ನಟ ಪೋಸಾನಿ ಕೃಷ್ಣ ಮುರಳಿ ಮೇಲೆ ಪವನ್ ಅಭಿಮಾನಿಗಳಿಂದ ದಾಳಿ: ಹತ್ತು ಮಂದಿ ಬಂಧನ
'ರಿಪಬ್ಲಿಕ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಆಡಿದ್ದ ವೀರಾವೇಶದ ಮಾತುಗಳು ಹಲವು ಕೋಲಾಹಲಗಳಿಗೆ ಕಾರಣವಾಗಿದೆ.
ಪವನ್ ಕಲ್ಯಾಣ್ ಮಾತುಗಳನ್ನು ತೆಲುಗು ಚಿತ್ರರಂಗದ ನಟರೇ ವಿರೋಧಿಸಿದ್ದಾರೆ. ಅದರಲ್ಲಿ ಜನಪ್ರಿಯ ಪೋಷಕ ನಟ ಪೋಸಾನಿ ಕೃಷ್ಣ ಮುರಳಿ ಒಬ್ಬರು.
ಆದರೆ ಪವನ್ ಕಲ್ಯಾಣ್ ಬಗ್ಗೆ ಮಾತನಾಡಿದ್ದಕ್ಕೆ ಪೋಸಾನಿ ಕೃಷ್ಣ ಮುರಳಿ ವಿರುದ್ಧ ಪವನ್ ಕಲ್ಯಾಣ್ ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.

ಮಂಗಳವಾರ ಹೈದರಾಬಾದ್ನ ಪ್ರೆಸ್ ಕ್ಲಬ್ನ ಬಳಿ ಪೋಸಾನಿ ಕೃಷ್ಣ ಮೇಲೆ ಪವನ್ ಕಲ್ಯಾಣ್ ಅಭಿಮಾನಿಗಳು ದಾಳಿ ನಡೆಸಿದ್ದಾರೆ. ಪೋಸಾನಿ ವಿರುದ್ಧ ಘೋಷಣೆಗಳನ್ನು ಕೂಗಿದ ಗುಂಪು, ಪವನ್ ಕಲ್ಯಾಣ್ ವಿರುದ್ಧ ಮಾತನಾಡಿದ ಪೋಸಾನಿಯನ್ನು ಎಳೆದಾಡಿ ಹಲ್ಲೆ ಮಾಡಿದೆ ಎನ್ನಲಾಗುತ್ತಿದೆ. ಅಲ್ಲಿಯೇ ಇದ್ದ ಪೊಲೀಸರು ಮಧ್ಯ ಪ್ರವೇಶಿಸಿ ಪೋಸಾನಿ ಕೃಷ್ಣ ಮುರಳಿಯನ್ನು ರಕ್ಷಿಸಿದ್ದಲ್ಲದೆ ಪ್ರತಿಭಟನಾಕಾರರ ಗುಂಪಿನಲ್ಲಿದ್ದ ಹತ್ತು ಮಂದಿಯನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.
ಸೋಮವಾರ ಪ್ರೆಸ್ ಮೀಟ್ ಮಾಡಿದ್ದ ಪೋಸಾನಿ, ಪವನ್ ಕಲ್ಯಾಣ್ ಅನ್ನು ಟೀಕಿಸಿದ್ದರು. ಅದರ ಬಳಿಕ ಪವನ್ ಕಲ್ಯಾಣ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸಾನಿ ವಿರುದ್ಧ ತೀವ್ರ ಟೀಕೆ ಮಾಡಿದರು. ಕೆಲವರು ಪೋಸಾನಿಗೆ ಕರೆ ಮಾಡಿ ಬೆದರಿಕೆಗಳನ್ನು ಸಹ ಹಾಕಿದ್ದರು. ಅದರ ಬೆನ್ನಲ್ಲೆ ಮಂಗಳವಾರ ಮತ್ತೊಂದು ಸುದ್ದಿಗೋಷ್ಠಿ ನಡೆಸಿದ ಪೋಸಾನಿ ಪವನ್ ಕಲ್ಯಾಣ್ ಹಾಗೂ ಅವರ ಕುಟುಂಬದವರ ಮೇಲೆ ನೇರ ವಾಗ್ದಾಳಿ ನಡೆಸಿದರು. ''ಪವನ್ ಕಲ್ಯಾಣ್ ಒಬ್ಬ ಸೈಕೊ ಅವನ ಅಭಿಮಾನಿಗಳು ಸಹ ಸೈಕೊ' ಎಂದು ಪೋಸಾನಿ ಹೇಳಿದ್ದರು. ಈ ಪ್ರೆಸ್ ಮೀಟ್ ಮುಗಿದ ಮೇಲೆ ಪವನ್ ಅಭಿಮಾನಿಗಳು ಪೋಸಾನಿ ಮೇಲೆ ದಾಳಿ ನಡೆಸಿದ್ದಾರೆ.
