Don't Miss!
- News Bengaluru Peripheral Ring Road: 73 ಕಿಲೋ ಮೀಟರ್ ಯೋಜನೆಗೆ ಬಿಡ್ ಮಾಡಿದ್ದು ಕೇವಲ ಒಂದೇ ಕಂಪನಿ .!-ವೆಚ್ಚ ಎಷ್ಟು?
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Finance ಬ್ಯಾಂಕುಗಳ ಮೇಲೆ ನಡೆಯಲಿದ್ಯಾ ಸೈಬರ್ ಅಟ್ಯಾಕ್! ಎಚ್ಚರ ಎಚ್ಚರ ಎಂದ ಆರ್ಬಿಐ
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Technology Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಕೀಯಕ್ಕೆ ವಿದಾಯ-ಸಾಲು ಸಾಲು ಚಿತ್ರಗಳಲ್ಲಿ ಚಿರಂಜೀವಿ ಸಕ್ರಿಯ
ಭಾರತೀಯ ಸಿನಿಮಾ ರಂಗದಲ್ಲಿ ಮೊದಲ ಬಾರಿಗೆ ಒಂದು ಕೋಟಿಯ ಪಾರಿತೋಷಕ ಪಡೆದ ನಟ ಚಿರಂಜೀವಿ. 'ಜಗದೇಕ ವೀರುಡು- ಅತಿಲೋಕ ಸುಂದರಿ' ಚಿತ್ರಕ್ಕಾಗಿ ಅವರು ಒಂದು ಕೋಟಿ ಸಂಭಾವನೆ ಪಡೆದಾಗ ಅದು ರಾಷ್ಟ್ರೀಯ ಸುದ್ದಿಯಾಗಿತ್ತು. ಬಾಲಿವುಡ್ ಕೂಡ ನಿಬ್ಬೆರಗಾಗಿ ದಕ್ಷಿಣದ ಕಡೆಗೆ ಆ ಕ್ಷಣ ನೋಡಿತ್ತು. ಅಲ್ಲದೆ, ಚಿರಂಜೀವಿ ಸತತವಾಗಿ ಸುಮಾರು ಏಳು ವರ್ಷ ಕಾಲ ಭಾರತೀಯ ಸಿನಿಮಾ ರಂಗದಲ್ಲಿ ಸಂಭಾವನೆಯ ವಿಷಯದಲ್ಲಿ ಟಾಪ್ ಒನ್ ನಟನಾಗಿ ಮಿಂಚಿದವರು. ಇದೇ ಕಾರಣದಿಂದಲೇ ಅವರಿಗೆ 'ಮೆಗಾಸ್ಟಾರ್' ಅಂದರೆ ಸೂಪರ್ ಸ್ಟಾರ್ ಗಳಿಗೂ ಗಳಿಗೂ ಮೀರಿದ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆಯ ಮೆಗಾಸ್ಟಾರ್ ಎಂಬ ಪಟ್ಟ ದೊರಕ್ಕಿದ್ದು. ಹೀಗೆ ಮೆಗಾಸ್ಟಾರ್ ಅಂತ ಕರೆಸಿಕೊಂಡವರು ಭಾರತೀಯ ಸಿನಿಮಾ ರಂಗದಲ್ಲಿ ಇಬ್ಬರೇ, ಸೌತ್ ಸಿನಿಮಾ ಇಂಡಸ್ಟ್ರಿಯಿಂದ ಚಿರಂಜೀವಿ, ಹಿಂದಿ ಇಂಡಸ್ಟ್ರಿಯಿಂದ 'ಬಿಗ್ ಬಿ' ಅಮಿತಾಬ್ ಬಚ್ಚನ್.
