'ಸಲಾರ್' ಮೇಲೆ ಹೊಂಬಾಳೆಗೆ ಭಾರಿ ನಿರೀಕ್ಷೆ, ಭಾಗ 2-3 ಕ್ಕೆ ಈಗಲೇ ಯೋಜನೆ!
'ಕೆಜಿಎಫ್' ಸಿನಿಮಾ ಸರಣಿ ಮೂಲಕ ಕನ್ನಡ ಸಿನಿಮಾ ಮಾರುಕಟ್ಟೆಯನ್ನು ವಿಸ್ತರಿಸಿದ ಹೊಂಬಾಳೆ ಫಿಲಮ್ಸ್ ಕೆಲವೇ ವರ್ಷಗಳಲ್ಲಿ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಪುನೀತ್ ರಾಜ್ಕುಮಾರ್ ನಟನೆಯ 'ನಿನ್ನಂದಲೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ವಿಜಯ್ ಕಿರಗಂದೂರು ಆ ನಂತರ ತಮ್ಮ ನಿರ್ಮಾಣ ಸಂಸ್ಥೆಯನ್ನು ಬೆಳೆಸಿದ ಅದ್ಭುತ.
ಈ ವರ್ಷ (2022) ಹೊಂಬಾಳೆ ಪಾಲಿಗೆ ಚಿನ್ನದ ವರ್ಷ. ಎರಡು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ಈ ವರ್ಷ ನೀಡಿದೆ. 'ಕೆಜಿಎಫ್ 2' ಹಾಗೂ 'ಕಾಂತಾರ' ಎರಡೂ ಸಿನಿಮಾಗಳು ಈ ವರ್ಷ ದಾಖಲೆಯ ಗಳಿಕೆ ಕಂಡಿದೆ. ಇದೀಗ ಹೊಂಬಾಳೆಯ ನಿರೀಕ್ಷೆ ಪ್ರಭಾಸ್ ನಟನೆಯ 'ಸಲಾರ್' ಮೇಲಿದ್ದು, ಆ ಸಿನಿಮಾದ ಭಾಗ ಎರಡು ಹಾಗೂ ಮೂರುಗಳನ್ನು ತಯಾರಿಸಲು ಈಗಲೇ ಯೋಜನೆಯನ್ನೂ ಹಾಕಿಕೊಂಡಿದೆ.

'ಸಲಾರ್' ಸಿನಿಮಾ ಸರಣಿ ಮಾಡಲು ಚಿಂತನೆ: ವಿಜಯ್
ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯ್ ವಿರಗಂದೂರು, ''ಸಿನಿಮಾ ಸರಣಿಗಳನ್ನು ಮಾಡುವ ಯೋಜನೆಯ ಬಗ್ಗೆ ಆಲೋಚನೆ ಮಾಡಿದ್ದೇವೆ. 'ಸಲಾರ್' ಸಿನಿಮಾದ ಬಗ್ಗೆಯೂ ಆ ಆಲೋಚನೆ ಇದೆ. ಆದರೆ ಒಮ್ಮೆ ಸಿನಿಮಾ ಮುಗಿದು ನಾವು ಸಿನಿಮಾ ನೋಡಿದ ಬಳಿಕವಷ್ಟೆ ಆ ಬಗ್ಗೆ ನಾವು ನಿರ್ಧಾರ ಮಾಡಲಿದ್ದೇವೆ. ಸಲಾರ್ ಸಿನಿಮಾದ ಭಾಗ 1, ಎರಡು ಸಹ ಮಾಡುವ ಯೋಜನೆಯೂ ಇದೆ'' ಎಂದಿದ್ದಾರೆ ವಿಜಯ್ ಕಿರಗಂದೂರು.

