ಮೃತ ಅಣ್ಣ, ಅಪ್ಪನನ್ನು ನೆನೆದು ಭಾವುಕರಾದ ಜೂ.ಎನ್ಟಿಆರ್
ತಮ್ಮ ಪವರ್ಫುಲ್ ಆಕ್ಷನ್, ಡಾನ್ಸ್, ಡೈಲಾಗ್ಗಳಿಂದ ಅಭಿಮಾನಿಗಳ ಆರಾಧ್ಯ ದೈವವಾಗಿರುವ ತೆಲುಗಿನ ನಟ ಜೂ.ಎನ್ಟಿಆರ್ ನಿಜ ಜೀವನದಲ್ಲಿ ಭಾವುಕ ಜೀವಿ.
ನಿನ್ನೆಯಷ್ಟೆ ನಡೆದ ಒಂದು ಸಾರ್ವಜನಿಕ ಸಮಾರಂಭದಲ್ಲಿ ಅಕಾಲಿಕ ಮೃತ್ಯಗೆ ಸಿಲುಕಿದ ಅಣ್ಣ ಹಾಗೂ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ ನಟ ಜೂ.ಎನ್ಟಿಆರ್.
ನಿನ್ನೆ (ಫೆಬ್ರವರಿ 17) ಗಚ್ಚಿಬೌಲಿಯ ಸಂಧ್ಯಾ ಹಾಲ್ನಲ್ಲಿ ನಡೆದ ಸೈಬರ್ ಪೊಲೀಸ್ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿದ್ದ ಜೂ.ಎನ್ಟಿಆರ್, ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಿದರು. ನನ್ನ ಬಹುಪ್ರೀತಿಯ ಇಬ್ಬರು ವ್ಯಕ್ತಿಗಳನ್ನು ರಸ್ತೆ ಅಪಘಾತದಲ್ಲಿಯೇ ಕಳೆದುಕೊಂಡಿದ್ದೇನೆ' ಎಂದರು ಜೂ.ಎನ್ಟಿಆರ್.
'ಈ ಸಮಾರಂಭಕ್ಕೆ ನಾನೊಬ್ಬ ನಟನಾಗಿ ಬಂದಿಲ್ಲ. ಬದಲಿಗೆ ರಸ್ತೆ ಅಪಘಾತದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬದ ಸದಸ್ಯನಾಗಿ ಇಲ್ಲಿಗೆ ಬಂದಿದ್ದೇನೆ' ಎಂದರು. ಜೂ.ಎನ್ಟಿಆರ್ ಅವರ ಅಣ್ಣ ನಂದಮೂರಿ ಜಾನಕಿರಾಮ ಹಾಗೂ ಜೂ.ಎನ್ಟಿಆರ್ ತಂದೆ ಹರಿಕೃಷ್ಣ ಇಬ್ಬರೂ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ನಮ್ಮ ಅಣ್ಣ ಬಹು ಜಾಗೃತೆಯಿಂದ ವಾಹನ ಓಡಿಸುತ್ತಿದ್ದ: ಜೂ.ಎನ್ಟಿಆರ್
'ನಾವಾದರೂ ಆಗಾಗ ಕಾರು, ಬೈಕ್ ಅನ್ನು ತುಸು ಅಜಾಗರೂಕತೆಯಿಂದ ನಡೆಸಿದ್ದುಂಟು, ಆದರೆ ನಮ್ಮ ಅಣ್ಣ ನಂದಮೂರಿ ಜಾನಕಿರಾಮ ಅವರು ಬಹು ಜಾಗೃತೆಯಿಂದ ವಾಹನ ಓಡಿಸುತ್ತಿದ್ದರು. ಆದರೆ ಬೇರೊಬ್ಬರ ಅಜಾಗರೂಕತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಕ್ಟರ್ ಒಂದು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಆ ವಾಹನಕ್ಕೆ ಗುದ್ದಿ ನಮ್ಮ ಅಣ್ಣ ಬಲಿಯಾದ' ಎಂದರು ಜೂ.ಎನ್ಟಿಆರ್.

