ರಕ್ಷಿತ್ ಮಾತ್ರವಲ್ಲ ತೆಲುಗಿನ ನಾಗಶೌರ್ಯ ಜತೆ ಕೂಡ ರಶ್ಮಿಕಾ ಕಿರಿಕ್ ಮಾಡಿದ್ದಳು; ಕಿಡಿಕಾರಿದ ತೋಟಾ ಪ್ರಸಾದ್!
ರಶ್ಮಿಕಾ ಮಂದಣ್ಣ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ನಟಿ. ಕನ್ನಡದ ಕಿರಿಕ್ ಪಾರ್ಟಿ ಎಂಬ ಚಿತ್ರದ ಮೂಲಕ ಚಿತ್ರರಂಗದ ಎಬಿಸಿಡಿ ಕಲಿತ ರಶ್ಮಿಕಾ ಮಂದಣ್ಣ ಇಂದು ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲೂ ಕೆಲಸ ಮಾಡಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರನ್ನು ಕಿರಿಕ್ ಪಾರ್ಟಿ ಸಮಯದಲ್ಲಿ ಕನ್ನಡ ಸಿನಿ ಪ್ರೇಕ್ಷಕರು ಎಷ್ಟು ಇಷ್ಟಪಡುತ್ತಿದ್ದರೋ ಅದಕ್ಕಿಂತ ಹೆಚ್ಚಾಗಿ ಈಗ ದ್ವೇಷಿಸಲಾರಂಭಿಸಿದ್ದಾರೆ.
ಇದಕ್ಕೆ ಕಾರಣ ರಶ್ಮಿಕಾ ವಿವಿಧ ವಿಚಾರಗಳಲ್ಲಿ ಹಾಗೂ ವಿವಿಧ ಸಂದರ್ಭಗಳಲ್ಲಿ ನಡೆದುಕೊಂಡ ರೀತಿ ಎನ್ನಬಹುದು. ಹೌದು, ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಿದ ರಶ್ಮಿಕಾ ಮಂದಣ್ಣ ತನ್ನ ಮೊದಲ ಚಿತ್ರದ ಹೀರೊ ರಕ್ಷಿತ್ ಶೆಟ್ಟಿ ಜತೆ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಂಡಿದ್ದರು ಹಾಗೂ ತೆಲುಗು ಚಿತ್ರರಂಗ ಪ್ರವೇಶಿಸಿದ ನಂತರ ಇಬ್ಬರೂ ಬ್ರೇಕ್ಅಪ್ ಕೂಡ ಮಾಡಿಕೊಂಡರು. ಈ ವಿಷಯದಿಂದ ಕನ್ನಡಿಗರಲ್ಲಿ ರಶ್ಮಿಕಾ ಮಂದಣ್ಣ ಮೇಲೆ ಶುರುವಾದ ಕೋಪ ದಿನದಿಂದ ದಿನಕ್ಕೆ ಹಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ.
ನನಗೆ ಕನ್ನಡ ಕೂಡ ಸರಿಯಾಗಿ ಬರಲ್ಲ, ಇಂಗ್ಲಿಷ್ನಲ್ಲಿ ಮಾತನಾಡುತ್ತೇನೆ ಎಂಬೆಲ್ಲಾ ಹೇಳಿಕೆಗಳನ್ನು ನೀಡಿ ಹಿಗ್ಗಾಮುಗ್ಗಾ ಟ್ರೋಲ್ಗೆ ಒಳಗಾಗಿದ್ದ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ತನಗೆ ಅವಕಾಶ ನೀಡಿದ ನಿರ್ದೇಶಕ, ನಿರ್ಮಾಣ ಸಂಸ್ಥೆ ಹಾಗೂ ನಟನ ಹೆಸರನ್ನು ಹೇಳದೇ ಕನ್ನಡಿಗರ ಕೋಪಕ್ಕೆ ಕಾರಣವಾಗಿದ್ದರು. ಈ ವಿಷಯ ದೊಡ್ಡ ಮಟ್ಟಕ್ಕೆ ತಿರುಗಿ ರಶ್ಮಿಕಾ ಮಂದಣ್ಣಾಳನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರಂತೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು. ಈ ಬಗ್ಗೆ ಚರ್ಚೆಗಳೂ ಸಹ ನಡೆದವು. ಈ ಕುರಿತಾಗಿ ತೆಲುಗಿನ ಖ್ಯಾತ ಚಲನಚಿತ್ರ ಬರಹಗಾರ ತೋಟಾ ಪ್ರಸಾದ್ ಕೂಡ ಪಾಪ್ಕಾರ್ನ್ ಮೀಡಿಯಾ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿ ತಮ್ಮ ಪಾಲಿನ ಅಭಿಪ್ರಾಯ ತಿಳಿಸಿ ಕನ್ನಡ ಮಾತ್ರವಲ್ಲ ತೆಲುಗು ನಟನ ಕುರಿತೂ ಸಹ ಇದೇ ರೀತಿ ನಡೆದುಕೊಂಡಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ರಕ್ಷಿತ್ ಹೆಸರು ಹೇಳಲು ಇಷ್ಟವಿಲ್ಲದಿದ್ದರೆ ಇತರರ ಹೆಸರು ಹೇಳಬಹುದಿತ್ತು
ರಶ್ಮಿಕಾ ಇತ್ತೀಚೆಗಷ್ಟೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ತನಗೆ ಅವಕಾಶ ನೀಡಿದ ಬ್ಯಾನರ್ ಹೆಸರನ್ನು ಹೇಳದೇ ಇದ್ದದ್ದರ ಕುರಿತು ಮಾತನಾಡಿದ ತೋಟಾ ಪ್ರಸಾದ್ "ಒಂದುವೇಳೆ ರಶ್ಮಿಕ ಮಂದಣ್ಣಗೆ ಬ್ರೇಕ್ ಅಪ್ ಆದ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಹೆಸರನ್ನು ಹೇಳಲು ಇಷ್ಟವಿಲ್ಲದಿದ್ದರೆ ಆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನು ಹೇಳಬಹುದಿತ್ತು, ಇಲ್ಲದಿದ್ದರೆ ಇತರರ ಹೆಸರನ್ನಾದರೂ ಹೇಳಬಹುದಿತ್ತು ಅಲ್ವಾ? ಆಕೆ ಹೆಸರನ್ನು ಹೇಳಿಲ್ಲ ಎಂದರೆ ಬೇಕಂತಲೇ ಇದನ್ನ ಮಾಡಿದ್ದಾಳೆ" ಎಂದು ಹೇಳಿದರು.

ತೆಲುಗಿನಲ್ಲೂ ಹೀಗೆ ಮಾಡಿದ್ದಾಳೆ
ಮಾತು ಮುಂದುವರಿಸಿದ ನಟಿ ತೋಟಾ ಪ್ರಸಾದ್ ಕನ್ನಡ ಮಾತ್ರವಲ್ಲ ತೆಲುಗಿನ ಪ್ರಥಮ ಚಿತ್ರದ ವಿಷಯದಲ್ಲೂ ರಶ್ಮಿಕಾ ಮಂದಣ್ಣ ಇದೇ ರೀತಿ ನಡೆದುಕೊಂಡು ರಕ್ಷಿತ್ ಶೆಟ್ಟಿ ರೀತಿಯೇ ಇಲ್ಲೂ ಸಹ ತನ್ನ ಮೊದಲ ತೆಲುಗು ಚಿತ್ರದ ನಟನನ್ನು ಕಡೆಗಣಿಸಿದ್ದಳು ಎಂಬುದನ್ನು ಬಿಚ್ಚಿಟ್ಟಿದ್ದಾರೆ. "ಕಿರಿಕ್ ಪಾರ್ಟಿಯಲ್ಲಿ ರಕ್ಷಿತ್ ಶೆಟ್ಟಿ ಇರುವ ಕಾರಣ ಆತನ ಹೆಸರನ್ನು ಹೇಳಲಿಲ್ಲ ಎಂದುಕೊಳ್ಳಬಹುದು. ಆಕೆ ತೆಲುಗು ಚಿತ್ರರಂಗ ಪ್ರವೇಶಿಸಿದ ಚಲೋ ಚಿತ್ರದ ನಟ ನಾಗಶೌರ್ಯ ಹೆಸರನ್ನೂ ಸಹ ರಶ್ಮಿಕಾ ಹೇಳಿರಲಿಲ್ಲ. ಇತ್ತೀಚೆಗಷ್ಟೆ ಚಲೋ ಚಿತ್ರದ ವಾರ್ಷಿಕೋತ್ಸವದ ಕುರಿತು ಟ್ವೀಟ್ ಮಾಡಿದ್ದ ರಶ್ಮಿಕಾ ಮಂದಣ್ಣ ನಿರ್ದೇಶಕನ ಹೆಸರನ್ನು ಉಲ್ಲೇಖಿಸಿ ನಟ ನಾಗಶೌರ್ಯ ಹೆಸರನ್ನು ಏಕೆ ಟ್ವೀಟ್ನಲ್ಲಿ ಬರೆಯಲಿಲ್ಲ?" ಎಂದು ಅನುಮಾನ ಹೊರಹಾಕಿ ಕಿಡಿಕಾರಿದರು. ಅಷ್ಟೇ ಅಲ್ಲದೇ ಎಷ್ಟೇ ಬೆಳೆದರೂ ಸಹ ನಮಗೆ ಮೊದಲು ತುತ್ತು ಇಟ್ಟವರನ್ನು ಮರೆಯಬಾರದು, ಕೃತಜ್ಞತೆ ಇರಬೇಕು ಎಂದು ರಶ್ಮಿಕಾ ವಿರುದ್ಧ ತೋಟಾ ಪ್ರಸಾದ್ ಮಾತನಾಡಿದರು.