ಕನ್ನಡ ಸಿನಿಮಾ ರಂಗಕ್ಕೆ ಬಂದರೆ ರಾಜ್ ಕುಮಾರ್ ಅವರ ನಂತರ, ಅದೇ ಮಟ್ಟದ ಜನಪ್ರಿಯತೆಯನ್ನು ಹೊಂದಿದ ನಟ ಮತ್ತೊಬ್ಬ ಹುಟ್ಟಲಿಲ್ಲ ಅಂತಲೇ ಹೇಳಬಹುದು. ಅದೇ ತಮಿಳು ಮತ್ತು ತೆಲುಗು ಚಿತ್ರರಂಗಗಳನ್ನು ತೆಗೆದುಕೊಂಡಾಗ ಅಲ್ಲಿ MGR, NTR , ರಾಜ್ ಕುಮಾರ್ ಅವರಿಗೆ ಸಮಕಾಲಿನರು ಮತ್ತು ಆಯಾಯ ರಾಜ್ಯಗಳಲ್ಲಿ ಜನಪ್ರಿಯರು. ತಮಿಳರ ಆರಾಧ್ಯ ದೈವ MGR ನಂತರ ಆ ಸ್ಥಾನವನ್ನು ತುಂಬಿದ ನಟ ರಜನಿಕಾಂತ್. ಇನ್ನು ತೆಲುಗು ಚಿತ್ರರಂಗಕ್ಕೆ ಬರುವುದಾದರೆ NTR ಅವರ ಸ್ಥಾನವನ್ನು ತುಂಬಿದ ಚಿರಂಜೀವಿ, ತೆಲುಗು ಚಿತ್ರರಂಗವನ್ನು ಬಹುದೊಡ್ಡ ಮಟ್ಟಕ್ಕೆ ಕೊಂಡೊಯ್ದರು. NTR ಜನಪ್ರಿಯತೆಯಉತ್ತುಂಗದಲ್ಲಿರುವಾಗಲೇ ತೆಲುಗುದೇಶಂ ಪಕ್ಷವನ್ನು ಸ್ಥಾಪನೆ ಮಾಡಿ ರಾಜಕೀಯದಲ್ಲಿ ಸಕ್ರಿಯರಾದರು, ಪಕ್ಷ ಸ್ಥಾಪಿಸಿದ ಕೇವಲ ಒಂಬತ್ತು ತಿಂಗಳಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಸಹ ಆದರು. ತದನಂತರ ಅವರು ಸಿನಿಮಾ ರಂಗದಿಂದ ದೂರವೇ ಸರಿದು ರಾಜಕಾರಣದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರು. ಇದೇ ಸಮಯದಲ್ಲಿ 'ಖೈದಿ' ಚಿತ್ರದ ಮೂಲಕ ಚಿರಂಜೀವಿ ದೊಡ್ಡ ಪ್ರಮಾಣದ ನಾಯಕ ನಟನಾಗಿ ಮಿಂಚಲು ಆರಂಭಿಸಿದರು. ಕ್ರಮೇಣ ಚಿರಂಜೀವಿ ಜನಪ್ರಿಯತೆ ಹೆಚ್ಚಿದಂತೆ ಅವರು NTR ಅವರ ಸ್ಥಾನದಲ್ಲಿ ತೆಲುಗು ಚಿತ್ರರಂಗದ ಅನಭಿಷಕ್ತ ದೊರೆ ಎನಿಸಿಕೊಂಡರು.
