ತಮಿಳು ನಟ ಸಿದ್ಧಾರ್ಥ್ ನನ್ನ ಮಗಳಿಗೆ ಕ್ಷಮೆ ಕೇಳಬೇಕು: ಸೈನಾ ನೆಹ್ವಾಲ್ ತಂದೆ ಆಗ್ರಹ
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಬಿಜೆಪಿ ಪಕ್ಷದ ನಾಯಕಿ ಸೈನಾ ನೆಹ್ವಾಲ್ ಟ್ವೀಟ್ಗೆ ಪ್ರತಿಕ್ರಿಯಿಸಲು ಹೋಗಿ ನಟ ಸಿದ್ದಾರ್ಥ್ ವಿವಾದಕ್ಕೆ ಸಿಲುಕಿದ್ದಾರೆ. ತಮಿಳು ನಟ ಸಿದ್ದಾರ್ಥ್ಗೆ ವಿವಾದಗಳೇನು ಹೊಸತಲ್ಲ. ಆದರೆ, ಈ ಬಾರಿ ಸಿದ್ಧಾರ್ಥ್ ವಿರುದ್ಧ ಇಡೀ ದೇಶದ ಜನತೆ ತಿರುಗಿಬಿದ್ದಿದೆ. ಸೈನಾ ನೆಹ್ವಾಲ್ಗೆ ನಟ ಸಿದ್ಧಾರ್ಥ್ ಕ್ಷಮೆ ಕೇಳಬೇಕು ಎಂಬ ಕೂಗು ವ್ಯಕ್ತವಾಗುತ್ತಿದೆ.
ಸೈನಾ ನೆಹ್ವಾಲ್ ಪಂಜಾನಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಣಾ ಲೋಪ ಆಗಿದ್ದಕ್ಕೆ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದರು. ಈ ಟ್ವೀಟ್ಗೆ ತಮಿಳು ನಟ ಸಿದ್ಧಾರ್ಥ್ ಪ್ರತಿಕ್ರಿಯಿಸಿವ ವೇಳೆ ಆಕ್ಷೇಪಾರ್ಹ ಪದಗಳನ್ನು ಬಳಸಿ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ವಿರುದ್ಧ ಇಡೀ ದೇಶ ವಿರೋಧ ವ್ಯಕ್ತಪಡಿಸುತ್ತಿದೆ. ಈ ವೇಳೆ ಮಗಳ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ ಸಿದ್ಧಾರ್ಥ್ ಬಗ್ಗೆ ಸೈನಾ ತಂದೆ ಹರ್ವಿರ್ ಸಿಂಗ್ ನೆಹ್ವಾಲ್ ಪ್ರತಿಕ್ರಿಯಿಸಿದ್ದಾರೆ.

ಸೈನಾ - ಸಿದ್ದಾರ್ಥ್ ವಿವಾದವೇನು?
ಪ್ರಧಾನಿ ನರೇಂದ್ರ ಮೋದಿಯವರಿಗೆ ಪಂಜಾಬ್ನಲ್ಲಿ ಭದ್ರತಾ ಲೋಪ ಆಗಿದ್ದಕ್ಕೆ ಸೈನಾ ನೆಹ್ವಾಲ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದರು. " ಒಂದು ದೇಶ ತನ್ನ ಪ್ರಧಾನಿಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡರೆ, ಆ ದೇಶವನ್ನು ಸುರಕ್ಷಿತ ದೇಶವೆಂದು ಕರೆಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಮೇಲೆ ನಡೆಸಿದ ಹೇಡಿತನದ ದಾಳಿಯನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ." ಎಂದು ಟ್ವೀಟ್ ಮೂಲಕ ಸೈನಾ ಖಂಡಿಸಿದ್ದರು. ಇದಕ್ಕೆ ನಟ ಸಿದ್ದಾರ್ಥ್ ಪ್ರತಿ ಟ್ವೀಟ್ ಮಾಡಿ "ಸೂಕ್ಷ್ಮ 'ಕಾಕ್' ವಿಶ್ವ ಚಾಂಪಿಯನ್, ನಾವು ಈಗಾಗಲೇ ರಕ್ಷಕರನ್ನು ಹೊಂದಿದ್ದೇವೆ. ದೇವರಿಗೆ ಧನ್ಯವಾದಗಳು. ಶೇಮ್ ಆನ್ ಯು" ಎಂದು ಬರೆದು ರಿಹಾನ್ನಾಗೆ ಹ್ಯಾಶ್ ಟ್ಯಾಗ್ ಮಾಡಿದ್ದರು. ಸಿದ್ದಾರ್ಥ್ ಟ್ವೀಟ್ನಲ್ಲಿ ಬಳಸಿರುವ 'ಕಾಕ್' ಎನ್ನುವ ಆಂಗ್ಲ ಪದವನ್ನು ಪುರುಷರ ಮರ್ಮಾಂಗಕ್ಕೆ ಬಳಸಲಾಗುತ್ತದೆ. ಇದೇ ಪದದಿಂದಾಗಿ ಸಿದ್ಧಾರ್ಥ್ ಟ್ವೀಟ್ ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ. ಮಗಳ ಬಗ್ಗೆ ಹೀಗೆ ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ ಸೈನಾ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಮಗಳಿಗೆ ನಟ ಸಿದ್ದಾರ್ಥ್ ಕ್ಷಮೆ ಕೇಳಬೇಕು
ಸೈನಾ ನೆಹ್ವಾಲ್ ತಂದೆ ಡಾ. ಹರ್ವಿರ್ ಸಿಂಗ್ ನೆಹ್ವಾಲ್ ಎಎನ್ಐಗೆ ಸಿದ್ಧಾರ್ಥ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಸೈನಾ ಜೊತೆ ಫೋನಿನಲ್ಲಿ ಮಾತನಾಡಿದ್ದೇನೆ. ಯಾರೋ ಆಕೆಯ ಬಗ್ಗೆ ಬರೆಯುವುದು ಅವಳಿಗೆ ಇಷ್ಟವಾಗಿಲ್ಲ. ನಾವು ಸಿದ್ಧಾರ್ಥ್ ಕಾಮೆಂಟ್ ಮಾಡಿದ್ದನ್ನು ವಿರೋಧಿಸುತ್ತೇವೆ. ಸಿದ್ಧಾರ್ಥ್ ನನ್ನ ಮಗಳ ಬಳಿ ಕ್ಷಮೆ ಕೇಳಬೇಕು. ಅದು ಅವರು ಉದ್ದೇಶ ಪೂರ್ವಕವಾಗಿಯೋ ಅಥವಾ ಉದ್ದೇಶ ಪೂರ್ವಕವಲ್ಲದೆ ಹೇಳಿಕೆ ನೀಡಿದ್ದರೂ ಕ್ಷಮೆ ಕೇಳಲೇಬೇಕು. ಒಬ್ಬ ಮಹಿಳೆಯನ್ನು ಇಂತಹ ಪದಗಳಿಂದ ಕರೆಯದೆ ಇರುವುದು ಒಳ್ಳೆಯದು." ಎಂದು ಹರ್ವಿರ್ ಸಿಂಗ್ ನೆಹ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ಧಾರ್ಥ್ ದೇಶಕ್ಕೆ ಏನು ಕೊಟ್ಟಿದ್ದಾರೆ?
"ನನ್ನ ಮಗಳು ಸೈನಾ ನೆಹ್ವಾಲ್ ಭಾರತಕ್ಕೆ ಸಾಕಷ್ಟು ಪದಕಗಳನ್ನು ಗೆದ್ದಿದ್ದಾಳೆ. ಈ ನಟ ನಮ್ಮ ದೇಶಕ್ಕೆ ಮಾಡಿರುವುದಾದರೂ ಏನು? ನನ್ನ ಮಗಳ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಟೀಕೆ ಮಾಡಿದಾಗ ನಮ್ಮ ಮನಸ್ಸಿಗೆ ತುಂಬಾನೇ ನೋವಾಗಿದೆ. ನಮ್ಮ ಮಗಳು ಭಾರತಕ್ಕಾಗಿ ಬ್ಯಾಡ್ಮಿಂಟನ್ ಆಟವಾಡಿ ಪದಕಗಳನ್ನು ಗೆದ್ದು ತಂದಿದ್ದಾಳೆ. ಸೈನಾ ನೆಹ್ವಾಲ್ ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾಳೆ." ಎಂದು ಸೈನಾ ತಂದೆ ಕಿಡಿಕಾರಿದ್ದಾರೆ.

ಸಿದ್ಧಾರ್ಥ್ ವಿರುದ್ಧ ಸೈನಾ ಪತಿ ಆಕ್ರೋಶ
ನಟ ಸಿದ್ಧಾರ್ಥ್ ಟ್ವೀಟ್ಗೆ ಸೈನಾ ನೆಹ್ವಾಲ್ ಪತಿ ಬ್ಯಾಡ್ಮಿಂಟನ್ ಆಟಗಾರ ಪಾರುಪಲ್ಲಿ ಕಶ್ಯಪ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. " ನೀವು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ನಮಗೆ ಬೇಸರ ತರಿಸಿದೆ. ಒಳ್ಳೆಯ ಪದಗಳನ್ನು ಬಳಿಸಿ. ಈ ರೀತಿ ಆರಾಮಾಗಿ ಹೇಳಬಹುದು ಎಂದು ನೀವು ಭಾವಿಸಿದ್ದೀರಿ ಎಂದು ಊಹಿಸಿದ್ದೇನೆ." ಎಂದು ಕಶ್ಯಪ್ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











