ಶ್ಯಾಮ್ ಸಿಂಘರಾಯ್ ಸಂಭಾವನೆ ಹಿಂತಿರುಗಿಸಿ ನಿರ್ಮಾಪಕರ ಕೈಹಿಡಿದ ನಾನಿ!
'ಬಾಬಾ' ಚಿತ್ರ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರವಾಗಿತ್ತು. ಸುಮಾರು 25 ವರ್ಷಗಳ ಹಿಂದೆಯೇ ಅದು ಕೋಟ್ಯಾಂತರ ರೂಪಾಯಿ ಬಿಜಿನೆಸ್ ಬಿಡುಗಡೆಗೆ ಮೊದಲೇ ಮಾಡಿತ್ತು. ವಿತರಕರು ದೊಡ್ಡಮಟ್ಟದಲ್ಲಿ ಹಣಕೊಟ್ಟು ಚಿತ್ರವನ್ನು ಖರೀದಿ ಮಾಡಿದ್ದರು. ಚಿತ್ರ ಕೂಡ ಭಾರಿ ಸುದ್ದಿ ಮಾಡಿತು ಮತ್ತು ಅದೇ ಮಟ್ಟದಲ್ಲಿ ಬಿಡುಗಡೆ ಕೂಡ ಆಯ್ತು. ಆದರೆ ಬಿಡುಗಡೆಯಾದ ಮೊದಲ ದಿನದ ಮೊದಲ ಶೋ ಚಿತ್ರ ಡಿಸಾಸ್ಟರ್ ಅಂತ ಘೋಷಣೆಯಾಯಿತು. ಮ್ಯಾಟ್ನಿ ಶೋ ಹೊತ್ತಿಗೆ ಚಿತ್ರ ಕಣ್ಮರೆಯಾಗುವ ಸ್ಥಿತಿ ಬಂತು. ಇಂತಹ ಘೋರ ಸೋಲನ್ನು ರಜನಿಕಾಂತ್ ಕೂಡ ಸ್ವತಃ ಕನಸಿನಲ್ಲೂ ಕೂಡ ನಿರೀಕ್ಷೆ ಮಾಡಿರಲಿಲ್ಲ.
ಡಿಸ್ಟ್ರಿಬ್ಯೂಟರ್ಗಳ ಸ್ಥಿತಿ ನೇಣು ಹಾಕಿ ಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿಬಿಟ್ಟಿತ್ತು. ಸ್ವತಃ ಚಿತ್ರದ ನಿರ್ಮಾಪಕರಾಗಿದ್ದ ರಜನಿಕಾಂತ್ ಅವರು ಕ್ಷಣ ಯೋಚನೆ ಕೂಡ ಮಾಡದೆ ಎಲ್ಲಾ ವಿತರಕರನ್ನು ಮನೆಗೆ ಕರೆದು ಅವರ ಅಷ್ಟು ಹಣವನ್ನು ಹಿಂದಿರುಗಿಸಿದರು. 'ಬಾಬಾ' ಚಿತ್ರ ಫ್ಲಾಪ್ ಆದರೂ ಕೂಡ ರಜನಿಕಾಂತ್ ವಿತರಕರ ಪಾಲಿಗೆ ಬಾಬಾ ಆಗಿ ಕಾಪಾಡಿದರು. ಹಾಗಂತ ಎಲ್ಲಾ ನಿರ್ಮಾಪಕರ ಪಾಲಿಗೆ ಕೂಡ ಹೀರೋಗಳು ಫ್ಲಾಪ್ ಸಂದರ್ಭದಲ್ಲಿ ಹೀಗೆ ಬಂದು ಕಾಪಾಡುವ ಉದಾಹರಣೆಗಳು ಸಿಗುವುದಿಲ್ಲ. ಈಗ ಅಂತೊಂದು ಉದಾಹರಣೆಯಾಗಿ ನಾನಿ ಮುಂದೆ ನಿಂತಿದ್ದಾರೆ.

ಜರ್ಸಿ ನಂತರ ಸಿಕ್ಕಿಲ್ಲ ದೊಡ್ಡ ಹಿಟ್
ನ್ಯಾಚುರಲ್ ಸ್ಟಾರ್ ನಾನಿ ಕೆರಿಯರ್ನಲ್ಲಿ 'ಜರ್ಸಿ' ಚಿತ್ರಕ್ಕೆ ವಿಶೇಷವಾದ ಸ್ಥಾನವಿದೆ. ಒಂದೆಡೆ ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಂಡಿದ್ದು ಅಲ್ಲದೆ ವಿಮರ್ಶಕರಿಂದ ಕೂಡ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಯಿತು ಜೊತೆಗೆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಂದಿದೆ. ಅಲ್ಲದೆ ಅದೇ ಹೆಸರಿನಲ್ಲಿ ಹಿಂದಿಯಲ್ಲಿ ಕೂಡ ಚಿತ್ರ ನಿರ್ಮಾಣವಾಗುತ್ತಿದೆ. 'ಜರ್ಸಿ' ನಂತರ ನಾನಿ ಕೆರಿಯರ್ನಲ್ಲಿ ಹೇಳಿಕೊಳ್ಳುವಂಥ ಯಾವುದೇ ದೊಡ್ಡ ಚಿತ್ರ ಬಂದಿಲ್ಲ. 'ಗ್ಯಾಂಗ್ ಲೀಡರ್', 'ವಿ', 'ಟಕ್ ಜಗದೀಶ್' ಚಿತ್ರಗಳು ನಿರೀಕ್ಷೆಗೆ ತಕ್ಕಂತೆ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿಲ್ಲ. ಇತ್ತೀಚೆಗಷ್ಟೇ ಬಿಡುಗಡೆಯಾದ ಶ್ಯಾಮ್ ಸಿಂಘರಾಯ್ ಚಿತ್ರದ ಮೂಲಕ ನಾನಿ ಉತ್ತಮ ಹಿಟ್ ಪಡೆದಿದ್ದಾರೆ.

