ಚಪ್ಪಲಿ ತೋರಿಸಿ ವಿರೋಧಿಗಳಿಗೆ ಎಚ್ಚರಿಕೆ, 'ನಾಲಿಗೆ ಸೀಳುವೆ, ಕೊಲ್ಲುವೆ' ಎಂದ ಪವನ್ ಕಲ್ಯಾಣ್!
ಆಂಧ್ರ ಪ್ರದೇಶದ ರೌಡಿ ರಾಜಕೀಯ ಮತ್ತೊಮ್ಮೆ ತಲೆ ಎತ್ತಿದಂತಿದೆ. ನಟ, ರಾಜಕಾರಣಿ ಪವನ್ ಕಲ್ಯಾಣ್, ವೇದಿಕೆ ಮೇಲೆ ನಿಂತು, ಕೈಯಲ್ಲಿ ಚಪ್ಪಲಿ ಹಿಡಿದು ಅಸಾಂವಿಧಾನಿಕ ಭಾಷೆ ಬಳಸಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಪಕ್ಷದವರಿಗೆ ಎಚ್ಚರಿಕೆ ನೀಡಿದರು.
ಕೆಲ ದಿನಗಳಿಂದಲೂ ಪವನ್ ಕಲ್ಯಾಣ್ ವಿರುದ್ಧ ಆಡಳಿತ ಪಕ್ಷ ವೈಎಸ್ಆರ್ಸಿಪಿಯ ಸದಸ್ಯರು ಆರೋಪಗಳನ್ನು ಮಾಡುತ್ತಿದ್ದರು, ಪವನ್ ಅನ್ನು 'ಪ್ಯಾಕೇಜ್ ಸ್ಟಾರ್' ಎಂಬ ಬಿರುದನ್ನು ವೈಸಿಪಿ ಪಕ್ಷದ ಕೆಲ ಸದಸ್ಯರು ನೀಡಿದ್ದರು.
ಇಂದು ಮಂಗಳಗಿರಿಯಲ್ಲಿ ನಡೆದ ಜನಸೇನಾ ಪಕ್ಷದ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, 'ಅದ್ಯಾವನು ನನ್ನನ್ನು ಪ್ಯಾಕೇಜ್ ಸ್ಟಾರ್ ಎನ್ನುತ್ತಿರುವುದು. ಯಾರು ನನ್ನನ್ನು ಹಾಗೆ ಕರೆಯುತ್ತಾರೊ ಅವರನ್ನು ಚಪ್ಪಲಿ ತೆಗೆದುಕೊಂಡು ಹೊಡೆಯುತ್ತೇನೆ'' ಎಂದು ಧರಿಸಿದ್ದ ಚಪ್ಪಲಿ ಬಿಚ್ಚಿ ತೋರಿಸಿದ್ದಾರೆ.

ಅಬ್ಬರಿಸಿದ ಪವನ್ ಕಲ್ಯಾಣ್
''ವೈಎಸ್ಆರ್ಸಿಪಿ ಗೂಂಡಾಗಳು, ಮೂರ್ಖರು, ಲಂಪಟರು, ದಡ್ಡರು, ದರೋಡೆಕೋರರು. ನಿಮ್ಮನ್ನು ಇಷ್ಟು ದಿನ ರಕ್ಷಿಸಿಸಿದ್ದು ನನ್ನ ಸಹನೆ. ನಿಮ್ಮಲ್ಲಿ ಕ್ರಿಮಿನಲ್ಗಳಿದ್ದಾರೆಯೇ? ರೌಡಿಗಳು, ಗೂಂಡಾಗಳು ಇದ್ದಾರೆಯೇ? ಒಬ್ಬನೇ ಎದುರು ಬರುತ್ತೇನೆ, ಕತ್ತು ಹಿಡಿದು ಕೆಳಕ್ಕೆ ದಬ್ಬಿ ಕಾಲಿನಲ್ಲಿ ಹಿಸುಕಿ ಕೊಂದುಬಿಡುತ್ತೇನೆ ಜಾಗೃತೆ'' ಎಂದು ಮೈಕ್ ಮುಂದೆ ಅಬ್ಬರಿಸಿದ್ದಾರೆ ಪವನ್ ಕಲ್ಯಾಣ್.

ಮನೆಯಿಂದ ಹೊರಗೆಳೆದುಕೊಂಡು ಬಂದು ಹೊಡೆಯುವೆ: ಪವನ್
''ನಮ್ಮ ಹೆಣ್ಣು ಮಗಳು ವಿನುತಾ ಮೇಲೆ ಕೈಇಟ್ಟಿದ್ದೀರ ನನ್ ಮಕ್ಳಾ ನೀವು. ನನಗೆ ಕೆಟ್ಟ ಮಾತು ಬರೊಲ್ಲ ಅಂದುಕೊಂಡಿದ್ದೀರ? ನೀವು ಲಂಡನ್ನಲ್ಲಿ ಓದಿರಬಹುದು ಆದರೆ ನಾನು ಇಲ್ಲಿನವನೇ ಲೋಕಲ್, ಗೊಡ್ಡುಖಾರ ತಿಂದು ಬೆಳೆದವನು. ನಾನು ಮರ್ಯಾದೆ ಕೊಡ್ತೀನಿ, ಆ ಮರ್ಯಾದೆಯನ್ನು ಉಳಿಸಿಕೊಳ್ಳುವವರೆ ಮಾತ್ರ. ಮಾತನಾಡಿದರೆ ಮೂರು ಮದುವೆ ಆದವನು ಎನ್ನುತ್ತೀರಿ, ಒಂದು ಮದುವೆ ಆಗಿ ಮೂವತ್ತು ಸ್ಪೆಪ್ನಿಗಳ ಜೊತೆ ತಿರುಗಾಡುವ ಲಂಪಟರು ನೀವು. ನಿಮ್ಮ ಶರ್ಟ್ ಕಾಲರ್ ಹಿಡಿದು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಹೊಡೆಯುತ್ತೀನಿ ನನ್ ಮಕ್ಳ ನಿಮ್ಮನ್ನು'' ಎಂದು ವಿರೋಧಿಗಳಿಗೆ ಖಾರವಾಗಿಯೇ ಎಚ್ಚರಿಕೆ ನೀಡಿದ್ದಾರೆ ಪವನ್.

