ಪವನ್ ಕಲ್ಯಾಣ್ಗಾಗಿ ಸಕ್ರಿಯ ರಾಜಕೀಯ ತೊರೆದ ಮೆಗಾಸ್ಟಾರ್!
ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಗಾಡ್ಫಾದರ್' ಚಿತ್ರ ಇಂದು (ಅಕ್ಟೋಬರ್ 5) ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಗಾಡ್ ಫಾದರ್ ಮೂಲಕ ಕಂಬ್ಯಾಕ್ ಮಾಡಿದ್ದು, ಮೆಗಾಸ್ಟಾರ್ ಅಭಿನಯಕ್ಕೆ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ಟೀಕೆಗಳ ನಡುವೆ ಬಿಡುಗಡೆಯಾದ ಮೋಹನ್ ರಾಜ್ ನಿರ್ದೇಶನದ 'ಗಾಡ್ಫಾದರ್' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ 'ಗಾಡ್ಫಾದರ್' ಚಿತ್ರಕ್ಕಾಗಿ ನಿರಂತರ ಪ್ರಚಾರ ನಡೆಸಿದ್ದರು. ಈ ವೇಳೆ ತಮ್ಮ ಮುಂದಿನ ರಾಜಕೀಯ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಟಾಲಿವುಡ್ ಮೆಗಾಸ್ಟಾರ್ ರಾಜಕೀಯಕ್ಕೆ ಮತ್ತೆ ಮರುಳುತ್ತಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿದ್ದವು. ಹೀಗಾಗಿ 'ಗಾಡ್ಫಾದರ್' ಚಿತ್ರ ಬಿಡುಗಡೆಯ ದಿನ ಮೆಗಸ್ಟಾರ್ ಮತ್ತೊಂದು ಗುಡ್ನ್ಯೂಸ್ ಕೊಡುತ್ತಾರೆ, ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು.
2018ರ ಏಪ್ರಿಲ್ನಲ್ಲಿ ರಾಜ್ಯಸಭಾ ಸದಸ್ಯರಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಚಿರಂಜೀವಿ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು. ಬಳಿಕ ಹಲವು ಪಕ್ಷಗಳ ಜೊತೆ ಚಿರಂಜೀವಿ ಹೆಸರು ತಳುಕು ಹಾಕಿಕೊಂಡಿತ್ತು. ಇತ್ತೀಚಿಗೆ ಮೆಗಾಸ್ಟಾರ್ ಹೆಸರು ಹಾಗೂ ಫೋಟೋ ಎಐಸಿಸಿ ಗುರುತಿನ ಚೀಟಿಯಲ್ಲಿ ವೈರಲ್ ಆಗಿತ್ತು. ಈ ಮೂಲಕ ಅವರು ಕಾಂಗ್ರೆಸ್ ಪಕ್ಷದೊಂದಿಗೆ ರಾಜಕೀಯಕ್ಕೆ ಮರಳುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇನ್ನೊಂದೆಡೆ ಭೀಮವರಂನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಆಹ್ವಾನ ನೀಡಲಾಗಿತ್ತು. ಈ ವೇಳೆ ಚಿರಂಜೀವಿ ಬಿಜೆಪಿ ಸೇರುತ್ತಾರೆ ಎನ್ನಲಾಗಿತ್ತು. ಸದ್ಯ ಈ ಎಲ್ಲಾ ಊಹಾಪೋಹಗಳಿಗೆ ಮೆಗಾಸ್ಟಾರ್ ಚಿರಂಜೀವಿ ತೆರೆ ಎಳೆದಿದ್ದಾರೆ.

ಗಾಡ್ಫಾದರ್ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಅವರು, ತಮ್ಮ ಸಹೋದರ ಪವನ್ ಕಲ್ಯಾಣ್ ರಾಜಕೀಯದ ಯಶಸ್ಸಿಗಾಗಿ ಹಾಗೂ ಜನಸೇನೆ ಪಕ್ಷ ಪ್ರಬಲ ಪಕ್ಷವಾಗಿ ಹೊರಹೊಮ್ಮಲು ತಾವು ಸಕ್ರಿಯ ರಾಜಕಾರಣದಿಂದ ತಾವು ಹಿಂದೆ ಸರಿಯುವುದಾಗಿ ಮೆಗಾಸ್ಟಾರ್ ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಚಿರಂಜೀವಿ, ಪವನ್ ಕಲ್ಯಾಣ್ಗೆ ಸಹಾಯವಾಗಬಹುದು ಎನ್ನುವ ಕಾರಣಕ್ಕೆ ರಾಜಕೀಯದಿಂದ ಹಿಂದೆ ಸರಿದಿದ್ದೇನೆ ಎಂದರು.
ಪವನ್ ಕಲ್ಯಾಣ್ ಬದ್ಧತೆ ಹೊಂದಿರುವ ಪ್ರಾಮಾಣಿಕ ನಾಯಕ ಅತಂಹ ನಾಯಕನನ್ನು ಬೆಳೆಸಬೇಕು. ಪವನ್ ಕಲ್ಯಾಣ್ ಬದ್ಧತೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಗೊತ್ತು. ರಾಜ್ಯವನ್ನು ಆಳಲು ಅಂತಹ ಪ್ರಬುದ್ಧ ನಾಯಕ ಬೇಕು. ಮುಂದೊಂದು ದಿನ ಅವನು ರಾಜ್ಯವನ್ನು ಆಳುವ ನಾಯಕನಾಗಬಹುದು ಎಂದು ತಮ್ಮ ಸಹೋದರನನ್ನು ಹೊಗಳಿದರು. ಜನಸೇನೆ ಪಕ್ಷಕ್ಕೆ ತಮ್ಮ ಬೆಂಬಲದ ಬಗ್ಗೆ ನೇರ ಉತ್ತರವನ್ನು ನೀಡದ ಮೆಗಾಸ್ಟಾರ್ ಚಿರಂಜೀವಿ, ಭವಿಷ್ಯದಲ್ಲಿ ತಮ್ಮ ಸಹೋದರನ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ.
ಮಾತು ಮುಂದುವರಿಸಿದ ಮೆಗಾಸ್ಟಾರ್ ಚಿರಂಜೀವಿ, ಸದ್ಯ ನಾನು ಜನಸೇನೆ ಪಕ್ಷದ ಭಾಗವಲ್ಲ. ನಾನು ತೆಲಂಗಾಣ ಅಥವಾ ಆಂಧ್ರಪ್ರದೇಶದಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಸದ್ಯ ನನ್ನ ಸಂಪೂರ್ಣ ಗಮನ ನನ್ನ ಸಿನಿಮಾಗಳ ಮೇಲಿದೆ. ಭವಿಷ್ಯದಲ್ಲಿ ಮತ್ತೆ ರಾಜಕೀಯಕ್ಕೆ ಮರಳುವ ಬಗ್ಗೆ ಯೋಚಿಸುವುದಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ.


Click it and Unblock the Notifications