'ನಮ್ಮ ತಂದೆಯವರನ್ನೂ ವಾಹನ ಅಪಘಾತದಲ್ಲಿ ಕಳೆದುಕೊಂಡೆ'
ಇನ್ನು ನಮ್ಮ ತಂದೆಯ ಬಗ್ಗೆ ಹೇಳಲೇಬೇಕಿಲ್ಲ. ನಮ್ಮ ತಾತ ಎನ್ಟಿಆರ್ ಅವರನ್ನು 33,000 ಕಿ.ಮೀ ಗಾಡಿ ಓಡಿಸಿ ಇಡೀಯ ಆಂಧ್ರಪ್ರದೇಶ ಸುತ್ತಿಸಿದ್ದರು. ಅವರಿಗೆ ಆ ಚುನಾವಣೆ ಪ್ರಚಾರದಲ್ಲಿ ಎಲ್ಲೂ ಅನಾನುಕೂಲ ಆಗದಂತೆ ಇಡೀಯ ಆಂಧ್ರಪ್ರದೇಶವನ್ನು ಸುತ್ತಿಸಿದ್ದರು. ಅವರೂ ಸಹ ಬಹು ಜಾಗರೂಕತೆಯಿಂದ ವಾಹನ ಓಡಿಸುವಂಥಹವರು, ಆದರೆ ಅವರೂ ಸಹ ಜಾಗರೂಕರಾಗಿದ್ದರೂ ರಸ್ತೆ ಅಪಘಾತಕ್ಕೆ ಗುರಿಯಾಗಿ ನಮ್ಮನ್ನು ಬಿಟ್ಟು ಹೋಗಿಬಿಟ್ಟರು' ಎಂದು ಭಾವುಕರಾದರು ಜೂ.ಎನ್ಟಿಆರ್.

'ರಸ್ತೆಗೆ ಇಳಿಯುವ ಮುನ್ನ ಕುಟುಂಬದವರನ್ನು ನೆನಪಿಸಿಕೊಳ್ಳಿ'
ದಯವಿಟ್ಟು, ವಾಹನ ತೆಗೆದುಕೊಂಡು ರಸ್ತೆಗೆ ಇಳಿಯುವ ಮುನ್ನ ನಿಮ್ಮ ಕುಟುಂಬ ಸದಸ್ಯರನ್ನು ನೆನಪು ಮಾಡಿಕೊಳ್ಳಿ, ನಿಮಗಾಗಿ ನಿಮ್ಮ ಮನೆಯವರು, ತಂದೆ-ತಾಯಿ ಕಾಯುತ್ತಿರುತ್ತಾರೆ ಎಂಬುದನ್ನು ದಯವಿಟ್ಟು ನೆನಪು ಮಾಡಿಕೊಳ್ಳಿ. ಕೊರೊನಾಗೆ ಇರುವಂತೆ ಇದಕ್ಕೆ ವ್ಯಾಕ್ಸಿನ್ ಇಲ್ಲ, ರಸ್ತೆ ಅಪಘಾತಕ್ಕೆ ಮದ್ದು ಜಾಗೃತೆಯಷ್ಟೆ. ದಯವಿಟ್ಟು ಜಾಗೃತೆಯಿಂದ ವಾಹನ ಚಲಾಯಿಸಿ, ಜವಾಬ್ದಾರಿಯಿಂದ ವಾಹನ ಚಲಾಯಿಸಿ, ನೀವು ಬದಲಾಗಿ' ಎಂದು ಜೂ.ಎನ್ಟಿಆರ್ ಹೇಳಿದರು.
Recommended Video

ಯೋಧರನ್ನು, ಪೊಲೀಸರನ್ನು ಗೌರವಿಸೋಣ: ಜೂ.ಎನ್ಟಿಆರ್
'ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅಮ್ಮ-ಅಪ್ಪನನ್ನು ಸೃಷ್ಟಿಸಿದ್ದಾನೆ. ಅಂತೆಯೇ ಅಮ್ಮ-ಅಪ್ಪ ಎಲ್ಲೆಡೆಯೂ ಇರಲು ಸಾಧ್ಯವಿಲ್ಲವಾದ್ದರಿಂದ ಗುರುಗಳನ್ನು, ದೇಶಕಾಯುವ ಯೋಧರನ್ನು, ಪೊಲೀರನ್ನು ಸೃಷ್ಟಿಸಿದ್ದಾರೆ. ಅವರಿಗೆ ನಾವು ಗೌರವ ಸಲ್ಲಿಸೋಣ' ಎಂದರು ಜೂ.ಎನ್ಟಿಆರ್.


Click it and Unblock the Notifications











