ನಿಮ್ಮ ತಪ್ಪು ತಿದ್ದಿಕೊಳ್ಳಿ: ಚಿತ್ರರಂಗಕ್ಕೆ ಬಾಲಕೃಷ್ಣ ಚಾಟಿ, ಜಗನ್ ಭೇಟಿಗೆ ನಕಾರ
ನಟ ಚಿರಂಜೀವಿ ನೇತೃತ್ವದಲ್ಲಿ ಜಗನ್ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ಗಣ್ಯರ ನಡುವೆ ಮಾತುಕತೆಗಳು ಚಾಲ್ತಿಯಲ್ಲಿವೆ. ಚಿತ್ರರಂಗಕ್ಕೆ ಸಿಹಿ ಸುದ್ದಿಯನ್ನು ಶೀಘ್ರವೇ ನೀಡುವ ಭರವಸೆಯನ್ನು ಚಿರಂಜೀವಿ ನೀಡಿದ್ದಾರೆ.
ಜಗನ್ ಸರ್ಕಾರವು ಆಂಧ್ರದ ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿ ಹೊರಡಿಸಿದ್ದ ಆದೇಶ ತೆಲುಗು ಚಿತ್ರರಂಗದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಜೊತೆಗೆ ಬೆನಿಫಿಟ್ ಶೋ, ಫ್ಯಾನ್ಸ್ ಶೋಗಳನ್ನು ಸಹ ರದ್ದು ಮಾಡಲಾಗಿತ್ತು. ಸರ್ಕಾರದ ಆದೇಶದಿಂದಾಗಿ ಆಂಧ್ರದಲ್ಲಿ ಹಲವು ಚಿತ್ರಮಂದಿರಗಳು ಬಾಗಿಲು ಹಾಕಿದ್ದವು.
ತೆಲುಗು ಚಿತ್ರರಂಗದ 'ನಾಯಕ' ಚಿರಂಜೀವಿ: ಮುಖಭಂಗವಾದರೂ ಒಪ್ಪಿಕೊಳ್ಳಲು ಸಿದ್ಧವಿಲ್ಲ ವಿರೋಧಿಗಳು
ಬಳಿಕ ರಂಗಕ್ಕೆ ಇಳಿದ ಚಿರಂಜೀವಿ ಮೊದಲಿಗೆ ಜಗನ್ ಜೊತೆ ಏಕಾಂಗಿಯಾಗಿ ಮಾತನಾಡಿ ಸಮಸ್ಯೆ ಅರ್ಥ ಮಾಡಿಸಿದರು. ಬಳಿಕ ಕೆಲವು ದಿನಗಳ ಹಿಂದಷ್ಟೆ ನಟ ಪ್ರಭಾಸ್, ಮಹೇಶ್ ಬಾಬು, ನಿರ್ದೇಶಕ ರಾಜಮೌಳಿ ಇತರರನ್ನು ಕರೆದುಕೊಂಡು ಹೋಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ಈ ಸಮಯದಲ್ಲಿ ನಟ ಬಾಲಕೃಷ್ಣ ಅವರಿಗೂ ಆಹ್ವಾನ ನೀಡಲಾಯಿತು. ಆದರೆ ಬಾಲಕೃಷ್ಣ ಬರಲಿಲ್ಲ. ಈ ಬಗ್ಗೆ ನಟ ಬಾಲಕೃಷ್ಣ ಇದೀಗ ಬಹಿರಂಗವಾಗಿ ಮಾತನಾಡಿದ್ದಾರೆ.

ಚಿತ್ರರಂಗದ ನಿಲವಿಗೆ ವಿರುದ್ಧ ಅಭಿಪ್ರಾಯ!
''ಜಗನ್ ಜೊತೆ ಸಭೆಗೆ ಆಹ್ವಾನ ನೀಡಲಾಗಿತ್ತು ಆದರೆ ನಾನು ಹೋಗಲು ನಿರಾಕರಿಸಿದೆ'' ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನೂ ತಿಳಿಸುವ ಮೂಲಕ ಚಿತ್ರರಂಗದ ಮತ್ತೊಂದು ಸಮಸ್ಯೆಯತ್ತ ಬಾಲಕೃಷ್ಣ ಬೊಟ್ಟು ಮಾಡಿದ್ದಾರೆ. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗ ಒಂದು ನಿರ್ಣಯಕ್ಕೆ ಬದ್ಧವಾಗಿದ್ದರೆ ಬಾಲಕೃಷ್ಣ ಬೇರೆಯದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಗನ್ ಅನ್ನು ಎಂದೂ ಭೇಟಿ ಆಗುವುದಿಲ್ಲ: ಬಾಲಕೃಷ್ಣ
ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಕೃಷ್ಣ, ''ಜಗನ್ ಜೊತೆಗಿನ ಸಭೆಗೆ ನನ್ನನ್ನು ಕರೆಯಲಾಯಿತು. ಆದರೆ ನಾನು ಹೋಗಲಿಲ್ಲ. ಮುಂದೆಯೂ ನಾನು ಜಗನ್ ಅನ್ನು ಯಾವುದೇ ಕಾರಣಕ್ಕೂ ಭೇಟಿ ಆಗುವುದಿಲ್ಲ. ನಾನು ನನ್ನ ಸಂಭಾವನೆ ಏರಿಕೆ ಮಾಡಿಲ್ಲ. ಸಿನಿಮಾದ ಬಜೆಟ್ ಅನ್ನು ಸಹ ಏರಿಸಿಲ್ಲ. ನನ್ನ ನಿರ್ಮಾಪಕರಿಗೆ ನಾನು ಎಂದೂ ಸಮಸ್ಯೆ ಕೊಟ್ಟಿಲ್ಲ. ಸಿನಿಮಾಗಳ ಬಜೆಟ್ ನಿಯಂತ್ರಣದಲ್ಲಿದ್ದರೆ ಟಿಕೆಟ್ ದರ ಎಷ್ಟಿದ್ದರೂ ಸಮಸ್ಯೆ ಆಗುವುದಿಲ್ಲ. ಬಜೆಟ್ ಹೆಚ್ಚಾದರೆ ಟಿಕೆಟ್ ದರದ ವಿಷಯ ಚರ್ಚೆಗೆ ಬರುತ್ತದೆ'' ಎಂದಿದ್ದಾರೆ.

