ರಾಮ್ಚರಣ್ ಮನೆಯಲ್ಲಿ ಟೀಂ ಇಂಡಿಯಾ ಆಟಗಾರರು: ಡಿನ್ನರ್ ಪಾರ್ಟಿಗೆ ಯಾರೆಲ್ಲಾ ಹೋಗಿದ್ರು?
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಗುರ್ತಿಸಿಕೊಂಡಿದ್ದಾರೆ. ಎಲ್ಲೆಲ್ಲೂ ಈಗ ಚರಣ್ ಕ್ರೇಜ್ ಜೋರಾಗಿದೆ. ನಿನ್ನೆ(ಸೆಪ್ಟೆಂಬರ್ 25) ಹೈದರಾಬಾದ್ನ ಉಪ್ಪಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯ ನಡೀತು. ಪಂದ್ಯದಲ್ಲಿ ಭಾರತ ತಂಡ ರೋಚಕ ಗೆಲುವು ಸಾಧಿಸಿತ್ತು. ಪಂದ್ಯದ ನಂತರ ಟೀಂ ಇಂಡಿಯಾ ಆಟಗಾರರನ್ನು ಮನೆಗೆ ಆಹ್ವಾನಿಸಿ ನಟ ರಾಮ್ಚರಣ್ ಆತಿಥ್ಯ ನೀಡಿದ್ದಾರೆ.
ಬಹಳ ಅದ್ಧೂರಿಯಾಗಿ ಈ ಪಾರ್ಟಿಯನ್ನು ಆಯೋಜಿಸಿದ್ದರು ಎಂದು ಹೇಳಲಾಗುತ್ತಿದೆ. ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ರಾಮ್ ಚರಣ್ ಮನೆಗೆ ತೆರಳಿದ್ದರು. ಚರಣ್ ಅವರಿಗೆ ಅಲ್ಲಿ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಕ್ರಿಕೆಟಿಗರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಿರಂಜೀವಿ ಅವರ ಕುಟುಂಬ ಸದಸ್ಯರು ಮತ್ತು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಫೋಟೊಗಳ ಸಮೇತ ಈ ವಿಚಾರವನ್ನು ರಾಮ್ಚರಣ್ ಹಂಚಿಕೊಳ್ಳುವ ಸಾಧ್ಯತೆಯಿದೆ.
ರಾಮ್ ಚರಣ್ ಬಹಳ ಹಿಂದೆಯೇ 'ಜಂಜೀರ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಇನ್ನು ರಾಜಮೌಳಿ ನಿರ್ದೇಶನದ 'RRR' ಸಿನಿಮಾದಿಂದ ದೇಶ್ಯಾದ್ಯಂತ ಸಿನಿರಸಿಕರ ಮನ ಗೆದ್ದಿದ್ದಾರೆ. ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿತ್ತು. 'RRR' ಬ್ಲಾಕ್ ಬಸ್ಟರ್ ಹಿಟ್ ನಂತರ ತಮಿಳು ನಿರ್ದೇಶಕ ಶಂಕರ್ ಸಾರಥ್ಯದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಸಿನಿಮಾ ಕೂಡ ಬಾಲಿವುಡ್ನಲ್ಲಿ ರಿಲೀಸ್ ಆಗಲಿದೆ. ಇನ್ನು ಬಾಲಿವುಡ್ ಮಂದಿ ಕೂಡ ಚರಣ್ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ.

ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಭಾರತ 187 ರನ್ಗಳ ಗುರಿಯನ್ನು ತಲುಪಿತ್ತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು 2-1 ಅಂತರದಲ್ಲಿ ಭಾರತ ಗೆದ್ದುಕೊಂಡಿದೆ. ಮೊಹಾಲಿಯಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಸೋಲುಂಡಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸಿಕೊಂಡಿತ್ತು.


Click it and Unblock the Notifications











