"ರಶ್ಮಿಕಾಳನ್ನು ಬ್ಯಾನ್ ಮಾಡೋಕಾಗಲ್ಲ, ಆದ್ರೆ ಕನ್ನಡಿಗರು ಈ ಕೆಲಸ ಮಾಡಿ ಆಕೆಯನ್ನು ಸೋಲಿಸಬಹುದು!"
ಕನ್ನಡ ಸಿನಿ ಪ್ರೇಕ್ಷಕರನ್ನು ನಿಮಗೆ ಇಷ್ಟವಾಗದ ನಟಿ ಯಾರು ಎಂಬ ಪ್ರಶ್ನೆಯನ್ನು ಕೇಳಿದರೆ ಬಹುತೇಕರು ಹೇಳುವ ಒಂದೇ ಉತ್ತರ ಎಂದರೆ ಅದು ರಶ್ಮಿಕಾ ಮಂದಣ್ಣ. ಹೌದು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ರಶ್ಮಿಕಾ ಮಂದಣ್ಣ ಎದುರಿಸುತ್ತಿರುವ ವಿರೋಧವನ್ನು ಯಾವ ನಟಿಯೂ ಎದುರಿಸಿರಲಿಲ್ಲ. ಅಂದಹಾಗೆ ಕ್ಯಾಮೆರಾ ಮುಂದೆ ಕುಳಿತು ಕನ್ನಡಿಗರು ಕೋಪಕ್ಕೊಳಗಾಗುವಂತಹ ಸಾಲು ಸಾಲು ಹೇಳಿಕೆಗಳನ್ನು ನೀಡಿದ ಏಕೈಕ ನಟಿ ಕೂಡ ರಶ್ಮಿಕಾ ಮಂದಣ್ಣ ಎಂದರೆ ತಪ್ಪಾಗಲಾರದು.
ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಆ ಚಿತ್ರ ಬಿಡುಗಡೆಗೊಂಡಾಗ ಎಲ್ಲರೂ ಆಕೆಯನ್ನು ಮೆಚ್ಚಿಕೊಂಡಿದ್ದರು. ಕರ್ನಾಟಕದ ಕ್ರಷ್ ಎಂದು ಆಕೆಗೆ ತಾವೇ ಸಾಮಾಜಿಕ ಜಾಲತಾಣದಲ್ಲಿ ಬಿರುದನ್ನು ನೀಡಿ ಮೆರೆಸಿದ್ದರು. ಆದರೆ ಯಾವಾಗ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗ ಪ್ರವೇಶಿಸಿ ರಕ್ಷಿತ್ ಶೆಟ್ಟಿ ಜತೆ ಬ್ರೇಕ್ಅಪ್ ಮಾಡಿಕೊಂಡರೋ ಆಗಿನಿಂದ ರಶ್ಮಿಕಾ ಕುರಿತ ಅಭಿಪ್ರಾಯ ಹಲವು ಕನ್ನಡಿಗರಲ್ಲಿ ಬದಲಾಗಿ ಹೋಯಿತು.
ಅಗ ಹುಟ್ಟಿಕೊಂಡ ವಿರೋಧ ಹೆಚ್ಚಾಗಿದ್ದು ಕೆಲ ಕಾರ್ಯಕ್ರಮಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಕನ್ನಡ ಬರುವುದಿಲ್ಲ ಎಂದು ಹೇಳಿದ್ದು ಹಾಗೂ ಕನ್ನಡ ಮಾತನಾಡಲು ಹಿಂದೇಟು ಹಾಕಿದ್ದು. ಹೀಗೆ ಯಡವಟ್ಟುಗಳನ್ನು ಮಾಡಿಕೊಂಡ ರಶ್ಮಿಕಾ ಮಂದಣ್ಣ ನನ್ನ ಪಾಡಿಗೆ ನನ್ನನ್ನು ಇರಲು ಬಿಡಿ, ಟ್ರೋಲ್ ಮಾಡಬೇಡಿ ಎಂದು ಎರಡು ಬಾರಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡದ್ದೂ ಇದೆ. ಆದರೂ ಸಹ ಹಲವಾರು ಕನ್ನಡ ಸಿನಿ ಪ್ರೇಕ್ಷಕರು ರಶ್ಮಿಕಾ ಕುರಿತು ವಿರೋಧ ವ್ಯಕ್ತಪಡಿಸುವುದನ್ನು ಬಿಟ್ಟಿಲ್ಲ. ಇನ್ನು ಇತ್ತೀಚೆಗಷ್ಟೆ 'ರಶ್ಮಿಕಾಳನ್ನು ಕನ್ನಡ ಚಲನಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ' ಎಂಬ ಸುದ್ದಿ ಕೂಡ ಹರಿದಾಡಿತ್ತು. ಈ ಕುರಿತಾಗಿ ಇದೀಗ ತೆಲುಗಿನ ಚಲನಚಿತ್ರ ಬರಹಗಾರ ತೋಟಾ ಪ್ರಸಾದ್ ಸಂದರ್ಶನವೊಂದರಲ್ಲಿ ಈ ಕೆಳಕಂಡಂತೆ ಮಾತನಾಡಿದ್ದಾರೆ.