ತಮ್ಮದೇ ಸಿನಿಮಾದ ಉದಾಹರಣೆ ನೀಡಿದ ಬಾಲಕೃಷ್ಣ
ತಮ್ಮದೇ ಸಿನಿಮಾದ ಉದಾಹರಣೆ ನೀಡಿದ ಬಾಲಕೃಷ್ಣ, ''ನಾನು ನಟಿಸಿದ್ದ 'ಅಖಂಡ' ಸಿನಿಮಾವನ್ನು ಕಡಿಮೆ ಬಜೆಟ್ನಲ್ಲಿ ಚಿತ್ರೀಕರಣ ಮಾಡಿದೆವು. ಟಿಕೆಟ್ ದರ ಕಡಿಮೆ ಇದ್ದಾಗಲೇ ಸಿನಿಮಾ ಬಿಡುಗಡೆ ಮಾಡಿದೆವು ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಮೊದಲು ನಾವು ಬಜೆಟ್ ಮೇಲೆ ನಿಯಂತ್ರಣ ಹೇರಬೇಕು. ಸಿನಿಮಾ ಬಜೆಟ್ಗಳು ಆಕಾಶ ಮುಟ್ಟುತ್ತಿವೆ. ಅವನ್ನು ನಿಯಂತ್ರಣ ಮಾಡದೆ ಟಿಕೆಟ್ ದರ ಹೆಚ್ಚಿಸಲು ಹೋಗುವುದು ಸರಿಯಲ್ಲ'' ಎಂದು ಬಾಲಕೃಷ್ಣ ಹೇಳಿದ್ದಾರೆ.

ಜಗನ್, ಬಾಲಕೃಷ್ಣ ನಡುವೆ ರಾಜಕೀಯ ವೈಷಮ್ಯ
ಬಾಲಕೃಷ್ಣ, ಜಗನ್ ಭೇಟಿ ಆಗದೇ ಇರುವುದಕ್ಕೆ ಅವರ ರಾಜಕೀಯ ವೈಷಮ್ಯವೂ ಕಾರಣ. ಬಾಲಕೃಷ್ಣ ಅವರ ತಂದೆ ಸ್ಥಾಪಿಸಿದ ಟಿಡಿಪಿ ಪಕ್ಷ ಪ್ರಸ್ತುತ ಆಂಧ್ರದಲ್ಲಿ ವಿಪಕ್ಷವಾಗಿದ್ದು, ಬಾಲಕೃಷ್ಣ ಟಿಡಿಪಿ ಪಕ್ಷದ ಶಾಸಕರೂ ಆಗಿದ್ದಾರೆ. ಜಗನ್ ಹಾಗೂ ಟಿಡಿಪಿ ಪಕ್ಷದ ನಡುವೆ ತೀವ್ರ ರಾಜಕೀಯ ವೈಷಮ್ಯ ಸಹ ಇದ್ದು ಕೆಲವು ತಿಂಗಳ ಹಿಂದಷ್ಟೆ ಜಗನ್ ಪಕ್ಷದ ಕಾರ್ಯಕರ್ತರು ಹಿಂಪುರದಲ್ಲಿನ ಬಾಲಕೃಷ್ಣರ ತಾತ್ಕಾಲಿಕ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ್ದರು. ಕಟು ಮಾತುಗಳಿಗೆ ಖ್ಯಾತವಾಗಿರುವ ಬಾಲಕೃಷ್ಣ ಸಹ ಈ ಹಿಂದೆ ಹಲವು ಬಾರಿ ಜಗನ್ ಅನ್ನು ಅವರ ಪಕ್ಷವನ್ನೂ ತೀವ್ರ ನಿಂದನೆ ಮಾಡಿದ್ದರು. ಇದೇ ಕಾರಣದಿಂದಾಗಿ ಬಾಲಕೃಷ್ಣ ಈಗ ಜಗನ್ ಭೇಟಿಗೆ ಬರಲಿಲ್ಲ ಎನ್ನಲಾಗುತ್ತಿದೆ.


Click it and Unblock the Notifications











