ಹಿರಿಯ ಸಿನಿಮಾ ನಿರ್ಮಾಪಕ, ವಿತರಕ ಕಮಲಾಕರ ರೆಡ್ಡಿ ಅಪಘಾತದಲ್ಲಿ ಸಾವು
ತೆಲುಗಿನ ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಸಿನಿಮಾದ ಸಹ ನಿರ್ಮಾಪಕ ಹಾಗೂ ತೆಲುಗು ಸಿನಿರಂಗದ ಖ್ಯಾತ ವಿತರನ ಕಮಲಾಕರ ರೆಡ್ಡಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Recommended Video
ಆಂಧ್ರದ ನಲಗೊಂಡ ಜಿಲ್ಲೆಯ ವಾಡಪಲ್ಲಿ ಚೆಕ್ಪೋಸ್ಟ್ ಬಳಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕಮಲಾಕರ ರೆಡ್ಡಿ ಮತ್ತು ಅವರ ತಂದೆ ನಂದಗೋಪಾಲ ರೆಡ್ಡಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಮಲಾಕರ ರೆಡ್ಡಿ ಹಾಗೂ ನಂದಗೋಪಾಲ ರೆಡ್ಡಿ ಅವರಿಗೆ ನಿನ್ನೆಯಷ್ಟೆ ಕೊರೊನಾ ಪಾಸಿಟಿವ್ ಆಗಿತ್ತು. ಹಾಗಾಗಿ ಇಬ್ಬರೂ ಸಹ ಖಾಸಗಿ ಆಂಬುಲೆನ್ಸ್ನಲ್ಲಿ ನೆಲ್ಲೂರಿನಿಂದ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯದಲ್ಲಿ ಅಪಘಾತ ನಡೆದಿದೆ.

ಚಾಲಕ ನಿದ್ದೆಗೆ ಜಾರಿದ್ದರಿಂದ ಘಟನೆ ನಡೆದಿದೆ?
ಕಮಲಾಕರ ರೆಡ್ಡಿ ಹಾಗೂ ನಂದಗೋಪಾಲ್ ರೆಡ್ಡಿ ಪ್ರಯಾಣಿಸುತ್ತಿದ್ದ ಖಾಸಗಿ ಆಂಬುಲೆನ್ಸ್, ಕೊಂಡಪ್ರೋಲು ಬಳಿ ಧಲಚೆರುವು ಮಂಡಲದ ಬಳಿ ಲಾರಿಯೊಂದಕ್ಕೆ ಗುದ್ದಿದೆ. ಚಾಲಕ ನಿದ್ದೆ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಚಾಲಕನಿಗೆ ತೀವ್ರವಾಗಿ ಪೆಟ್ಟಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು
ಬೆಳಗ್ಗಿನ ಜಾವದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಆಂಬುಲೆನ್ಸ್ನ ಮುಂದಿನ ಭಾಗ ಛಿನ್ನ-ಭಿನ್ನವಾಗಿದೆ. ಕಮಲಾಕರ ರೆಡ್ಡಿ ಹಾಗೂ ತಂದೆಯ ಮೃತದೇಹವನ್ನು ಮಿರಿಯಾಲಗುಡದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲವು ಸಿನಿಮಾಗಳನ್ನು ವಿತರಣೆ ಮಾಡಿದ್ದರು
ಅರ್ಜುನ್ ರೆಡ್ಡಿ ಸಿನಿಮಾದ ಸಹನಿರ್ಮಾಪಕರಾಗಿದ್ದ ಕಮಲಾಕರ ರೆಡ್ಡಿ ಸುಮಾರು 25 ವರ್ಷಗಳಿಂದಲೂ ತೆಲುಗು ಸಿನಿರಂಗದಲ್ಲಿ ವಿತರಕರಾಗಿ ಗುರುತಿಸಿಕೊಂಡಿದ್ದರು. ಹಿಂದಿಯ ಪದ್ಮಾವತ್ ಸೇರಿದಂತೆ ಹಲವು ಸಿನಿಮಾಗಳನ್ನು ಆಂಧ್ರ-ತೆಲಂಗಾಣದಲ್ಲಿ ವಿತರಣೆ ಮಾಡಿದ್ದರು. ಹಾಲಿವುಡ್ ಸಿನಿಮಾಗಳನ್ನೂ ಸಹ ವಿತರಿಸಿದ್ದರು. ತೆಲುಗಿನ ನಿರ್ಮಾಪಕ ಸಂಘದ ಸದಸ್ಯರೂ ಸಹ ಆಗಿದ್ದರು ಕಮಲಾಕರ್.

ತೆಲುಗು ಸಿನಿಮಾರಂಗಕ್ಕೆ ನಷ್ಟ: ಪ್ರಸನ್ನ
'ಆತ ಮೃದು ಹೃದಯಿಯಾಗಿದ್ದರು. ವೈಯೋಕಾಮ್18 ಸಂಸ್ಥೆಯ ಸಿನಿಮಾಗಳು ಸೇರಿದಂತೆ ಹಲವಾರು ಹಾಲಿವುಡ್ ಸಿನಿಮಾಗಳನ್ನು ಅವರು ವಿತರಣೆ ಮಾಡಿದ್ದರು. ಅವರ ಸಾವು ತೆಲುಗು ಸಿನಿಮಾ ಉದ್ಯಮಕ್ಕೆ ದೊಡ್ಡ ನಷ್ಟ' ಎಂದು ತೆಲುಗು ಸಿನಿಮಾ ವಾಣಿಜ್ಯ ಸಂಘದ ಪ್ರಸನ್ನ ಹೇಳಿದ್ದಾರೆ.


Click it and Unblock the Notifications











