ಮಂಗಳೂರು ವಿಮಾನ ದುರಂತದ ಭೀಕರ ಅನುಭವಗಳು
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ "ಬದುಕು ಜಟಕಾಬಂಡಿ" ಬೇರೆ ವಾಹಿನಿಗಳ ಕಾರ್ಯಕ್ರಮಗಳಿಗಿಂತ ಅರ್ಥಪೂರ್ಣ ಎನಿಸಿಕೊಳ್ಳುವುದು ಅದು ತೆಗೆದುಕೊಳ್ಳುವ ಸಾಮಾಜಿಕ ಜವಾಬ್ದಾರಿ ಆಯಾಮದಿಂದಾಗಿ. ತನ್ನ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳೊಂದಿಗೆ ಜೀ ಕನ್ನಡ ಬದುಕು ಜಟಕಾಬಂಡಿ ಅಂತಹ ಕಾರ್ಯಕ್ರಮದ ಮೂಲಕ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಮಾಜ ಸೇವೆ ಮಾಡುತ್ತಲೇ ಇದೆ.
ಇದೇ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರ ಕಾಣುತ್ತಿರುವ 'ಬದುಕು ಜಟಕಾಬಂಡಿ' ಸಂಚಿಕೆ ಈ ಸರಣಿಯಲ್ಲಿಯೇ ವಿಭಿನ್ನವೆನಿಸಿದೆ. ಮಂಗಳೂರು ವಿಮಾನ ದುರಂತದಲ್ಲಿ ಮಡಿದವರಿಗೆ 'ಬದುಕು ಜಟಕಾ ಬಂಡಿ' ಕಾರ್ಯಕ್ರಮದ ಮೂಲಕ ನಮನ ಸಲ್ಲಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲಿ ಮಡಿದ ಹಲವು ಜೀವಗಳ ಆತ್ಮಕ್ಕೆ ಶಾಂತಿ ದೊರಕಲೆಂದು ಕಾರ್ಯಕ್ರಮದಲ್ಲಿ ಪ್ರಾರ್ಥಿಸಲಾಗಿದೆ.
ಈ ನಿಟ್ಟಿನಲ್ಲಿ ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸಿ ಬದುಕಿ ಉಳಿದಿರುವ ಕೆಲವೇ ಕೆಲವರ ಪೈಕಿ ಮಂಗಳೂರು ಕನ್ನಡಿಗ ಪ್ರದೀಪ್ ಅವರನ್ನು ನಮ್ಮ ಸ್ಟುಡಿಯೋಗೆ ಆಹ್ವಾನಿಸಿ ಅಪಘಾತದ ಸಂದರ್ಭದ ಭೀಕರ ಕ್ಷಣಗಳ ಬಗ್ಗೆ ಚರ್ಚಿಸಲಾಗಿದೆ. ದುರಂತದಲ್ಲಿ ಮಡಿದವರು ಪ್ರಯಾಣದ ವೇಳೆ ಪ್ರದೀಪ್ ಜೊತೆ ಹಂಚಿಕೊಂಡಿದ್ದ ವಿಚಾರಗಳನ್ನು ಪ್ರದೀಪ್ ಇಲ್ಲಿ ಅನಾವರಣಗೊಳಿಸಿದ್ದಾರೆ. ಇವರೊಂದಿಗೆ ಪ್ರದೀಪ್ ಸಂಬಂಧಿಗಳೂ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ದುರಂತದ ನಂತರ ಕೈಗೊಂಡ ರಕ್ಷಣಾ ಕಾರ್ಯಗಳ ಬಗ್ಗೆಯೂ ಸ್ಥಳೀಯರು, ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ರಕ್ಷಣಾ ಕಾರ್ಯಕ್ಕೆ ನೆರವಾದ ಸ್ಥಳೀಯರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆ ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ಘೋರ ಹಾಗೂ ಬರ್ಬರ ಎನಿಸಿದ ದುರ್ಘಟನೆಯ ಮೇಲೆ ಜೀ ಕನ್ನಡದ ಬದುಕು ಜಟಕಾ ಬಂಡಿ ತಂಡ ಕ್ಷ ಕಿರಣ ಬೀರಿದ್ದು ಈ ಸಂಚಿಕೆ ದಿನಾಂಕ 18.06.10ರ ಶುಕ್ರವಾರ ಸಂಜೆ 6 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ ಬಿತ್ತರಗೊಳ್ಳಲಿದೆ.


Click it and Unblock the Notifications











