ವಿಜಯ್ ನಟಿಸಿರುವ 'ವಾರಿಸು' ಚಿತ್ರವನ್ನು ರಿಜೆಕ್ಟ್ ಮಾಡಿದ್ರು ತೆಲುಗಿನ ಇಬ್ಬರು ಸ್ಟಾರ್ ನಟರು!
ಮುಂಬರುವ ಸಂಕ್ರಾಂತಿ ಪ್ರಯುಕ್ತ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಕೋಟಿ ಕೋಟಿ ಬಾಚಲು ಯೋಜನೆ ಹಾಕಿಕೊಂಡಿರುವ ಸೌತ್ನ ದೊಡ್ಡ ಚಿತ್ರಗಳ ಪೈಕಿ ತಮಿಳಿನ ವಾರಿಸು ಕೂಡ ಒಂದು. ತಮಿಳಿನ ಸ್ಟಾರ್ ನಟ ವಿಜಯ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಚಿತ್ರದ 'ರಂಜಿತಮೆ' ಹಾಡು ಈಗಾಗಲೇ ಬಿಡುಗಡೆಗೊಂಡು ಯುಟ್ಯೂಬ್ನಲ್ಲಿ ಧೂಳೆಬ್ಬಿಸಿದ್ದು, ಚಿತ್ರದ ಮೇಲೆ ದೊಡ್ಡ ಹೈಪ್ ಹುಟ್ಟುಕೊಂಡಿದೆ. ವಿಜಯ್ ಚಿತ್ರವೆಂದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟುವುದು ಸಹಜ. ಅದರಲ್ಲಿಯೂ ತಮಿಳಿನ ಮತ್ತೋರ್ವ ಸ್ಟಾರ್ ನಟ ಅಜಿತ್ ಅಭಿನಯದ ತುನಿವು ಎದುರಿಗೆ ವಾರಿಸು ಬಿಡುಗಡೆಯಾಗುತ್ತಿರುವುದು ಚಿತ್ರದ ಮೇಲಿನ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಈ ಚಿತ್ರದಲ್ಲಿ ತಮಿಳು ನಟ ನಾಯಕನಾಗಿ ಅಭಿನಯಿಸುತ್ತಿದ್ದರೆ ಚಿತ್ರಕ್ಕೆ ಬಂಡವಾಳ ಹಾಕಿರುವುದು ಹಾಗೂ ಆಕ್ಷನ್ ಕಟ್ ಹೇಳಿರುವುದು ತೆಲುಗಿನ ನಿರ್ಮಾಪಕ ಹಾಗೂ ನಿರ್ದೇಶಕರು. ಹೌದು, ಮಹೇಶ್ ಬಾಬುಗೆ ಮಹರ್ಷಿ ಹಾಗೂ ಜೂನಿಯರ್ ಎನ್ಟಿಆರ್ಗೆ ಬೃಂದಾವನಂ ಸೇರಿದಂತೆ ತೆಲುಗಿನಲ್ಲಿ ಬ್ಲಾಕ್ಬಸ್ಟರ್ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ವಂಶಿ ಪೈಡಿಪಲ್ಲಿ ಈ ಚಿತ್ರದ ನಿರ್ದೇಶಕನಾಗಿದ್ದರೆ, ತೆಲುಗಿನ ಹಲವಾರು ದೊಡ್ಡ ಚಿತ್ರಗಳನ್ನು ನಿರ್ಮಿಸಿ ಟಾಲಿವುಡ್ನ ಯಶಸ್ವಿ ನಿರ್ಮಾಪಕ ಎನಿಸಿಕೊಂಡಿರುವ ದಿಲ್ ರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಈ ಚಿತ್ರ ಕೆಲ ಕಾರಣಗಳಿಂದಾಗಿ ವಿವಾದಕ್ಕೂ ಸಹ ಸಿಲುಕಿಕೊಂಡಿದ್ದು, ಚಿತ್ರದ ವಿವಾದದ ಕುರಿತಯ ಚರ್ಚಿಸುವಾಗ ಈ ಚಿತ್ರವನ್ನು ಮೊದಲು ತೆಲುಗು ನಟರು ಕೈಬಿಟ್ಟಿದ್ದರು ಎಂಬ ವಿಷಯವನ್ನು ಬಾಯಿಬಿಟ್ಟಿದ್ದಾರೆ.

