ರೌಂಡ್ ಟೇಬಲ್ನಲ್ಲಿ ರಾಜಮೌಳಿ ಕನ್ನಡವನ್ನು ಮರೆತಿದ್ದು ನಿಜವೇ? ಅಸಲಿಯತ್ತೇನು?
ಕಳೆದೆರಡು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಬಗ್ಗೆನೇ ಟಾಕ್. ಫ್ಯಾನ್ಸ್ ವಾರ್ ಬಗ್ಗೆನೇ ಪರ-ವಿರೋಧದ ಚರ್ಚೆ. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ವಿರೋಧಿಸಿ ಹಲವೆಡೆ ಪ್ರತಿಭಟನೆ. ಇದು ಬಿಟ್ರೆ ಚಿತ್ರರಂಗದಲ್ಲಿ ಬೇರೆ ಏನೂ ನಡೆಯುತ್ತಿಲ್ಲ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದವರನ್ನು ಬಂಧಿಸುವಂತ ಪ್ರತಿಭಟನೆ ನಡೆದಿದೆ. ಇತ್ತ ಸ್ಯಾಂಡಲ್ವುಡ್ ತಾರೆಯರು ದರ್ಶನ್ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ಇನ್ನೊಂದು ಕಡೆ ರಾಜಮೌಳಿ ಸಂದರ್ಶನದಲ್ಲಿ ಆಡಿದ ಮಾತು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಾಜಮೌಳಿಗೆ ಕನ್ನಡ ಚಿತ್ರರಂಗ ಅವರ ಸಿನಿಮಾ ಬಿಡುಗಡೆ ವೇಳೆ ಮಾತ್ರ ನೆನಪಾಗುತ್ತೆ ಅಂತ ಕನ್ನಡಿಗರು ಕಿಡಿಕಾರುತ್ತಿದ್ದಾರೆ. ಅಷ್ಟಕ್ಕೂ ರಾಜಮೌಳಿ ವಿರುದ್ಧ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿರೋದು ಯಾಕೆ? ತಿಳಿಯಲು ಮುಂದೆ ಓದಿ.

ಸ್ಯಾಂಡಲ್ವುಡ್ ಮರೆತ ರಾಜಮೌಳಿ
ರಾಜಮೌಳಿ, ಕಮಲ್ ಹಾಸನ್, ಗೌತಮ್ ಮೆನನ್, ಲೋಕೇಶ್ ಕನಗರಾಜ್, ನಿರ್ಮಾಪಕಿ ಸ್ವಪ್ನಾ ದತ್, ಪೃಥ್ವಿರಾಜ್ ಸುಕುಮಾರನ್ ಇವರೆಲ್ಲರೂ ರೌಂಡ್ ಟೇಬಲ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅನುಪಮಾ ಚೋಪ್ರಾ ನಿರೂಪಣೆಯ ಈ ಕಾರ್ಯಕ್ರಮದಲ್ಲಿ ರಾಜಮೌಳಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಮಾತಾಡಿದ್ದರು. ಈ ವೇಳೆ ತಮಿಳು,ತೆಲುಗು, ಮಲಯಾಳಂ ಚಿತ್ರರಂಗದ ಬಗ್ಗೆ ಮಾತಾಡಿದ್ದರು. ಆದರೆ, ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ರಾಜಮೌಳಿ ಹೇಳಿದ್ದೇನು?
"ಬಹಳ ದಿನಗಳಿಂದ ಪ್ರತಿಯೊಂದು ಚಿತ್ರರಂಗಕ್ಕೂ ಒಳ್ಳೆಯ ಅಂಕಗಳೇ ಸಿಕ್ಕಿವೆ ಅಂತ ನನಗೆ ಅನಿಸುತ್ತೆ. ನಾಲ್ಕು ಚಿತ್ರರಂಗದ ನಿರ್ದೇಶಕರಲ್ಲಿ ತಮಿಳು ನಿರ್ದೇಶಕರು ತಾಂತ್ರಿಕವಾಗಿ ಹೆಚ್ಚು ಸೌಂಡ್ ಆಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಬಹಳಷ್ಟು ಜನಪ್ರಿಯ ಸಿನಿಮಾಗಳು ಇವೆ. ನಾವು ಜನರು ಹೆಚ್ಚು ಸಂಪರ್ಕದಲ್ಲಿದ್ದೇವೆ. ಜನರಿಗೆ ಏನು ಬೇಕು ಅನ್ನೋದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನನಗನ್ನಿಸುತ್ತೆ ಮಲಯಾಳಂ ಚಿತ್ರರಂಗದಲ್ಲಿ ಉತ್ತಮ ಬರಹಗಳಿವೆ. ಇವತ್ತು ನನಗೆ ಯಾರ ಮೇಲಾದರೂ ಅಸೂಯೆ ಇದೆ ಅಂದರೆ, ಅದು ಮಲಯಾಳಂ ಬರಹಗಾರರು ಹಾಗೂ ನಟರ ಮೇಲಿದೆ." ಎಂದು ರಾಜಮೌಳಿ ಸಂದರ್ಶನದಲ್ಲಿ ಹೇಳಿದ್ದರು. ಈ ಮಾತು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡಿಗರ ವಾದವೇನು?
