Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿ.ಕೆ.ರವಿಗೆ ಧನ್ಯವಾದ ಹೇಳಿದ ತೆಲುಗು ಸಿನಿಮಾ
ದುರಂತ ಅಂತ್ಯ ಕಂಡ ಕರ್ನಾಟಕದ ಐಎಎಸ್ ಅಧಿಕಾರಿ ಡಿ.ಕೆ.ರವಿಯನ್ನು ತೆಲುಗು ಸಿನಿಮಾ ತಂಡವೊಂದು ನೆನಪಿಸಿಕೊಂಡಿದ್ದು ಅವರಿಗೆ ಧನ್ಯವಾದ ಹೇಳಿದೆ.
ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿ ಸಾಯಿ ಧರಮ್ ತೇಜ್ ನಟಿಸುತ್ತಿರುವ ರಿಪಬ್ಲಿಕ್ ಚಿತ್ರತಂಡ ಡಿ.ಕೆ.ರವಿ ಅವರ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಡಿ.ಕೆ.ರವಿ ಕತೆಯನ್ನು ಹೇಳಿದೆ.
ಡಿ.ಕೆ.ರವಿ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿರುವ ಚಿತ್ರತಂಡ ''ಕೋಲಾರ ಡಿಸಿ ಆಗಿದ್ದ ಡಿ.ಕೆ.ರವಿ ಮರಳು ಮಾಫಿಯಾ ಮತ್ತು ಭೂ ಮಾಫಿಯಾ ವಿರುದ್ಧ ಸಮರ ಸಾರಿದ್ದರು. ದೋಚಿಕೊಳ್ಳುವುದೇ ಉದ್ಯೋಗ ಎಂದುಕೊಂಡಿದ್ದ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಡಿ.ಕೆ.ರವಿ ಸಮರ ಸಾರಿದ್ದರು. ಮೂಲಭೂತಸೌಕರ್ಯ ವಿತರಣೆಯಲ್ಲಿ ಆಗುತ್ತಿದ್ದ ವಂಚನೆಯ ವಿರುದ್ಧ ಹೋರಾಟ ಮಾಡಿದ್ದರು'' ಎಂದಿದೆ.
''ಕೆಲವು ಭ್ರಷ್ಟರು ಕೆಲವೇ ತಿಂಗಳಲ್ಲಿ ಡಿ.ಕೆ.ರವಿಯನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿಸಿದರು. ವರ್ಗಾವಣೆ ಮಾಡಿದರೂ ಡಿ.ಕೆ.ರವಿ ಒಳಗಿನ ಹೋರಾಟದ ಕೆಚ್ಚನ್ನು ಆರಿಸಲಾಗಲಿಲ್ಲ. ಆ ಇಲಾಖೆಯಲ್ಲೂ ಸಕ್ರಿಯವಾಗಿ ಕೆಲಸ ಮಾಡಿದ ಡಿ.ಕೆ.ರವಿ, ತೆರಿಗೆ ವಂಚನೆ ಮಾಡುತ್ತಿದ್ದ ವ್ಯಾಪಾರಿಗಳ ವಿರುದ್ಧ ಸಮರ ಸಾರಿದ ಡಿ.ಕೆ.ರವಿ ಹಲವರಿಗೆ ನೊಟೀಸ್ ನೀಡಿದ್ದರು. ಕೆಲವೇ ವಾರದಲ್ಲಿ ನೂರಾರು ಕೋಟಿ ತೆರಿಗೆ ಸಂಗ್ರಹ ಮಾಡಿದರು'' ಎಂದು ವಿಡಿಯೋದಲ್ಲಿ ಹೇಳಿದೆ ಚಿತ್ರತಂಡ.
''ಪ್ರತಿ ದಿನವೂ ರಾಜಕಾರಣಿಗಳಿಂದ, ರೌಡಿಗಳಿಂದ, ಮಾಫಿಯಾದವರಿಂದ ಬೆದರಿಕೆಗಳನ್ನು ಎದುರಿಸಿದರು. ಇಂಥಹಾ ವ್ಯಕ್ತಿಗೆ ಕೇವಲ 35 ವರ್ಷದವರಾಗಿದ್ದಾಗಲೇ ಸಾವು ಎರಗಿಬಂತು. ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣಕ್ಕೆ ಸಂಬಂಧಿಸಿದ 82 ವಿಷಲ್ ಬ್ಲೋವರ್ಗಳು ಸತ್ತಾಗ ಎಲ್ಲರ ಸಾವು ಆತ್ಮಹತ್ಯೆ, ನೈಸರ್ಗಿಕ ಸಾವು ಎಂದು ಘೋಷಿಸಿದ್ದ ಕೇಂದ್ರ ತನಿಖಾ ಸಂಸ್ಥೆಗಳು, ಡಿ.ಕೆ.ರವಿ ಸಾವನ್ನು ಸಹ ಆತ್ಮಹತ್ಯೆ ಎಂದುಬಿಟ್ಟವು'' ಎಂದು ಹೇಳಿದೆ ಚಿತ್ರತಂಡ.
