ಹಳ್ಳಿ ಹೈದರ ಪ್ಯಾಟೆ ಲೈಫು ಗ್ರ್ಯಾಂಡ್ ಫಿನಾಲೆ
ಸುಮಾರು ಎರಡು ತಿಂಗಳುಗಳ ಕಾಲ ಪ್ರೇಕ್ಷಕರ ಮನರಂಜಿಸಿದ್ದ ಸುವರ್ಣ ವಾಹಿನಿ ರಿಯಾಲಿಟಿ ಷೋ 'ಹಳ್ಳಿ ಹೈದ ಪ್ಯಾಟೆಗ್ ಬಂದ' ಅಂತಿಮ ಹಂತ ತಲುಪಿದ್ದು, ಇಂದು ಉಳಿದಿರುವ ನಾಲ್ಕು ಜೋಡಿಯಲ್ಲಿ ಒಂದು ಜೋಡಿ ಎಲಿಮಿನೇಟ್ ಆಗಲಿದ್ದು, ಭಾನುವಾರ ನಡೆಯಲಿರುವ ಸುಮಾರು 14 ಗಂಟೆಗಳ ಸುದೀರ್ಘವಾದ ಗ್ರ್ಯಾಂಡ್ ಫಿನಾಲೆಯಲ್ಲಿ ಮೂರು ಜೋಡಿಗಳು ಸ್ಪರ್ಧಿಸಲಿವೆ.
ಅ.31ರಂದು ಬೆಳಗ್ಗೆ 9 ರಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪುನೀತ್ ರಾಜ್ ಕುಮಾರ್ ಪ್ರಧಾನ ಆಕರ್ಷಣೆಯಾಗಲಿದ್ದು, ವಿವಿಧ ನೃತ್ಯ, ಸಿನಿಮಾ ಮಂದಿ ಕುಣಿತಗಳನ್ನು ಆಯೋಜಿಸಲಾಗಿದೆ. ಕುರುಬರ ಪಿಳ್ಳೆ ರಾಜೇಶ ಷೋ ಗೆಲ್ಲುತ್ತಾನೋ ಇಲ್ಲವೋ ಗೊತ್ತಿಲ್ಲ ಆದರೆ, ಬೆಂಗಳೂರಿಗೆ ಬಂದಿದ್ದ ಏಕೈಕ ಉದ್ದೇಶವಂತೂ ಈಡೇರಲಿದೆ. ನೆಚ್ಚಿನ ತಾರೆ ಪವರ್ ಸ್ಟಾರ್ ಪುನೀತ್ ಅವರನ್ನು ಭೇಟಿ ಮಾಡಿ ಅವರೊಡನೆ ಹಾಡಿ ನಲಿಯುವ ಸುವರ್ಣ ಅವಕಾಶ ರಾಜೇಶ್ ಗೆ ಒದಗಲಿದೆ.
ಟಾಪ್ ರಿಯಾಲಿಟಿ ಷೋ:ಕಿರುತೆರೆ ಮಾರುಕಟ್ಟೆ ಹಾಗೂ ರಿಯಾಲಿಟಿ ಷೋಗಳ ಗ್ರಾಫ್ ಅನ್ನು ಚೆನ್ನಾಗಿ ಅರಿತಿರುವ ಸುವರ್ಣ ವಾಹಿನಿಯ ಅನೂಪ್ ಚಂದ್ರಶೇಖರ್, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಯಶಸ್ಸಿನ ನಂತರ ಹಳ್ಳಿ ಹೈದರನ್ನು ಪ್ಯಾಟೆಗೆ ಕರೆತಂದು ತಕ್ಕಮಟ್ಟಿಗೆ ಯಶಸ್ಸು ಗಳಿಸಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 8 ರಿಂದ 9 ಗಂಟೆವರೆಗೆ ಹಾಗೂ 10.30 ನಂತರ ಮರುಪ್ರಸಾರ ಕಾಣುತ್ತಿದ್ದ ಈ ಕಾರ್ಯಕ್ರಮದ ಪ್ರತಿ ಎಪಿಸೋಡ್ ಮಾಡಲು ಏನಿಲ್ಲವೆಂದರೂ 7 ರಿಂದ 8 ಲಕ್ಷ ಖರ್ಚಾದರೂ, ಸ್ಪರ್ಧಿಗಳಿಗೆ ಸಿಗಬೇಕಾದ ಸೌಲಭ್ಯಗಳಲ್ಲಿ ಯಾವುದೇ ನ್ಯೂನತೆ ಕಾಣದಂತೆ ಜಾಗರೂಕತೆಯಿಂದ ಕ್ರಿಯೇಟಿವ್ ಹೆಡ್ ರಾಘವೇಂದ್ರ ಹುಣಸೂರ್ ಮುನ್ನೆಡೆಸಿದ್ದಾರೆ.