"ರಾಜಮೌಳಿ ಕನ್ನಡವನ್ನು ಬಿಟ್ಟು ಸೌತ್ ಇಂಡಿಯಾ ಸಿನಿಮಾ ಅಂತ ಹೇಗೆ ಕರೆದರು? ಈ ಲೆಜೆಂಡ್ಸ್ಗೆ ಕನ್ನಡ, ಕರ್ನಾಟಕ ಹಾಗೂ ಕನ್ನಡ ಸಿನಿಮಾ ಅನ್ನೋದು ನಮ್ಮೂರಿಗೆ ಅವರ ಚಿತ್ರದ ಪ್ರಚಾರಕ್ಕೆ ಬಂದಾಗ ಮಾತ್ರ ನೆನಪಾಗುತ್ತೆ. ಅವಾಗ ಮಾತ್ರ ಇವರಿಗೆ ಕನ್ನಡ ಚಿತ್ರರಂಗದ ಸಾಧನೆ, ದಿಗ್ಗಜರು ನೆನಪಾಗ್ತಾರೆ. ರಾಷ್ಟ್ರಮಟ್ಟದ ಇಂತಹ ಸಿನಿಮಾ ಕಾರ್ಯಗಾರದಲ್ಲಿ ಕನ್ನಡ ಇದೆ ಅನ್ನೋ ವಿಷ್ಯವೇ ಪಾಪ ಮರೆತು ಹೋಗುತ್ತೆ. ಹೊರಗೆ ನಮ್ಮನ್ನ ಈ ಮಟ್ಟದಲ್ಲಿ ನೋಡ್ತಿದ್ದಾರೆ. ನಮ್ಮಲ್ಲಿ ನೋಡಿದ್ರೆ ಫ್ಯಾನ್ಸ್ ವಾರು,ಅದು ಇದು ಅಂತ ಕಿತ್ತಾಡ್ಕೊಂಡ್ ಸಾಯಿತಿದ್ದೀವಿ. ಏನ್ ಕರ್ಮ ಗುರು ಇದು." ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಕನ್ನಡ ಸಿನಿಮಾ ಬಗ್ಗೆ ಮಾತಾಡೇ ಇಲ್ವಾ?
ರಾಜಮೌಳಿ ಸಂದರ್ಶನದ ಮುಂದಿನ ಭಾಗದಲ್ಲಿ ಕನ್ನಡದ 'ಕಾಂತಾರ' ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ ದಕ್ಷಿಣದ ನಾಲ್ಕನೇ ಸ್ಥಾನದಲ್ಲಿದ್ದ ಕನ್ನಡ ಸಿನಿಮಾ ಟಾಪ್ಗೆ ಹೇಗೆ ಬಂತು ಅನ್ನೋದನ್ನು ಹೇಳಿದ್ದಾರೆ. ಬಳಿಕ ಪೃಥ್ವಿರಾಜ್ ಸುಕುಮಾರನ್ 'ಕಾಂತಾರ' ಸಿನಿಮಾ ಬಗ್ಗೆ ಸುದೀರ್ಘವಾಗಿ ಹೇಳಿದ್ದಾರೆ. ಆದರೂ, ಕನ್ನಡದ ಬಗ್ಗೆ, ಕನ್ನಡ ಸಿನಿಮಾದ ಏಳಿಗೆ ಬಗ್ಗೆ ಮಾತಾಡಿದ್ದು ತೀರಾ ಕಡಿಮೆನೇ ಎನ್ನಬಹುದು.


Click it and Unblock the Notifications