ತೆಲುಗು ಸಿನಿಮಾ ರಂಗದ ಗಡಿಗಳನ್ನು ವಿಸ್ತರಿಸಿದ ನಟ
ರಜಿನಿಕಾಂತ್ ಮತ್ತು ಚಿರಂಜೀವಿ ತಮ್ಮ, ತಮ್ಮ ಚಿತ್ರರಂಗಗಳ ಗಡಿಗಳನ್ನು ದಾಟಿಸಿದ ನಟರು. ರಜಿನಿಕಾಂತ್ ತಮಿಳು ಚಿತ್ರರಂಗವನ್ನು ಸಿಂಗಾಪುರ್, ಮಲೇಶಿಯಾ ಮತ್ತು ಜಪಾನ್ ಅಂತಹ ಪ್ರದೇಶಗಳಿಗೆ ತೆಗೆದುಕೊಂಡು ಹೋದರು. ಚಿರಂಜೀವಿ ತೆಲುಗು ಚಿತ್ರರಂಗವನ್ನ ಅಮೆರಿಕಾ, ಆಸ್ಟ್ರೇಲಿಯ ನ್ಯೂಜಿಲೆಂಡ್ ಪ್ರದೇಶಗಳಿಗೆ ವಿಸ್ತರಿಸಿದರು. ಚಿರಂಜೀವಿ ಅವರ ಮಾಸ್ ಇಮೇಜ್ ಮತ್ತು ಅವರ ಡ್ಯಾನ್ಸ್ ಮೂವ್ಮೆಂಟ್ ಗಳಿಗೆ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡರು. ಹೀಗಾಗಿಯೇ ತೆಲುಗುಚಿತ್ರಗಳು ಹಿಂದಿ ಬೆಲ್ಟ್ ಅಲ್ಲಿ ಕೂಡ ಸಾಕಷ್ಟು ಜನಪ್ರಿಯತೆ ಪಡೆದಿದ್ದು. ಇಂದು ಬಾಲಿವುಡ್ ಮೀರುವಂತೆ ತೆಲುಗು ಚಿತ್ರರಂಗ ಬೆಳೆದಿದ್ದರೆ ಅದರ ಹಿಂದೆ ಚಿರಂಜೀವಿ ಎಂಬ ನಟನ ಮಹತ್ತರವಾದ ಪಾತ್ರ ಕೂಡ ಕೆಲಸ ಮಾಡಿದೆ.
ರಾಜಕೀಯಕ್ಕೆ ಹೋಗಿ ಕೈಸುಟ್ಟುಕೊಂಡ ಚಿರಂಜೀವಿ
'NTR-MGR-ರಾಜ್ ಕುಮಾರ್' ಇವು ಕೇವಲ ಹೆಸರುಗಳಲ್ಲ, ದಂತಕಥೆಗಳು. ಹೀಗಾಗಿಯೇ NTR- MGR ರಾಜಕೀಯಕ್ಕೆ ಪ್ರವೇಶಿಸಿ ಮುಖ್ಯಮಂತ್ರಿಗಳಾಗಿ ಮಿಂಚಿದ್ದು. ಅಂತಹ ಅವಕಾಶ ರಾಜಕುಮಾರ್ ಅವರ ಪಾಲಿಗೆ ಇದ್ದರೂ ಕೂಡ ಅವರು ನಯವಾಗಿಯೇ ರಾಜಕೀಯವನ್ನು ತಿರಸ್ಕರಿಸಿದರು. ರಜನಿಕಾಂತ್, ಚಿರಂಜೀವಿ ಅಂತಹ ನಟರು ಎಷ್ಟೇ ಬೆಳೆದರು NTR- MGR ಅಂತಹ ಮೇರು ನಟರ ಸಾಲಿಗೆ ಸೇರಲು ಸಾಧ್ಯವೇ ಇಲ್ಲ. ಚಿರಂಜೀವಿ ಕೂಡ ಎನ್ ಟಿ ರಾಮರಾವ್ ಅವರಂತೆ ಪ್ರಾದೇಶಿಕ ಪಕ್ಷ 'ಪ್ರಜಾರಾಜ್ಯಂ' ಸ್ಥಾಪಿಸಿದರು, 2009ರ ಚುನಾವಣೆಯಲ್ಲಿ ಅವಿಭಜಿತ ಆಂಧ್ರಪ್ರದೇಶದ 294 ಸ್ಥಾನಗಳಿಗೆ ಪ್ರಜಾರಾಜ್ಯಂ ಸ್ಪರ್ಧಿಸಿತ್ತು. ಆ ಚುನಾವಣೆಯಲ್ಲಿ 'ಪ್ರಜಾರಾಜ್ಯಂ' ಪಕ್ಷ ಕೇವಲ 17 ಸ್ಥಾನಗಳನ್ನು ಗಳಿಸಿತ್ತು ಅದರಲ್ಲೂ ಚಿರಂಜೀವಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಸ್ವಂತ ಊರಾದ ಪಾಲಕಲ್ಲು ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ತಿರುಪತಿಯಲ್ಲಿ ಅಲ್ಪ ಮತಗಳಲ್ಲಿ ಜಯಗಳಿಸಿದರು.