'ಸಲಾರ್' ಬಿಡುಗಡೆ ಯಾವಾಗ?
''ಸಲಾರ್' ಸಿನಿಮಾದ 85% ಭಾಗ ಚಿತ್ರೀಕರಣ ಮುಗಿದಿದೆ. ಜನವರಿ ತಿಂಗಳಲ್ಲಿ ಸಿನಿಮಾದ ಪೂರ್ಣ ಚಿತ್ರೀಕರಣ ಮುಗಿಯಲಿದೆ. ವಿಎಫ್ಎಕ್ಸ್, ಡಬ್ಬಿಂಗ್, ಕರೆಕ್ಷನ್, ಕಲರಿಂಗ್ ಇನ್ನಿತರೆಗಳಿಗೆ ಸುಮಾರು ಆರು ತಿಂಗಳ ಸಮಯ ಹಿಡಿಯುತ್ತದೆ. ಅದೆಲ್ಲ ಮುಗಿದು ಸೆಪ್ಟೆಂಬರ್ 28 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. 'ಸಲಾರ್' ಸಿನಿಮಾದ ರಶಸ್ ಅನ್ನು ನಾನು ನೋಡಿದ್ದೇನೆ. ಅದೊಂದು ಪಕ್ಕಾ ಆಕ್ಷನ್ ಸಿನಿಮಾ. ಪ್ರಭಾಸ್ ಹಾಗೂ ಪೃಥ್ವಿರಾಜ್ ಕಪೂರ್ ಅದ್ಭುತವಾಗಿ ನಟಿಸಿದ್ದಾರೆ'' ಎಂದಿದ್ದಾರೆ ವಿಜಯ್ ಕಿರಗಂದೂರು.

ಪಾಶ್ಚಿಮಾತ್ಯ ಸಿನಿಮಾಗಳೊಟ್ಟಿಗೆ ಸ್ಪರ್ಧೆ
'ಸಲಾರ್' ಹೊಂಬಾಳೆಯ ಮೊದಲ ತೆಲುಗು ಸಿನಿಮಾ. ಈ ಬಗ್ಗೆಯೂ ಮಾತನಾಡಿರುವ ವಿಜಯ್ ಕಿರಗಂದೂರು, ''ನಾವು ಕನ್ನಡ, ತೆಲುಗು, ತಮಿಳು ಸಿನಿಮಾ ಎಂದು ನೋಡುತ್ತಿಲ್ಲ. ನಾವು ಒಟ್ಟಾರೆಯಾಗಿ ಭಾರತೀಯ ಸಿನಿಮಾ ಎಂದಷ್ಟೆ ಪರಿಗಣಿಸುತ್ತಿದ್ದೇವೆ. ಒಟ್ಟಾರೆಯಾಗಿ ಭಾರತೀಯ ಚಿತ್ರರಂಗಕ್ಕೆ ಅತ್ಯುತ್ತಮ ಸಿನಿಮಾ ನೀಡುವುದಷ್ಟೆ ನಮ್ಮ ಉದ್ದೇಶ. ನಾವು ಪಾಶ್ಚಿಮಾತ್ಯದೊಟ್ಟಿಗೆ ಸ್ಪರ್ಧೆ ಮಾಡಬೇಕಿದೆ. ಪಾಶ್ಚಿಮಾತ್ಯ ಸಿನಿಮಾಗಳಿಂತಲೂ ತಾಂತ್ರಿಕವಾಗಿ ಉತ್ತಮ ಗುಣಮಟ್ಟದ ಸಿನಿಮಾ ನೀಡಬೇಕು ಎಂಬುದು ನಮ್ಮ ಉದ್ದೇಶ ಎಂದಿದ್ದಾರೆ ವಿಜಯ್.

ಪ್ರಶಾಂತ್ ನೀಲ್ ನಿರ್ದೇಶನ
ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಭಾರಿ ಮೊತ್ತದ ಬಂಡವಾಳ ಹೂಡಲಾಗಿದೆ. ಸಿನಿಮಾದಲ್ಲಿ ಬಹಳ ದೊಡ್ಡ ತಾರಾಗಣವೇ ಇದೆ. ನಾಯಕಿಯಾಗಿ ಶ್ರುತಿ ಹಾಸನ್ ಇದ್ದಾರೆ. ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಕನ್ನಡದ ಪ್ರಮೋದ್ ಇನ್ನೂ ಹಲವರು ನಟಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











