ತೆಲುಗು ಹೀರೋಗಳಿಗೆ ಬುದ್ಧಿ ಇಲ್ಲ ಎಂದ ಹಿರಿಯ ನಟ
ಹಿರಿಯ ನಟ ಕೋಟಾ ಶ್ರೀನಿವಾಸ್ ರಾವ್ ತೆಲುಗಿನ ಹೊಸ ಹೀರೋಗಳನ್ನು ಕಠಿಣ ಪದಗಳಲ್ಲಿ ಟೀಕಿಸಿದ್ದಾರೆ. ಹೊಸ ನಾಯಕ ನಟರಿಗೆ ಶಿಸ್ತು, ಕೆಲಸದ ಮೇಲೆ ಗೌರವ ಇಲ್ಲವೆಂದಿದ್ದಾರೆ ಈ ಹಿರಿಯ ನಟ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕೋಟ ಶ್ರೀನಿವಾಸ್ ರಾವ್ ''ತೆಲುಗು ಹೊಸ ಹೀರೋಗಳಿಗೆ ಬುದ್ಧಿ ಕಡಿಮೆ. ತೆಲುಗು ಸಿನಿಮಾ ಪ್ರೇಮಿಗಳ ಬುದ್ಧಿ ಬೆಳೆಯುತ್ತಿದೆ ಆದರೆ ನಮ್ಮ ಹೀರೋಗಳ ಬುದ್ಧಿ ಬೆಳೆಯುತ್ತಿಲ್ಲ'' ಎಂದಿದ್ದಾರೆ. ಹಿಂದಿನ ಹೀರೋಗಳಿಗೆ ಹೋಲಿಸಿದರೆ ಈಗಿನ ಹೀರೋಗಳ ಸಾಧನೆ ಕಡಿಮೆ ಆದರೆ ವಾದನ (ಶಬ್ದ) ಹೆಚ್ಚು ಎಂದು ಟೀಕಿಸಿದ್ದಾರೆ.
ನಟರು ಹಾಕಿರುವ ಬಟ್ಟೆಗಳು ಬಹಳ ಬೇಗ ಬದಲಾಗುತ್ತವೆ ಆದರೆ ಅಷ್ಟೆ ವೇಗದಲ್ಲಿ ಅವರ ಬುದ್ಧಿ ಮಾತ್ರ ಬೆಳೆಯುತ್ತಿಲ್ಲ. ನಟನೆಯ ಮೇಲೆ ಹಿಡಿತವೂ ಇಲ್ಲ ಪ್ರೀತಿಯೂ ಇಲ್ಲ. ಹಣ ಇದ್ದರೆ ಸಾಕು ಎಂತೆಂತವರೋ ಹೀರೋಗಳಾಗಿ ಬಿಡುತ್ತಿದ್ದಾರೆ. ಇದು ಭವಿಷ್ಯದಲ್ಲಿ ತೆಲುಗು ಚಿತ್ರರಂಗದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದಿದ್ದಾರೆ.

ಕೆಲವು ಹೀರೋಗಳನ್ನು ಹೊಗಳಿರುವ ಕೋಟ ಶ್ರೀನಿವಾಸ ರಾವ್ ಜೂ ಎನ್ಟಿಆರ್ ಅವರು ಯಾವುದೇ ಪಾತ್ರವಾದರೂ ಅದ್ಭುತವಾಗಿ ನಟಿಸುತ್ತಾರೆ. ನಟ ನಾನಿ ಅಂಥಹವರು ಯಾವುದೇ ಹಿನ್ನೆಲೆಯಿಲ್ಲದೆ ಚಿತ್ರರಂಗಕ್ಕೆ ಬಂದು ಸ್ವಂತ ಪ್ರತಿಭೆಯಿಂದ ಬೆಳೆದಿದ್ದಾರೆ ಎಂದಿದ್ದಾರೆ ಈ ಹಿರಿಯ ನಟ.
ಕನ್ನಡ ಸೇರಿ ತೆಲುಗು, ತಮಿಳು, ಹಿಂದಿ, ಮಲಯಾಳಂ, ದಖನಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಕೋಟಾ ಶ್ರೀನಿವಾಸ ದಕ್ಷಿಣ ಭಾರತದ ಅಪ್ರತಿಮ ಪೋಷಕ ನಟ ಹಾಗೂ ವಿಲನ್ ಆಗಿದ್ದವರು. ಈ ವರೆಗೆ 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
Recommended Video
ಕನ್ನಡದಲ್ಲಿ 'ರಕ್ತ ಕಣ್ಣೀರು', 'ಲವ್', ಪುನೀತ್ ನಟನೆಯ 'ನಮ್ಮ ಬಸವ' ಸಿನಿಮಾಗಳಲ್ಲಿ ಕೋಟ ಶ್ರೀನಿವಾಸ ರಾವ್ ನಟಿಸಿದ್ದಾರೆ. ಈ ಹಿರಿಯ ನಟನಿಗೆ ಗೌರವ ಪದ್ಮಶ್ರಿ ಸೇರಿ ನಟನೆಗಾಗಿ ಹಲವು ಪ್ರಶಸ್ತಿಗಳು ಸಂದಿವೆ.


Click it and Unblock the Notifications











