ಅತಿ ಹೆಚ್ಚು ಸಂಭಾವನೆ ಪಡೆವ ಕತೆಗಾರ: ರಾಜಮೌಳಿ ತಂದೆ ಪ್ರತಿಕ್ರಿಯಿಸಿದ್ದು ಹೀಗೆ
ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು ರಾಜಮೌಳಿ. ಈವರೆಗೆ ನಿರ್ದೇಶಿಸಿರುವ 11 ಸಿನಿಮಾಗಳೂ ಸಹ ಸೂಪರ್ ಡೂಪರ್ ಹಿಟ್. ಸೂಪರ್ ಸ್ಟಾರ್ ನಾಯಕನೊಬ್ಬನಿಗೆ ಇರುವಂತೆಯೇ ಕೋಟ್ಯಂತರ ಮಂದಿ ಅಭಿಮಾನಿಗಳು ರಾಜಮೌಳಿಗೆ ಇದ್ದಾರೆ.
ರಾಜಮೌಳಿಯ ಈ ಯಶಸ್ಸಿನ ಹಿಂದೆ ಅವರ ಕುಟುಂಬದವರ ನೇರ ಪಾಲುದಾರಿಕೆ ಇದೆ. ಅದರಲ್ಲಿಯೂ ವಿಶೇಷವಾಗಿ ರಾಜಮೌಳಿಯ ತಂದೆ ಕತೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರ ಯೋಗದಾನ ಬಹಳ ದೊಡ್ಡದು.
ರಾಜಮೌಳಿ ಈವರೆಗೆ ನಿರ್ದೇಶಿಸಿರುವ 11 ಸಿನಿಮಾಗಳಲ್ಲಿ 9 ಸಿನಿಮಾಗಳಿಗೆ ಕತೆ ಬರೆದಿರುವುದು ಕೆ.ವಿ.ವಿಜಯೇಂದ್ರ ಪ್ರಸಾದ್. 1988ರಿಂದಲೂ ಸಿನಿಮಾ ಕತೆಗಾರರಾಗಿ ಗುರುತಿಸಿಕೊಂಡಿರುವ ಕೆ.ವಿ.ವಿಜಯೇಂದ್ರ ಪ್ರಸಾದ್ ತೆಲುಗು ಚಿತ್ರರಂಗದ ಯಶಸ್ವಿ ಮತ್ತು ದುಬಾರಿ ಕತೆಗಾರ. ಕೆ.ವಿ.ವಿಜಯೇಂದ್ರ ಪ್ರಸಾದ್ರ ಸಂಭಾವನೆ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೇಳಿದಾಗ ಅವರು ಕೊಟ್ಟ ಉತ್ತರ ಅವರೊಬ್ಬ ಜಾಣ ಬರಹಗಾರ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿದೆ.

ದೇಶದ ಅತ್ಯಂತ ದುಬಾರಿ ಕತೆಗಾರ ವಿಜಯೇಂದ್ರ ಪ್ರಸಾದ್
ದೇಶದ ಸಿನಿಮಾ ಕತೆಗಾರರಲ್ಲಿಯೇ ಅತ್ಯಂತ ದುಬಾರಿ ಕತೆಗಾರರಂತಲ್ಲ ನೀವು? ಎಂದು ಸಂದರ್ಶಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಪ್ರಸಾದ್, ''ನಾನು ಕತೆಗಳಿಗೆ ಸಂಭಾವನೆ ಪಡೆಯುವುದು ನಿಜ. ಆದರೆ ಬೇರೆ ಕತೆಗಾರರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ನನಗೆ ಗೊತ್ತಾದರೆ ನಾನು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕತೆಗಾರನೊ ಅಥವಾ ಅಲ್ಲವೋ ಹೇಳಬಲ್ಲೆ'' ಎಂದು ಜಾಣತನದಿಂದ ಉತ್ತರಿಸಿದ್ದಾರೆ.

ನಾನು ಬ್ಯುಸಿ ಕತೆಗಾರ ಅಲ್ಲ: ವಿಜಯೇಂದ್ರ ಪ್ರಸಾದ್
ಬಹಳ ಬ್ಯುಸಿ ಕತೆಗಾರ ಎಂಬ ಮಾತನ್ನು ಒಪ್ಪದ ವಿಜಯೇಂದ್ರ ಪ್ರಸಾದ್, ''ನಾನು ಬ್ಯುಸಿ ಕತೆಗಾರ ಖಂಡಿತ ಅಲ್ಲ. ನನಗೆ ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಒಮ್ಮೆ ಕತೆ ಬರೆದ ನಂತರ ನಾನು ನಿರ್ದೇಶಕರಿಗೆ ನೀಡಿ ಬಿಡುತ್ತೇನೆ. ಅದಾದ ನಂತರ ಚಿತ್ರೀಕರಣ ಮುಗಿಯುವವರೆಗೆ ನನ್ನದೇನೂ ಕೆಲಸ ಇರುವುದಿಲ್ಲ. ಆ ನಂತರ ಯಾರಾದರೂ ನನ್ನನ್ನು ಸಂಪರ್ಕಿಸಿದರೆ ಅವರಿಗೆ ಕತೆ ಬರೆದುಕೊಡುತ್ತೇನೆ'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

