ಅಮೀರ್ ಖಾನ್ ಸತ್ಯಮೇವ ಜಯತೆ ವಿಶೇಷ ಸಂಚಿಕೆ
ಈಗಾಗಲೆ ಅವರು 'ಸತ್ಯಮೇವ ಜಯತೆ' ರಿಯಾಲಿಟಿ ಶೋ ಮಾಡಿದ್ದು ನೆನಪಿರಬಹುದು. ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಭ್ರಷ್ಟಾಚಾರ, ಅನೈತಿಕತೆ, ದೌರ್ಜನ್ಯ, ಮರ್ಯಾದಾ ಹತ್ಯೆ, ಮದ್ಯಪಾನ, ಅಸ್ಪೃಶ್ಯತೆ... ಪ್ರಚಲಿತ ಸಮಸ್ಯೆಗಳ ಮೇಲೆ ಈ ಟಾಕ್ ಶೋ ಅಟ್ಯಾಕ್ ಮಾಡಿತ್ತು. ಸಾಕಷ್ಟು ಚರ್ಚೆ, ವಾದ ವಿವಾದಕ್ಕೆ ವೇದಿಕೆ ಒದಗಿಸಿತ್ತು.
ಈ ಶೋನ ವಿಶೇಷ ಸಂಚಿಕೆ ಆಗಸ್ಟ್ 19ರಂದು ಪ್ರಸಾರವಾಗಲಿವೆ. ಈ ವಿಶೇಷ ಸಂಚಿಕೆಯಲ್ಲಿ ಅಮೀರ್ ತಮ್ಮ ಅಭಿಮಾನಿಗಳೊಂದಿಗೆ ಮುಖಾಮುಖಿಯಾಗಲಿದ್ದಾರೆ. ಶೋನ ಪ್ರತಿ ಸಂಚಿಕೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿತು ಎಂಬುದನ್ನು ಖುದ್ದು ಅಮೀರ್ ತಿಳಿಯ ಬಯಸಿದ್ದಾರೆ.
ಈ ಶೋಗೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಗೆ ಅಮೀರ್ ಧನ್ಯವಾದಗಳೂ ತಿಳಿಸಲಿದ್ದಾರೆ. ಅವರಿಗೆ ಅಸಂಖ್ಯಾತ ಈ-ಮೇಲ್ ಗಳು, ದೂರವಾಣಿ ಕರೆಗಳು, ಎಸ್ಎಂಎಸ್ ಗಳು, ಪತ್ರಗಳು ರಾಶಿ ರಾಶಿ ಬಂದಿವೆಯಂತೆ. ಎಲ್ಲರದೂ ಒಂದೇ ಅಭಿಪ್ರಾಯ 'ಸೂಪರ್ ಶೋ' ಎಂದು.
ಅಮೀರ್ ಖಾನ್ ಅವರ ಸಾಮಾಜಿಕ ಕಳಕಳಿಗೆ ಅನೇಕ ಸರ್ಕಾರೇತರ ಸಂಸ್ಥೆಗಳು ಅವರೊಂದಿಗೆ ಕೈಜೋಡಿಸಲು ಮುಂದಾಗಿವೆ. ಸತ್ಯಮೇವ ಜಯತೆ ಕಾರ್ಯಕ್ರಮದಿಂದ ರು.8 ಕೋಟಿ ನಿಧಿ ಸಂಗ್ರಹವಾಗಿದೆ. ಅಮೀರ್ ಖಾನ್ ಸಾಮಾಜಿಕ ಕಾಳಜಿಗೆ ಆನೆಬಲ ಬಂದಂತಾಗಿದೆ.
'ಸತ್ಯಮೇವ ಜಯತೆ'ಯ ವಿಶೇಷ ಸಂಚಿಕೆಗೆ 'ಸತ್ಯಮೇವ ಜಯತೇ ಕಾ ಸಫರ್' ಎಂದು ಹೆಸರಿಡಲಾಗಿದೆ. ಸ್ಟಾರ್ ಪ್ಲಸ್ ಹಾಗೂ ಡಿಡಿ 1 ವಾಹಿನಿಗಳಲ್ಲಿ ಆಗಸ್ಟ್ 19ರ ಬೆಳಗ್ಗೆ 11 ಗಂಟೆಗೆ ಈ ವಿಶೇಷ ಸಂಚಿಕೆಯನ್ನು ಕಣ್ಣು ತುಂಬಿಕೊಳ್ಳಬಹುದು. (ಏಜೆನ್ಸೀಸ್)


Click it and Unblock the Notifications