ಸಿನಿಮಾ ಬಿಡುಗಡೆ ಮಾಡಲು ಹರಸಹಾಸ
ಇತ್ತೀಚೆಗೆ ಬಿಡುಗಡೆಗೊಂಡ ನಾನಿ ಅಭಿನಯದ ಶ್ಯಾಮ್ ಸಿಂಘರಾಯ್ ಚಿತ್ರಕ್ಕೆ ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಲು ಸಾಕಷ್ಟು ಸಮಸ್ಯೆಗಳು ಎದುರಾಯಿತು. ಅದರಲ್ಲೂ ಟಿಕೆಟ್ ದರವನ್ನು ಭಾರಿ ಇಳಿಕೆ ಮಾಡಿದ ಕಾರಣದಿಂದ ಚಿತ್ರದ ಕಲೆಕ್ಷನ್ ಮೇಲೆ ನಕಾರಾತ್ಮಕವಾದ ಪರಿಣಾಮ ಬಿದ್ದಿದೆ. ಉಳಿದಂತೆ ತೆಲಂಗಾಣ ಸೇರಿದಂತೆ ವಿದೇಶಗಳಲ್ಲಿ ಚಿತ್ರ ಒಳ್ಳೆ ಕಮಾಯಿ ಮಾಡುತ್ತಿದೆ. ಆದರೆ, ಈ ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ಸಮಸ್ಯೆಗಳು ಎದುರಾಯಿತು. ನಿರ್ಮಾಪಕರು ಚಿತ್ರಕ್ಕೆ 55 ಕೋಟಿ ಬಜೆಟ್ ಹಾಕಿದ್ದಾರೆ. ಆದರೆ, ಆಂಧ್ರಪ್ರದೇಶದಲ್ಲಿ ಟಿಕೆಟ್ ದರ ಚಿತ್ರಕ್ಕೆ ಸಾಕಷ್ಟು ಹೊಡೆತ ಕೊಟ್ಟಿದೆ.

ಕಿರಾಣಿ ಅಂಗಡಿಗಿಂತ ಕಡೆ....
ಆಂಧ್ರಪ್ರದೇಶದಲ್ಲಿ ಥಿಯೇಟರ್ ದರ ನಿಗದಿ ವಿಚಾರದಲ್ಲಿ ಅಸಹನೆ ವ್ಯಕ್ತಪಡಿಸಿದ ನಟ ನಾನಿ ರಸ್ತೆಬದಿಯಲ್ಲಿ ಇಟ್ಟುಕೊಳ್ಳುವ ಕಿರಾಣಿ ಅಂಗಡಿ ಸಿಗುವ ವಸ್ತುಗಳ ಬೆಲೆಗಿಂತ ಕಮ್ಮಿ ಇದೆ ಅಂತ ಗುಡುಗಿದ್ದರು. ಇದೇ ವಿಚಾರದಲ್ಲಿ ಆಂಧ್ರಪ್ರದೇಶದ ಸಚಿವ ನಾನಿ ವಿರುದ್ಧ ಗುಡುಗಿದ್ದರು. ಈ ಎಲ್ಲಾ ಕಾರಣದಿಂದ ಆಂಧ್ರಪ್ರದೇಶದಲ್ಲಿ ಶಾಮ್ ಸಿಂಘರಾಯ್ ನಿರೀಕ್ಷಿತ ಹಣ ಗಳಿಕೆ ಮಾಡಲು ಸೋತಿದೆ.