ಪವನ್ ಕಲ್ಯಾಣ್ ಅಭಿಮಾನಿ ಬಳಗದ ಅಧ್ಯಕ್ಷರಾಗಿರುವ ಶಂಕರ್ ಗೌಡ, ಪೋಸಾನಿ ಕೃಷ್ಣ ಮುರಳಿ ವಿರುದ್ಧ ಹೈದರಾಬಾದ್ನ ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಸಾನಿಯನ್ನು ಶೀಘ್ರ ಬಂಧಿಸಬೇಕು, ಹಾಗೂ ಆತನು ಯಾವುದೇ ಪ್ರೆಸ್ ಮೀಟ್ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
ಪೋಸಾನಿ ಮಂಗಳವಾರ ಮಾಡಿದ ಸುದ್ದಿಗೋಷ್ಠಿಯಲ್ಲಿ ನಿಕೃಷ್ಟ ಭಾಷೆಯಲ್ಲಿ ಪವನ್ ಕಲ್ಯಾಣ್ ಅನ್ನು ಮೂದಲಿಸಿದ್ದು, ಹಲವು ಚಾನೆಲ್ಗಳು ಆ ಸುದ್ದಿಗೋಷ್ಠಿಯನ್ನು ಪ್ರಸಾರ ಮಾಡಿಲ್ಲ. ಪೋಸಾನಿ ಭಾವಾವೇಶದ ಮಾತುಗಳನ್ನು ತೆಲುಗು ಸಿನಿಮಾ ಪತ್ರಕರ್ತರ ಸಂಘ ಸಹ ಖಂಡನೆ ಮಾಡಿದೆ.
''ಪ್ರೆಸ್ಕ್ಲಬ್ ವೇದಿಕೆಯನ್ನು ಬಳಸಿಕೊಂಡು ಪೋಸಾನಿ ಕೃಷ್ಣ ಮುರಳಿ ಸಿನಿಮಾ ನಟರ ಬಗ್ಗೆ ಹಾಗೂ ಅವರ ಕುಟುಂಬದವರ ಬಗ್ಗೆ ಆಡಿರುವ ಮಾತುಗಳು ಬಹಳ ಅಸಹ್ಯಕರದವಾಗಿದ್ದು, ಇದನ್ನು ತೆಲುಗು ಸಿನಿಮಾ ಪತ್ರಕರ್ತರ ಸಂಘವು ತೀವ್ರವಾಗಿ ಖಂಡಿಸುತ್ತದೆ'' ಎಂದು ಹೇಳಿಕೆ ಪ್ರಕಟಿಸಿದೆ ತೆಲುಗು ಸಿನಿಮಾ ಪತ್ರಕರ್ತರ ಸಂಘ.
ಪೋಸಾನಿ ವಿರುದ್ಧ ಹೈದರಾಬಾದ್ ಮಾತ್ರವೇ ಅಲ್ಲದೆ ತೆಲುಗು ರಾಜ್ಯಗಳಲ್ಲಿ ಹಲವು ಕಡೆ ದೂರುಗಳು ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸಾನಿ ವಿರುದ್ಧ ತೀವ್ರ ಆಕ್ರೋಶವನ್ನು ಪವನ್ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ವಿಡಿಯೋಗಳನ್ನು ಪ್ರಕಟಿಸಿ ಪೋಸಾನಿ ಕೃಷ್ಣ ಮುರಳಿಯನ್ನು ಕೆಟ್ಟದಾಗಿ ಬೈದು, ಬಹಿರಂಗ ಬೆದರಿಕೆಗಳನ್ನು ಸಹ ಹಾಕಿದ್ದಾರೆ.
ಮಂಗಳವಾರದ ಸದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪೋಸಾನಿ ಕೃಷ್ಣ ಮುರಳಿ, ಪವನ್ ಕಲ್ಯಾಣ್ ಪತ್ನಿಯ ಬಗ್ಗೆ ಹೇಯಕರವಾದ ಆರೋಪಗಳನ್ನು ಮಾಡಿದ್ದರು. ಪವನ್ ಕಲ್ಯಾಣ್ ಪತ್ನಿಗೆ ಮನೆಯ ಕೆಲಸದವನ ಜೊತೆ ಅಕ್ರಮ ಸಂಬಂಧ ಇದೆಯೆಂದು, ಪವನ್ ಕಲ್ಯಾಣ್ ಮಕ್ಕಳು ಪವನ್ ಕಲ್ಯಾಣ್ ಅಲ್ಲ ಬದಲಿಗೆ ಅವರ ಕೆಲಸದವರಿಗೆ ಹುಟ್ಟಿದವೆಂದು ಬಹು ಕೆಟ್ಟದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪತ್ರಕರ್ತರು ಕೆಲವರು ಪೋಸಾನಿ ಆರೋಪಗಳನ್ನು ಖಂಡಿಸಿದ್ದರು. ಪೋಸಾನಿಯ ಈ ಹೇಳಿಕೆಗಳಿಂದ ಪವನ್ ಕಲ್ಯಾಣ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.


Click it and Unblock the Notifications











