ಪವನ್ ಕಲ್ಯಾಣ್ ಬಳಿಕ ಅಲ್ಲು ಅರ್ಜುನ್ ಕುಟುಂಬದ ಬುಡಕ್ಕೆ ಕೈ ಹಾಕಿದ ರಾಮ್ ಗೋಪಾಲ್ ವರ್ಮಾ
ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಅವರನ್ನು ಹೋಲುವ ನಟನನ್ನು ಹಾಕಿಕೊಂಡು 'ಪವರ್ ಸ್ಟಾರ್' ಎಂಬ ಚಿತ್ರ ಮಾಡಿದ್ದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ತೆಲುಗು ಚಿತ್ರರಂಗದ ತಾರಾ ಕುಟುಂಬಗಳ ಬುಡಕ್ಕೆ ಕೈ ಹಾಕಲು ಹೊರಟಿರುವುದು ನಿಚ್ಚಳವಾಗಿದೆ. ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕು, ಸಿನಿಮಾ ಮತ್ತು ರಾಜಕೀಯ ಜೀವನದ ಕುರಿತು 37 ನಿಮಿಷಗಳ ಸಿನಿಮಾ ಮಾಡಿದ್ದರು.
ಈಗ ಹೊಸ ವೆಬ್ ಸಿನಿಮಾ ಮಾಡುವುದಾಗಿ ಹೇಳಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಅದಕ್ಕೆ 'ಅಲ್ಲು' ಎಂದು ಶೀರ್ಷಿಕೆ ಇಟ್ಟಿರುವುದಾಗಿ ಹೇಳಿದ್ದಾರೆ. ಈ ಚಿತ್ರವು ಎ ಅರವಿಂದ್ ಎಂಬ ಮುಖ್ಯ ಪಾತ್ರದ ಆಧಾರದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ವರ್ಮಾ ಈಗ ಅಲ್ಲು ಅರ್ಜುನ್ ಅವರ ಕುಟುಂಬದ ಕುರಿತು ಮತ್ತೊಂದು ವಿವಾದಾತ್ಮಕ ಸಿನಿಮಾ ಮಾಡಲು ಸಿದ್ಧರಾಗಿರುವುದು ಖಚಿತವಾಗಿದೆ. ಮುಂದೆ ಓದಿ...

ಅಲ್ಲು ಅರವಿಂದ್ ಕುರಿತು ಚಿತ್ರ
ವರ್ಮಾ ಹೇಳಿಕೊಂಡಿರುವಂತೆ ಎ ಅರವಿಂದ್ ಎನ್ನುವುದು ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಕುರಿತಾಗಿದೆ ಎನ್ನುವುದು ತಿಳಿಯುತ್ತದೆ. ಹಾಗೆಯೇ ಆರ್ಜಿವಿ ಇನ್ನೂ ಅನೇಕ ಪಾತ್ರಗಳು ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಈ ಹೆಸರುಗಳನ್ನು ಕೇಳಿದಾಗ ಅದು ಚಿತ್ರರಂಗದ ಯಾವ ವ್ಯಕ್ತಿಗಳದ್ದು ಎನ್ನುವುದು ಸುಲಭವಾಗಿ ಗೊತ್ತಾಗುತ್ತದೆ.

ಭಾಮೈದನ ಸಾಹಸಗಳು
'ಇದೊಂದು ಕಾಲ್ಪನಿಕ ಕಥೆ. ಬಹುದೊಡ್ಡ ಸ್ಟಾರ್ನ ಕುಟುಂಬಕ್ಕೆ ಭಾಮೈದನೊಬ್ಬ ಏನು ಮಾಡುತ್ತಾನೆ ಎನ್ನುವುದು ಇದರ ಕಥೆ. ಈ ಚಿತ್ರದ ಕಥೆಯು ಆ ಸ್ಟಾರ್ ತನ್ನ 'ಜನ ರಾಜ್ಯಂ' ಪಕ್ಷ ಘೋಷಣೆ ಮಾಡಿದ ನಂತರ ಶುರುವಾಗುತ್ತದೆ' ಎಂದು ವರ್ಮಾ ತಿಳಿಸಿದ್ದಾರೆ. ನಟ ಚಿರಂಜೀವಿ 'ಪ್ರಜಾ ರಾಜ್ಯಂ' ಪಕ್ಷ ಸ್ಥಾಪಿಸಿದ್ದರು. ಈ ಸಿನಿಮಾದಲ್ಲಿ ಅದರ ಕಥೆ ಇರುವಂತಿದೆ.

ನೇಯುವಿಕೆಯಲ್ಲಿ ನಿಪುಣ
ಸರಣಿ ಟ್ವೀಟ್ಗಳನ್ನು ಮಾಡಿರುವ ಅದರಲ್ಲಿ ಶೀರ್ಷಿಕೆ ಮತ್ತು ಕೆಲವು ಪಾತ್ರಗಳ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. 'ಅಲ್ಲು' ಎಂಬ ಶೀರ್ಷಿಕೆ ಇರಿಸಿರುವುದು ಏಕೆಂದರೆ ಚಿತ್ರದ ಕೇಂದ್ರ ಪಾತ್ರವು ಯೋಜನೆಯ ಮೇಲೊಂದು ಯೋಜನೆಯನ್ನು ನೇಯುವ, ಹೆಣೆಯುವ, ಸುತ್ತುವ, ತಿರುಗಿಸುವ ಕೆಲಸ ಮಾಡುತ್ತದೆ (ಅಲ್ಲು ಎಂದರೆ ತೆಲುಗಿನಲ್ಲಿ ನೇಯುವಿಕೆ). ಇದರಿಂದ ಅವರ ಹತ್ತಿರದವರು ಮತ್ತು ಸಂಬಂಧಿಕರು ಲಾಭ ಮಾಡುತ್ತಾರೆ.

