'ಲೈಗರ್' ಚಿತ್ರ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂತು? ಇಡಿ ಅಧಿಕಾರಿಗಳಿಂದ 13 ಗಂಟೆಗಳ ಕಾಲ ಪುರಿ, ಚಾರ್ಮಿ ವಿಚಾರಣೆ
ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಿರ್ಮಾಪಕಿ ಚಾರ್ಮಿಗೆ ಬೇತಾಳ ರೂಪದಲ್ಲಿ 'ಲೈಗರ್' ಬೆನ್ನತ್ತಿದೆ. ವಿಜಯ್ ದೇವರಕೊಂಡ ಹೀರೊ ಆಗಿ ನಟಿಸಿದ್ದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ ಮಾತ್ರವಲ್ಲ, ಚಿತ್ರತಂಡಕ್ಕೆ ನಾನಾ ಕಷ್ಟ ತಂದೊಡ್ಡಿದೆ. ಇದೀಗ ಚಿತ್ರದ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂತು ಎಂದು ಇಡಿ ಅಧಿಕಾರಿಗಳು ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ವಿಚಾರಣೆ ನಡೆಸುತ್ತಿದ್ದಾರೆ.
'ಲೈಗರ್' ಚಿತ್ರವನ್ನು ನಿರ್ದೇಶನದ ಮಾಡುವುದರ ಜೊತೆಗೆ ಧರ್ಮ ಪ್ರೊಡಕ್ಷನ್ಸ್ ಜೊತೆ ಸೇರಿ ಪುರಿ ಜಗನ್ನಾಥ್ ಬಂಡವಾಳ ಕೂಡ ಹೂಡಿದ್ದರು. ಚಾರ್ಮಿ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ಈ ಚಿತ್ರ ನಿರ್ಮಾಣದಲ್ಲಿ ಸಾಕಷ್ಟು ರಾಜಕೀಯ ಮುಖಂಡರು ಬಂಡವಾಳ ಕೂಡಿದ್ದಾರೆ. ಪುರಿ ಜಗನ್ನಾಥ್ ಅಕೌಂಟ್ನಲ್ಲಿ ದೊಡ್ಡ ಮೊತ್ತದ ವಿದೇಶಿ ನಗದು ಜಮೆ ಆಗಿರುವುದನ್ನು ಇಡಿ ಅಧಿಕಾರಿಗಳು ಗುರ್ತಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ 15 ದಿನಗಳ ಹಿಂದೆ ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಮಾಧ್ಯಮಗಳ ಕಣ್ಣು ತಪ್ಪಿಸಿ ಹಿಂದಿನ ಬಾಗಿಲಿನಿಂದ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಇಡಿ ಕಛೇರಿಗೆ ತೆರಳಿದ್ದಸರು. ಸುಮಾರು 13 ಗಂಟೆಗಳ ಕಾಲ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಇಬ್ಬರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 'ಲೈಗರ್' ಚಿತ್ರಕ್ಕೆ ಬಂಡವಾಳ ಹೂಡಲು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಹವಾಲಾ, ಮನಿ ಲ್ಯಾಂಡರಿಂಗ್ ಹಣ
ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಪುರಿ ಜಗನ್ನಾಥ್. ಆದರೆ ಯಾಕೋ ಇತ್ತೀಚೆಗೆ ಅವರ ನಸೀಬೆ ಚೆನ್ನಾಗಿಲ್ಲ. ಒಂದರ ಹಿಂದೊಂದರಂತೆ ಸಂಕಷ್ಟ ಎದುರಿಸುತ್ತಿದ್ದಾರೆ. ಸಿನಿಮಾಗಳು ಗೆಲ್ಲುತ್ತಿಲ್ಲ. ಸಾಲದಕ್ಕೆ ಈಗ 'ಲೈಗರ್' ಚಿತ್ರದಿಂದ ಮತ್ತಷ್ಟು ಸಂಕಷ್ಟ ಎದುರಾಗಿದೆ. ಚಿತ್ರಕ್ಕೆ ಹವಾಲಾ ಮತ್ತು ಮನಿ ಲಾಂಡರಿಂಗ್ ರೂಪದಲ್ಲಿ ಹೂಡಿಕೆ ಮಾಡಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇನ್ನು ವಿದೇಶಿ ಹೂಡಿಕೆ ಹಾಗೂ ಸ್ಥಳೀಯ ಹೂಡಿಕೆಗಳ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ.