ಜಾತಿ ಬಗ್ಗೆ ಮಾತನಾಡಿದರೆ ನಾಲಗೆ ಸೀಳುವೆ: ಪವನ್
''ಏ ಮೂರ್ಖರೇ, ವೇಸ್ಟ್ ಬಾಡಿಗಳೇ, ಲಂಪಟರೇ, ನನ್ನ ಜಾತಿಯ ಬಗ್ಗೆ ಮಾತನಾಡುತ್ತೀರ ನೀವು. ನಾನು ಯಾವ ಜಾತಿಗೂ ಸೇರಿದವನಲ್ಲ ಆದರೂ ನನ್ನ ಸಮುದಾಯದ ವಿಷಯಕ್ಕೆ ಬಂದರೆ ನಾಲಿಗೆ ಕತ್ತರಿಸಿ ಹಾಕಿಬಿಡುತ್ತೇನೆ ಜಾಗೃತೆ'' ಎಂದ ಪವನ್ ಕಲ್ಯಾಣ್, ನಟಿ, ರಾಜಕಾರಣಿ ರೋಜಾ ಬಗ್ಗೆಯೂ ಮಾತನಾಡಿ, ''ವನಪು ವಯ್ಯಾರ ತೋರಿಸಿಕೊಂಡು ಅವಕಾಶವಾದಿ ಆಗಿದ್ದೀಯ, ನಾನು ನಿನಗೆ ಸಹೋದರನಾ? ಇನ್ನೊಮ್ಮೆ ನಿನ್ನ ಬಾಯಲ್ಲಿ ನನ್ನ ಹೆಸರೆತ್ತಿದರೆ ಚೆನ್ನಾಗಿರೊದಿಲ್ಲ. ಎಲ್ಲವನ್ನೂ ಮುಚ್ಚಿಕೊಂಡು ಇರಬೇಕು'' ಎಂದಿದ್ದಾರೆ ಪವನ್ ಕಲ್ಯಾಣ್.

''ರಾಡ್, ಕಲ್ಲು, ಹಾಕಿ ಸ್ಟಿಟ್ ಎಲ್ಲದಕ್ಕೂ ನಾನು ರೆಡಿ''
''ನೋಡಲು ಸಣ್ಣಗಿದ್ದಾನೆ, ಸೈಲೆಂಟ್ ಆಗಿದ್ದಾನೆ ಎಂದು ಏನೇನೋ ಮಾತನಾಡಿದ್ದೀರಿ. ಇನ್ನು ಮುಂದೆ ಹಾಗಲ್ಲ. ನೀವದೆಷ್ಟು ಜನ ರೌಡಿಗಳು, ಗೂಂಡಾಗಳಿದ್ದೀರೋ ಒಟ್ಟಿಗೆ ಬನ್ನಿ. ಯುದ್ಧ ಎಂದು ಘೋಷಿಸಿಬಿಡಿ ಅದೇನಾಗುತ್ತದೆಯೋ ನೋಡಿಬಿಡುತ್ತೇನೆ. ಲಾಠಿಗಳೊ, ರಾಡುಗಳು, ಹಾಕಿ ಸ್ಟಿಕ್ಗಳೋ ಇಲ್ಲವೋ ಬರಿ ಕೈಯಲ್ಲೋ ಯಾವುದಕ್ಕಾದರೂ ನಾನು ರೆಡಿ. ನೀವು ರೆಡಿಯಾ?'' ಎಂದು ಸವಾಲೆಸಿದಿದ್ದಾರೆ ನಟ ಪವನ್ ಕಲ್ಯಾಣ್. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಪವನ್ ಕಲ್ಯಾಣ್ ಏಕವಚನದಲ್ಲಿಯೇ ವೈಸಿಪಿ ಪಕ್ಷದವರ ಮೇಲೆ ವಾಗ್ದಾಳಿ ನಡೆಸಿದರು. 'ನನಗೆ ಸಿಎಂ ಆಗಲು ಅವಕಾಶ ನೀಡಿದರೆ ಮೊದಲು ಅಭಿವೃದ್ಧಿ ಎರಡನೇ ಕೆಲಸವೇ ಈ ವೈಎಸ್ಆರ್ಸಿಪಿ ಗೂಂಡಾಗಳಿಗೆ ಬುದ್ಧಿ ಕಲಿಸುವುದು' ಎಂದಿದ್ದಾರೆ.


Click it and Unblock the Notifications











