"ನನ್ನ ಮೇಲೆ ವಿಷ ಪ್ರಯೋಗ": ಶಾಕಿಂಗ್ ಸಂಗತಿ ಬಿಚ್ಚಿಟ್ಟ ಚಿರಂಜೀವಿ
ಅಭಿಮಾನ ಎನ್ನುವುದು ಕೆಲವೊಮ್ಮೆ ಏನೇನೋ ಮಾಡಿಸಿಬಿಡುತ್ತೆ. ನೆಚ್ಚಿನ ನಟ-ನಟಿಯರಿಗಾಗಿ ಜೀವ ಕೊಡಲು ಕೆಲ ಅಭಿಮಾನಿಗಳು ಸಿದ್ಧ ಇರ್ತಾರೆ. ಅಭಿಮಾನದ ಅಲೆಯಲ್ಲಿ ಪ್ರಾಣ ಕಳೆದುಕೊಂಡವರು ಇದ್ದಾರೆ. ದಶಕಗಳ ಹಿಂದೆ ನನ್ನ ಮೇಲೆ ಅಭಿಮಾನಿ ಒಬ್ಬ ವಿಷ ಪ್ರಯೋಗ ಮಾಡಿದ್ದ ಎನ್ನುವ ಸಂಗತಿಯನ್ನು ಇದೀಗ ಸ್ವತ: ನಟ ಚಿರಂಜೀವಿ ಬಿಚ್ಚಿಟ್ಟಿದ್ದಾರೆ.
ತಮ್ಮ ವಿಭಿನ್ನ ನಟನೆ ಹಾಗೂ ಡ್ಯಾನ್ಸ್ನಿಂದ ದಶಕಗಳ ಹಿಂದೆಯೇ ಮೆಗಾಸ್ಟಾರ್ ಪಟ್ಟಕ್ಕೆ ಏರಿದವರು ಚಿರಂಜೀವಿ. 90 ದಶಕದಲ್ಲೇ ಬಿಗ್ಬಿ ಅಮಿತಾಬ್ ಬಚ್ಚನ್ನ ಮೀರಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಚಿರಂಜೀವಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ.
ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಚಿರು ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಬಿಟ್ಟು ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ತಮ್ಮ ನೆಚ್ಚಿನ ನಟ ನೂರ್ಕಾಲ ಚೆನ್ನಾಗಿ ಇರಬೇಕು ಎಂದು ದೇವರಿಗೆ ಹರಕೆ ಹೊರುವ ಅಭಿಮಾನಿಗಳು ಇದ್ದಾರೆ. ಚಿರುಗಾಗಿ ಏನು ಬೇಕಾದರೂ ಮಾಡುತ್ತೇವೆ ಎನ್ನುಂವಂತಹ ವೀರಾಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಅಂಥಾದ್ರಲ್ಲಿ ಅಭಿಮಾನಿ ಒಬ್ಬ ಚಿರು ಮೇಲೆ ವಿಷ ಪ್ರಯೋಗ ಮಾಡಿದ್ದ ಎನ್ನುವ ಸಂಗತಿ ಅಚ್ಚರಿ ಮೂಡಿಸುತ್ತದೆ.

ಶೂಟಿಂಗ್ ಸೆಟ್ನಲ್ಲಿ ಆಗಿದ್ದೇನು?
1988ರಲ್ಲಿ ಚಿರಂಜೀವಿ ನಟನೆಯ 'ಮರಣ ಮೃದಂಗಂ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಶೂಟಿಂಗ್ ವೇಳೆ ಅಭಿಮಾನಿ ಮಾಡಿದ ಕೆಲಸ ನನ್ನ ಪ್ರಾಣಕ್ಕೆ ಸಂಚಕಾರ ತಂದಿತ್ತು. ಒಬ್ಬ ಅಭಿಮಾನಿ ಬಲವಂತವಾಗಿ ಕೇಕ್ನ ಬಾಯಿಗೆ ಇಟ್ಟಿದ್ದ. ಆದರೆ ಅದು ಕಹಿ ಅನ್ನಿಸಿದ್ದಕ್ಕೆ ತಿನ್ನದೇ ಉಗಿದು ಬಿಸಾಕಿದ್ದೆ. ನಂತರ ಸೆಟ್ನಲ್ಲಿದ್ದವರಿಗೆ ವಿಷಯ ಹೇಳಿದ ಮೇಲೆ ಅವನನ್ನು ಹಿಡಿದು ಥಳಿಸಿದರು. ನಂತರ ವಿಷಯ ಏನು ಎನ್ನುವುದು ಗೊತ್ತಾಯಿತು. ಅದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದರು ಎಂದು ಚಿರು ಹೇಳಿದ್ದಾರೆ.

