ಸೋಲಲ್ಲೂ ಗೆಲುವನ್ನು ಕಂಡ ಬೆಂಗಳೂರಿನ ಶಾಜಿಯಾ

ಗೆದ್ದ ಶೀಮ್ಲಾದ 29 ವರ್ಷದ ಸಿಂಗಲ್ ಮದರ್ ಶಿಪ್ರಾ ಖನ್ನಾಗೆ ಅಮೂಲ್ ಬಟರ್ ಕಡೆಯಿಂದ 1 ಕೋಟಿ ರು., 3 ದಿನ 4 ರಾತ್ರಿ ಲಂಡನ್ ಪ್ರವಾಸ, ನ್ಯೂಯಾರ್ಕ್ ಅಡುಗೆ ಸ್ಪರ್ಧೆಯೊಂದಕ್ಕೆ ಆಹ್ವಾನ ಇತ್ಯಾದಿ ಇತ್ಯಾದಿ. ದಾಂಪತ್ಯದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿ ಬಂದಿದ್ದ ಶಿಪ್ರಾ ಖನ್ನಾ ನಿಜಕ್ಕೂ ಆ ಪ್ರಶಸ್ತಿ, ಜನಪ್ರಿಯತೆಗೆ ನಿಜಕ್ಕೂ ಅರ್ಹಳಾಗಿದ್ದರು. ಭಾರತದ ದಿಟ್ಟ ಮಹಿಳೆಯರ ಪ್ರತಿನಿಧಿಯಾಕೆ.
ಅದೇ ಸೋಲಲ್ಲೂ ಗೆಲುವನ್ನು ಕಂಡಾಕೆ ಮಾತ್ರ ಬೆಂಗಳೂರಿನ ಗೃಹಿಣಿ ಶಾಜಿಯಾ. ಆಕೆಗೆ ದಕ್ಕಿದ್ದು 10 ಲಕ್ಷ ರು. ಬಹುಮಾನ. ಎಂಥದೇ ವ್ಯಕ್ತಿಗೆ ಇಷ್ಟು ಮೊತ್ತದ ಹಣ ದೊರೆತರೆ ಕಾರನ್ನೊ, ಸೈಟನ್ನೊ ಕೊಳ್ಳುವ ಅಥವಾ ರಿಯಲ್ ಎಸ್ಟೇಟಲ್ಲಿ ಹಣ ಹೂಡುವ ಕನಸು ಕಾಣಲು ಪ್ರಾರಂಭಿಸುತ್ತಾರೆ. ಆದರೆ ಶಾಜಿಯಾ ಮಾತ್ರ ಅಷ್ಟೊಂದು ಆರ್ಥಿಕವಾಗಿ ಬಲವಾಗಿಲ್ಲದಿದ್ದ ಮತ್ತೊಬ್ಬ ಸ್ಪರ್ಧಾಳು ಮುಂಬೈನ ರಾಜೇಂದ್ರ ಮತ್ತು ಜೀವನದಲ್ಲಿ ಸಾಕಷ್ಟು ಹೊಡೆತ ತಿಂದಿರುವ ದೆಹಲಿಯ ವಿಜಯಲಕ್ಷ್ಮಿ ಅವರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದರು.
ಶಾಜಿಯಾ ಮಾನವೀಯತೆ ಮೆರೆದ ಆ ಕ್ಷಣ ರಾಜೇಂದ್ರ, ವಿಜಯಲಕ್ಷ್ಮಿ ಮಾತ್ರವಲ್ಲ ಜಡ್ಜಸ್ ಗಳಾದ ವಿಕಾಸ್ ಖನ್ನಾ, ಕುನಾಲ್ ಕಪೂರ್, ಅಜಯ್ ಚೋಪ್ರಾ ಸೇರಿದಂತೆ ನೆರೆದಿದ್ದ ನೂರಾರು ಜನರ ಕಣ್ಣಲ್ಲಿ ಪನ್ನೀರು ಮಿಡಿಯುವಂತೆ ಮಾಡಿತು. ಶಿಪ್ರಾ ಸಂಕಷ್ಟಗಳನ್ನು ಎದುರಿಸಿ ಗೆದ್ದ ಮಹಿಳೆಯ ಪ್ರತೀಕವಾದರೆ, ಶಾಜಿಯಾ ಭಾರತದ ಸಮಸ್ತ ನಾರಿಯರ ಪ್ರತೀಕವಾಗಿದ್ದಾರೆ ಎಂದು ತೀರ್ಪುಗಾರರು ಪ್ರಶಂಶಿಸಿದರು.
ಶಾಜಿಯಾ ಹೇಳಿದ ಮಾತು : "ಕನಸುಗಳನ್ನು ಎಲ್ಲರೂ ಕಾಣುತ್ತಾರೆ. ಆದರೆ, ರಾತ್ರಿ ಕಂಡ ಕನಸುಗಳನ್ನು ಹಗಲು ಹೊತ್ತಿನಲ್ಲಿ ಬೆನ್ನತ್ತಿದವನು ಮಾತ್ರ ಬದುಕಿನಲ್ಲಿ ಗೆಲ್ಲಲು ಸಾಧ್ಯ. ನಾನು ಅಂತಹ ಕನಸುಗಳನ್ನು ಬೆನ್ನತ್ತಿದ್ದೇನೆ. ಅಂತಹ ಕನಸು ಕಂಡಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು." ಸೋಲಿನಲ್ಲೂ ಗೆಲುವನ್ನು ಕಂಡ ಬೆಂಗಳೂರಿನ ಹೆಮ್ಮೆಯ ಸಲ್ಮಾ ಶಾಜಿಯಾ ಫಾತಿಮಾ ನುಡಿದ ಈ ಮಾತುಗಳು ನಿಜಕ್ಕೂ ಪ್ರೇರಣಾದಾಯಕ.


Click it and Unblock the Notifications











