ಚಿರಂಜೀವಿಗೆ ತಿರುಗೇಟು: ಬಹುತೇಕ ಚಿತ್ರರಂಗವೇ ನನ್ನ ಬೆಂಬಲಕ್ಕೆ ಇದೆ ಎಂದ ಬಾಲಕೃಷ್ಣ
ಚಿರಂಜೀವಿ ನಾಯಕತ್ವದಲ್ಲಿ ತೆಲುಗು ಚಿತ್ರರಂಗದ ಚಟುವಟಿಕೆಗಳು ನಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ನಂದಮೂರಿ ಬಾಲಕೃಷ್ಣ, ತಮಗೆ ಚಿತ್ರರಂಗದ ಹೆಚ್ಚಿನ ಜನರ ಬೆಂಬಲವಿದೆ ಎಂದಿದ್ದಾರೆ.
Recommended Video
ತೆಲಂಗಾಣ ಸರ್ಕಾರದ ಸಚಿವರು ಕೊರೊನಾ ವೈರಸ್ ನಂತರದ ಸಿನಿಮಾ ರಂಗದ ಚಟುವಟಿಕೆಗಳು, ನಡೆಯಬೇಕಾಗ ಅಗತ್ಯ ಕೆಲಸಗಳ ಬಗ್ಗೆ ಚಿರಂಜೀವಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಭೆಯಲ್ಲಿ ರಾಜಮೌಳಿ ಸೇರಿದಂತೆ ಅನೇಕ ನಿರ್ದೇಶಕರು, ನಿರ್ಮಾಪಕರು ಭಾಗವಹಿಸಿದ್ದರು. ಆದರೆ ಈ ಸಭೆಗೆ ತಮ್ಮನ್ನು ಆಹ್ವಾನಿಸದೆಯೇ ಇರುವುದು ಬಾಲಯ್ಯ ಅವರಿಗೆ ಕೋಪ ತರಿಸಿತ್ತು. ಭೂಮಿ ಹಂಚಿಕೆ ಮಾಡಿಕೊಳ್ಳುವ ವಿಚಾರವಾಗಿ ಈ ಮಾತುಕತೆ ನಡೆದಿದೆ ಎಂದು ಬಾಲಕೃಷ್ಣ ಆರೋಪಿಸಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.
ಎಂಎಎ ಕಟ್ಟಡ ನಿರ್ಮಾಣ ವಿವಾದ, ಭೂಮಿ ಹಂಚಿಕೆ ವಿವಾದ ಸೇರಿದಂತೆ ಈ ಎಲ್ಲ ವಿವಾದಗಳ ಬಗ್ಗೆ ಬಾಲಕೃಷ್ಣ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಮುಂದೆ ಓದಿ...

ಉದ್ಯಮದ ಬೆಂಬಲ ಇದೆ
ತಮ್ಮ ವಿವಾದಾತ್ಮಕ ಭೂಮಿ ಹಂಚಿಕೆ ಹೇಳಿಕೆ ಹಾಗೂ ತಮ್ಮ ಅಸಮಾಧಾನಕ್ಕೆ ಚಿರಂಜೀವಿ ಸಹೋದರ ನಾಗಬಾಬು ನೀಡಿರುವ ತಿರುಗೇಟಿನ ಬಗ್ಗೆ ತಾವು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಚಿತ್ರರಂಗದ ಬಹುದೊಡ್ಡ ವರ್ಗ ತಮ್ಮ ಬೆಂಬಲಕ್ಕೆ ಇರುವಾಗ ಅದರ ಕುರಿತು ಮಾತನಾಡುವ ಅಗತ್ಯವಿಲ್ಲ ಎಂದು ಬಾಲಕೃಷ್ಣ ಹೇಳಿದ್ದಾರೆ.

ಕೆಸಿಆರ್ ಜತೆ ಮನಸ್ತಾಪವಿಲ್ಲ
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೂ ತಮಗೂ ಯಾವುದೇ ಮನಸ್ತಾಪವಿಲ್ಲ. ಸಭೆಗೆ ತಮ್ಮನ್ನು ಆಹ್ವಾನಿಸದೆ ಇರುವುದರ ಕುರಿತು ಅಸಮಾಧಾನವಿದ್ದರೂ, ತಮ್ಮ ಮೇಲಿನ ಸಿಟ್ಟಿನಿಂದಾಗಿ ಸಭೆಗೆ ಆಹ್ವಾನಿಸಿಲ್ಲ ಎಂಬ ಮಾತು ಸತ್ಯವಲ್ಲ ಎಂದಿದ್ದಾರೆ.

