ಸುವರ್ಣದಲ್ಲಿ ನೋಡಿ ಎಲ್ಲರಂತಲ್ಲ ನಮ್ಮ ರಾಜಿ

ನಮ್ಮ ರಾಜಿ ಕಥೆ : ಸಣ್ಣ ಊರಿನವಳಾದ, ನೋಡಲು ಅಷ್ಟೇನು ಸುಂದರವಲ್ಲದ ಯುವತಿ ರಾಜಿಯ ಕಥೆಯನ್ನು ಬಹಳ ಸುಂದರವಾಗಿ ಹೆಣೆದಿದ್ದಾರೆ. ತನ್ನ ವಯಸ್ಸಿನ ಬೇರೆ ಹೆಣ್ಣುಮಕ್ಕಳಿಗೆ ಹೋಲಿಸಿದಾಗ ತಾನು ನೋಡಲು ಅತಿ ಸಾಧಾರಣವಾಗಿದ್ದಾಳೆ ಎಂದು ತನಗೆ ತಿಳಿದಿದ್ದರೂ ಎಲ್ಲರೊಟ್ಟಿಗೆ ಬೆರೆತು, ಎಲ್ಲರ ನೋವಿಗೆ ಸ್ಪಂದಿಸುತ್ತಾ, ಎಲ್ಲರಿಗೆ ಸಂತೋಷವನ್ನು ಹಂಚುತ್ತಾ, ಅವಳು ಜೀವನದ ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾ ಸಾಗುವ ಕಥೆಯೇ "ಏಲ್ಲರಂತಲ್ಲ ನಮ್ಮ ರಾಜಿ" ಎಂದು ಸ್ಟಾರ್ ಸುವರ್ಣವಾಹಿನಿಯ ಪ್ರತಿನಿಧಿ ರಾಜಾರವಿಯವರು ಹೇಳಿದರು.
ಮುಂಬೈ ಸಂಸ್ಥೆಯಾದ ಮ್ಯಾವರಿಕ್ ಪ್ರೊಡಕ್ಷನ್ಸ್ ಪ್ರೈ.ಲಿ.ನ ಪ್ರತಿನಿಧಿ ಪೂಜಾ ಕಶ್ಯಪ್ರವರು ತಮ್ಮ ಸಂಸ್ಥೆಯು ಕನ್ನಡದಲ್ಲಿ ಇದೀಗ ಮೂರನೆಯ ಕಾರ್ಯಕ್ರಮವನ್ನು ನಿರ್ಮಿಸುತ್ತಾದಿಗಿ ಹೇಳುತ್ತಾ, ತಮ್ಮ ಸಂಸ್ಥೆಯು ಇನ್ನು ಮುಂದೆ ಕನ್ನಡದಲ್ಲಿ ಹೆಚ್ಚೆಚ್ಚು ಧಾರಾವಾಹಿಗಳನ್ನು ನಿರ್ಮಿಸುವ ಯೋಜನೆ ಇರುವುದಾಗಿ ತಿಳಿಸಿಕೊಟ್ಟರು. ಹೇಮಂತ್ ಹೆಗಡೆಯವರ "ಹೌಸ್ಫುಲ್" ಸಿನಿಮಾವನ್ನು ತಮ್ಮ ಸಂಸ್ಥೆಯೇ ನಿರ್ಮಿಸಿದ್ದಾಗಿ ಹೇಳಿದರು.
"ಎಲ್ಲರಂತಲ್ಲ ನಮ್ಮ ರಾಜಿ" ಧಾರಾವಾಹಿಯಲ್ಲಿ ಅಭನಯಿಸಿದ ಗಿರೀಶ್ ಮಟ್ಟಣ್ಣನವರ್ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, "ಇತ್ತೀಚೆಗೆ ಎಲ್ಲಾ ಟಿ.ವಿ. ವಾಹಿನಿಗಳಲ್ಲಿ ಹೆಣ್ಣಿನ ಶೋಷಣೆ, ಅನೈತಿಕ ಸಂಬಂಧ, ಕೊಲೆ, ಸುಲಿಗೆ, ಕೋಪ, ದ್ವೇಷ... ಮುಂತಾದ ವಿಷಯಗಳನ್ನೇ ಆಧರಿಸಿ ಬಿತ್ತರಗೊಳ್ಳುತ್ತಿರುವ ಧಾರಾವಾಹಿಗಳಿಗಿಂತ ಹೇಮಂತ್ ಹೆಗಡೆಯವರ "ಎಲ್ಲರಂತಲ್ಲ ನಮ್ಮ ರಾಜಿ" ಧಾರಾವಾಹಿ ಖಂಡಿತ ವಿಭಿನ್ನವಾಗಿದೆ, ಮನೆ ಮಂದಿಯಲ್ಲ ಒಟ್ಟಿಗೆ ಕುಳಿತು, ವೀಕ್ಷಿಸಿ, ಆನಂದಿಸಬಹುದಾದ ಹೊಚ್ಚ ಹೊಸ ಕಥೆ ಇದಾಗಿದೆ ಎಂದು ವರ್ಣಿಸಿದರು.