ಮತ್ತೊಬ್ಬ NTR ಆಗಲು ಸಾಧ್ಯವಾಗಲಿಲ್ಲ
ಪ್ರಜಾರಾಜ್ಯಂ ಹೀನಾಯವಾಗಿ ಸೋತ ಮೇಲೆ ಚಿರಂಜೀವಿ ಅವರಿಗೆ ಅರಿವಾಗಿದ್ದು ರಾಜಕೀಯ ಬೇರೆ ಸಿನಿಮಾರಂಗ ಬೇರೆ ಅಂತ. ತಾನು ಮತ್ತೊಬ್ಬ NTR ಆಗಲು ರಾಜಕೀಯವಾಗಿ ಸಾಧ್ಯವಿಲ್ಲ ಎಂಬುದು ಆಗಲೇ ಅವರಿಗೆ ಅರಿವಾಗಿದ್ದು, ತಾನು ಎಷ್ಟೇ ದೊಡ್ಡ ಮೆಗಾಸ್ಟಾರ್ ಆದರೂ NTR ಅವರ ಸ್ಥಾನ ತುಂಬಲು ಸಾಧ್ಯವಿಲ್ಲ. NTR ಅವರಂತೆ ತನ್ನನ್ನು ಜನ ರಾಜಕೀಯವಾಗಿ ಸ್ವೀಕರಿಸುತ್ತಿಲ್ಲ ಅಂತ. ಹೀಗಾಗಿಯೇ ತಮ್ಮ 'ಪ್ರಜಾರಾಜ್ಯಂ' ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನ ಮಾಡಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.
ಅಲ್ಪಕಾಲ ಕೇಂದ್ರ ಮಂತ್ರಿಯಾಗಿ ಕೆಲಸ
ಅದಾದ ಕೆಲವು ವರ್ಷಗಳಿಗೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಆದರೆ ಅನೇಕರು ಇದಕ್ಕೆ ವ್ಯಂಗ್ಯವಾಡಿ' ತೆಲುಗು ಚಿತ್ರರಂಗದ ಮೆಗಾಸ್ಟಾರ್, 'ಪ್ರಜಾರಾಜ್ಯಂ' ಪಕ್ಷದ ಸ್ಥಾಪಕರು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾದ ಬೆಂಬಲವನ್ನು ಕೊಟ್ಟು ಆಂಧ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉಳಿಸಿಕೊಟ್ಟು ಚಿರಂಜೀವಿ ಪಡೆದುಕೊಂಡಿದ್ದು ಕೇವಲ ಸ್ಟೇಟ್ ಮಂತ್ರಿ ಅದು ಇಂಡಿಪೆಂಡೆಂಟ್ ಚಾರ್ಜ್. ಕ್ಯಾಬಿನೆಟ್ ಮಂತ್ರಿ ಸ್ಥಾನ ಕೂಡ ಪಡೆಯಲಾಗದ ಅವರ ಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ' ಇಂತಹ ವ್ಯಂಗ್ಯವಾದ ಮಾತುಗಳನ್ನು ಕೂಡ ಚಿರಂಜೀವಿ ಕೇಳಬೇಕಾಗಿ ಬಂತು.