ಬೆಂಗಳೂರಿನ ಹೊರವಲಯದ ರೆಸಾರ್ಟ್ ಇರಬಹುದು, ಗೋವಾದಲ್ಲಿನ ವಾಸ್ತವ್ಯ, ಕಾರ್ಯಕ್ರಮ ಆಯೋಜನೆ ಇರಬಹುದು ಅಗತ್ಯಕ್ಕಿಂತ ಹೆಚ್ಚಿನ ಸೌಲಭ್ಯ ಒದಗಿಸಲಾಗಿತ್ತು. ಡಾಬರ್ ವಾಟಿಕಾ, ಹೈ ಪವರ್ ಬ್ಯಾಟರೀಸ್ ಪ್ರಾಯೋಜಕತ್ವದೊಂದಿಗೆ ಬಿಗ್ ಎಫ್ಎಂ ವಾಹಿನಿಯ ಪ್ರಚಾರ ಕೂಡಾ ಇದಕ್ಕೆ ಪೂರಕವಾಗಿತ್ತು. ಅಫ್ ಕೋರ್ಸ್, ಈ ರಿಯಾಲಿಟಿ ಷೋನ ಟಿಆರ್ ಪಿ ಬ್ರೇಕ್ ಮಾಡಲು ಇತರೆ ಚಾನೆಲ್ ಗಳು ಹರಸಾಹಸ ಮಾಡಿ ಸೋತಿವೆ.
ಹಳ್ಳಿ ಹೈದರು ಪ್ಯಾಟೆ ಸಂಸ್ಕೃತಿ: ಪೇಟೆಗೆ ಬಂದ ಹಳ್ಳಿ ಹೈದರು ಏನು ಕಲಿತರೋ ಬಿಟ್ಟರೋ ಅವರ ವೇಷ ಭೂಷಣಗಳಂತೂ ಬೇಜಾನ್ ಚೇಂಜ್ ಆಗಿಬಿಟ್ಟಿದೆ. ಭಾಷೆ ಬದಲಾಗಿದ್ದರೂ, ಅವರ ಮನಸ್ಸು ಮಾತ್ರ ಹಳ್ಳಿಯತ್ತಲೇ ಇದೆ. ಕಾಡುಮೇಡುಗಳಲ್ಲಿ ಸ್ವಚ್ಛಂದವಾಗಿದ್ದ ಹಕ್ಕಿಗಳನ್ನು ಅರಮನೆಗಳಲ್ಲಿ ಓಡಾಡಲು ಬಿಟ್ಟಂತಾಗಿದ್ದು, ಇಲ್ಲಿನ ಸಂಸ್ಕೃತಿ ಅಲ್ಲಿಗೆ ಹೊಯ್ಯದಿದ್ದರೆ ಸಾಕು.
