'ಪುಷ್ಪ' ನಿರ್ಮಾಪಕರ ಮೇಲೆ ರೇಡ್, ಆತಂಕದಲ್ಲಿ ತೆಲುಗು ಚಿತ್ರರಂಗ
'ಪುಷ್ಪ' ಸೇರಿದಂತೆ ಹಲವು ಸೂಪರ್ ಹಿಟ್ ತೆಲುಗು ಸಿನಿಮಾಗಳನ್ನು ನೀಡಿರುವ 'ಮೈತ್ರಿ ಮುವಿ ಮೇಕರ್ಸ್' ನಿರ್ಮಾಣ ಸಂಸ್ಥೆಯ ಮೇಲೆ ಇಂದು ಐಟಿ ರೇಡ್ ಆಗಿದೆ.
ಮೈತ್ರಿ ಮೂವಿ ಮೇಕರ್ಸ್ಗೆ ಮೂವರು ಪಾಲುದಾರರಿದ್ದು, ಮೂವರು ನಿರ್ಮಾಪಕರಿಗೆ ಸೇರಿದ್ದೆನ್ನಲಾದ ಹದಿನೈದು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದ್ದಾರೆ.
ನವೀನ್ ಅರನೇನಿ, ಯಲಮಂಚಿಲ್ಲಿ ರವಿಶಂಕರ್, ಚೆರುಕುರಿ ಮೋಹನ್ ಅವರುಗಳು ಸೇರಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಈ ಮೂವರು ಪಾಲುದಾರಿಕೆಯಲ್ಲಿ ತೆಲುಗು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿದ್ದಾರೆ. 'ಪುಷ್ಪ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ನೀಡಿದ್ದಾರೆ.

ವಿದೇಶಿ ಹಣ ಹೂಡಿಕೆ?
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ಮೇಲೆ ವಿದೇಶಿ ಹಣ ಹೂಡಿಕೆಯಾಗಿದ ಎಂದು ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ವತಿಯಿಂದ ನಿರ್ಮಾಣ ಮಾಡಲಾಗುವ ಸಿನಿಮಾಗಳ ಮೇಲೆ ಕೆಲವು ವಿದೇಶಿ ವ್ಯಕ್ತಿಗಳು ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾದ ವಿರುದ್ಧವೂ ಇದೇ ಆರೋಪ ಮಾಡಲಾಗಿತ್ತು. ಆ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ
ಮೈತ್ರಿ ಮೂವಿ ಮೇಕರ್ಸ್ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಇದೇ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಹಾಗೂ ಬಾಲಕೃಷ್ಣ ನಟನೆಯ 'ವೀರ ಸಿಂಹ ರೆಡ್ಡಿ' ಒಟ್ಟಿಗೆ ಸಂಕ್ರಾಂತಿ ದಿನದಂದು ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳ ಮೇಲೆ ವಿದೇಶಿ ಹಣದ ಹೂಡಿಕೆ ಆಗಿದೆ ಎಂಬುದು ಐಟಿಯ ಅನುಮಾನ. ಒಂದೇ ನಿರ್ಮಾಣ ಸಂಸ್ಥೆಯ ಸಿನಿಮಾಗಳಾಗಿದ್ದರೂ ಸಹ ಒಂದೇ ದಿನ ಬಿಡುಗಡೆ ಆಗಿ ಪರಸ್ಪರ ಸ್ಪರ್ಧೆಗೆ ಇಳಿಯಲಿವೆ.

ಹಲವು ದೊಡ್ಡ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದೆ ಮೈತ್ರಿ
'ಪುಷ್ಪ 2', ವಿಜಯ್ ದೇವರಕೊಂಡ, ಸಮಂತಾ ನಟನೆಯ 'ಖುಷಿ', ನಂದಮೂರಿ ಕಲ್ಯಾಣ್ ರಾಮ್, ಆಶಿಕಾ ರಂಗನಾಥ್ ನಟನೆಯ 'ಅಮಿಗೋಸ್', ಪವನ್ ಕಲ್ಯಾಣ್ ನಟನೆಯ 'ಭಗತ್ಸಿಂಗ್', ಜೂ ಎನ್ಟಿಆರ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ, ರಾಮ್ ಚರಣ್ ನಟನೆಯ ಹೊಸ ಸಿನಿಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ಪ್ರಸ್ತುತ ನಿರ್ಮಾಣ ಮಾಡುತ್ತಿದೆ. ಈ ಎಲ್ಲ ಸಿನಿಮಾಗಳ ಬಜೆಟ್ಗಳು ಕನಿಷ್ಟ 200 ಕೋಟಿ ಎನ್ನಲಾಗುತ್ತಿದೆ.

ಆತಂಕದಲ್ಲಿ ತೆಲುಗು ನಿರ್ಮಾಪಕರು
ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ದಾಳಿ ಆದ ಬೆನ್ನಲ್ಲೆ ತೆಲುಗು ಚಿತ್ರರಂಗ ಆತಂಕಕ್ಕೆ ಒಳಗಾಗಿದೆ. 'ವಾಲ್ತೇರು ವೀರಯ್ಯ', 'ವೀರಸಿಂಹ ರೆಡ್ಡಿ' ಸಿನಿಮಾಗಳು ಬಿಡುಗಡೆ ಹೊಸ್ತಿಲಲ್ಲಿರುವಾಗ ಐಟಿ ರೇಡ್ ಆಗಿರುವುದು ಸಹ ಆತಂಕಕ್ಕೆ ಕಾರಣವಾಗಿದೆ. ತೆಲುಗಿನ ಹಲವು ಸಿನಿಮಾಗಳ ಮೇಲೆ ವಿದೇಶದ ಹಣದ ಹೂಡಿಕೆ ಆಗಿದೆ ಎನ್ನಲಾಗುತ್ತದೆ. 'ಲೈಗರ್' ಸಿನಿಮಾದ ಮೇಲೂ ಇದೇ ಆರೋಪ ಮಾಡಲಾಗಿದ್ದು, ಆ ಬಗ್ಗೆ ತನಿಖೆ ಜಾರಿಯಲ್ಲಿದೆ. ನಿರ್ದೇಶಕ ಪುರಿ ಜಗನ್ನಾಥ್, ನಿರ್ಮಾಪಕಿ ಚಾರ್ಮಿ, ನಟ ವಿಜಯ್ ದೇವರಕೊಂಡ ಅವರನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆ.


Click it and Unblock the Notifications