ಚಾಣಾಕ್ಷ ನಾಯಕ
ಎ. ಅರವಿಂದ್ ಬಹುದೊಡ್ಡ ಸ್ಟಾರ್ ಹೀರೋನ ಬಾಮೈದ. ಆತನ ಮೇಲೇಜ್ ಕಡಿಮೆಯಾಗದಂತೆ ಈತ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾನೆ. ಎ. ಅರವಿಂದ್ ಬಹು ಚಾಣಾಕ್ಷ. ತನಗೆ ಅಥವಾ ತನ್ನ ಕುಟುಂಬಕ್ಕೆ ಲಾಭ ಆಗುವಂತೆ ಅಥವಾ ವಿರೋಧಿಗಳಿಗೆ ಕಷ್ಟವಾಗುವಂಥದ್ದೇನಾದರೂ ಒಂದನ್ನು ಯೋಚಿಸುತ್ತಲೇ ಇರುತ್ತಾನೆ. ಪ್ಲ್ಯಾನ್ಗಳ ಹಿಂದಿನ ಮಾಸ್ಟರ್ ಮೈಂಡ್ ಆತ ಎಂದಿದ್ದಾರೆ. ಬಹುದೊಡ್ಡ ಸ್ಟಾರ್ ಬಾಮೈದ ಎಂದರೆ, ನಟ ಚಿರಂಜೀವಿ ಬಾಮೈದ ಅಲ್ಲು ಅರವಿಂದ್.

ನಾನು ಸೇಡು ತೀರಿಸಿಕೊಳ್ಳುತ್ತಿಲ್ಲ
ತನ್ನ ಆಪ್ತರಿಗೆ ಮಾತ್ರವೇ ಒಳಿತು ಉಂಟುಮಾಡುವ ಪ್ಲ್ಯಾನ್ಗಳನ್ನು ಆತ ರೂಪಿಸುತ್ತಾನೆ. ಆತನ ತಂತ್ರಗಳನ್ನು ನೋಡಿ ಪ್ರತಿಯೊಬ್ಬರೂ 'ಆಹಾ' ಎಂದು ಹೊಗಳುತ್ತಾರೆ ('ಆಹಾ' ಅಲ್ಲು ಅರವಿಂದ್ ಇತ್ತೀಚೆಗೆ ಶುರುಮಾಡಿರುವ ಒಟಿಟಿ ಪ್ಲಾಟ್ಫಾರ್ಮ್). ತುಂಬಾ ಜನರು 'ಅಲ್ಲು' ಫಿಕ್ಷನಲ್ ಸಿನಿಮಾ ಅಲ್ಲ ಎಂದು ಭಾವಿಸುತ್ತಿದ್ದಾರೆ. ಆದರೆ ನನ್ನನ್ನು 'ಕೆಟ್ಟ ವ್ಯಕ್ತಿ' ಎಂದು ಕರೆದವರ ಕುಟುಂಬದ ಮೇಲೆ ನಾನು ಸೇಡು ತೀರಿಸಿಕೊಳ್ಳಲು ಹೊರಟಿಲ್ಲ. ಆ ಕುಟುಂಬದ ಬಗ್ಗೆ ನನಗೆ ಪ್ರೀತಿ ಇದೆ ಎಂದು ಆಣೆ ಮಾಡುತ್ತೇನೆ ಎಂದು ಆರ್ಜಿವಿ ಹೇಳಿದ್ದಾರೆ. (ಕೆಲವು ವರ್ಷಗಳ ಹಿಂದೆ ಅಲ್ಲು ಅರವಿಂದ್, ರಾಮ್ ಗೋಪಾಲ್ ವರ್ಮಾ ಅವರನ್ನು 'ಕೆಟ್ಟ ವ್ಯಕ್ತಿ' ಎಂದು ಟೀಕಿಸಿದ್ದರು).

ಆ ಕಥೆಗಳನ್ನು ಹೇಳುತ್ತಿಲ್ಲ
ಅಲ್ಲು ಚಿತ್ರದಲ್ಲಿ ನಾನು ಥಿಯೇಟರ್ ಮಾಫಿಯಾ, ಪಕ್ಷದ ಟಿಕೆಟ್ಗಳ ಮಾರಾಟ, ಹಿಂಬದಿಯಿಂದ ಕಚ್ಚುವ ರಾಜಕೀಯ ಮತ್ತು ಪ್ರೀತಿಪಾತ್ರ ಸಹೋದರರ ನಡುವೆ ಸಮಸ್ಯೆ ಸೃಷ್ಟಿಸುವ ಕಥೆಗಳನ್ನೇನೂ ಹೇಳುತ್ತಿಲ್ಲ ಎಂದೂ ಸಿನಿಮಾದ ಕುರಿತು ಮತ್ತಷ್ಟು ಸುಳಿವು ನೀಡಿದ್ದಾರೆ.
ಎ. ಅರವಿಂದ್, ಎ. ಚಿರಾಂಜೀವಿ, ಪ್ರವಣ್ ಕಲ್ಯಾಣ್, ಎ. ಆರ್ಜುನ್, ಎ. ಶೀರೇಶ್, ಕೆ.ಆರ್. ಚ್ರರಣ್, ಎನ್ ಬಾಯೆಬು ಮುಂತಾದವು ನನ್ನ ಚಿತ್ರದ ಪಾತ್ರಗಳಾಗಿವೆ ಎಂದು ಪಾತ್ರಗಳನ್ನು ಪರಿಚಯಿಸಿದ್ದಾರೆ. ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.


Click it and Unblock the Notifications