ರಾಜಮೌಳಿಗೆ ನನ್ನ ಕತೆ ಇಷ್ಟವಾಗುವುದು ಕಡಿಮೆ
ಮಗ ರಾಜಮೌಳಿ ಬಗ್ಗೆ ಮಾತನಾಡಿರುವ ವಿಜಯೇಂದ್ರ ಪ್ರಸಾದ್, ''ವೃತ್ತಿಯ ಬಗ್ಗೆ ಬಹಳ ಗಂಭೀರತೆ ಇರುವ ವ್ಯಕ್ತಿ ರಾಜಮೌಳಿ ನಾನು ಬರೆವ 100 ಕತೆಗಳಿಗೆ ರಾಜಮೌಳಿ 10 ಅಷ್ಟೆ ಇಷ್ಟವಾಗುತ್ತವೆ. ರಾಜಮೌಳಿಗೆ ಕತೆ ಹೇಳಿದಾಗ ಅದು ಚೆನ್ನಾಗಿದ್ದರೆ ಅದರ ಬಗ್ಗೆ ಚರ್ಚೆ ಮಾಡುತ್ತಾನೆ. ಇಷ್ಟವಾಗಲಿಲ್ಲವೆಂದರೆ ಇಷ್ಟವಾಗಲಿಲ್ಲವೆಂದು ನೇರವಾಗಿ ಹೇಳಿಬಿಡುತ್ತಾನೆ'' ಎಂದಿದ್ದಾರೆ.

ನನ್ನ ಕತೆಗಳಿಗೆ ನ್ಯಾಯ ಒದಗಿಸಿದ್ದಾನೆ ರಾಜಮೌಳಿ: ವಿಜಯೇಂದ್ರ ಪ್ರಸಾದ್
''ಕತೆ ಇಷ್ಟವಾದರೆ ಕತೆಯನ್ನು ಮೊದಲು ತನ್ನ ತಲೆಯಲ್ಲಿಯೇ ಸಿನಿಮಾ ರೀತಿ ನೋಡಿಬಿಡುತ್ತಾನೆ. ಸರಿ ಎನಿಸಿದರೆ ಚಿತ್ರಕತೆ ಹಂತಕ್ಕೆ ಬರುತ್ತಾನೆ. ಆ ನಂತರ ಆ ಸಿನಿಮಾಕ್ಕೆ ತಮ್ಮ ಪ್ರಾಣವನ್ನೇ ಸಮರ್ಪಿಸುವ ರೀತಿ ಕೆಲಸ ಮಾಡುತ್ತಾನೆ. ನಾನು ಬರೆದ ಕತೆಗಳಿಗೆ ನಾನು ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ನ್ಯಾಯ ದೊರಕಿಸಿದ್ದಾನೆ. ಆ ವಿಚಾರದಲ್ಲಿ ಅವನಿಗೆ 100ಕ್ಕೆ 200 ಮಾರ್ಕ್ಸ್ ಕೊಟ್ಟರೂ ಸಹ ಕಡಿಮೆಯೇ'' ಎಂದು ಹೊಗಳಿದ್ದಾರೆ ವಿಜಯೇಂದ್ರ ಪ್ರಸಾದ್.

ನಾಲ್ಕು ಸಿನಿಮಾಕ್ಕಾಗಿ ಕತೆ ಬರೆಯುತ್ತಿದ್ದಾರೆ
ರಾಜಮೌಳಿ ನಿರ್ದೇಶಿಸುತ್ತಿರುವ ಮುಂಬರುವ ಸಿನಿಮಾ, 'ಆರ್ಆರ್ಆರ್'ಗೆ ಕತೆ ಬರೆದಿರುವುದು ವಿಜಯೇಂದ್ರ ಪ್ರಸಾದ್. ಈಗ ಮುಂದೆ ಮಹೇಶ್ ಬಾಬು ನಟಿಸಲಿರುವ ಸಿನಿಮಾಕ್ಕೆ ಕತೆ ಬರೆಯುತ್ತಿದ್ದಾರೆ. ಸೀತಾ ಮಾತೆ ಬಗ್ಗೆ ವಿಶೇಷವಾದ ಕತೆ ರಚಿಸುತ್ತಿರುವುದಾಗಿ ಹೇಳಿರುವ ವಿಜಯೇಂದ್ರ ಪ್ರಸಾದ್, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕನ ಬಗ್ಗೆ ಒಂದು ಕತೆ ಬರೆಯುತ್ತಿರುವುದಾಗಿಯೂ ಹೇಳಿದ್ದಾರೆ. ಅದರ ಜೊತೆಗೆ ಹಾಲಿವುಡ್ ನಿರ್ಮಾಣ ಸಂಸ್ಥೆಯೊಂದಕ್ಕಾಗಿ ಅನಿಮೇಷನ್ ಸಿನಿಮಾಕ್ಕೆ ಕತೆ ರಚಿಸುತ್ತಿದ್ದಾರೆ. ಜೊತೆಗೆ ಸಲ್ಮಾನ್ ನಟಿಸಿದ್ದ 'ಭಜರಂಗಿ ಭಾಯಿಜಾನ್' ಸಿನಿಮಾದ ಮುಂದುವರೆದ ಭಾಗಕ್ಕಾಗಿಯೂ ಕತೆ ಬರೆಯುತ್ತಿದ್ದಾರೆ.


Click it and Unblock the Notifications