ಹೊಸತನ ,ವಿಭಿನ್ನ, ಪ್ರಯತ್ನ: "ಹೌಸ್ಫುಲ್" ಸಿನಿಮಾ ನಿರ್ದೇಶಿಸಿದ ಹೇಮಂತ್ ಹೆಗಡೆಯವರು ತಮ್ಮ ಈ ಪ್ರಯತ್ನ ನಿತ್ಯ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಫಾರ್ಮ್ಯಟ್ನ್ನು ಭೇದಿಸಿ, ಒಂದು ಹೊಸ ರೀತಿಯಲ್ಲಿ ನಿರ್ದೇಶನ ಮಾಡಿರುವುದಾಗಿ ತಿಳಿಸಿದರು. ಒಂದು ಉತ್ತಮ ಧಾರಾವಾಹಿಗೆ ಕಥೆ ಒಂದೇ ಸೊಗಸಾಗಿದ್ದರೆ ಸಾಲದು, ಅದನ್ನು ಅದ್ದೂರಿಯಾಗಿ ವಿಷ್ಯುಲ್ ಮೀಡಿಯಾಕ್ಕೆ ಅಳವಡಿಸಿದಾಗ ತೆರೆಮೇಲೆ ಹೊಸ ಕಾವ್ಯವೊಂದು ಮೂಡುತ್ತದೆ ಎಂದರು.
ತಾಂತ್ರಿಕ ವರ್ಗಕ್ಕೆ ಸಲಾಂ ಎಂದ ಹೆಗ್ಡೆ : ತಮಗೆ ಸಹಕಾರ ನೀಡಿದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬಹಳ ಸೂಕ್ಷ್ಮವಾಗಿ ಬರೆದು ಕೊಟ್ಟ ಕಲಗಾರು ಲಕ್ಷ್ಮಿನಾರಾಯಣ ಹೆಗಡೆಯವರನ್ನು, ಅತ್ಯತ್ತಮ ಛಾಯಗ್ರಹಣವನ್ನು ನೀಡಿದ ಸುರೇಶ್ ಭೈರಸಂದ್ರರವನ್ನು, ಸಂಚಿಕೆ ನಿರ್ದೇಶಕರಾದ ಚಂದ್ರುರವರನ್ನು ಅಭಿನಂದಿಸಿದರು..
ಅಭಿನಯಿಸಿದ ಕಲಾವಿದರಾದ ತಿಮ್ಮೇಗೌಡ, ನಂದಿನಿ ಗೂಟಿ, ಗಿರಿಜಾ ಲೋಕೇಶ್, ಶೃಂಗೇರಿ ರಾಮಣ್ಣ, ಶ್ರೀನಿವಾಸ ಮೇಷ್ಟ್ರು, ಖ್ಯಾತ ಕನ್ನಡ ನಾಟಕಕಾರರಾದ ದಿ. ಪರ್ವತವಾಣಿಯವರ ಮೊಮ್ಮಗನಾದ ರಾಘವೇಂದ್ರ... ಹೀಗೆ... ತಮ್ಮ ತಂಡದ ಪ್ರತಿಯೊಬ್ಬರನ್ನು ಈ ಸಂದರ್ಭದಲ್ಲಿ ನೆನೆದರು ನಿರ್ದೇಶಕ ಹೇಮಂತ್ ಹೆಗಡೆಯವರು.
ಶೀರ್ಷಿಕಾ ಕಾಸರವಳ್ಳಿ "ಎಲ್ಲರಂತಲ್ಲ ನಮ್ಮ ರಾಜಿ" ಧಾರಾವಾಹಿಯಲ್ಲಿ ರಾಜಿಯ ಪಾತ್ರ ವಹಿಸುತ್ತಿದ್ದಾರೆ. ತಮ್ಮ ಪ್ರತಿಭೆ ಬಗ್ಗೆ ನಿರ್ದೇಶಕ ಹೇಮಂತ್ ಹೆಗಡೆಯವರು ಇಟ್ಟಿರುವ ನಂಬಿಕೆಗೆ ಧನ್ಯವಾದ ತಿಳಿಸುತ್ತಾ, ರಾಜಿಯ ಪಾತ್ರದಲ್ಲಿ ಪರಕಾಯ ಮತ್ತು ಪರಚಿತ್ತ ಪ್ರವೇಶ ಮಾಡುವಂತೆ ಪರಿ ಪರಿಯಾಗಿ ಹೇಳಿಕೊಟ್ಟರು ನಿರ್ದೇಶಕರು ಎಂದರು.


Click it and Unblock the Notifications