ಯಾವುದೇ ಕಲಾವಿದರನ್ನು ಬ್ಯಾನ್ ಮಾಡಲು ಆಗಲ್ಲ
ಪಾಪ್ ಕಾರ್ನ್ ಮೀಡಿಯಾ ಎಂಬ ತೆಲುಗು ಯುಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ತೋಟಾ ಪ್ರಸಾದ್ ಯಾವುದೇ ಚಿತ್ರರಂಗದಿಂದಲೂ ಯಾವ ಕಲಾವಿದರನ್ನೂ ಸಹ ನಿಷೇಧಿಸಲು ಆಗುವುದಿಲ್ಲ, ಅದರಲ್ಲಿಯೂ ಯಶಸ್ಸಿನ ಉತ್ತುಂಗದಲ್ಲಿರುವ ರಶ್ಮಿಕಾಳನ್ನು ಬ್ಯಾನ್ ಮಾಡುವ ಆಲೋಚನೆ ವ್ಯರ್ಥ ಎಂದು ಹೇಳಿದರು.

ಬ್ಯಾನ್ ಕಷ್ಟ, ಆದರೆ ಕನ್ನಡಿಗರು ಸೇಡು ತೀರಿಸಿಕೊಳ್ಳಬಹುದು
ಇನ್ನೂ ಮುಂದುವರೆದು ಮಾತನಾಡಿದ ತೋಟಾ ಪ್ರಸಾದ್ ರಶ್ಮಿಕಾ ಮಂದಣ್ಣ ಈಗಾಗಲೇ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗಗಳನ್ನು ಪ್ರವೇಶಿಸಿದ್ದು ಒಳ್ಳೆಯ ಸ್ಥಾನದಲ್ಲಿದ್ದಾರೆ, ಅಧಿಕೃತವಾಗಿ ಬ್ಯಾನ್ ಮಾಡುವುದಂತೂ ಅಸಾಧ್ಯ, ಆದರೆ ಕನ್ನಡ ಸಿನಿ ರಸಿಕರು ನಾವು ರಶ್ಮಿಕಾ ಮಂದಣ್ಣ ಚಿತ್ರಗಳನ್ನು ನೋಡುವುದಿಲ್ಲ ಎಂದು ನಿರ್ಧರಿಸಬಹುದು ಹಾಗೂ ಇದರಿಂದ ರಶ್ಮಿಕಾ ಅಭಿನಯದ ಚಿತ್ರಗಳು ಕರ್ನಾಟಕದಲ್ಲಿ ನಷ್ಟ ಅನುಭವಿಸುವಂತೆ ಮಾಡಿ ಸೋಲಿಸಬಹುದು ಎಂದು ತಿಳಿಸಿದರು.

ಕನ್ನಡ ಸಿನಿ ರಸಿಕರದ್ದೂ ಇದೇ ಮಾತು!
ಇನ್ನು ಬಹುತೇಕ ಕನ್ನಡ ಸಿನಿ ರಸಿಕರು ಕೆಲ ದಿನಗಳಿಂದ ಇದೇ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರಗಳನ್ನು ನಾವು ನೋಡುವುದಿಲ್ಲ ಎಂದು ಬರೆದು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಹಾಕುವ ಪೋಸ್ಟ್ಗಳಿಗೂ ಸಹ ಇದೇ ರೀತಿಯ ಹಲವಾರು ಕಾಮೆಂಟ್ಗಳು ಬಂದಿವೆ. ಸದ್ಯ ಈ ರೀತಿಯ ಬೆಳವಣಿಗೆಗಳನ್ನು ಗಮನಿಸಿದರೆ ರಶ್ಮಿಕಾ ಮತ್ತು ವಿಜಯ್ ಅಭಿನಯದ 'ವಾರಿಸು' ಹಾಗೂ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಈ ವಿಷಯ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗುವುದು ಖಚಿತ ಎನ್ನಬಹುದು..


Click it and Unblock the Notifications