ಪುರಿ ಜಗನ್ನಾಥ್ಗೆ ಪೆಟ್ಟಿನ ಮೇಲೆ ಪೆಟ್ಟು
'ಬದ್ರಿ', 'ಅಪ್ಪು', 'ಇಡಿಯಟ್', 'ಪೋಕಿರಿ', 'ಬ್ಯುಸಿನೆಸ್ಮ್ಯಾನ್', ಟೆಂಪರ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲೀ 2 ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ಅವರ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಕೆಲ ದಿನಗಳ ಹಿಂದೆ ಟಾಲಿವುಡ್ ಡ್ರಗ್ಸ್ ಕೇಸ್ನಲ್ಲೂ ಪುರಿ ಹೆಸರು ಕೇಳಿಬಂದಿತ್ತು. ನಂತರ ಯಾವುದರ ಸಹವಾಸ ಬೇಡ ಎಂದು ಪುರಿ ಕನೆಕ್ಟ್ ಸಂಸ್ಥೆ ಸ್ಥಾಪಿಸಿ, ಇಸ್ಮಾರ್ಟ್ ಶಂಕರ್ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದರು. ನಂತರ ವಿಜಯ್ ದೇವರಕೊಂಡನ ಹೀರೊ ಮಾಡಿ ಪ್ಯಾನ್ ಇಂಡಿಯಾ ಸಿನಿಮಾ ಕನಸು ಕಂಡಿದ್ದರು. ಆದರೆ ಆ ಸಿನಿಮಾ ಹೇಳ ಹೆಸರಿಲ್ಲದಂತೆ ಸೋತಿತ್ತು.

ವಿತರಕರು, ಪ್ರದರ್ಶಕರಿಂದಲೂ ಬೆದರಿಕೆ
'ಲೈಗರ್' ಸಿನಿಮಾ ಸೋಲಿನ ಬೆನ್ನಲ್ಲೇ ಸಿನಿಮಾ ಪ್ರದರ್ಶಕರು ಮತ್ತು ವಿತರಕರು ನಷ್ಟ ಭರಿಸಿಕೊಡುವಂತೆ ಪುರಿ ಜಗನ್ನಾಥ್ ಮೇಲೆ ಒತ್ತಡ ತಂದಿದ್ದರು. ಸ್ವಲ್ಪ ದಿನ ಸಮಯ ಕೊಡಿ ಸಾಧ್ಯವಾದಷ್ಟು ವಾಸಪ್ ಕೊಡುತ್ತೀನಿ ಎಂದು ಮಾತು ಕೊಟ್ಟಿದ್ದರು. ಆದರೆ ಇದ್ದಕ್ಕಿದಂತೆ ವಿತರಕರು ಹಾಗೂ ಪ್ರದರ್ಶನಕರು ಕೂಡಲೇ ಹಣ ಕೊಡದಿದ್ದರೆ ಮನೆ ಮುಂದೆ ಪ್ರತಿಭಟನೆ ಮಾಡವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದ್ದ ಪುರಿ ಏನಾದರೂ ಮಾಡಿಕೊಳ್ಳಿ. ಯಾರದರೂ ಪ್ರತಿಭಟನೆ ಮಾಡಿದರೆ, ತೊಂದರೆ ಕೊಟ್ಟರೆ ಅಂತಹವರಿಗೆ ನಯಾಪೈಸೆ ಕೊಡಲ್ಲ ಎಂದು ತಿರುಗೇಟು ನೀಡಿದ್ದರು.

ಗೆಲ್ಲಲೇ ಇಲ್ಲ 'ಲೈಗರ್' ಸಿನಿಮಾ
ಆಗಸ್ಟ್ 25ಕ್ಕೆ 'ಲೈಗರ್' ಸಿನಿಮಾ ವಿಶ್ವದಾದ್ಯಂತ ತೆರೆಕಂಡಿತ್ತು. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಕೇಳಿಬಂದಿತ್ತು. ಅಲ್ಲಿಂದ ಮುಂದೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಮೇಲೆ ಏಳಲೇ ಇಲ್ಲ. ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಆಗಿ ಅಬ್ಬರಿಸಿದ್ದರು. 100 ಕೋಟಿಗೂ ಅಧಿಕ ಮೊತ್ತದಲ್ಲಿ ಸಿನಿಮಾ ಸಿದ್ಧವಾಗಿತ್ತು. ರಮ್ಯಾಕೃಷ್ಣ, ಮೈಕ್ ಟೈಸನ್ ಚಿತ್ರದ ತಾರಾಗಣದಲ್ಲಿದ್ದರು.


Click it and Unblock the Notifications











