ಸಮನ್ವಿ ನಿಧನಕ್ಕೆ ಸಂಪಿಗೆ ಗಿಡನೆಟ್ಟು ತಾರಾ ಸಂತಾಪ
'ನಮ್ಮಮ್ಮ ಸೂಪರ್ ಸ್ಟಾರ್' ಖ್ಯಾತಿಯ ಬಾಲ ಪ್ರತಿಭೆ ಸಮನ್ವಿ ಅಪಘಾತದಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ತೀರ್ಪುಗಾರರಾಗಿದ್ದ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಟಿ ತಾರಾ ನಗರದ ಕೆಎಫ್ಡಿಸಿ ಕಚೇರಿ ಪ್ರಾಂಗಣದ ಜಿಂಕೆವನದಲ್ಲಿ ಸಂಪಿಗೆ ಗಿಡನೆಟ್ಟು ಸಂತಾಪ ಸೂಚಿಸಿದರು.
ನಂತರ ಮಾತನಾಡಿದ ಅವರು, ಸಮನ್ವಿ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಸಮನ್ವಿ ಇಲ್ಲ ಎಂಬ ವಿಷಯ ತಿಳಿದ ಕೂಡಲೇ ಅದನ್ನು ಸಹಿಸಿಕೊಳ್ಳುವ ಶಕ್ತಿ ಇರಲಿಲ್ಲ, ಇಡೀ ತಂಡಕ್ಕೆ ಇದು ದೊಡ್ಡ ಬೇಜಾರಿನ ವಿಷಯವಾಗಿದ್ದು ಅವರ ಕುಟುಂಬಕ್ಕೆ ಹಾಗೂ ತಾಯಿ ಅಮೃತಾಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ನನ್ನಮ್ಮ ಸೂಪರ್ ಸ್ಟಾರ್ನಲ್ಲಿ ಸಮನ್ವಿ ತನ್ನ ಪ್ರತಿಭೆಯನ್ನು ಹೊರ ಹಾಕಿದ್ದಳು ಕಳೆದ ಏಳು ವಾರಗಳಿಂದ ನಮ್ಮ ತಂಡದ ಜೊತೆಗೆ ಸಮನ್ವಿ ಇದ್ದಳು ಕಳೆದ ವಾರ ಆಕೆ ಎಲಿಮಿನೆಟ್ ಆಗಿದ್ದು ನಿನ್ನೆ ಈ ರೀತಿ ಸುದ್ದಿ ಕೇಳಿ ಈ ಮಗುವಿನ ಸಾವು ನ್ಯಾಯವೇ ಎಂದು ಅನಿಸಿದೆ. ಹರಿಕಥಾ ವಿದ್ವಾಂಸರಾದ ಗುರುರಾಜ ಕುಟುಂಬದಿಂದ ಬಂದಿದ್ದ ಸಮನ್ವಿಗೆ ಮಗುವಿಗೆ ಬಹಳ ಎತ್ತರಕ್ಕೆ ಬೆಳೆಯುವ ಪ್ರತಿಭೆ ಇತ್ತು. ಸಂಕ್ರಾಂತಿಯ ಸಂದರ್ಭ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಎಲ್ಲರಿಗೂ ದೇವರು ನೀಡಲಿ ಎಂದರು.

ಸಂಕ್ರಾಂತಿ ಪ್ರಯುಕ್ತ ತಾರಾ ಗೋಪೂಜೆ
ನಗರದ ಕೆಎಫ್ಡಿಸಿಗೆ ಶುಕ್ರವಾರ ಆಗಮಿಸಿದ ವೇಳೆ ನಟಿ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಗೋಪೂಜೆಯನ್ನು ನೇರವೇರಿಸಿದರು. ಹಸುವಿನ ಪಾದ ತೊಳೆದು ಪಾದಪೂಜೆ ಮಾಡಿದ ಅವರು ಅಕ್ಕಿ ಬೆಲ್ಲವನ್ನು ತಿನಿಸಿ ನಮಸ್ಕರಿಸಿದರು.

ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ: ತಾರಾ
ಕೆಎಫ್ಡಿಸಿ ಅಧ್ಯಕ್ಷರು ಎಲ್ಲಾ ಕಡೆ ಬರುವುದಿಲ್ಲ ಎಂಬ ಆರೋಪ ಇದೆ. ಇದನ್ನು ಮೀರಿ ಕಳೆದ 10 ತಿಂಗಳಿಂದ ಎಲ್ಲಾ ಕಡೆಗಳಲ್ಲಿ ಹೋಗುತ್ತಿದ್ದಾನೆ. ಇಲಾಖೆಯ ಕೊನೆಯ ವ್ಯಕ್ತಿಗೂ ಕೂಡ ಸೌಲಭ್ಯವನ್ನು ತಲುಪಿಸುವ ಹಾಗೂ ಇಲಾಖೆ ಮತ್ತು ಸರ್ಕಾರದ ನಡುವೆ ಬಾಂಧವ್ಯವನ್ನು ಬೆಸೆಯುವ ಕೆಲಸದ ಜೊತೆಗೆ ನನಗೆ ನೀಡಿದ ಎಲ್ಲಾ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡಿದ್ದೇನೆ. ಆದರೆ ಬಹಳಷ್ಟು ಕೆಲಸಗಳು ಪ್ರಕ್ರಿಯೆಯಲ್ಲಿ ಇರುವುದುನ್ನು ಸಹ ಗಮನಿಸಬೇಕಾಗುತ್ತದೆ ಎಂದು ತಿಳಿಸಿದರು.

ಕೆಎಫ್ಡಿಸಿ ಕಾರ್ಯವೈಖರಿ ಅರಣ್ಯ ಬೆಳೆಸುವುದಲ್ಲ
ಅರಣ್ಯ ಅಭಿವೃದ್ಧಿ ನಿಗಮದ ಬಗ್ಗೆ ಸಾರ್ವಜನಿಕರಲ್ಲಿ ಬೇರೆ ಬೇರೆಯಾದ ಅಭಿಪ್ರಾಯ ಇದೆ. ನಾನು ಇಲಾಖೆಯ ಜವಾಬ್ದಾರಿ ತಗೆದುಕೊಡ ಬಂದಾಗ ಗಿಡ ನೆಡುವುದು, ಅರಣ್ಯೀಕರಣ ಕಾಡು ವೃದ್ಧಿಸುವುದು ಎಂಬ ಕನಸು ಕಂಡಿದ್ದೆ ಆದರೆ ಈ ಇಲಾಖೆಯ ಜವಾಬ್ದಾರಿ ಅರಣ್ಯವನ್ನು ಸಂರಕ್ಷಿಸುವುದಾಗಲಿ, ಸಸಿನೆಡುವುದಾಗಲಿ, ಒತ್ತುವರಿ ಕಾಪಾಡುವ ಕಾರ್ಯವಾಗಲಿ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಇಲ್ಲ. ಈ ಇಲಾಖೆಗೆ ಪಲ್ಪ್ವುಡ್ ಅಥವಾ ರಬ್ಬರ್ ಮರಗಳ ಸಂಬಂಧ ಬಿಟ್ಟರೆ ಕಾಡಿನ ಯಾವ ಸಮಸ್ಯೆಯ ಜೊತೆಗೂ ಸಂಬಂಧ ಇಲ್ಲ ಎಂಬುದು ನನಗೆ ಈ ಜವಾಬ್ದಾರಿಯನ್ನು ತಗೆದುಕೊಂಡ ಮೇಲೆ ಗೊತ್ತಾಗಿದೆ ಅಧ್ಯಕ್ಷೆ ತಾರಾ ತಿಳಿಸಿದರು

ನಷ್ಟದಲ್ಲಿರುವ ಸಂಸ್ಥೆ
ನಮ್ಮ ನೌಕರ ವರ್ಗ ಎಲ್ಲರೂ ಸೇರಿ ಅಭಿವೃದ್ಧಿ ದಾಪುಗಾಲು ಆಗಬೇಕಾದ ಅನಿವಾರ್ಯತೆ ಇದೆ. 2017 ರಿಂದ ಅರಣ್ಯ ಅಭಿವೃದ್ಧಿ ನಿಗಮ ಬಹಳ ನಷ್ಟದಲ್ಲಿದ್ದು ಒಂದು ರೀತಿಯ ಬಡ ನಿಗಮವಾಗಿದ್ದು ಇದನ್ನು ಮತ್ತೆ 2017ರ ಹಿಂದಿನಲಿದ್ದು ಸುವರ್ಣ ಯುಗವನ್ನು ಮತ್ತೆ ಹೇಗೆ ತರಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ. ಅಭಿವೃದ್ಧಿ ನಿಗಮ 50 ವರ್ಷ ಪೂರೈಸಿದ್ದು ಈ ನಿಟ್ಟಿನಲ್ಲಿ ಅರಣ್ಯ ನಿಗಮದ ಅಭಿವೃದ್ಧಿಯ ಕುರಿತಂತೆ ಎಲ್ಲಾ ಕಡೆಗಳಲ್ಲಿ ಪ್ರಯಾಣ ಮಾಡಿ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.


Click it and Unblock the Notifications











