ಬೇರೆ ಭಾಷೆಯ ತೆಲುಗು ಡಬ್ಬಿಂಗ್ ಚಿತ್ರಗಳನ್ನು ತಡೆಯೋದು ಆಗದೇ ಇರೋ ಕೆಲಸ ಎಂದ ಅಲ್ಲು ಅರವಿಂದ್!

ಇತ್ತೀಚೆಗಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಹಾವಳಿ ಜೋರಾಗಿದೆ. ಆಯಾ ರಾಜ್ಯಗಳಲ್ಲಿ ಆಯಾ ಭಾಷೆಯ ಚಿತ್ರಗಳು ಪರಭಾಷಾ ಡಬ್ಬಿಂಗ್ ಚಿತ್ರದ ಮುಂದೆ ಸೋತು ಚಿತ್ರಮಂದಿರ ಕಳೆದುಕೊಂಡಿದ್ದಿದೆ. ಇದಕ್ಕೆ ತಾಜಾ ಉದಾಹರಣೆ ಕಾಂತಾರ. ಹೌದು, ಕಾಂತಾರ ಚಿತ್ರ ತೆಲುಗು ರಾಜ್ಯಗಳಲ್ಲಿ ಅಬ್ಬರಿಸಿದ ಕಾರಣ ಈ ಸಮಯದಲ್ಲಿ ಬಿಡುಗಡೆಗೊಂಡ ಹಲವು ತೆಲುಗು ಚಿತ್ರಗಳಿಗೆ ಚಿತ್ರಮಂದಿರಗಳೇ ಸಿಗಲಿಲ್ಲ.
ಇನ್ನು ಮುಂಬರುವ ಸಂಕ್ರಾಂತಿಯ ಸಮಯಕ್ಕೆ ತಮಿಳಿನಲ್ಲಿ ವಿಜಯ್ ಅಭಿನಯದ ವಾರಿಸು ಹಾಗೂ ತುನಿವು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಈ ಚಿತ್ರಗಳೂ ಸಹ ತೆಲುಗಿಗೆ ಡಬ್ ಆಗಿ ಬಿಡುಗಡೆಗೊಳ್ಳಲಿವೆ. ಇನ್ನು ವಾರಿಸು ಚಿತ್ರವನ್ನು ತೆಲುಗಿನ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡುತ್ತಿರುವ ಕಾರಣ ವಾರಸುಡು ಟೈಟಲ್ ಅಡಿಯಲ್ಲಿ ಬಿಡುಗಡೆಗೊಳ್ಳುವ ವಿಜಯ್ ಅಭಿನಯದ ಚಿತ್ರಕ್ಕೆ ತೆಲುಗು ರಾಜ್ಯಗಳಲ್ಲಿ ದಾಖಲೆಯ ಚಿತ್ರಮಂದಿರಗಳು ಸಿಗುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಮತ್ತೆ ತೆಲುಗು ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಆಗಲಿದೆ ಎಂದು ಎಚ್ಚೆತ್ತ ತೆಲುಗು ನಿರ್ಮಾಪಕ ಸಂಘ ರಾಜ್ಯದ ಪ್ರಮುಖ ಹಬ್ಬಗಳಾದ ಸಂಕ್ರಾಂತಿ ಹಾಗೂ ದೀಪಾವಳಿ ಸಮಯದಲ್ಲಿ ತೆಲುಗು ಚಿತ್ರಗಳಿಗೆ ಮೊದಲ ಆದ್ಯತೆ ಇರಬೇಕು ಹಾಗೂ ಹೆಚ್ಚು ಚಿತ್ರಮಂದಿರಗಳು ದೊರಕಬೇಕು ಎಂದು ತೀರ್ಮಾನಿಸಿದೆ.
ಇನ್ನು ನಿರ್ಮಾಪಕ ಸಂಘದ ಈ ತೀರ್ಮಾನ ಭಾರೀ ಚರ್ಚೆಗೆ ಕಾರಣವಾಗಿತ್ತು. ಇನ್ನುಮುಂದೆ ಪ್ರಮುಖ ಹಬ್ಬಗಳಂದು ಡಬ್ ಆಗುವ ಚಿತ್ರಗಳಿಗೆ ತೆಲುಗು ರಾಜ್ಯಗಳಲ್ಲಿ ಥಿಯೇಟರ್ ಸಿಗಲ್ವ ಎಂಬ ಪ್ರಶ್ನೆ ಎದ್ದಿತ್ತು. ಇದೀಗ ಈ ಕುರಿತಾಗಿ ತೆಲುಗಿನ ಖ್ಯಾತ ನಿರ್ಮಾಪಕ ಹಾಗೂ ವಿತರಕ ಅಲ್ಲು ಅರವಿಂದ್ ಮಾತನಾಡಿದ್ದು ಹಬ್ಬದ ಸಮಯಗಳಲ್ಲಿ ಬೇರೆ ಭಾಷೆಯಿಂದ ತೆಲುಗಿಗೆ ಡಬ್ ಆಗಿ ಬಿಡುಗಡೆಗೊಳ್ಳುವ ಚಿತ್ರಗಳನ್ನು ತಡೆಯುವುದು ಆಗುವ ಕೆಲಸವಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲದೇ ಬಾಹುಬಲಿ ಬಂದ ನಂತರ ಇಡೀ ಭಾರತ ಒಂದು ಚಿತ್ರರಂಗವಾಗಿದೆ, ಚಿತ್ರ ಚೆನ್ನಾಗಿದ್ದರೆ ಜನರು ಚಿತ್ರಮಂದಿರಕ್ಕೆ ನುಗ್ಗಿ ಚಿತ್ರ ವೀಕ್ಷಿಸುತ್ತಾರೆ ಹೊರತು ಅದು ಯಾವ ಭಾಷೆಯಿಂದ ಬಂತು ಎಂದು ಯೋಚಿಸುವುದಿಲ್ಲ ಎಂದು ಅಲ್ಲು ಅರವಿಂದ್ ಹೇಳಿಕೆ ನೀಡಿದ್ದಾರೆ. ಸದ್ಯ ಅಲ್ಲು ಅರವಿಂದ್ ನೀಡಿರುವ ಈ ಹೇಳಿಕೆ ತೆಲುಗು ನಿರ್ಮಾಪಕರ ಸಂಘಕ್ಕೆ ಕೋಪ ತರಿಸುವುದಂತೂ ಪಕ್ಕಾ. ಅಂದಹಾಗೆ ಇದೇ ಅಲ್ಲು ಅರವಿಂದ್ ಕನ್ನಡದ ಕಾಂತಾರ ಚಿತ್ರದ ತೆಲುಗು ಡಬ್ಬಿಂಗ್ನ ವಿತರಣಾ ಹಕ್ಕನ್ನು ಪಡೆದು ತೆಲುಗು ರಾಜ್ಯಗಳಲ್ಲಿ ವಿತರಣೆ ಮಾಡಿದ್ದರು.


Click it and Unblock the Notifications