ಮಹೇಶ್ ಬಾಬುಗೆ ಮೊದಲು ಕತೆ ಹೇಳಲಾಗಿತ್ತು
ಸಂದರ್ಶನವೊಂದರಲ್ಲಿ ಮಾತನಾಡಿದ ದಿಲ್ ರಾಜುಗೆ ತಮಿಳು ನಟನೊಂದಿಗೆ ಚಿತ್ರ ಮಾಡುತ್ತಿದ್ದೀರಿ ತೆಲುಗಿನಲ್ಲಿ ಈ ಕತೆಗೆ ಯಾವ ನಟರೂ ಇರಲಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ದಿಲ್ ರಾಜು ಮೊದಲಿಗೆ ನಿರ್ದೇಶಕ ವಂಶಿ ಕತೆ ಹೇಳಿದಾಗ ಈ ಚಿತ್ರವನ್ನು ಮಹೇಶ್ ಬಾಬು ಜತೆ ಮಾಡೋಣ ಎಂದುಕೊಂಡಿದ್ವಿ, ಅವರು ಬೇರೆ ಚಿತ್ರದಲ್ಲಿ ನಿರತರಾಗಿದ್ದ ಕಾರಣ ವಿಳಂಬವಾಯಿತು, ಇನ್ನು ರಾಮ್ ಚರಣ್ ಅವರಿಗೂ ಸಹ ಕತೆ ಹೇಳಿದ್ದೆವು, ಅವರೂ ಸಹ ಇನ್ನೊಂದು ಚಿತ್ರದಲ್ಲಿ ನಿರತರಾಗಿದ್ದರು, ಹೀಗಾಗಿ ಕತೆಯನ್ನು ತಮಿಳಿನ ವಿಜಯ್ ಅವರಿಗೆ ಹೇಳಲಾಯಿತು ಎಂದು ಹೇಳಿದರು. ಅಷ್ಟೇ ಅಲ್ಲದೇ ತೆಲುಗಿನ ಇತರೆ ಸ್ಟಾರ್ ನಟರಾದ ಅಲ್ಲು ಅರ್ಜುನ್ ಹಾಗೂ ಪ್ರಭಾಸ್ ಬ್ಯುಸಿ ಇದ್ದ ಕಾರಣ ತಮಿಳು ನಟನನ್ನು ಆರಿಸಿದೆವು ಎಂದೂ ಸಹ ತಿಳಿಸಿದರು.

ವಿವಾದ ಸೃಷ್ಠಿಸಿದ ದಿಲ್ ರಾಜ್ ಹೇಳಿಕೆ
ಇನ್ನು ವಾರಿಸು ಬಿಡುಗಡೆ ಕುರಿತು ಮಾತನಾಡಿದ್ದ ದಿಲ್ ರಾಜು ವಾರಿಸು ಜತೆ ಅಜಿತ್ ನಟನೆಯ ತುನಿವು ಸಹ ಬಿಡುಗಡೆಯಾಗುತ್ತಿದೆ, ಅಜಿತ್ಗಿಂತ ವಿಜಯ್ ದೊಡ್ಡ ನಟ, ಹೀಗಾಗಿ ಅಜಿತ್ ಚಿತ್ರಕ್ಕಿಂತ ಹೆಚ್ಚು ಚಿತ್ರಮಂದಿರಗಳನ್ನು ವಿಜಯ್ ಚಿತ್ರಕ್ಕೆ ಪಡೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ. ದಿಲ್ ರಾಜು ಈ ಹೇಳಿಕೆ ಕಂಡ ಅಜಿತ್ ಅಭಿಮಾನಿಗಳು ದಿಲ್ ರಾಜು ವಿರುದ್ಧ ಕಿಡಿಕಾರಿದ್ದಾರೆ. ಮೊದಲೇ ತಮಿಳಿನಲ್ಲಿ ಇದ್ದ ವಿಜಯ್ ಹಾಗೂ ಅಜಿತ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಎಂಬ ಬೆಂಕಿಗೆ ದಿಲ್ ರಾಜು ಹೇಳಿಕೆ ಪೆಟ್ರೋಲ್ ಸುರಿದಂತಾಗಿದೆ.

ತೆಲುಗಿನಲ್ಲೂ ವಿವಾದ
ಇನ್ನು ತಮಿಳು ನಾಡಿನಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಸಹ ದಿಲ್ ರಾಜು ವಾರಿಸು ವಿಚಾರವಾಗಿ ದೊಡ್ಡ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಸಂಕ್ರಾಂತಿಯಂದು ಬಿಡುಗಡೆಯಾಗಲಿರುವ ಡಬಿಂಗ್ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ನೀಡಬಾರದು ಎಂಬ ನಿರ್ಮಾಪಕರ ಸಂಘದ ನಿರ್ಣಯವನ್ನು ವಿರೋಧಿಸಿದ್ದ ದಿಲ್ ರಾಜು ಯಾವ ಭಾಷೆಯ ಚಿತ್ರಗಳನ್ನು ಯಾರಿಂದಲೂ ಸಹ ತಡೆಯಲಾಗುವುದಿಲ್ಲ, ವಾರಿಸು ತೆಲುಗು ಡಬ್ ವಾರಿಸುಡು ದೊಡ್ಡ ಮಟ್ಟದಲ್ಲಿಯೇ ಬಿಡುಗಡೆಯಾಗುತ್ತೆ ಎಂದಿದ್ದರು. ಇದು ಇಡೀ ತೆಲುಗು ಚಿತ್ರರಂಗವನ್ನು ಕೆರಳಿಸಿತ್ತು.


Click it and Unblock the Notifications











