'ರಾಬರ್ಟ್' ಅನ್ನು ಅದ್ಧೂರಿಯಾಗಿ ಸ್ವಾಗತಿಸುತ್ತೇವೆಂದ ತೆಲುಗು ನಿರ್ಮಾಪಕರು
'ರಾಬರ್ಟ್' ಸಿನಿಮಾ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಪಡಿಸುತ್ತಿದೆ ಎಂದು ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಎರಡು ದಿನಗಳ ಹಿಂದಷ್ಟೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
Recommended Video
ಹೀಗೆ ದೂರು ನೀಡಿದ ಬೆನ್ನಲ್ಲೆ 'ರಾಬರ್ಟ್' ಗೆ ಇದ್ದ ಸಂಕಷ್ಟ ದೂರವಾಗಿದ್ದು. ಮಾರ್ಚ್ 11 ರಂದೇ ರಾಬರ್ಟ್ ಸಿನಿಮಾದ ತೆಲುಗು ಅವತರಣಿಕೆ ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಬಿಡುಗಡೆ ಆಗಲಿದೆ.
'ರಾಬರ್ಟ್' ಸಿನಿಮಾವನ್ನು ತಮ್ಮದೇ ಸಿನಿಮಾ ಎಂಬಂತೆ ಸ್ವಾಗತಿಸಲು ತೆಲುಗು ಚಿತ್ರರಂಗ ಸಜ್ಜಾಗಿದೆ. ಇದರ ಸೂಚಕವಾಗಿ ಕೆಲವು ತೆಲುಗು ನಿರ್ಮಾಪಕರು ನಿನ್ನೆ ಕಾರ್ಯಕ್ರಮವೊಂದನ್ನು ಆಯೋಜಿಸಿ 'ರಾಬರ್ಟ್' ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ಸನ್ಮಾನ ಮಾಡಿದ್ದಾರೆ.

ತೆಲುಗು ಚಿತ್ರರಂಗಕ್ಕೆ ಆತ್ಮೀಯ ಸ್ವಾಗತ
ನಿರ್ಮಾಪಕ, ವಿತರಕ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಚದಲವಾಡ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಇನ್ನೂ ಕೆಲವು ನಿರ್ಮಾಪಕರು ಒಟ್ಟುಗೂಡಿ 'ರಾಬರ್ಟ್' ಸಿನಿಮಾ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ತೆಲುಗು ಚಿತ್ರರಂಗಕ್ಕೆ ಆತ್ಮೀಯ ಸ್ವಾಗತ ಕೋರಿದರು.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೆ ಸನ್ಮಾನ
ಈ ಸಮಯದಲ್ಲಿ ಮಾತನಾಡಿದ ನಿರ್ಮಾಪಕ ಚದಲವಾಡ ಶ್ರೀನಿವಾಸ ರಾವ್, 'ತೆಲುಗು ಚಿತ್ರರಂಗದ ಪರವಾಗಿ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ಸ್ವಾಗತ. ಅವರ ಸಿನಿಮಾವನ್ನು ನಮ್ಮ ಸಿನಿಮಾದಂತೆ ನೋಡಿಕೊಳ್ಳುತ್ತೇವೆ. ಕನ್ನಡ ಪ್ರೇಕ್ಷಕರು ತೆಲುಗು ಸಿನಿಮಾಗಳನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತಾರೆ. ನಾವೂ ಕೂಡ ಹಾಗೆಯೇ ಅವರ ಸಿನಿಮಾವನ್ನು ಸ್ವಾಗತಿಸೋಣ' ಎಂದರು.

ಸುಳ್ಳು ಸುದ್ದಿಯನ್ನು ಯಾರೂ ನಂಬಬೇಡಿ: ಚದಲವಾಡ
'ರಾಬರ್ಟ್' ಸಿನಿಮಾ ಬಿಡುಗಡೆಗೆ ತಡೆ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಯಾರೂ ಸಹ ನಂಬಬೇಡಿ ಎಂದು ಸಹ ಚದಲವಾಡ ಶ್ರೀನಿವಾಸ ರಾವ್ ಮನವಿ ಮಾಡಿದರು. ಈ ನಡುವೆ ಮತ್ತೊಬ್ಬರು ಮಾತನಾಡಿ, 'ರಾಬರ್ಟ್' ಸಿನಿಮಾಕ್ಕೆ ತಡೆ ನೀಡಿರುವ ವಿಷಯ ಛೇಂಬರ್ನಲ್ಲೂ ಯಾರಿಗೂ ಗೊತ್ತಿಲ್ಲ. ಅದೊಂದು ಸುಳ್ಳು ಸುದ್ದಿಯಷ್ಟೆ. 'ರಾಬರ್ಟ್' ಸಿನಿಮಾ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ' ಎಂದರು.

ಮಾರ್ಚ್ 11 ರಂದು ಬಿಡುಗಡೆ
'ರಾಬರ್ಟ್' ಸಿನಿಮಾವು ಮಾರ್ಚ್ 11 ರಂದು ಬಿಡುಗಡೆ ಆಗಲಿದೆ. ಅದೇ ದಿನ ತೆಲುಗಿನ ಎರಡು ಸಿನಿಮಾ ಬಿಡುಗಡೆ ಇರುವ ಕಾರಣ ರಾಬರ್ಟ್ ಅನ್ನು ಬಿಡುಗಡೆ ಮಾಡಬಾರದು ಎನ್ನಲಾಗಿತ್ತು. ಇದರ ವಿರುದ್ಧ ದರ್ಶನ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆದರೆ ಈಗ ಮಾರ್ಚ್ 11 ರಂದೇ ರಾಬರ್ಟ್ ಸಿನಿಮಾ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











