ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ತೆರಳಿ ಅಪಾಯಕ್ಕೆ ಸಿಲುಕಿದ ಸಿನಿ ತಂಡ
ಸಿನಿಮಾದ ಚಿತ್ರೀಕರಣಕ್ಕಾಗಿ ಅಪಾಯಕಾರಿ ಸ್ಥಳಗಳಿಗೆ ಹೋಗಿ ಸಿನಿಮಾ ತಂಡದವರು ಅಪಾಯಕ್ಕೆ ಸಿಲುಕಿದ ಅನೇಕ ಉದಾಹರಣೆಗಳಿವೆ. ಇದೀಗ ತೆಲುಗು ಚಿತ್ರತಂಡವೊಂದು ಚಿತ್ರೀಕರಣಕ್ಕಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದೆ.
ಹ್ಯಾಪಿಡೇಸ್ ಖ್ಯಾತಿಯ ನಿಖಿಲ್ ಸಿದ್ಧಾರ್ಥ ಅಭಿನಯಿಸುತ್ತಿರುವ 'ಕಾರ್ತಿಕೇಯ-2' ಸಿನಿಮಾದ ಚಿತ್ರೀಕರಣಕ್ಕಾಗಿ ಇಡೀಯ ಚಿತ್ರತಂಡ ಹಿಮಾಚಲ ಪ್ರದೇಶದ ಸಿಸ್ಸು ಎಂಬಲ್ಲಿಗೆ ತೆರಳಿದೆ ಆದರೆ ಅಲ್ಲಿ ಇದ್ದಕ್ಕಿದ್ದಂತೆ ತಾಪಮಾನ ತೀವ್ರವಾಗಿ ಕುಸಿದು ಹಿಮಪಾತ ಆರಂಭವಾಗಿದೆ.
ಚಿತ್ರತಂಡವು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಕಾಣುತ್ತಿರುವಂತೆ ವಾಹನಗಳ ಮೇಲೆಲ್ಲಾ ದಟ್ಟ ಮಂಜು ಶೇಖರಣೆಯಾಗಿದೆ. ಮಳೆಯಂತೆ ಹಿಮ ಉದುರುತ್ತಿದೆ. ಚಿತ್ರತಂಡವು ಆತಂಕದಲ್ಲಿ ತಮ್ಮ ವಾಹನಗಳಲ್ಲಿ ಕುಳಿತುಕೊಂಡಿದ್ದಾರೆ. ದೇಹದ ಉಷ್ಣತೆ ಹೆಚ್ಚಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

'ಈ ರೀತಿಯ ಹಿಮಪಾತವನ್ನು ಇಲ್ಲಿನ ಸ್ಥಳೀಯರು ಹಿಂದೆಂದೂ ನೋಡಿರಲಿಲ್ಲವಂತೆ. ಮುಂದಿನ ದಿನಗಳಲ್ಲಿ ಹಿಮಪಾತ ಹೆಚ್ಚಾಗಬಹುದು ಎನ್ನುತ್ತಿದ್ದಾರೆ. ಹಿಮಪಾತ ಯಾವಾಗ ನಿಲ್ಲುತ್ತದೆ ಎಂಬುದು ಸಹ ಗೊತ್ತಿಲ್ಲ' ಎಂದು ನಿಖಿಲ್ ಸಿದ್ಧಾರ್ಥ ಆತಂಕ ತುಂಬಿದ ಧ್ವನಿಯಲ್ಲಿ ಹೇಳಿದ್ದಾರೆ.
ಇದೇ ಸಿನಿಮಾದ ಫೈಟ್ ದೃಶ್ಯವೊಂದರ ಚಿತ್ರೀಕರಣದ ಸಮಯದಲ್ಲಿ ನಿಖಿಲ್ ಸಿದ್ಧಾರ್ಥ ಗಾಯಮಾಡಿಕೊಂಡಿದ್ದರು. ಆಗ ಕೆಲ ದಿನಗಳ ಕಾಲ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು.
ನಂಬಿಕೆ, ವೈಜ್ಞಾನಿಕ ಸತ್ಯಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿದ್ದ 2014 ರಲ್ಲಿ ಬಿಡುಗಡೆ ಆಗಿದ್ದ 'ಕಾರ್ತಿಕೇಯ' ಸಿನಿಮಾದ ಮುಂದುವರೆದ ಭಾಗ ಈ 'ಕಾರ್ತಿಕೇಯ 2'. 2014 ರ ಸಿನಿಮಾದಲ್ಲಿಯೂ ನಿಖಿಲ್ ಸಿದ್ಧಾರ್ಥ ಅವರೇ ನಾಯಕರಾಗಿ ನಟಿಸಿದ್ದರು.
Recommended Video
'ಕಾರ್ತಿಕೇಯ 2' ಸಿನಿಮಾದಲ್ಲಿ ಸ್ವಾತಿ ರೆಡ್ಡಿ, ಭರಣಿ, ರಮೇಶ್ ರಾವ್ ಸೇರಿದಂತೆ ಬಾಲಿವುಡ್ನ ಖ್ಯಾತ ನಟ ಅನುಪಮ್ ಖೇರ್ ಸಹ ನಟಿಸುತ್ತಿದ್ದಾರೆ. ಸಿನಿಮಾವನ್ನು ಚಂದೂ ಮೊಂಡೇಟಿ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