ರಕ್ಷಿತ್ ಜತೆ ಸಮಸ್ಯೆ ಇದೆ, ನಾಗಶೌರ್ಯ ಜತೆ ಯಾವ ಸಮಸ್ಯೆ?
ಹೀಗೆ ನಾಗಶೌರ್ಯ ಹೆಸರನ್ನು ಟ್ವೀಟ್ನಲ್ಲಿ ಉಲ್ಲೇಖಿಸದೇ ಇದ್ದ ರಶ್ಮಿಕಾ ವಿರುದ್ಧ ಕಿಡಿಕಾರಿದ ತೋಟಾ ಪ್ರಸಾದ್ "ರಕ್ಷಿತ್ ಶೆಟ್ಟಿ ಜತೆ ಸಮಸ್ಯೆ ಇರುವ ಕಾರಣ ಆತನ ಹೆಸರನ್ನು ತೆಗೆದುಕೊಳ್ಳಲಿಲ್ಲ ಸರಿ. ಆದರೆ ನಾಗಶೌರ್ಯ ಜತೆ ಇರುವ ಸಮಸ್ಯೆಯಾದರೂ ಏನು? ನಾಗಶೌರ್ಯ ಹೆಸರನ್ನು ಬಿಟ್ಟು ತನ್ನ ಮೊದಲ ತೆಲುಗು ನಿರ್ದೇಶಕನ ಹೆಸರನ್ನು ಬರೆದಿದ್ದ ಕಾರಣ ನಿರ್ದೇಶಕರಿಗೆ ಬೆಲೆ ಕೊಡುವ ನಟಿ ಎಂದುಕೊಳ್ಳೋಣ ಎಂದರೆ ಅತ್ತ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನೂ ಸಹ ರಶ್ಮಿಕಾ ಹೇಳಲು ಸಿದ್ಧಳಿಲ್ಲ" ಎಂದು ರಶ್ಮಿಕಾ ಮಂದಣ್ಣ ನಡೆದುಕೊಂಡ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ಯಾನ್ ಮಾಡಲು ಆಗಲ್ಲ
ಇನ್ನು ರಶ್ಮಿಕಾ ಮಂದಣ್ಣಳನ್ನು ಕನ್ನಡ ಚಲನಚಿತ್ರರಂಗದಿಂದ ಬ್ಯಾನ್ ಮಾಡಲಿದ್ದಾರೆ ಎಂಬ ವಿಷಯದ ಕುರಿತು ಮಾತನಾಡಿದ ತೋಟಾ ಪ್ರಸಾದ್ ಯಾವ ಚಿತ್ರರಂಗಕ್ಕೂ ಯಾವುದೇ ನಟ ಅಥವಾ ನಟಿಯ ಮೇಲೆ ನಿಷೇಧ ಹೇರಲು ಆಗುವುದಿಲ್ಲ, ಅದರಲ್ಲೂ ಯಶಸ್ಸಿನ ಉತ್ತುಂಗದಲ್ಲಿರುವ ರಶ್ಮಿಕಾ ಮಂದಣ್ಣಳನ್ನು ಬ್ಯಾನ್ ಮಾಡುವುದು ಅಸಾಧ್ಯ ಎಂದು ತಿಳಿಸಿದರು.


Click it and Unblock the Notifications











