ಸತ್ಯಮೇವ ಜಯತೇ; ಅಮೀರ್ ಖಾನ್ ಗೆ ಸೆಲ್ಯೂಟ್

ತಮ್ಮ ಟಾಕ್ ಶೋ ಸತ್ಯಮೇವ ಜಯತೇಯ ಎರಡನೇ ಸಂಚಿಕೆಯಲ್ಲಿ ಅಮೀರ್ ಖಾನ್, ಶಿಶುಗಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ಸಮರ ಸಾರುವಂತೆ ಕರೆನೀಡಿದ್ದರು. ಅಷ್ಟೇ ಅಲ್ಲ, ಆ ಅನುಭವದಿಂದ ನೊಂದ ಸಾಕಷ್ಟು ಮಕ್ಕಳನ್ನು ಅಂದು ಮಾತನಾಡಿಸಿದ್ದರು.
ಸುದೀರ್ಘ ಕಾಲದಿಂದ ಅದಕ್ಕೆ ಸಂಬಂಧಿಸಿ ಮಂಡನೆಯಾಗಿದ್ದ ಕಾಯಿದೆಯನ್ನು ಜಾರಿಗೆ ತರಲು ಸರ್ಕಾರ ಮೀನ-ಮೇಷ ಎಣಿಸುತ್ತಿತ್ತು. ಆದರೆ ಈ ಕುರಿತು 'ಸತ್ಯಮೇವ ಜಯತೇ'ಯಲ್ಲಿ ಕಾರ್ಯಕ್ರಮ ಪ್ರಸಾರವಾದ ತಕ್ಷಣ ಅದರ ಗಂಭೀರತೆ ಸರ್ಕಾರಕ್ಕೆ ಅರಿವಾಗಿದೆ.
ತಡವಾಗಿಯಾದರೂ ಎಚ್ಚೆತ್ತ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡನೆಯಾಗಿದ್ದ ಶಿಶು ಸಂರಕ್ಷಣಾ ಕಾಯಿದೆಯನ್ನು ತಕ್ಷಣ ಜಾರಿಗೆ ತರುವಂತೆ ನಿರ್ದೇಶನ ನೀಡಿದೆ. ಈ ಮೂಲಕ ಅಮೀರ್ ಖಾನ್ ಸತ್ಯಮೇವ ಜಯತೇ ಪ್ರಾರಂಭದಲ್ಲೇ ಯಶಸ್ವಿಯಾಗಿದೆ.
ಈ ವಿಷಯ ಗೊತ್ತಾಗಿದ್ದೇ ತಡ, ಅಮೀರ್ ತಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನಾಮಿಕಾ, ಸಿಂಡ್ರೆಲ್ಲಾ, ಹರೀಶ್, ಗಣೇಶ್, ನಜ್ನೀನ್ ಮತ್ತು ಪದ್ಮಾ ಅವರೆಲ್ಲರಿಗೂ ಕೃತಜ್ಞತೆ ಅರ್ಪಿಸಿದ್ದಾರೆ. ನೀವೆಲ್ಲಾ ಬಂದು ನನ್ನ ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಮಾತನಾಡಿದ್ದರಿಂದ ಇದು ಸಾಧ್ಯವಾಗಿದೆ. ನಿಮ್ಮ ಸೇವೆಗೆ ನಾನು ಚಿರಋಣಿ ಎಂದಿದ್ದಾರೆ.
ಸತ್ಯಮೇವ ಜಯತೇ ಪ್ರಾರಂಭಿಸುವ ಮೊದಲೇ ಅಮೀರ್ ಹೇಳಿಕೆ ನೀಡಿದ್ದರು. 'ಇದು ಜನರಿಂದ ಜನರಿಗೋಸ್ಕರ ಜನರಿಗಾಗಿ ಇರುವ ಟಾಕ್ ಶೋ' ಎಂದು. ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳೂ ಕೂಡ ಅದಕ್ಕೆ ಪೂರಕವಾಗಿಯೇ ಇತ್ತು.
ಈ ಕಾರ್ಯಕ್ರಮ ಉದ್ದೇಶ ಹಾಗೂ ಅದನ್ನು ಸಾಧಿಸಿದ ಅಮೀರ್ ಅವರಿಗೆ ಇಡೀ ದೇಶದ ನಾಗರೀಕರು ಸೆಲ್ಯೂಟ್ ಹೇಳಿದ್ದಾರೆ. ಟಿಆರ್ ಪಿ ವಿಷಯ ಏನೇ ಇರಲಿ, ಈ ಶೋ ಉದ್ದೇಶ ಈಡೇರಿದೆ. ಆ ಮೂಲಕ ಅಮೀರ್ ಗೆದ್ದಂತಾಗಿದೆ. ದೇಶದ ತುಂಬಾ ಸತ್ಯಮೇವೆ ಜಯತೇಗೆ 'ಜೈ ಹೋ...' ಎಂಬ ಧ್ವನಿ ಪ್ರತಿಧ್ವನಿಸುತ್ತಿದೆ.(ಏಜೆನ್ಸೀಸ್)


Click it and Unblock the Notifications