ಕೆಸಿಆರ್ಗೆ ಪ್ರೀತಿ ಇದೆ
ವೈಯಕ್ತಿಕ ಸಂಬಂಧಕ್ಕಿಂತ ರಾಜಕೀಯ ಬಹಳ ವಿಭಿನ್ನ. ತಮ್ಮ ಮೇಲೆ ಕೆಸಿಆರ್ ಅವರಿಗೆ ಮಗನ ಪ್ರೀತಿ ಇದೆ. ಆದರೆ ಸಭೆಗೆ ಆಮಂತ್ರಣ ನೀಡದೆ ಇರುವುದಕ್ಕೆ ಕಾರಣ ತಿಳಿದಿಲ್ಲ ಎಂದು ಬಾಲಕೃಷ್ಣ ಹೇಳಿದ್ದಾರೆ. 'ಭೂಮಿ ಹಂಚಿಕೆ' ಕುರಿತಾದ ಹೇಳಿಕೆ ಬಗ್ಗೆ ಮತ್ತೆ ಕೆದಕಲು ಇಷ್ಟಪಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕೊನೆಗೆ ಕಟ್ಟಡವೇ ಇರೊಲ್ಲ
ದೇಣಿಗೆ ಸಂಗ್ರಹಿಸುವ ಮೂಲಕ ಸಿನಿಮಾ ಕಲಾವಿದರ ಸಂಸ್ಥೆಯ (ಎಂಎಎ) ಕಟ್ಟಡವನ್ನು ಕಟ್ಟುವ ಪ್ರಸ್ತಾಪವನ್ನು ಅವರು ವಿರೋಧಿಸಿದ್ದಾರೆ. ದೇಣಿಗೆ ಸಂಗ್ರಹಣೆಯ ಸಭೆಗೂ ತಮ್ಮನ್ನು ಕರೆದಿರಲಿಲ್ಲ. ಒಂದು ವೇಳೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಭೂಮಿ ಕೊಡದೆ ಇದ್ದರೆ, ತಮ್ಮದೇ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ? ಆರಂಭದಲ್ಲಿ ಐದು ಕೋಟಿ ರೂ ಸಂಗ್ರಹಣೆಯ ಗುರಿ ಹಾಕಲಾಗಿತ್ತು. ಈಗ ಅದು ಒಂದು ಕೋಟಿಗೆ ಇಳಿದಿದೆ. ಕೊನೆಗೆ ಕಟ್ಟಡವೇ ಸ್ಥಾಪನೆಯಾಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ನಾನು ಲೆಕ್ಕದ ಮಾಸ್ಟರ್ ಅಲ್ಲ
ಸಿನಿಮಾ ಚಿತ್ರೀಕರಣ ಆರಂಭಿಸಲು ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಏಕೆಂದರೆ ಇದು ಎಲ್ಲಕ್ಕಿಂತಲೂ ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವ ಉದ್ಯಮ. ಇಂತಹ ಸಂಗತಿಗಳ ಕುರಿತು ಹೆಚ್ಚು ಮಾತನಾಡಿ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. 'ನಾನು ಲೆಕ್ಕ ಮಾಸ್ಟರ್ ಅಲ್ಲ' ಎಂದು ಹಣಕಾಸಿನ ವಹಿವಾಟಿನ ಕುರಿತು ಮಾತನಾಡುವುದಿಲ್ಲ ಎಂದಿದ್ದಾರೆ.

ನಾಗಬಾಬು ಎಚ್ಚರಿಕೆ
ಚಿತ್ರರಂಗದ ಕೆಲವು ಗಣ್ಯರೊಂದಿಗೆ ತೆಲಂಗಾಣ ಸಚಿವರು ಚಿರಂಜೀವಿ ಮನೆಯಲ್ಲಿ ಸಭೆ ನಡೆಸಿದ್ದು ಮತ್ತು ಅದಕ್ಕೆ ತಮ್ಮನ್ನು ಆಹ್ವಾನಿಸದೆ ಇದ್ದದ್ದು ಬಾಲಕೃಷ್ಣ ಅಸಮಾಧಾನಕ್ಕೆ ಕಾರಣವಾಗಿತ್ತು. ಭೂಮಿ ಹಂಚಿಕೆ ವಿಚಾರವಾಗಿ ಅವರು ಮಾತಾಡಿಕೊಂಡಿದ್ದಾರೆ ಎಂದಿದ್ದರು. ಬಾಲಕೃಷ್ಣ ಕ್ಷಮೆ ಕೋರದೆ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ನಾಗಬಾಬು ಎಚ್ಚರಿಕೆ ನೀಡಿದ್ದರು.


Click it and Unblock the Notifications