''ಡಿ.ಕೆ.ರವಿ ಅಂಥಹಾ ಸೈನಿಕನ ಸಾವಿಗೆ ಕಾರಣವೇನು, ಕಾರಣರಾದವರು ಯಾರು ಎಂಬುದನ್ನು ಹುಡುಕಿ ಅವರಿಗೆ ಶಿಕ್ಷೆ ನೀಡದ ಸ್ಥಿತಿಯಲ್ಲಿ ನಮ್ಮ ಕಾನೂನು ವ್ಯವಸ್ಥೆ ಇದೆ. ಆದರೆ ಡಿ.ಕೆ.ರವಿ ಆ ಸಾವನ್ನು ದಾಟಿ ನಮ್ಮೊಂದಿಗೆ ಈಗಲೂ ಇರುವ ಧೈರ್ಯವಂತ ಸೈನಿಕ'' ಎಂದು ಅಕ್ಷರ ಶ್ರದ್ಧಾಂಜಲಿ ಅರ್ಪಿಸಿದೆ 'ರಿಪಬ್ಲಿಕ್' ಚಿತ್ರತಂಡ.
ಕುಣಿಗಲ್ ತಾಲ್ಲೂಕಿನವರಾಗಿದ್ದ ಡಿ.ಕೆ.ರವಿ ಐಎಎಸ್ ಮುಗಿಸಿ 2013 ರಿಂದ 2014ರ ನಡುವೆ ಕೋಲಾರದಲ್ಲಿ ಡಿಸಿ ಆಗಿ ಕಾರ್ಯನಿರ್ವಹಿಸಿದ್ದರು. ಡಿಸಿ ಕಾರ್ಯ ಜನಮೆಚ್ಚುಗೆ ಗಳಿಸಿತ್ತು. 2014 ರ ಅಕ್ಟೋಬರ್ನಲ್ಲಿ ಅವರನ್ನು ವಾಣಿಜ್ಯ ತೆರಿಗೆ ವಿಭಾಗಕ್ಕೆ ವರ್ಗಾವಣೆ ಮಾಡಲಾಯಿತು. 2015 ರ ಮಾರ್ಚ್ 16 ರಂದು ಡಿ.ಕೆ.ರವಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಕೋರಮಂಗಲದ ಮನೆಯಲ್ಲಿ ಪತ್ತೆಯಾಗಿದ್ದರು.
ಡಿ.ಕೆ.ರವಿ ಸಾವು ಕೋಲಾರದ ಜನರಲ್ಲಿ ತೀವ್ರ ಬೇಸರ, ಆಕ್ರೋಶ ಕೆರಳಿಸಿತ್ತು. ಡಿ.ಕೆ.ರವಿ ಸಾವಿನ ಬಗ್ಗೆ ಹಲವರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ರವಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲಾಯ್ತು. ತನಿಖೆ ನಡೆಸಿದ ರವಿ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿ ನೀಡಿತು.
ಡಿ.ಕೆ.ರವಿ ಜೀವನ ಆಧರಿಸಿ ಈಗಾಗಲೇ ಕನ್ನಡದಲ್ಲಿ 'ಛಂಬಲ್' ಹೆಸರಿನ ಸಿನಿಮಾ ಬಂದಿದೆ. ತೆಲುಗಿನ 'ರಿಪಬ್ಲಿಕ್' ಸಿನಿಮಾ ಐಎಎಸ್ ಅಧಿಕಾರಿಯ ಕುರಿತಾದ ಸಿನಿಮಾ ಆಗಿದ್ದು, ರಾಜಕಾರಣಿ ಹಾಗೂ ಐಎಎಸ್ ಅಧಿಕಾರಿ ನಡುವೆ ನಡೆವ ಯುದ್ಧದ ಕತೆಯಾಗಿದೆ.