ರಾಜಕೀಯಕ್ಕೆ ವಿದಾಯ
2014ರ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತು, ಕೇಂದ್ರದಲ್ಲಿ ಅಧಿಕಾರವನ್ನು ಕಳೆದುಕೊಂಡಿತ್ತು. ಚಿರಂಜೀವಿ ಮಾಜಿ ಕೇಂದ್ರ ಸಚಿವರಾದರು. ಆಂಧ್ರ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಡ್ರೆಸ್ ಗೆ ಇಲ್ಲದಂತೆ ಹೋಯಿತು. ಅಲ್ಲಿಗೆ ಚಿರಂಜೀವಿ ಅವರ ರಾಜಕೀಯ ಭವಿಷ್ಯ ಕೂಡ ಮಂಕಾಯಿತು. ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿದ ಮೇಲೆ ಚಿರಂಜೀವಿ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿದರು.
ರಾಜಕೀಯಕ್ಕೆ ಹೋಗಿ ತಪ್ಪು ಮಾಡಿದೆ: ಚಿರಂಜೀವಿ
ರಾಜಕೀಯದಲ್ಲಿ ಹೀನಾಯ ಸೋಲು ಕಂಡ ಚಿರಂಜೀವಿ ಸುಮಾರು 10 ವರ್ಷಗಳ ಕಾಲವೇ ಸಿನಿಮಾರಂಗದಿಂದ ದೂರ ಉಳಿದಿದ್ದರು. 'ಖೈದಿ ನಂಬರ್ 150' ಮೂಲಕ ದೊಡ್ಡಮಟ್ಟದ ಕಂಬ್ಯಾಕ್ ಮಾಡಿದರು, ಈಗಲೂ ತೆಲುಗು ಚಿತ್ರರಂಗದಲ್ಲಿ ಚಿರಂಜೀವಿ ಅವರ ಸ್ಥಾನ ಅಭಾದಿತ. ಎಷ್ಟೊ ಸೂಪರ್ ಸ್ಟಾರ್ ಗಳು ಬಂದಿದ್ದಾರೆ, ಮಾರುಕಟ್ಟೆ ಕೂಡ ದೊಡ್ಡದಾಗಿದೆ. ಸಿನಿಮಾರಂಗದ ಹಿರಿಯಣ್ಣನ ಪಾತ್ರದಲ್ಲಿ ಚಿರಂಜೀವಿ ಅವರೇ ಪ್ರತಿಷ್ಠಾಪಿತರಾಗಿದ್ದಾರೆ. 'ತಮ್ಮ ಜೀವನದಲ್ಲಿ ಮಾಡಿದ ಒಂದೇ ಒಂದು ದೊಡ್ಡ ತಪ್ಪು ಅದು ರಾಜಕೀಯಕ್ಕೆ ಹೋಗಿದ್ದು 'ಅಂತ ಚಿರಂಜೀವಿ ಕೂಡ ಅನೇಕ ಬಾರಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೂಡ ಹೇಳಿಕೊಂಡಿದ್ದಾರೆ. "ರಾಜಕೀಯದ ಕಾರಣದಿಂದ ಸುಮಾರು 10 ವರ್ಷಗಳ ಕಾಲ ತಾನು ಸಿನಿಮಾರಂಗದಿಂದ ದೂರವಾಗಿದ್ದು ಇದರಿಂದ ಜೀವನದಲ್ಲಿ ಸಾಕಷ್ಟು ಕಳೆದುಕೊಂಡೆ" ಅಂತ ಚಿರಂಜೀವಿ ಅವರೇ ಹೇಳಿದ್ದಾರೆ.
