರಂಜೀವಿ ಹೇಳಿದ್ದರು. ಆದರೆ ಅದರ ನಂತರ ನಡೆದ ಕೆಲವು ಬೆಳವಣಿಗೆಗಳು, ಮಾಧ್ಯಮಗಳಲ್ಲಿ ಹರಿದಾಡಿದ ಕೆಲವು ಸುಳ್ಳು ಸುದ್ದಿಗಳು ಚಿರಂಜೀವಿ ಅವರನ್ನು ಬೇಸರಕ್ಕೆ ದೂಡಿವೆ.

ರಾಜ್ಯಸಭಾ ಸೀಟು ಆಫರ್?
ನಟ ಚಿರಂಜೀವಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ತಮ್ಮ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸೀಟು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಸುದ್ದಿ ತೆಲುಗು ಮಾಧ್ಯಮಗಳಲ್ಲಿ ವಿಪರೀತ ಹರಿದಾಡಿತು. ಜಗನ್ ವಿರುದ್ಧ ಟೊಂಕ ಕಟ್ಟಿ ನಿಂತಿರುವ ಪವನ್ ಕಲ್ಯಾಣ್ಗೆ ಚೆಕ್ ನೀಡಲೆಂದು ಜಗನ್, ಪವನ್ ಕಲ್ಯಾಣ್ರ ಅಣ್ಣ ಚಿರಂಜೀವಿಗೆ ರಾಜ್ಯಸಭಾ ಸೀಟು ಆಫರ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿತು. ಸಾಮಾಜಿಕ ಜಾತಲಾಣದಲ್ಲಿ ಕೆಲವರು ಈ ವಿಷಯವಾಗಿ ಚಿರಂಜೀವಿಯನ್ನು ಮೂದಲಿಸಿದರು ಸಹ.

ಸುಳ್ಳು ಸುದ್ದಿಗಳ ಬಗ್ಗೆ ಚಿರಂಜೀವಿ ಸ್ಪಷ್ಟನೆ
ಈ ಬಗ್ಗೆ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿರುವ ನಟ ಚಿರಂಜೀವಿ, ''ತೆಲುಗು ಚಿತ್ರರಂಗದ ಉಳಿವಿಗಾಗಿ, ಚಿತ್ರಮಂದಿರಗಳ ಉಳಿವಿಗಾಗಿ ಆಂಧ್ರಪ್ರದೇಶ ಸಿಎಂ ಜಗನ್ ಅವರೊಟ್ಟಿಗೆ ಚರ್ಚಿಸಿದ ವಿಚಾರಗಳನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ, ಜಗನ್ ಹಾಗೂ ನನ್ನ ನಡುವೆ ನಡೆದ ಸಭೆಯಲ್ಲಿ ರಾಜಕೀಯ ಚರ್ಚೆಯಾಗಿದೆ. ನನ್ನನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅವೆಲ್ಲವೂ ಸುಳ್ಳು'' ಎಂದು ನಟ ಚಿರಂಜೀವಿ ಹೇಳಿದ್ದಾರೆ.

ರಾಜಕೀಯದಿಂದ ನಾನು ದೂರ ಉಳಿದಿದ್ದೇನೆ: ಚಿರಂಜೀವಿ
ಮತ್ತೊಂದು ಟ್ವೀಟ್ನಲ್ಲಿ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿರುವ ಚಿರಂಜೀವಿ, ''ರಾಜಕೀಯದಿಂದ ದೂರ ಉಳಿದಿರುವ ನಾನು ಮತ್ತೆ ರಾಜಕೀಯಕ್ಕೆ ಬರುವುದಿಲ್ಲ. ರಾಜಕೀಯ ಸಭೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ದಯವಿಟ್ಟು ನಿಮ್ಮ ಊಹೆಗಳನ್ನೇ ಸುದ್ದಿಗಳನ್ನಾಗಿ ಬಿತ್ತರಿಸಬೇಡಿ. ಈ ಸುಳ್ಳು ಸುದ್ದಿ ಮತ್ತು ಚರ್ಚೆಗಳಿಗೆ ಈಗಲೇ ಪೂರ್ಣ ವಿರಾಮ ಹಾಕಿ'' ಎಂದು ಚಿರಂಜೀವಿ ಮನವಿ ಮಾಡಿದ್ದಾರೆ.

ಜಗನ್ ಜೊತೆ ಸಭೆ ಯಶಸ್ವಿ ಎಂದ ಚಿರಂಜೀವಿ
ನಿನ್ನೆ ಆಂಧ್ರ ಸಿಎಂ ಜಗನ್ ಅನ್ನು ಭೇಟಿಯಾಗಿದ್ದ ನಟ ಚಿರಂಜೀವಿ, ''ಹೊಸ ಕರಡು ತಯಾರಿಸಿ ನಮ್ಮ ಅಭಿಪ್ರಾಯವನ್ನೂ ಮನ್ನಿಸಿ ಹೊಸ ಆದೇಶ ಹೊರಡಿಸುವುದಾಗಿ ಜಗನ್ ಹೇಳಿದ್ದಾರೆ. ಇದು ಬಹಳ ದೊಡ್ಡ ಶುಭ ವಾರ್ತೆ. ಸಿನಿಮಾ ರಂಗದ ಸದಸ್ಯನಾಗಿ, ಚಿತ್ರರಂಗದ ಇತರರಿಗೆ ಕೇಳಿಕೊಳ್ಳುವುದೇನೆಂದರೆ ಯಾರೂ ಸಹ ಧೈರ್ಯಗೆಡಬೇಡಿ, ಆತಂಕ ಪಡಬೇಡಿ. ಆತಂಕದಿಂದ ಯಾರ ವಿರೋಧವಾಗಿಯೂ ಹೇಳಿಕೆಗಳನ್ನು ನೀಡಬೇಡಿ. ಚಿತ್ರರಂಗಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಜಗನ್ ಸರ್ಕಾರ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬ ಭರವಸೆ ನನಗೆ ಇದೆ. ನನ್ನ ಮೇಲೆ ನಂಬಿಕೆ ಇಟ್ಟು ನೀವು ಕೆಲ ಕಾಲ ಸಂಯಮದಿಂದ ಇರಿ'' ಎಂದು ಚಿರಂಜೀವಿ ಮನವಿ ಮಾಡಿಕೊಂಡಿದ್ದರು. ಈ ಹಿಂದೆ ಆಂಧ್ರ ಸರ್ಕಾರ ಹೊರಡಿಸಿರುವ ಆದೇಶ ಸಂಖ್ಯೆ 35 ಅನ್ನು ರದ್ದು ಮಾಡುವುದಾಗಿಯೂ ಜಗನ್ ಭರವಸೆ ನೀಡಿರುವುದಾಗಿ ಚಿರು ನಿನ್ನೆ ಹೇಳಿದ್ದಾರೆ.
{document3}


Click it and Unblock the Notifications