ರಿಯಾಲಿಟಿ ಷೋ ಎಂಬ ಟಾರ್ಚರ್? : 'ಹಳ್ಳಿ ಹೈದ ಪ್ಯಾಟೆಗ್ ಬಂದ' ಷೋನಲ್ಲಿ ರಾಜೇಶ, ಐಶ್ವರ್ಯ ಬೈಗುಳಗಳ ಎಪಿಸೋಡುಗಳು, ಏಜೆ ಅಲಿಯಾಸ್ ಅರ್ಪಿತಾ ಸೊಕ್ಕು, ಚಾಂದಿನಿ ನಾಗೇಂದ್ರ ಬುಸ್ ಬುಸ್ ಪ್ರಕರಣಗಳನ್ನು ಕಂಡ ಮಾಧ್ಯಮದವರು, ಪ್ರೇಕ್ಷಕರು ಸುವರ್ಣ ಚಾನೆಲ್ ಗೆ ಹಿಡಿ ಶಾಪ ಹಾಕಿದುಂಟು. ಸೋಲಿಗ, ಜೇನುಕುರುಬ, ಸಿದ್ದಿ, ದಲಿತ, ಮಾವುತ ಮುಂತಾದ ಅರಣ್ಯವಾಸಿಗಳನ್ನು ಕರೆತಂದು ಪೇಟೆ ಸಂಸ್ಕೃತಿ ಕಲಿಸಿ ಪ್ರಯೋಜನವೇನು. ಸ್ಪರ್ಧಿಗಳಿಗೆ ಮಾನಸಿಕ ಹಿಂಸೆ ಕೊಟ್ಟು, ವಿಕೃತ ಆನಂದ ಪಡೆಯುವುದು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿದ್ದುಂಟು.
ಇನ್ನು ಟಾಸ್ಕ್ ಗಳ ವಿಷಯಕ್ಕೆ ಬಂದರೆ, ಇಂಗ್ಲಿಷ್ ಕಲಿಕೆ, ಸಂವಹನ ಕಲೆ, ವಾಹನ ಕಲಿಕೆ, ವಿಮಾನದಲ್ಲಿ ಪಯಣ, ಸಂದರ್ಶನದ ಎಪಿಸೋಡ್ ಬಿಟ್ಟರೆ ಮತ್ತೆಲ್ಲಾ ಲವ್, ಹುಡುಗಿಯರನ್ನು ಆಕರ್ಷಿಸುವ ಕಲೆ ಹೇಳಿಕೊಡುವಂಥದ್ದೇ ಆಗಿದ್ದು, ಇದು ಹಲವರಿಗೆ ಕಿರಿಕಿರಿ ಉಂಟು ಮಾಡಿದೆ.
ಇಷ್ಟೆ ಅಲ್ಲದೆ, ಮೆಂಟರ್ ಗಳ ನಡುವಿನ ಗುಂಪುಗಾರಿಕೆ, ದಬ್ಬಾಳಿಕೆ ಕಂಡು ಹಳ್ಳಿ ಹುಡುಗರು ಮೂಕರೋದನ ಅನುಭವಿಸಿದ್ದಾರೆ. ಕಾಡು ಹುಡುಗರು, ಪೇಟೆ ಸುಂದರಿಯ ಮಧ್ಯೆ ಸಿಕ್ಕ ನಿರೂಪಕ ಅಕುಲ್, ಈ ಷೋನ ಕಷ್ಟಪಟ್ಟು ಉಳಿಸುತ್ತಾ ಬಂದಿದ್ದಾರೆ. ರಾಧಿಕಾ ಪಂಡಿತ್ ಗೆ ಅಷ್ಟೇನು ಸ್ಕೋಪ್ ಆಗಲಿ, ಗ್ರ್ಯಾಂಡ್ ಎಂಟ್ರಿ ಆಗಲಿ ಈ ಕಾರ್ಯಕ್ರಮದಲ್ಲಿ ಸಿಕ್ಕಿಲ್ಲ ಎಂಬುದು ಸರ್ವವಿದಿತ. ಸುದೀಪ್ ಗೆ ಇದ್ದ ಖದರ್ ಮೆಚ್ಚಿದ್ದ ಜನ, ರಾಧಿಕಾರ ಬೆಡಗಿಗೆ ಸೋತಿಲ್ಲ. ಆದರೂ, ಎಲ್ಲ ಮರೆತು ಕೊನೆ ಬಾರಿಗೆ ಒಮ್ಮೆ ಗ್ರ್ಯಾಂಡ್ ಫಿನಾಲೆ ನೋಡಲಡ್ಡಿಯಿಲ್ಲ.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS


Click it and Unblock the Notifications