ಚಿರಂಜೀವಿ ಮುಂಬರುವ ಚಲನಚಿತ್ರಗಳು
ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡಿದ ಮೇಲೆ ಐತಿಹಾಸಿಕ ಚಿತ್ರ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನರಸಿಂಹ ರೆಡ್ಡಿ ಪಾತ್ರದಲ್ಲಿ ಅಭಿನಯಿಸಿದ ಚಿರಂಜೀವಿ ಅವರು ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ 'ಆಚಾರ್ಯ' ಚಿತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಈ ಚಿತ್ರದಲ್ಲಿ ಚಿರಂಜೀವಿ ಜೊತೆಗೆ ಅವರ ಮಗ ರಾಮ್ ಚರಣ್ ತೇಜ ಒಟ್ಟಿಗೆ ಅಭಿನಯಿಸಿದ್ದಾರೆ. ಪ್ರಸ್ತುತ ತಮ್ಮ ಇಡೀ ಫೋಕಸ್ ಸಿನಿಮಾ ರಂಗದ ಮೇಲೆ ಇಟ್ಟಿರುವ 65 ವರ್ಷದ ಮೆಗಾಸ್ಟಾರ್ ಅವರು ಒಂದೇ ಬಾರಿಗೆ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಧ್ಯವಾದರೆ 2022 ರಲ್ಲಿ ನಾಲ್ಕು ಚಿತ್ರಗಳನ್ನು ಬಿಡುಗಡೆ ಮಾಡಲು ಅವರು ಬಯಸಿದ್ದಾರೆ.
ಚಿರಂಜೀವಿ ಮುಂಬರುವ ಸಿನಿಮಾಗಳು
ಕೊರಟಾಲ ನಿರ್ದೇಶನದ 'ಆಚಾರ್ಯ' ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಅಲ್ಲದೆ ಬೇಸಿಗೆಯಲ್ಲಿ 'ಗಾಡ್ ಫಾದರ್' ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದೇ ವೇಗದಲ್ಲಿ 'ಬೋಲಾಶಂಕರ್'ಮತ್ತು ಬಾಬಿ ಚಿತ್ರ ನಿರ್ದೇಶನ ನಿರ್ದೇಶನದ ಸಿನಿಮಾಗಳನ್ನು ಬಿಡುಗಡೆಗೊಳಿಸಲು ಯೋಚಿಸುತ್ತಿದ್ದಾರೆ. ಕೈಯಲ್ಲಿರುವ ನಾಲ್ಕು ಚಿತ್ರಗಳ ಹೊರತಾಗಿ ಇನ್ನೆರಡು ಚಿತ್ರಗಳನ್ನು ಶೀಘ್ರದಲ್ಲೇ ಘೋಷಿಸಲು ಚಿರು ಸಜ್ಜಾಗಿದ್ದಾರೆ. ಯುವ ನಿರ್ದೇಶಕ ವೆಂಕಿ ಕುಡುಮುಲ ಅವರು ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಒಂದು ಸಿನಿಮಾ ಮಾಡಲಿದ್ದಾರೆ, ಜೊತೆಗೆ ಯುವಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಮತ್ತೊಂದು ಸಿನಿಮಾ ಮಾಡಲು ಚಿರಂಜೀವಿ ಸಿದ್ಧರಾಗಿದ್ದಾರೆ. ನಿರ್ದೇಶಕರ ಹೆಸರು ಅಂತಿಮಗೊಂಡ ತಕ್ಷಣ ಪ್ರಾಜೆಕ್ಟ್ ಕೂಡ ಲಾಕ್ ಆಗಲಿದೆ. ಒಟ್ಟಾರೆಯಾಗಿ 2022 ರಿಂದ ಮೆಗಾ ಬಜ್ ಮತ್ತೆ ಪ್ರಾರಂಭವಾಗಲಿದೆ. ಮೆಗಾ ಸ್ಟಾರ್ ಇದೇ ವೇಗದಲ್ಲಿ ಮುಂದುವರಿದರೆ ವರ್ಷಕ್ಕೆ ಮೂರ್ನಾಲ್ಕು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.