ಕೇಕ್ನಲ್ಲಿ ಪುಡಿ ಬೆರೆಸಿದ್ದ
ಸಂದರ್ಶನದಲ್ಲಿ ಮಾತನಾಡಿರುವ ಚಿರಂಜೀವಿ, "ನನ್ನ ಅಭಿಮಾನಿಯೇ ನನ್ನ ಮೇಲೆ ವಿಷ ಪ್ರಯೋಗ ಮಾಡಿದ್ದ ಪ್ರಸಂಗ ನಡೆದಿತ್ತು. ಆತ ಒಬ್ಬ ಹುಚ್ಚು ಅಭಿಮಾನಿ. 'ಮರಣ ಮೃದಂಗಂ' ಶೂಟಿಂಗ್ ನಡೀತಿತ್ತು. ಆಗ ಅಭಿಮಾನಿಗಳು ನೇರವಾಗಿ ನಾವು ಇದ್ದ ಕಡೆ ಬಂದು ಬಿಡುತ್ತಿದ್ದರು. ಅದೇ ರೀತಿ ಅಂದು ಬಂದಿದ್ದ ಅಭಿಮಾನಿಗಳು ಕೇಕ್ ಕತ್ತರಿಸಿದರು. ಆ ಸಮಯದಲ್ಲಿ ಆತ ತನ್ನ ಕೈಯ್ಯಾರೆ ಕೇಕ್ ತಿನ್ನಿಸಿದ್ದ. ನನಗೆ ಸಾಮಾನ್ಯವಾಗಿ ಸ್ಪೂನ್ನಿಂದ ತಿಂದು ಅಭ್ಯಾಸ. ಆತ ಕೇಕ್ ತಿನ್ನಿಸುತ್ತಿದ್ದಂತೆ ನನಗೆ ಅದು ಕಹಿ ಅನ್ನಿಸಿ ಬಿಸಾಕಿದ್ದೆ. ಕೇಕ್ ಮಧ್ಯೆ ಏನೋ ಪುಡಿ ತರ ಇತ್ತು."

"ನನ್ನ ಅಭಿಮಾನಿಯ ಹುಚ್ಚಾಟ"
"ಕೂಡಲೇ ಸೆಟ್ನಲ್ಲಿ ಇದ್ದವರು ಅವನನ್ನು ಹಿಡಿದುಕೊಂಡರು. ಆ ಕೇಕ್ ಸ್ಯಾಂಪಲ್ನ ಟೆಸ್ಟಿಂಗ್ಗೆ ಕಳುಹಿಸಿದರು. ಆ ನಂತರ ಆತನನ್ನು ಹಿಡಿದು ಥಳಿಸಿದ ಮೇಲೆ ತನ್ನ ತಪ್ಪು ಒಪ್ಪಿಕೊಂಡಿದ್ದ. ನನ್ನ ಜೊತೆ ಚಿರಂಜೀವಿ ಸರಿಯಾಗಿ ಮಾತನಾಡುತ್ತಿಲ್ಲ, ನನ್ನ ಬಿಟ್ಟು ನಮ್ಮ ಊರಿನ ಮತ್ತೊಬ್ಬನ ಜೊತೆ ಹೆಚ್ಚು ಮಾತನಾಡುತ್ತಿದ್ದಾರೆ. ಅವರನ್ನು ಹೇಗಾದರೂ ಮಾಡಿ ನನ್ನತ್ತ ಸೆಳೆದುಕೊಳ್ಳಬೇಕು ಎಂದು ಹೀಗೆ ಮಾಡಿದ್ದೆ ಎಂದ. ಕೇರಳದಿಂದ ಯಾವುದೋ ವಶೀಕರಣ ಪುಡಿ ತಂದಿದ್ದಾಗಿ ಹೇಳಿದ್ದ. ನಂತರ ನನಗೆ ಅದು ಸಿಲ್ಲಿ ಅನ್ನಿಸಿ ಆತನನ್ನು ಕ್ಷಮಿಸಿ ಬಿಟ್ಟು ಕಳುಹಿಸಿದ್ದೆ" ಎಂದು ಚಿರಂಜೀವಿ ವಿವರಿಸಿದ್ದಾರೆ.

ವೀರಯ್ಯ ಆಗಿ ಚಿರು ದರ್ಬಾರ್
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ ಬಿಡುಗಡೆಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಬಾಬಿ ನಿರ್ದೇಶನದ ಈ ಚಿತ್ರದಲ್ಲಿ ಮಾಸ್ ಮಹಾರಾಜ ರವಿತೇಜಾ ಕೂಡ ಮುಖ್ಯವಾದ ಪಾತ್ರ ಮಾಡಿದ್ದಾರೆ. 'ಮುಠ್ಠಾಮೇಸ್ತ್ರಿ' ಚಿತ್ರದಲ್ಲಿ ಲುಂಗಿ ಉಟ್ಟು ಚಿರಂಜೀವಿ ಅಭಿಮಾನಿಗಳನ್ನು ರಂಜಿಸಿದ್ದರು. ಥೇಟ್ ಅದೇ ಲುಕ್ನಲ್ಲಿ ಈ ಬಾರಿ 'ವಾಲ್ತೇರು ವೀರಯ್ಯ' ಆಗಿ ಚಿರು ಬರ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಕುತೂಹಲ ಮೂಡಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ತೆರೆಗೆ ಬರ್ತಿದೆ.


Click it and Unblock the Notifications











