ತೆಲುಗು ಚಿತ್ರರಂಗದ ವಿರುದ್ಧ ಹರಿಹಾಯ್ದ ರಾಮ್ ಗೋಪಾಲ್ ವರ್ಮಾ
ದಶಕದ ಹಿಂದೆ ತಮ್ಮ ಸಿನಿಮಾಗಳ ಮೂಲಕ ಸದ್ದಾಗುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ತಮ್ಮ ಟ್ವೀಟ್ಗಳು, ಹೇಳಿಕೆಗಳಿಂದಷ್ಟೆ ಸದ್ದು-ಸುದ್ದಿ ಮಾಡುತ್ತಿದ್ದಾರೆ. ಇದೀಗ ತಾವಿರುವ ತೆಲುಗು ಚಿತ್ರರಂಗವನ್ನೇ ಹೀಗಳೆದಿದ್ದಾರೆ ವರ್ಮಾ.
ಎರಡು ದಿನದ ಹಿಂದೆ ತೆಲುಗಿನ ಖ್ಯಾತ ನಟ, ನಿರ್ಮಾಪಕ ಕೃಷ್ಣಂರಾಜು ನಿಧನದ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿರುವ ರಾಮ್ ಗೋಪಾಲ್ ವರ್ಮಾ, ತೆಲುಗು ಚಿತ್ರರಂಗವನ್ನು ನಿಂದಿಸಿದ್ದಾರೆ.
''ಕೃಷ್ಣಂರಾಜು ಅಂಥಹಾ ದೊಡ್ಡ ಕಲಾವಿದ ನಿಧರಾದಾಗಲೂ ಅವರ ಗೌರವಾರ್ಥ ಒಂದು ದಿನವಾದರೂ ಚಿತ್ರೀಕರಣ ಬಂದ್ ಮಾಡಿ ಶೋಕ ಆಚರಿಸಲಾಗುತ್ತಿಲ್ಲ. ಇದು ನಾಚಿಕೆಗೇಡು. ಎಂಥಹಾ ಸ್ವಾರ್ಥತುಂಬಿದ ಚಿತ್ರರಂಗ ನಮ್ಮದು?'' ಎಂದು ವರ್ಮಾ ಪ್ರಶ್ನೆ ಮಾಡಿದ್ದಾರೆ.
''ಈ ವಿಚಾರವಾಗಿ ನಾನು ಸೂಪರ್ ಸ್ಟಾರ್ ಕೃಷ್ಣ, ಮುರಳಿ ಮೋಹನ್, ಚಿರಂಜೀವಿ, ಮೋಹನ ಬಾಬು, ಬಾಲಯ್ಯ, ಪ್ರಭಾಸ್, ಮಹೇಶ್, ಪವನ್ ಕಲ್ಯಾಣ್ ಅವರಲ್ಲಿ ಮನವಿ ಮಾಡುತ್ತಿದ್ದೇನೆ, ನಾಳೆ ನಿಮ್ಮಲ್ಲಿ ಯಾರಿಗೂ ಇದೇ ಸ್ಥಿತಿ ಬರದೇ ಇರದು. ಒಬ್ಬ ಮಹಾನ್ ಕಲಾವಿದನಿಗೆ ಸೂಕ್ತ ರೀತಿಯ ವಿದಾಯ ನೀಡದಿರುವುದು ನಮ್ಮ ಮೇಲೆಯೇ ಉಗುಳಿಕೊಂಡಂತೆ'' ಎಂದು ಟ್ವೀಟ್ ಮಾಡಿದ್ದಾರೆ ವರ್ಮಾ.

ಮನಸ್ಸಿಲ್ಲದಿದ್ದರೂ ಪರವಾಗಿಲ್ಲ. ನಮ್ಮ ಸಾವಿಗೆ ಸೂಕ್ತ ಗೌರವ ಧಕ್ಕಲಿ ಎಂಬ ಕಾರಣಕ್ಕಾದರೂ ಕೃಷ್ಣಂರಾಜು ಅಂಥಹ ಸಜ್ಜನರಿಗೆ ಬೆಲೆ ಕೊಡೋಣ. ಎರಡು ದಿನವಾದರೂ ಶೂಟಿಂಗ್ ನಿಲ್ಲಿಸಲಿ. ಹಣ ಹೆಚ್ಚು ಖರ್ಚಾಗುತ್ತಿದೆ ಎಂದು ತಿಂಗಳುಗಟ್ಟಲೆ ಶೂಟಿಂಗ್ ನಿಲ್ಲಿಸಿದ ಉದ್ಯಮ ನಮ್ಮದು. ನಮ್ಮ ಸಾವಿಗೆ ಸಾರ್ಥಕತೆ ಬೇಕಿದ್ದರೆ ದಿವಂಗತ ಕೃಷ್ಣಂರಾಜುಗಾರಿಯಂತಹ ಸಜ್ಜನರಿಗೆ ಬೆಲೆ ಕೊಡೋಣ. ಎರಡು ದಿನವಾದರೂ ಶೂಟಿಂಗ್ ನಿಲ್ಲಿಸೋಣ'' ಎಂದು ಚುಚ್ಚಿದ್ದಾರೆ ವರ್ಮಾ.
ತೆಲುಗಿನ ಖ್ಯಾತ ನಟ, ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು(83)ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಂರಾಜು ಚಿಕಿತ್ಸೆ ಫಲಕಾರಿಯಾಗದೇ ಬೆಳ್ಳಂಬೆಳಗ್ಗೆ 3.25ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ವಿಭಿನ್ನ ಶೈಲಿಯ ನಟನೆಯಿಂದ ಟಾಲಿವುಡ್ ರೆಬಲ್ ಸ್ಟಾರ್ ಎಂದೇ ಖ್ಯಾತರಾಗಿದ್ದರು. 1966ರಲ್ಲಿ 'ಚಿಲಕಾ ಗೋರಿಂಕಾ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಕೃಷ್ಣಂರಾಜು ತರಹೇವಾರಿ ಪಾತ್ರಗಳಿಂದ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ನಂತರ ಪೋಷಕ ಪಾತ್ರಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದರು.
ಕೃಷ್ಣಂರಾಜು ಅವರನ್ನು ಗೌರವದಿಂದಲೇ ತೆಲುಗು ಚಿತ್ರರಂಗ ಕಳಿಸಿಕೊಟ್ಟಿದೆ. ಆದರೆ ವರ್ಮಾ, ಚಿತ್ರೀಕರಣ ಬಂದ್ ಮಾಡದ ವಿಷಯ ಇರಿಸಿಕೊಂಡು ಟೀಕೆ ಮಾಡಿದ್ದಾರೆ.


Click it and Unblock the Notifications











