ಸೋತ ನಾಗ ಚೈತನ್ಯ ಕೈ ಹಿಡಿಯುತ್ತಾ 'ಕಸ್ಟಡಿ'? ಬಿಡುಗಡೆ ದಿನಾಂಕ ಘೋಷಣೆ

2022ರಲ್ಲಿ ಯುವ ನಟ, ನಿರ್ದೇಶಕರು ಮಾತ್ರವಲ್ಲದೇ ಸ್ಟಾರ್ ನಟರು ಹಾಗೂ ನಿರ್ದೇಶಕರೂ ಸಹ ಅಬ್ಬರಿಸಿದ್ದಾರೆ. ಕಮಲ್ ಹಾಸನ್ ರೀತಿ ಈ ಹಿಂದೆ ನೀರಸ ಸೋಲು ಕಂಡಿದ್ದ ಕೆಲ ಸ್ಟಾರ್ ನಟರು ಈ ವರ್ಷ ಹಿಟ್ ನೀಡುವ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.
ಅದರಲ್ಲೂ ಈ ವರ್ಷ ದಕ್ಷಿಣ ಭಾರತ ಚಿತ್ರರಂಗದ ನಟ ಹಾಗೂ ನಿರ್ದೇಶಕರು ದೊಡ್ಡ ಮಟ್ಟದಲ್ಲಿ ಅಬ್ಬರಿಸಿದ್ದಾರೆ. ಅತಿಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಚಿತ್ರಗಳೇ ಸಿಂಹ ಪಾಲನ್ನು ಹೊಂದಿವೆ. ಇನ್ನು ಬಾಲಿವುಡ್ ಕಲಾವಿದರ ರೀತಿ ಈ ವರ್ಷ ಹೀನಾಯ ಸೋಲು ಕಂಡ ಸೌತ್ ನಟರನ್ನೂ ಸಹ ನಾವು ಕಾಣಬಹುದಾಗಿದೆ.
ಹೌದು, ತೆಲುಗು ಚಿತ್ರರಂಗದ ಖ್ಯಾತ ನಟ ಅಖಿಲ್ ಅಕ್ಕಿನೇನಿ ಹಾಗೂ ಅವರ ಪುತ್ರ ಅಕ್ಕಿನೇನಿ ನಾಗಚೈತನ್ಯ ಈ ವರ್ಷ ಸೋತು ಸುಣ್ಣವಾಗಿದ್ದಾರೆ. ಈ ಇಬ್ಬರು ಒಟ್ಟಿಗೆ ನಟಿಸಿದ್ದ 'ಬಂಗಾರ್ರಾಜು' ವರ್ಷದ ಆರಂಭದಲ್ಲಿ ಸಾಧಾರಣ ಎನಿಸಿಕೊಂಡಿದ್ದು ಬಿಟ್ಟರೆ ನಂತರ ತೆರೆಕಂಡ ನಾಗಾರ್ಜುನ ನಟನೆಯ ಬಹುನಿರೀಕ್ಷಿಯ ಘೋಸ್ಟ್ ನೆಲ ಕಚ್ಚಿತು ಹಾಗೂ ನಾಗಚೈತನ್ಯ ನಟನೆಯ ಥ್ಯಾಂಕ್ ಯೂ ಹೀನಾಯ ಸೋಲು ಕಂಡಿತು. ಇನ್ನು ನಾಗಚೈತನ್ಯ ಈ ವರ್ಷ ಬಾಲಿವುಡ್ ಚಿತ್ರರಂಗಕ್ಕೆ ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಮೂಲಕ ಪದಾರ್ಪಣೆ ಮಾಡಿದ್ದರು. ಆದರೆ ಈ ಚಿತ್ರ ಸಹ ಕೆಟ್ಟ ಸೋಲನ್ನು ಅನುಭವಿಸಿತು.
ಹೀಗೆ 2022 ನಾಗ ಚೈತನ್ಯ ಪಾಲಿಗೆ ಒಳ್ಳೆಯ ವರ್ಷವಾಗದೇ ಉಳಿದಿದ್ದು ಮುಂದಿನ ವರ್ಷ ಗೆದ್ದು ಕಮ್ ಬ್ಯಾಕ್ ಮಾಡುವ ಯೋಜನೆಯಲ್ಲಿದ್ದಾರೆ. ಹೀಗಾಗಿಯೇ ತಮಿಳು ನಿರ್ದೇಶಕ ವೆಂಕಟ್ ಪ್ರಭು ಜತೆ ನಾಗ ಚೈತನ್ಯ 'ಕಸ್ಟಡಿ' ಎಂಬ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ ಚಿತ್ರತಂಡ. 2023ರ ಮೇ 12ರಂದು ಕಸ್ಟಡಿ ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಾಲು ಸಾಲು ಸೋಲು ಕಂಡಿರುವ ನಾಗ ಚೈತನ್ಯಗೆ ಈ ಚಿತ್ರ ಗೆಲ್ಲಲೇಬೇಕಿದೆ.


Click it and Unblock the Notifications