ನಿರ್ಮಾಪಕರ ಕೈ ಹಿಡಿದ ನಾನಿ
ಒಂದಡೆ ಚಿತ್ರದ ಬಜೆಟ್ 55 ಕೋಟಿ ಆಗಿತ್ತು. ಆಂಧ್ರಪ್ರದೇಶದಲ್ಲಿ ಚಿತ್ರ ಬಿಡುಗಡೆಗೆ ಅನೇಕ ತರದ ಸಮಸ್ಯೆಗಳಿಂದ ವಿತರಕರು ಮತ್ತು ಪ್ರದರ್ಶಕರು ಅಲ್ಲಿ ಚಿತ್ರಪ್ರದರ್ಶನಕ್ಕೆ ಹಣ ಕೊಟ್ಟು ಖರೀದಿ ಮಾಡಲು ಮುಂದೆ ಬರಲಿಲ್ಲ. ಇದು ಕೂಡ ನಿರ್ಮಾಪಕರ ಮೇಲೆ ಹೆಚ್ಚುವರಿ ಹೊರೆ ಆಗಿತ್ತು. ಹೀಗಾಗಿ ಚಿತ್ರ ಬಿಡುಗಡೆಗೆ ತುಂಬಾ ಸಮಸ್ಯೆಗಳು ಆ ಸಮಯದಲ್ಲಿ ಎದುರಾಯಿತು. ಅಸಲಿಗೆ ನಿಗದಿಪಡಿಸಿದ ದಿನ ಅಂದರೆ ಡಿಸೆಂಬರ್ 24ರಂದು ಚಿತ್ರ ಬಿಡುಗಡೆಯಾಗುತ್ತದೆ? ಎಂಬ ಅನುಮಾನ ಕೂಡ ಎಲ್ಲೆಡೆ ಮೂಡಿತ್ತು. ಇದೇ ಸಮಯದಲ್ಲಿ ಚಿತ್ರದ ನಿಜವಾದ ಹೀರೋ ಆಗಿ ನಿರ್ಮಾಪಕರ ಎದುರಿಗೆ ಬಂದಿದ್ದು ನಟ ನಾನಿ. ಚಿತ್ರವೊಂದಕ್ಕೆ 5 ರಿಂದ 8 ಕೋಟಿ ಸಂಭಾವನೆ ಪಡೆಯುವ ನಾನಿ ಈ ಚಿತ್ರಕ್ಕೆ ಸುಮಾರು ಹತ್ತು ಕೋಟಿ ಸಂಭಾವನೆ ಪಡೆದಿದ್ದರು.
ನಿರ್ಮಾಪಕರಿಗೆ ಚಿತ್ರ ಬಿಡುಗಡೆಗೆ ಆಗುತ್ತಿರುವ ಸಮಸ್ಯೆಗಳನ್ನು ಅರಿತಿದ್ದ ನಾನಿ ಅಷ್ಟು ಹಣವನ್ನು ಹಿಂದಿರುಗಿಸಿ, ಸರಿಯಾದ ಸಂದರ್ಭದಲ್ಲಿ ನಿರ್ಮಾಪಕರ ಕೈ ಹಿಡಿದರು. ನಾನಿ ಹಿಂದಿರುಗಿಸಿದ ಹಣದಿಂದಲೇ ನಿರ್ಮಾಪಕರು ನಿಗದಿಪಡಿಸಿದ ದಿನದಂದು ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಯಿತು. ಚಿತ್ರ ಆಂಧ್ರಪ್ರದೇಶ ಹೊರತಾಗಿ ತೆಲಂಗಾಣ ಮತ್ತು ವಿದೇಶಗಳಲ್ಲಿ ಉತ್ತಮ ಗಳಿಕೆಯನ್ನು ಕಂಡು ನಿರ್ಮಾಪಕರು ನಿಟ್ಟುಸಿರು ಬಿಟ್ಟರು.

ಒಟಿಟಿಯಲ್ಲಿ ಕೂಡ ಚಿತ್ರ ಒಳ್ಳೆ ಗಳಿಕೆ
ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಈಗ ಒಟಿಟಿಯಲ್ಲಿ ಕೂಡ ಚಿತ್ರ ಒಳ್ಳೆ ಗಳಿಕೆ ಮಾಡುತ್ತದೆ ಎಂಬ ವಿಶ್ವಾಸದಲ್ಲಿ ನಿರ್ಮಾಪಕರು ಮತ್ತು ನಾನಿ ಇದ್ದಾರೆ. ಸಿನಿಮಾ ರಂಗದಲ್ಲಿ ಹೀಗೆ ಸಂಕಷ್ಟದಲ್ಲಿ ನಿರ್ಮಾಪಕರು ಇರುವ ಸಮಯದಲ್ಲಿ ಮುಂದೆ ಬಂದು ನಿರ್ಮಾಪಕರನ್ನು ಬೆಂಬಲಿಸಲು ಇಂತಹ ಧೈರ್ಯದ ಹೆಜ್ಜೆಗಳನ್ನು ಇಡುವ ಹೀರೋಗಳು ಬಹಳ ಕಡಿಮೆ ಎಂದು ಹೇಳಬೇಕು. ಹಲವು ಅಡೆತಡೆಗಳ ನಡುವೆ ಬಿಡುಗಡೆಯಾದ 'ಶ್ಯಾಮ್ ಸಿಂಘರಾಯ್' ಈಗ ಬಾಕ್ಸಾಫೀಸ್ ನಲ್ಲಿ ಗೆದ್ದಿದೆ.


Click it and Unblock the Notifications











