ತೆಲುಗು ಸಂದರ್ಶನದಲ್ಲಿ ಯಶ್ ಬಗ್ಗೆ ಹೊಗಳಿದ ವಸಿಷ್ಠ ಸಿಂಹ
ಕನ್ನಡದ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ ತೆಲುಗಿನಲ್ಲಿ ಅಭಿನಯಿಸಿದ್ದ 'ನಾರಪ್ಪ' ಸಿನಿಮಾ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. 'ವಿಕ್ಟರಿ' ವೆಂಕಟೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ವಸಿಷ್ಠ ಪ್ರಮುಖ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದರು. ವೈಯಕ್ತಿಕವಾಗಿ ವಸಿಷ್ಠ ಪಾತ್ರ ಸಹ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
'ನಾರಪ್ಪ' ಮಾತ್ರವಲ್ಲ 'ಓದೆಲ ರೈಲ್ವೇ ಸ್ಟೇಷನ್' ಎನ್ನುವ ಮತ್ತೊಂದು ಚಿತ್ರದಲ್ಲೂ ವಸಿಷ್ಠ ನಟಿಸಿದ್ದಾರೆ. ಹೀಗೆ, ಕನ್ನಡದ ಜೊತೆ ಜೊತೆಗೆ ತೆಲುಗಿನಲ್ಲೂ ಮಿಂಚುತ್ತಿರುವ ವಸಿಷ್ಠ ತೆಲುಗು ಸಂದರ್ಶನದಲ್ಲಿ ಮಾತನಾಡುವ ವೇಳೆ ನಟ ಯಶ್ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಈ ವಿಡಿಯೋ ಸಂದರ್ಶನ ಈಗ ಯೂಟ್ಯೂಬ್ನಲ್ಲಿ ಸದ್ದು ಮಾಡ್ತಿದೆ. ಮುಂದೆ ಓದಿ...

ಕೆಜಿಎಫ್ 2 ನೂರು ರೂಪಾಯಿ
ಕೆಜಿಎಫ್ ಚಿತ್ರದಲ್ಲಿ ವಸಿಷ್ಠ ಸಹ ನಟಿಸಿದ್ದು, ಸಹಜವಾಗಿ ಚಾಪ್ಟರ್ 2 ಬಗ್ಗೆ ಕುತೂಹಲ ಹೆಚ್ಚಿದೆ. ಈ ಬಗ್ಗೆ ನಿರೂಪಕ ವಸಿಷ್ಠ ಅವರನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿಂಹ, ''ಕೆಜಿಎಫ್ ಚಾಪ್ಟರ್ 1 ಹತ್ತು ರೂಪಾಯಿ ಆದರೆ, ಚಾಪ್ಟರ್ 2 ನೂರು ರೂಪಾಯಿ ಅಥವಾ ಸಾವಿರ ರೂಪಾಯಿ ಇದ್ದಂತೆ. ಈಗ ಬೇರೆ ಏನೂ ಹೇಳಲು ಸಾಧ್ಯವಿಲ್ಲ. ಇಡೀ ಭಾರತ ಕಾಯುತ್ತಿದೆ. ದೊಡ್ಡ ಸರ್ಪ್ರೈಸ್ ಅದು. ಕಾದು ಸಿನಿಮಾ ನೋಡಿ'' ಎಂದು ಹೇಳಿದರು.

ಯಶ್ ಬಗ್ಗೆ ವಸಿಷ್ಠ ಏನಂದ್ರು?
''ನನಗೆ ಮೊದಲು ಬ್ರೇಕ್ ಸಿಕ್ಕ ಸಿನಿಮಾ ರಾಜಾಹುಲಿ. ಅದರಲ್ಲೂ ಯಶ್ ನಾಯಕ. ಅಲ್ಲಿಂದ ಯಶ್ ಅವರನ್ನು ನೋಡ್ತಿದ್ದೇನೆ. ಅವರಲ್ಲಿ ನಾನು ಯಾವ ವ್ಯತ್ಯಾಸ ನೋಡಿಲ್ಲ. ಪ್ರತಿಯೊಂದು ಸಿನಿಮಾಗೂ ಶ್ರಮ ಹಾಕ್ತಾರೆ. ಐದು ವರ್ಷದ ಹಿಂದೆ ಹೇಳಿದ ಮಾತು ಈಗ ನಿಜ ಆಗ್ತಿದೆ ಎನ್ನುವ ಮಟ್ಟಕ್ಕೆ ಕೆಲಸ ಮಾಡ್ತಾರೆ. ಅವರೊಬ್ಬ ಗಟ್ಟಿ ಮನುಷ್ಯ'' ಎಂದಿದ್ದಾರೆ.

ಚಿರಂಜೀವಿ ಪಕ್ಕ ನಿಂತರೆ ಸಾಕು
''ಶಾಲೆ ದಿನಗಳಲ್ಲಿ ಚಿರಂಜೀವಿ ಅವರ ಮುಠಾ ಮೇಸ್ತ್ರಿ ಹಾಡಿಗೆ ಡ್ಯಾನ್ಸ್ ಮಾಡಿದ್ವಿ. ಅವರ ಜೊತೆ ನಟಿಸುವುದು, ಅವರ ಪಕ್ಕದಲ್ಲಿ ನಿಂತರೆ ಸಾಕು. ಅಭಿಮಾನಿಯಂತೆ ಅವರನ್ನು ನೋಡಿರುವವರು ನಾವು, ಕನ್ನಡದಲ್ಲೂ ರವಿಚಂದ್ರನ್ ಜೊತೆ 'ಸಿಪಾಯಿ' ಸಿನಿಮಾದಲ್ಲಿ ನಟಿಸಿದ್ದರು. ಯಾವಾಗಲೇ ಅವಕಾಶ ಸಿಕ್ಕರೂ ಸಿದ್ದ'' ಎಂದರು.

ಆರ್ಯ ಇಷ್ಟ, ದೇವರಕೊಂಡ ಇಷ್ಟ
''ಈಗಿನ ಹೀರೋಗಳಲ್ಲಿ ನಟ ಆರ್ಯ ಅಂದ್ರೆ ಹೆಚ್ಚು ಇಷ್ಟ. ಅವರ ಸಿನಿಮಾಗಳನ್ನು ಎಷ್ಟು ಸಲ ನೋಡಿದ್ದೀನಿ ಅಂತ ನೆನಪು ಇಲ್ಲ. ವಿಜಯ್ ದೇವರಕೊಂಡ ಅವರ ವ್ಯಕ್ತಿತ್ವ ಇಷ್ಟ'' ಎಂದರು. 'ಭಾಷೆ ಬಗ್ಗೆ ಯಾವುದೇ ಗಡಿ ಇಲ್ಲ, ಒಂದೊಳ್ಳೆ ಪಾತ್ರ ಮಾಡಬೇಕು ಎನ್ನುವುದು ನನ್ನ ಮನಸ್ಸಿನಲ್ಲಿದೆ' ಎಂದು ಹೇಳಿದರು.


Click it and Unblock the Notifications











